ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಉದ್ಘಾಟನೆಗೊಂಡ ಅನ್ವೇಷಣಾ 2019 ಅನೇಕ ನೂತನ ಆವಿಷ್ಕಾರಗಳಿಗೆ ಸಾಕ್ಷಿಯಾಯಿತು. ಇಡಿಯ ರಾಷ್ಟ್ರದಲ್ಲೇ ಮೊಟ್ಟ ಮೊದಲ ಬಾರಿಗೆ ನಡೆದ ಈ ಕೃಷಿ ಪರಿಕರಗಳ ಮಾದರಿ ಪ್ರದರ್ಶನ ಮೇಳದಲ್ಲಿ ರಾಜ್ಯದ ಸುಮಾರು ಆರುನೂರು ಮಂದಿ ತಮ್ಮ ಸರಿಸುಮಾರು ಮುನ್ನೂರೈವತ್ತು ಮಾದರಿಗಳೊಂದಿಗೆ ಆಗಮಿಸಿ ಕುತೂಹಲ ಮೂಡಿಸಿದರು.
ಕೃಷಿಯಲ್ಲಿ ಆವಿಷ್ಕಾರ, ಹೊಸಬಗೆಯ ಕೃಷಿ ಯಂತ್ರೋಪಕರಣಗಳು, ಮಣ್ಣು ಮತ್ತು ನೀರಿನ ನಿರ್ವಹಣೆ, ಕೃಷಿಯಲ್ಲಿ ಪಶುಸಂಗೋಪನೆ, ನವೀನ ಕೃಷಿ ಉತ್ಪನ್ನಗಳು ಎಂಬ ಐದು ವಿಭಾಗಗಳಲ್ಲಿ ಈ ಪ್ರದರ್ಶನ ಏರ್ಪಾಡಾಗಿತ್ತು. ಎಂಟನೆಯ ತರಗತಿಯ ಕೆಳಗಿನವು, ಒಂಬತ್ತರಿಂದ ಪಿಯುಸಿವರೆಗಿನವರು, ಐಟಿಐ ಹಾಗೂ ವೃತ್ತಿಪರ ಕಾಲೇಜಿನವರು ಹಾಗೂ ಸಾರ್ವಜನಿಕರು/ಕೃಷಿಕರು ಎಂಬ ಐದು ವರ್ಗದಲ್ಲಿ ಈ ಅನ್ವೇಷಣಾ 2019 ಪ್ರತ್ಯೇಕ ಪ್ರತ್ಯೇಕವಾಗಿ ಸಿದ್ಧಗೊಂಡಿತ್ತು.
ಎಳೆಯರಿಂದ ತೊಡಗಿ ಕೃಷಿಕರವರೆಗೆ ರೈತಪರ ಉತ್ಪನ್ನಗಳ ಮಾದರಿ ಸಿದ್ಧವಾಗಿ ನಿಂತು ನೋಡುಗರ ಅಚ್ಚರಿಗೆ ಕಾರಣವಾಯಿತು. ಪಾಪಸ್ ಕಳ್ಳಿ, ಗೇರುಬೀಜದಂತಹ ವಸ್ತುಗಳಿಂದ ತಯಾರಿಸಿದ ಸಾವಯವ ಕೀಟನಾಶಕ, ನೀರಿನ ಮರುಬಳಕೆಯ ಮಾದರಿ, ಉಳುವಿಕೆ ಮತ್ತು ಬಿತ್ತನೆ ಮಾಡುವುದಕ್ಕೆ ರೂಪಿಸಿದ ನವೀನ ಯಂತ್ರದ ಮಾದರಿ, ಹೈಡ್ರೋಫಾರ್ಮಿಂಗ್ ಮಾದರಿ, ಲಂಭ ಮಾದರಿಯ ಗಾರ್ಡನ್, ಒಣ ಅಡಿಕೆಯನ್ನು ಅಂಗಳದಿಂದ ನೇರವಗಿ ಗೋಣಿಚೀಲಕ್ಕೆ ತುಂಬಿಸುವ ಸಾಧನ, ನಿಟಿಲೆ ಮಹಾಬಲೇಶ್ವರ ಭಟ್ಟರ ನಿರ್ಗುಣ ಮಾದರಿ, ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಲಕ್ಷ್ಮೀಶ್ ಮತ್ತು ಮನ್ವಿತ್ ರೂಪಿಸಿದ ಗಿಡಗಳಿಗೆ ಔಷಧ ಸಿಂಪಡಣಾ ಮಾದರಿ ಮೊದಲಾದವುಗಳು ವಿಶೇಷವಾಗಿ ಮನಸೆಳೆದವು.
ನೀರು ಉಳಿತಾಯ ಮಾದರಿ: ವಿಟಲ್ರಿಸೋರ್ಸ್ ಸೇವರ್ ಎಂಬ ಹೆಸರಿನಲ್ಲಿ ರಾಮಕುಂಜ ಕನ್ನಡ ಮಾಧ್ಯಮ ಹೈಸ್ಕೂಲಿನ ಪ್ರಜ್ವಲ್ ರೂಪಿಸಿದ ನೀರಿನ ಉಳಿತಾಯ ಮಾದರಿ ಅನೇಕರ ಮೆಚ್ಚುಗೆ ಗಳಿಸಿತು. ದಿನನಿತ್ಯ ಮನೆಗಳಲ್ಲಿ, ಕಛೇರಿಗಳಲ್ಲಿ ನಳ್ಳಿಗಳಲ್ಲಿ ಲೀಟರ್ ಗಟ್ಟಲೆ ನೀರು ವ್ಯರ್ಥವಾಗುವುದನ್ನು ತಡೆಯವ ಯೋಜನೆಯೇ ಈ ಮಾದರಿ. ಇದರಲ್ಲಿ ಪ್ರತಿಯೊಂದು ನಳ್ಳಿಗೂ ಒಂದು ಮೀಟರ್ ಅಳವಡಿಸಲಾಗುತ್ತದೆ. ಅದರಲ್ಲಿ ನಮಗೆ ಎಷ್ಟು ಸೆಕೆಂಡ್ ನೀರು ಬರಬೇಕೆನ್ನುವುದನ್ನು ಮೊದಲೇ ನಿರ್ಧರಿಸಿಡಲಾಗುತ್ತದೆ. ಹಾಗಾಗಿ ಒಮ್ಮೆ ನಳ್ಳಿ ತಿರುಗಿಸಿದಾಗ ನಿಗದಿಪಡಿಸಲಾದಷ್ಟು ಹೊತ್ತು ಮಾತ್ರ ನೀರು ಬರುತ್ತದೆ. ಉದಾಹರಣೆಗೆ ಕೈ ತೊಳೆಯಲು ಐದು ಸೆಕುಂಡ್ ನೀರನ್ನು ನಿಗದಿಪಡಿಸಿದರೆ ಅಷ್ಟು ಹೊತ್ತು ನೀರು ಬಂದಾಗ ತಾನಾಗೇ ನೀರು ನಿಂತು ಹೋಗುತ್ತದೆ. ಈ ಮಾದರಿಯಲ್ಲಿ ನೀರು ನಳ್ಳಿಯಿಂದ ಬರಬೇಕಾದ ಸಮಯವನ್ನು ಹೆಚ್ಚು ಅಥವ ಕಡಿಮೆ ಮಾಡುವುದಕ್ಕೂ ಅವಕಾಶವಿದೆ.
ಬಾಳೆಗೊನೆ ಸಂರಕ್ಷಣಾ ಮಾದರಿ: ಕೃಷಿಕರಿಗೆ ಮಂಗನ ಕಾಟ ಹೇಳತೀರದು. ಕೋತಿಗಳ ಉಪಟಳ ತಾಳಲಾರದೆ ಬಾಳೆ ಕೃಷಿಯನ್ನೇ ಕೈಬಿಟ್ಟವರಿದ್ದಾರೆ. ಆದರೆ ಇಲ್ಲೊಂದು ಮಾದರಿಯಿದೆ. ಇದನ್ನು ಬಳಸಿ ಬಾಳೆಗೊನೆ ರಕ್ಷಿಸಬಹುದು. ಇದೊಂದು ವೃತ್ತಾಕಾರದ ಕಬ್ಬಿಣದ ಸರಿಗೆಗಳಿಂದ ರೂಪಿಸಿದ ಪೆಟ್ಟಿಗೆ. ಮಧ್ಯ ಭಾಗದಿಂದ ಇದನ್ನು ತೆರೆಯುವುದಕ್ಕೆ ಸಾಧ್ಯ. ಈ ಪೆಟ್ಟಿಗೆಯನ್ನು ಬಾಳೆಕಾಯಿಯನ್ನು ಸುತ್ತುವರಿದು ಕಟ್ಟಿಡಲು ಸಾಧ್ಯ. ಬಾಳೆಗೊನೆ ಎಳವೆಯಲ್ಲಿರುವಾಗಲೇ ಕಟ್ಟಿಟ್ಟರೆ, ಅದು ಬೆಳೆದ ನಂತರವಷ್ಟೇ ಈ ಪೆಟ್ಟಿಗೆ ತೆರೆದರಾಯಿತು. ಅಕಸ್ಮಾತ್ ಕಪಿಗಳು ಬಂದರೂ ಬಾಳೆಗೊನೆಯನ್ನು ನೋಡಬೇಕಾದೀತೇ ವಿನಃ ಕೈ ಹಾಕುವಂತಿಲ್ಲ! ಈ ಮಾದರಿ ರೂಪಿಸಿದವರು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಮಾತಾಜಿಯಾದ ಗಾಯತ್ರಿ.
ಪ್ಲಾಸ್ಟಿಕ್ ನಿಂದ ಗ್ಯಾಸ್, ಆಯಿಲ್ ತಯಾರಿ: ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಹೇಮಸ್ವಾತಿ ಮತ್ತು ಖುಷಿ ರೂಪಿಸಿದ ಪ್ಲಾಸ್ಟಿಕ್ ತ್ಯಾಜ್ಯದಿಂದ ಗ್ಯಾಸ್ ತಯಾರಿಕಾ ನೋಡುಗರನ್ನು ತಡೆದು ನಿಲ್ಲಿಸುವಂತಿತ್ತು. ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಮುಕ್ತಿ ಹೇಗೆ ಎಂಬ ಚಿಂತೆಯಲ್ಲಿರುವ ಸಂದರ್ಭದಲ್ಲಿ ಪುತ್ತೂರಿನ ಈ ವಿದ್ಯಾರ್ಥಿನಿಯರು ಪರಿಹಾರ ಕಂಡುಕೊಂಡಿದ್ದಾರೆ. ಪ್ಲಾಸ್ಟಿಕ್ ಅನ್ನು ನಿಗದಿತ ಶಾಖದಲ್ಲಿ ದ್ರವರೂಪಕ್ಕಿಳಿಸಿ ಅದರಿಂದ ಗ್ಯಾಸ್, ಪೆಟ್ರೋಲ್ ಪಡೆಯಬಹುದಾದ ಈ ಹುಡುಗಿಯರ ಮಾದರಿ ಮುಂದಿನ ದಿನಗಳಲ್ಲಿ ಜನಪ್ರಿಯವಾದರೆ ಅಚ್ಚರಿಯೇನೂ ಅಲ್ಲ. ಹೀಗೆ ಇನ್ನೂ ಹಲವು ಉಪಯುಕ್ತ ಮಾದರಿಗಳು ಪ್ರದರ್ಶನದಲ್ಲಿ ಮೂಡಿಬಂದು ಜನರನ್ನು ಸೆಳೆಯುತ್ತಿವೆ. ಭಾನುವಾರವೂ ಈ ಪ್ರದರ್ಶಿನಿ ತೆರೆದಿದ್ದು ಆಸಕ್ತರು ವೀಕ್ಷಿಸಬಹುದು.
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…
ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…
ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…