ಬೆಂಗಳೂರು: ಮಣ್ಣಿನ ಸಂರಕ್ಷಣೆಯೇ ಮನುಕುಲದ ಸಂರಕ್ಷಣೆ ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವ ಮಣ್ಣಿನ ದಿನಾಚರಣೆ ಅಂಗವಾಗಿ ಶ್ರೀರಾಮಚಂದ್ರಾಪುರ ಮಠದ ಸಂಶೋಧನಾ ಖಂಡ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಡಿಸೆಂಬರ್ 5ರಂದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಬಳಿಯ ಗೋಸ್ವರ್ಗದಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಆಯೋಜಿಸಿದೆ.
ಕಾಮದುಘಾ ಟ್ರಸ್ಟ್, ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ ಮತ್ತು ಶಿರಸಿ ತೋಟಗಾರಿಕಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆಯುವ ಒಂದು ದಿನದ ವಿಚಾರ ಸಂಕಿರಣದಲ್ಲಿ ದೇಶದ ವಿವಿಧೆಡೆಗಳಿಂದ ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವರು. ಅಂತರರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು ಹಾಗೂ ಕೃಷಿತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದು, ಪಾರಂಪರಿಕ ಹಾಗೂ ಸಾವಯವ ಕೃಷಿಯ ಪ್ರಾಮುಖ್ಯತೆ, ಗೋ ಆಧರಿತ ಕೃಷಿಯ ಸಾಧ್ಯತೆಗಳ ಬಗ್ಗೆ ಚಿಂತನ- ಮಂಥನ ನಡೆಯಲಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಾಗತಿಕ ತಾಪಮಾನ ಹೆಚ್ಚಳ, ಹವಾಮಾನ ಬದಲಾವಣೆ, ರಾಸಾಯನಿಕಯುಕ್ತ ಕೃಷಿ, ಕೀಟನಾಶಕಗಳ ಅತಿಯಾದ ಬಳಕೆ, ಕಲುಷಿತ ಅಂತರ್ಜಲ ಮತ್ತಿತರ ಕಾರಣಗಳಿಂದ ನಾವು ಸೇವಿಸುವ ಆಹಾರ ವಿಷವಾಗಿ ಮಾರ್ಪಟ್ಟಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಮನುಕುಲಕ್ಕೆ ದೊಡ್ಡ ಅಪಾಯ ಕಾದಿದೆ. ಈ ಹಿನ್ನೆಲೆಯಲ್ಲಿ ಮಣ್ಣಿನ ಆರೋಗ್ಯ ಸಂರಕ್ಷಣೆ ಮೂಲಕ ಇಡೀ ಮನುಕುಲದ ಸಂರಕ್ಷಣೆಯ ಕಾರ್ಯ ಆರಂಭವಾಗಬೇಕಿದೆ ಎಂಬ ಬಗ್ಗೆ ನೀತಿ ನಿರೂಪಕರಲ್ಲಿ ಹಾಗೂ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶ ಎಂದು ವಿವರಿಸಿದರು. ಕೃಷಿಕರು, ಸಾವಯವ ತಜ್ಞರು, ಕೃಷಿ ವಿಜ್ಞಾನಿಗಳು, ಕೃಷಿ ಪದವಿ, ಸ್ನಾತಕೋತ್ತರ ಪದವಿ, ಸಂಶೋಧನಾ ವಿದ್ಯಾರ್ಥಿಗಳು, ಈ ಕ್ಷೇತ್ರದಲ್ಲಿ ಈಗಾಗಲೇ ಸಾಧನೆ ಮಾಡಿದ ಗಣ್ಯರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಇದು ವೇದಿಕೆಯಾಗಲಿದೆ. ಜತೆಗೆ ಗೋಚಿಕಿತ್ಸ ಶಿಬಿರ, ಮಣ್ಣು ಸಂರಕ್ಷಣೆ ಬಗೆಗಿನ ತಂತ್ರಜ್ಞಾನ ಸಾಧ್ಯತೆಗಳನ್ನು ಪರಿಚಯಿಸುವ ವಸ್ತುಪ್ರದರ್ಶನ ಕೂಡಾ ನಡೆಯಲಿದೆ. ರೈತರ ಕೃಷಿ ಭೂಮಿಯ ಮಣ್ಣಿನ ಪರೀಕ್ಷೆ ಹಾಗೂ ತಜ್ಞರಿಂದ ರೈತರಿಗೆ ಮಾರ್ಗದರ್ಶನವೂ ಇರುತ್ತದೆ ಎಂದು ವಿವರಿಸಿದರು. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಸೂಚನೆಯಂತೆ ಕಳೆದ ಆರು ವರ್ಷಗಳಿಂದ ವಿಶ್ವಾದ್ಯಂತ ಡಿಸೆಂಬರ್ 5ನ್ನು ವಿಶ್ವ ಮಣ್ಣಿನ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಭಾರತದಲ್ಲಿ ಖಾಸಗಿ ಸಂಸ್ಥೆಯೊಂದು ಸಾರ್ವಜನಿಕ ಜಾಗೃತಿ ಉದ್ದೇಶದಿಂದ ಮಣ್ಣಿನ ದಿನಾಚರಣೆ ಆಯೋಜಿಸಿರುವುದು ಇದೇ ಮೊದಲು. ಈ ಜಾಗೃತಿ ಅಭಿಯಾನ ನಿರಂತರವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಮುಂದಿನ ದಿನಗಳಲ್ಲಿ ರಾಜ್ಯದ ನಾಲ್ಕು ಕಡೆಗಳಲ್ಲಿ ಇಂಥ ವಿಚಾರ ಸಂಕಿರಣ ಆಯೋಜಿಸಲಾಗುತ್ತಿದ್ದು, ಸರಣಿಯ ಮೊದಲ ಕಾರ್ಯಕ್ರಮ ಗೋಸ್ವರ್ಗದಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ನವದೆಹಲಿಯ ರಾಷ್ಟ್ರೀಯ ಕೃಷಿ ಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥ ಡಾ.ಎಸ್.ಎ.ಪಾಟೀಲ್ ವಿಚಾರ ಸಂಕಿರಣ ಉದ್ಘಾಟಿಸುವರು. ಧಾರವಾಡ ಕೃಷಿ ವಿವಿ ಮಾಜಿ ಕುಲಪತಿ ಡಾ.ಎಸ್.ಎ.ಪಾಟೀಲ್,
ಮಂಡ್ಯ ಕೃಷಿ ವಿಜ್ಞಾನ ಕಾಲೇಜಿನ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಎಸ್.ಪ್ರಕಾಶ್, ಇಂಫಾಲ ಕೇಂದ್ರೀಯ ಕೃಷಿ ವಿವಿ ಸಂಶೋಧನಾ ವಿಭಾಗದ ಮಾಜಿ ನಿರ್ದೇಶಕ ಡಾ.ಸಿ.ಎ.ಶ್ರೀನಿವಾಸಮೂರ್ತಿ, ಉಪಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ.ಎ.ಬಿ.ಪಾಟೀಲ್, ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿವಿ ಕುಪತಿ ಡಾ.ಕೆ.ಎಂ.ಇಂದಿರೇಶ್, ಶಿರಸಿ ತೊಟಗಾರಿಕಾ ವಿಜ್ಞಾನ ಕಾಲೇಜಿನ ಡೀನ್ ಡಾ.ಎನ್.ಕೆ.ಹೆಗ್ಡೆ ಸೇರಿದಂತೆ ಹಲವು ಮಂದಿ ತಜ್ಞರು ಮಣ್ಣಿನ ಸಂರಕ್ಷಣೆಯಿಂದಷ್ಟೇ ಮನುಕುಲದ ಸಂರಕ್ಷಣೆ, ವಿಶ್ವ ಮಣ್ಣು ದಿನಾಚರಣೆಯ ಮಹತ್ವ ಮತ್ತು ಸಾವಯವ ಮತ್ತು ಗೋ ಕೃಷಿಯ ಸಾರ ಮತ್ತಿತರ ವಿಷಯಗಳ ಬಗ್ಗೆ ವಿಷಯ ಮಂಡಿಸುವರು. ಸುಸ್ಥಿರ ಮಣ್ಣು ಆರೋಗ್ಯಕ್ಕಾಗಿ ಸಾವಯವ ಕೃಷಿ, ಸುಧಾರಿತ ಕೃಷಿ ಹಾಗೂ ಮಣ್ಣು ಉತ್ಪಾದಕತೆಗಾಗಿ ಸಮಗ್ರ ಕೃಷಿ, ಸಮಗ್ರ ರೋಗ ಮತ್ತು ಕೀಟ ನಿರ್ವಹಣೆ, ಮಣ್ಣು ಮತ್ತು ನೀರಿನ ಸಂರಕ್ಷಣೆ, ಗೋ ಕೇಂದ್ರಿತ ಕೃಷಿಯ ಮಹತ್ವ ಮತ್ತಿರರ ವಿಷಯಗಳ ಬಗೆಗಿನ ಸಂಶೋಧನೆಗಳ ಬಗ್ಗೆ ಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಬಿತ್ತಿಚಿತ್ರಗಳನ್ನು ಪ್ರದರ್ಶಿಸುವರು ಎಂದು ವಿವರ ನೀಡಿದರು.
ಮಹತ್ವ:
ಮಣ್ಣು ಎಂದರೆ ಭೂಮಿ. ಮಣ್ಣಿನಿಂದಲೇ ಎಲ್ಲ ಸಸ್ಯಗಳ ಬೆಳವಣಿಗೆ. ಶೇಕಡ 85ರಷ್ಟು ಆಹಾರ ಮಣ್ಣಿನಿಂದಲೇ ನೇರವಾಗಿ ಅಂದರೆ ಸಸ್ಯಜನ್ಯ ಆಹಾರ ಮನುಕುಲಕ್ಕೆ ಸಿಗುತ್ತಿದೆ. ಪ್ರಾಣಿಜನ್ಯ ಆಹಾರ ಕೂಡಾ ಪರೋಕ್ಷವಾಗಿ ಮಣ್ಣಿನಿಂದಲೇ ಸಿಗುತ್ತದೆ. 2050ರ ವೇಳೆಗೆ ವಿಶ್ವದ ಜನಸಂಖ್ಯೆ 950 ಕೋಟಿ ತಲುಪಿದ್ದು, ಇಷ್ಟೊಂದು ಅಗಾಧ ಸಂಖ್ಯೆಯ ಜನರಿಗೆ ಆಹಾರವನ್ನು ಭೂಮಿಯ ಶೇಕಡ 12ರಷ್ಟಿರುವ ಮಣ್ಣಿನಿಂದಲೇ ಉತ್ಪಾದಿಸಬೇಕಾಗುತ್ತದೆ. ಆದ್ದರಿಂದ ಮಣ್ಣನ್ನು, ಮಣ್ಣಿನ ಫಲವತ್ತತೆಯನ್ನು ಕಾಪಾಡುವುದು ಅಗತ್ಯ ಎಂಬ ಬಗ್ಗೆ ಜನಸಾಮಾನ್ಯರಿಗೆ ಅದರಲ್ಲೂ ಮುಖ್ಯವಾಗಿ ಕೃಷಿಕರಿಗೆ ಮನವರಿಕೆ ಮಾಡಿಕೊಡುವುದು ಈ ವಿಚಾರ ಸಂಕಿರಣದ ಉದ್ದೇಶ. ಸಸ್ಯಗಳು ಪೋಷಕಾಂಶಯುಕ್ತವಾಗಿರಬೇಕಾದರೆ ಮಣ್ಣು ಸತ್ವಯುತವಾಗಿರಬೇಕು. ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ಅಂದಾಜಿನಂತೆ ಜಾಗತಿಕವಾಗಿ 250 ಕೋಟಿ ಜನ ವಿವಿಧ ಪೋಷಕಾಂಶ ಹಾಗೂ ಖನಿಜಾಂಶ ಕೊರತೆಯಿಂದ ಬಳಲುತ್ತಿದ್ದಾರೆ. ಅಂದರೆ ನಾವು ಬೆಳೆ ಬೆಳೆಯುವ ಮಣ್ಣಿನಲ್ಲಿ ಖನಿಜಾಂಶಗಳ ಕೊರತೆ ಇದೆ ಎನ್ನುವುದು ನಿರ್ವಿವಾದ. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಆರೋಗ್ಯವಂತ ಮಣ್ಣಿನ ಪಾತ್ರ ಅತ್ಯಂತ ಮಹತ್ವದ್ದು.
ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಮಣ್ಣಿನ ಸಂರಕ್ಷಣೆಗೆ ಮಹತ್ವ ನೀಡಲಾಗಿದ್ದು, ಭಾರತದ ದೇಸಿ ಗೋವುಗಳ ಮೂತ್ರ ಹಾಗೂ ಗೋಮಯ ಮಣ್ಣಿನ ಸಾರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾ ಬಂದಿವೆ. ಭಾರತದ ಪ್ರಾಚೀನ ಗ್ರಂಥಗಳು, ಜಾನಪದ ಸಾಹತ್ಯ ಹಾಗೂ ಚಾರಿತ್ರಿಕ ಲೇಖನಗಳಲ್ಲಿ ಈ ಅಂಶ ದೃಢಪಟ್ಟಿದೆ. ಹಸಿರು ಕ್ರಾಂತಿಯ ಹೆಸರಿನಲ್ಲಿ ಕೃತಕ ರಾಸಾಯನಿಕಗಳನ್ನು ಮಣ್ಣಿಗೆ ಸೇರಿಸಲು ಆರಂಭಿಸಿದ ಬಳಿಕ ಮಣ್ಣಿನ ಗುಣಮಟ್ಟ ಕುಸಿಯುತ್ತಾ ಬಂದಿದ್ದು, ಗೋ ಆಧರಿತ ಕೃಷಿ ಮೂಲಕವಷ್ಟೇ ಈ ಸಮಸ್ಯೆಗೆ ಪರಿಹಾರ ಸಾಧ್ಯ ಎನ್ನುವುದನ್ನು ಮನವರಿಕೆ ಮಾಡುವುದು ಈ ವಿಚಾರ ಸಂಕಿರಣದ ಆಶಯ.
ಗೋ ಆಧರಿತ ಕೃಷಿ ಮಾತ್ರವಲ್ಲದೇ, ಗವ್ಯೋತ್ಪನ್ನಗಳ ಪ್ರಯೋಜನಗಳ ಬಗ್ಗೆ ವಿಶ್ವದ ಏಕೈಕ ಗೋಸ್ವರ್ಗದಲ್ಲಿ ಈಗಾಗಲೇ ಸಂಶೋಧನೆಗಳು ನಡೆಯುತ್ತಿದ್ದು, ಎಂಆರ್ಪಿಎಲ್ ನೆರವಿನೊಂದಿಗೆ ಬೃಹತ್ ಗೋ ಆಧರಿತ ಸಂಶೋಧನಾ ಕೇಂದ್ರವೂ ಗೋಸ್ವರ್ಗದಲ್ಲಿ ತಲೆ ಎತ್ತುತ್ತಿದೆ. ಈಗಾಗಲೇ ಹಲವು ಕೃಷಿ ಪ್ರಯೋಗಗಳಿಗೆ ಪ್ರಯೋಗಶಾಲೆಯಾದ ಗೋಸ್ವರ್ಗವೇ ಸೂಕ್ತ ವೇದಿಕೆ ಎಂಬ ಕಾರಣದಿಂದ ಮಣ್ಣಿನ ಸಾರ ಸಂರಕ್ಷಣೆಯಂಥ ವಿಚಾರದ ಚಿಂತನ- ಮಂಥನಕ್ಕೆ ಈ ಸ್ಥಳ ಆಯ್ಕೆ ಮಾಡಿಕೊಳ್ಳಲಾಗಿದೆ.
ಡಾ.ಎಸ್.ಎಸ್.ಪ್ರಕಾಶ್, ಕಾಮದುಘಾ ಟ್ರಸ್ಟ್ ಅಧ್ಯಕ್ಷ ಡಾ.ವೈ.ವಿ.ಕೃಷ್ಣಮೂರ್ತಿ, ಸಂಶೋಧನಾ ಖಂಡದ ಶ್ರೀಸಂಯೋಜಕ ಗುರುರಾಜ್ ಪಡೀಲ್ ಉಪಸ್ಥಿತರಿದ್ದರು.
ಮುಂದಿನ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ. ಹೀಗಾಗಿ…
2025 ರಲ್ಲಿ ಶನಿ ಮತ್ತು ಬುಧ ಗ್ರಹಗಳ ಸಂಯೋಜನೆಯಿಂದ ನಿರ್ಮಾಣವಾಗುತ್ತಿರುವ ನವಪಂಚಮ ರಾಜಯೋಗವು…
ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ…
ಎಲ್ಲಿ ಉಚಿತವೆಂಬ ಆಮಿಶ ಇದೆಯೋ ಅಲ್ಲಿ ತಳ್ಳಾಟವೂ ಇರುತ್ತದೆ. ಸರಕಾರಿ ಬಸ್ ಗಳಲ್ಲಿ…
ಕೊಡಗು ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹೆಚ್ಚಿನ ಗಾಳಿ-ಮಳೆ…
ಈ ಬಾರಿ ಮೇ ತಿಂಗಳಿನಿಂದಲೇ ಮಳೆ ಆರಂಭವಾಗಿದೆ. ಜೂನ್.10 ಕಳೆಯುವ ಹೊತ್ತಿಗೆ ವಾತಾವರಣ…