ಮಗಳು ಬೆಳಿಗ್ಗೆ ಶಾಲೆಗೆ ಹೋದರೆ ಮನೆಗೆ ಬರೋದು ಸಾಯಂಕಾಲ. ಮುಂದಿನ ವರ್ಷದಿಂದ ಮಗನೂ ಶಾಲೆಗೆ ಹೋಗಲು ಪ್ರಾರಂಭಿಸುತ್ತಾನೆ. ಆಗ ನಾನು ಸ್ವಲ್ಪ ಫ್ರೀ. ಮಕ್ಕಳಿಬ್ಬರನ್ನೂ ಶಾಲೆಗೆ ಕಳುಹಿಸಿ ನಾನು ಸಿಕ್ಕ ಸಮಯದಲ್ಲಿ ಪತಿಯೊಡನೆ ಪೂರ್ಣ ಪ್ರಮಾಣದಲ್ಲಿ ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಅಂದುಕೊಂಡಿದ್ದೆ ಕಳೆದ ವರ್ಷ. ಎಲ್ಲಾ ನಾವಂದುಕೊಂಡಂತೆ ಆಗುವುದಿಲ್ಲ ಅನ್ನುವುದು ಅಕ್ಷರಷಃ ಸತ್ಯ ಅನ್ನೋ ಹಾಗೇ ನನ್ನ ಲೆಕ್ಕಾಚಾರಗಳು ಎಲ್ಲಾ ಉಲ್ಟಾಪಲ್ಟಾ ಹೊಡೆದಿವೆ..!! ಎಲ್ಲಾ ಕೊರೋನಾ ಮಹಾಮಾರಿಯ ಮಾಯೆ..
ಕೆಲಸದಲ್ಲಿ ಬದಲಾವಣೆಯಾದದ್ದಂತು ನಿಜ. ಅಮ್ಮನಾಗಿದ್ದವಳು “ಟೀಚರಮ್ಮ”ನಾಗಿದ್ದೇನೆ. ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಮಕ್ಕಳಿಗೆ ಪಾಠ ಶಾಲೆಗಳಲ್ಲಿಯೇ ಆಗುತ್ತಿತ್ತು. ಮನೆಗೆ ಮರಳಿದ ನಂತರ ಹೋಂವರ್ಕ್, ಅಲ್ಪ ಸ್ವಲ್ಪ ರಿವಿಜನ್ ಮಾಡಿಸಿದರೆ ಸಾಕಾಗುತ್ತಿತ್ತು.ಈಗ ಹಾಗಲ್ಲ ನೋಡಿ. ಎಲ್ಲಾ ಆನ್ಲೈನ್ ಕ್ಲಾಸ್ಗಳು. ಅದು ನಗರ ಪ್ರದೇಶಗಳಲ್ಲಿ ಸೀಮಿತ ಸಮಯದ ಲೈವ್ಕ್ಲಾಸ್ ನಡೆದರೆ, ಇಂಟರ್ನೆಟ್ ಸಮಸ್ಯೆ, ಇನ್ನೂ ನಾನಾ ಕಾರಣಗಳಿಂದ ಹಳ್ಳಿ ಪ್ರದೇಶಗಳಲ್ಲಿ ಸ್ವಲ್ಪ ವಿಭಿನ್ನ. ಹಾಗಾಗಿ ಟೀಚರ್ಸ್ಗಳು ಪುಟ್ಟ ಮಕ್ಕಳಿಗೆ ಪಾಠಮಾಡಿ ಆಡಿಯೋ- ವಿಡಿಯೋಗಳನ್ನು ಪೋಷಕರ ನಂಬರಿಗೆ ವಾಟ್ಸಾಪ್ ಮೂಲಕ ಕಳುಹಿಸುತ್ತಾರೆ.
ಮತ್ತೆ ಪ್ರಾರಂಭವಾಗುವುದು ಅಮ್ಮಂದಿರೆಲ್ಲಾ ಟೀಚರಮ್ಮ ಆಗುವ ಛಾಲೆಂಜಿಂಗ್ ಕೆಲಸ. ಕಾರ್ಟೂನ್, ಕತೆ, ಇನ್ನಿತರ ವಿಡಿಯೋಗಳನ್ನು ನೋಡಲು ಕರೆಯದೆ ಬರುವ ಮಕ್ಕಳನ್ನು ಪಾಠದ ವಿಷಯಕ್ಕೆ ಬಂದಾಗ ಒತ್ತಾಯಪೂರ್ವಕವಾಗಿ ಕೂರಿಸಬೇಕು. ಶಾಲೆಯಲ್ಲಾದರೆ ಸಮಪ್ರಾಯದ ಮಕ್ಕಳೊಡನೆ ಆಡುತ್ತಾ , ನಲಿಯುತ್ತಾ, ಅವನಿಂದ ಮೊದಲು ನಾನು ಮುಗಿಸಬೇಕೆನ್ನುವ ಕಾಂಪಿಟೀಷನ್ನಿಂದಾಗಿ ಸಲೀಸಾಗಿ ಓದಿ ಬರೆಯುವ ಮಕ್ಕಳು ಮನೆಯಲ್ಲಿಅಮ್ಮನೊಡನೆ ಮಾಡೋ ತಕರಾರು ನಾನಾ ತರಹ. ಪಾಠದ ನಡುವೆ ಆಗಾಗ ಬರುವ ತೂಕಡಿಕೆ, ಬಾಯಾರಿಕೆ, ಬೋರ್ನಿಂದ ಹೊರಬರಿಸಿ ಇಂಟರೆಸ್ಟಿಂಗ್ ಆಗಿ ಪಾಠದ ಆಡಿಯೋ ಕೇಳಿಸಿ, ಅದರ ಅರ್ಥ ಮಗುವಿಗೆ ಮನದಟ್ಟಾಗುವಂತೆ ಮಾಡಿಸಬೇಕಾದ ಅನಿವಾರ್ಯತೆ ಅಮ್ಮನದ್ದು.
ಅಂದ ಹಾಗೆ ಈಗ ಶಾಲೆಗೆ ಹೊರಡಿಸುವ ಗಡಿಬಿಡಿಯಿಲ್ಲ. ಲಂಚ್ ಬಾಕ್ಸ್ಗೆ ಏನು ತುಂಬಿಸಲಿ ಎನ್ನುವ ತಲೆಬಿಸಿ ಇಲ್ಲ. ಕಳೆದ ವರ್ಷ ಅನಿವಾರ್ಯ ಎನಿಸಿಕೊಂಡಿದ್ದ ವಸ್ತುಗಳು ಈಗ ಅನಿವಾರ್ಯವಲ್ಲ.
ಯುನಿಫಾರ್ಮ್ ಕಳೆದ ವರ್ಷ ಇಟ್ಟದ್ದುಇನ್ನೂ ಹಾಗೇ ಭದ್ರವಾಗಿ ಬೀರುವಿನಲ್ಲಿದೆ. ಸಾಕ್ಸ್, ಶೂ ಗಳು ಪುಟ್ಟು ಕಾಲುಗಳು ಯಾವಾಗ ನಮ್ಮನ್ನು ಧರಿಸುತ್ತವೆಯೋ ಎನ್ನುವ ಹಾಗೇ ಇಣುಕುತ್ತಿವೆ. ಮಕ್ಕಳೇ ಮೊಬೈಲ್ ಮುಟ್ಟಬೇಡಿ. ನಿಮಗಲ್ಲಅದು ಎನ್ನುತ್ತಿದ್ದ ಹೆತ್ತವರು ಈಗ ಮೊಬೈಲ್ನಲ್ಲಿ ಪಾಠ ನೋಡು ಎನ್ನುವಂತಾಗಿದೆ. ಮಕ್ಕಳ ಪಾಠದ ಸಲುವಾಗಿ ಸಾವಿರಾರು ರುಪಾಯಿ ವ್ಯಯಿಸಿ ನೆಟ್ ಬೂಸ್ಟರ್ ಹಾಕಿಸುತ್ತಿದ್ದಾರೆ. ಕಾಲಾಯ ತಸ್ಮೈ ನಮಃ ಎನ್ನುವುದು ಇದಕ್ಕೇ ಇರಬೇಕು.
ಸದ್ಯದ ಪರಿಸ್ಥಿತಿಯಲ್ಲಿ ಅಮ್ಮನ ಹೆಚ್ಚಿನ ಸಮಯ ಮಕ್ಕಳಿಗೆ ಮೀಸಲಾಗಬೇಕಿದೆ. ಏಕೆಂದರೆ ಸಮಯಕ್ಕೆ ಸರಿಯಾಗಿ ಪಾಠ, ನೋಟ್ಸ್, ಡಿಕ್ಟೇಷನ್, ಕಾಪಿ ರೈಟಿಂಗ್, ಪಾಠ ಓದಿಸುವುದು ಹೀಗೆ ಎಲ್ಲಾ ವಿಷಯಗಳಿಗೂ ಅಮ್ಮನೇ ಈಗಿರುವ ಏಕೈಕ ಟೀಚರ್. ಮಕ್ಕಳ ಪಾಠದ ವಿಷಯದಲ್ಲಿ ಪ್ರಸ್ತುತ ಶಾಲಾ ಶಿಕ್ಷಕಿಯರಿಗೆ 50% ಕೆಲಸವಾದರೆ ಇನ್ನರ್ಧ ಅಮ್ಮನ ಪಾಲಿಗಿದೆ. ಮನೆಯಲ್ಲೇ ಮಕ್ಕಳಿರುವ ಕಾರಣ ಕೇವಲ ಶಾಲಾ ಚಟುವಟಿಕೆಗೆ ಮಾತ್ರ ಮಕ್ಕಳನ್ನು ಸೀಮಿತಗೊಳಿಸದೆ ಮನೆಯ ಚಿಕ್ಕ ಪುಟ್ಟ ಕೆಲಸಕ್ಕೆ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದರಿಂದ ಪಠ್ಯೇತರ ಚಟುವಟಿಕೆ ಕೂಡಾ ಮನೆಯಲ್ಲೇ ದೊರೆತಂತಾಗುವುದು. ಅಮ್ಮನ ಉದಾಸೀನತೆ ಮಕ್ಕಳನ್ನು ಓದಿನ ವಿಷಯದಲ್ಲಿ ಹಿಂದಕ್ಕೆ ಕಳಿಸೀತು. ಮನೆಯೇ ಮೊದಲ ಪಾಠ ಶಾಲೆಯಾಗಲು ಇದು ಸಕಾಲ.
ಹೆಚ್ಚಿನ ವಿವರಗಳನ್ನು ಪಡೆಯಲು ಜ್ಯೋತಿಷ್ಯರೊಂದಿಗೆ ಸಂಪರ್ಕಿಸಬಹುದು. 9535156490
ಜಗತ್ತಿನಲ್ಲಿ ಎಲ್ಲವನ್ನೂ ಹಣದಿಂದಲೇ ಖರೀದಿ ಮಾಡಲು ಸಾಧ್ಯವಿಲ್ಲ. ನೀತಿ, ನಡತೆ, ಬದ್ಧತೆಗಳು ಹಣ ಕೊಟ್ಟರೂ…
ಯಕ್ಷಗುರು, ಭಾಗವತ ಶ್ರೀ ಪಾಲೆಚ್ಚಾರು ಗೋವಿಂದ ನಾಯಕ್ ಅವರಿಗೆ ‘ಈಶಾವಾಸ್ಯ ಪ್ರಶಸ್ತಿ ಪುರಸ್ಕಾರ’…
ಬೆಂಗಳೂರು ನಗರದಲ್ಲಿ ಮೇ ತಿಂಗಳಲ್ಲಿ 315 ಮಿಲಿಮೀಟರ್ ಮಳೆಯಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.…
ಹಾಲು ಉತ್ಪಾದನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಂಚೂಣಿಯಲ್ಲಿದ್ದು, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದ…
ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ…