The Rural Mirror ವಾರದ ವಿಶೇಷ

ಮೂಲಿಕಾ ತಜ್ಞೆ ಜಯಲಕ್ಷ್ಮೀ ವೆಂಕಟರಾಮ ದೈತೋಟ

Share

ಪಾಣಾಜೆ ವೈದ್ಯ ಮನೆತನದ ಮೂಲಿಕಾ ತಜ್ಞ ವೆಂಕಟರಾಮ ದೈತೋಟರು ದಿವಂಗತರಾಗಿ ಎರಡು ವರುಷವಾಯಿತಷ್ಟೇ. ಅವರ ಪತ್ನಿ ಜಯಲಕ್ಷ್ಮೀ ದೈತೋಟರು (76) ಮೊನ್ನೆ 2019 ಆಗಸ್ಟ್ 4ರಂದು ಗಂಡನನ್ನು ಅನುಸರಿಸಿದರು. ನಿಜಾರ್ಥದಲ್ಲಿ ಮೂಲಿಕಾ ಲೋಕ ಬಡವಾಯಿತು.

Advertisement
Advertisement

ಜಯಲಕ್ಷ್ಮೀ ದೈತೋಟರು ವೆಂಕಟ್ರಾಮರ ಚಿಕಿತ್ಸಾ ಜಯದ ಚಾಲನಾ ಶಕ್ತಿಯಾಗಿದ್ದರು. ಹುಟ್ಟೂರು ಸಾಗರ ತಾಲೂಕು ಮುಂಡಿಗೇಸರ. ವೈದ್ಯ ಹಿನ್ನೆಲೆಯವರು. ಇವರ ಅಜ್ಜ ಜನಪದ ವೈದ್ಯರು. ತಂದೆ ಸೂರ್ಯನಾರಾಯಣ ರಾವ್. ತಾಯಿ ನಾಗವೇಣಿ. ಒಬ್ಬ ಅಣ್ಣ, ಇಬ್ಬರು ತಮ್ಮಂದಿರು. ಕನ್ನಡ ಎಂ.ಎ.ಪದವೀಧರೆ. 1971ರಲ್ಲಿ ವೆಂಕಟರಾಮರ ಕೈಹಿಡಿದು ದೈತೋಟದ ಸೊಸೆಯಾದರು. ಶಾಲಾ ಕಲಿಕೆ ಐದರಲ್ಲಿರುವಾಗಲೇ ಅಜ್ಜಿ ಮದ್ದಿನಲ್ಲಿ ಪರಿಣತೆ.

ಪಾರಂಪರಿಕ ಜ್ಞಾನವಾಹಿನಿ ಇವರಲ್ಲೂ ಹರಿದಿತ್ತು. ಪ್ರಾಕೃತಿಕ ತಂಬುಳಿ, ಆಹಾರದ ಪದ್ದತಿಯಲ್ಲಿ ಇವರು ಮನೆತಾಯಿ. ನಮ್ಮ ಕಣ್ಣಿಗೆ ಪರಿಸರದಲ್ಲಿರುವ ಗಿಡ, ಮರಗಳು ಕಳೆಯಾಗಿಯೋ, ಕಾಡಾಗಿಯೋ ಕಾಣುತ್ತದೆ. ಆದರೆ ಜಯಲಕ್ಷ್ಮಿಯವರಿಗೆ ಅವೆಲ್ಲವೂ ಆಹಾರವಸ್ತುವಾಗಿ, ಔಷಧೀಯ ವಸ್ತುವಾಗಿ ಕಾಣುತ್ತಿತ್ತು.

“ನಿತ್ಯ ಒಂದಲ್ಲ ಒಂದು ಸಸ್ಯ, ಕೆತ್ತೆ, ಬೇರು, ಹೂ.. ಗಳಿಂದ ತಂಬುಳಿ, ಸಾರು, ಪದಾರ್ಥಗಳನ್ನು ತಯಾರಿಸಬಹುದು. ಅಷ್ಟು ಸಮೃದ್ಧ ಸಂಪನ್ಮೂಲ ಪ್ರಕೃತಿಯಲ್ಲಿದೆ. ಆಗಲೇ ಆರೋಗ್ಯ. ಆದರೆ ಅದನ್ನು ನೋಡಲು ಆರೋಗ್ಯಪೂರ್ಣ ಕಣ್ಣುಗಳು ಬೇಕು” ಎನ್ನುತ್ತಿದ್ದರು. ಇವರ ಮನೆಯಡುಗೆಯಲ್ಲಿ ಟೊಮೆಟೋ, ಬೀನ್ಸ್ ಗಳಿದ್ದಿರಲಿಲ್ಲ. ಗೆಡ್ಡೆ, ಸಾರು, ತಂಬುಳಿ.. ಹೀಗೆ ನಿತ್ಯಾಹಾರ.

ದೈತೋಟರು ನಿರ್ವಹಿಸುತ್ತಿದ್ದ ‘ಆಹಾರ-ಔಷಧಿ’ ತರಬೇತಿ ಶಿಬಿರಗಳಲ್ಲಿ ಜಯಲಕ್ಷ್ಮೀ ದೈತೋಟರದು ಸಮಾನ ಪಾಲು. ಮೂಲಿಕಾ ಪರಿಚಯ, ವೈದ್ಯಚಿಕಿತ್ಸಾ ವಿಧಾನದ ವಿವರಣೆ ವೆಂಕಟ್ರಾಮರದ್ದಾದರೆ, ಪಾರಂಪರಿಕ ಆಹಾರ ಸಿದ್ದತೆಯ ಕುರಿತು ಜಯಲಕ್ಷ್ಮಿಯವರು ವಿವರಿಸುತ್ತಿದ್ದರು. ಹಲವು ಕಡೆಗಳಲ್ಲಿ ಶಿಬಿರಗಳಾಗಿವೆ.

Advertisement

   “ನಮ್ಮ ಹೊಟ್ಟೆಯೆಂದರೆ ತ್ಯಾಜ್ಯ ತುಂಬುವ ಚೀಲವಲ್ಲ. ಅದು ಶರೀರದ ಅತಿ ಪ್ರಮುಖ ಅಂಗ. ಜಠರದ ಆರೋಗ್ಯ ಸರಿಯಿದ್ದರೆ ಮಾತ್ರ ದೇಹಾರೋಗ್ಯ. ಅದು ಕೊಡುವ ಚೈತನ್ಯದಿಂದ ಆರೋಗ್ಯ, ಭಾಗ್ಯ.” ವೆಂಕಟರಾಮ ದೈತೋಟ ಮತ್ತು ಜಯಲಕ್ಷ್ಮೀ ದೈತೋಟ ದಂಪತಿ ಸಂದರ್ಭ ಬಂದಾಗಲೆಲ್ಲಾ ಹೇಳುವ ಕಿವಿಮಾತು. ಕಾರ್ಯಾಗಾರ, ಶಿಬಿರಗಳಲ್ಲಿ ಆಹಾರ ವಿಚಾರದಲ್ಲಿ ಕಟ್ಟುನಿಟ್ಟಾದ  ಕ್ರಮವನ್ನು ಹೇಳುತ್ತಿದ್ದರು. ಇದನ್ನು ತಮ್ಮ ‘ಅನ್ನ-ಆರೋಗ್ಯ-ಔಷಧ’  ಪುಸ್ತಿಕೆಯಲ್ಲಿ ಸವಿಸ್ತಾರವಾಗಿ ವಿವರಿಸಿದ್ದಾರೆ.

   ದಶಕದ ಹಿಂದೆ ಶಿರಸಿ ತಾಲೂಕಿನ ಕಳವೆಯಲ್ಲಿ ‘ಅಡವಿಅಡುಗೆ’  ಕಾರ್ಯಾಗಾರ ನಡೆದಿತ್ತು. ವೆಂಕಟರಾಮ ದೈತೋಟ ಮತ್ತು ಜಯಲಕ್ಷ್ಮೀ ದೈತೋಟರು ಸಾರಥ್ಯ ವಹಿಸಿದ್ದರು. ಎರಡು ದಿವಸಗಳ ಕಾಲ ಜರುಗಿದ ಕಾರ್ಯಕ್ರಮದ ಊಟದ ಬಟ್ಟಲಿನಲ್ಲಿ ಎಲ್ಲವೂ ಹಸಿರು ಮಾತ್ರೆಗಳೇ! ಅಂದಿನ ಶಿಬಿರದಲ್ಲಿ ನಾನೂ ಭಾಗವಹಿಸಿದ್ದು ನನ್ನ ನೆನಪಿನ ತೇವ ಆರಿಲ್ಲ!

ಅಂದು ತಂಬುಳಿ-ಕಷಾಯಗಳದ್ದೇ ಕಾರುಬಾರು. ಅಂದು ದಾಖಲಾದ ತಂಬುಳಿಗಳು ಅರುವತ್ತಕ್ಕೂ ಮಿಕ್ಕಿ. ‘ನಾವು ಪ್ರಕೃತಿಯಿಂದ ದೂರವಾಗಿದ್ದೇವೆ, ಪ್ರಕೃತಿಯಿಂದ ದೂರವಾದಷ್ಟೂ ನಮಗೆ ಖಾಯಿಲೆ ತಪ್ಪಿದ್ದಲ್ಲ’ ಎನ್ನುತ್ತಿದ್ದ ದೈತೋಟ ದಂಪತಿ ‘ಸಸ್ಯಗಳನ್ನು ಉಳಿಸಬೇಕು, ಬೆಳೆಸಬೇಕು. ಮರೆತುಹೋದ ತಂಬುಳಿಗಳನ್ನು ಪುನಃ ಅಡುಗೆ ಮನೆಗೆ ಸ್ವಾಗತಿಸುವ ತಂಬುಳಿ ಕಾರ್ಯಾಗಾರಗಳು ನಡೆಯುತ್ತಿರುವುದು ಕಾಲದ ಆವಶ್ಯಕತೆ’ ಎನ್ನುತ್ತಿದ್ದರು.

ನಮ್ಮಲ್ಲಿ ಆಹಾರವಸ್ತುಗಳನ್ನು ಕಾಪಿಡಲು ‘ತಂಪುಪೆಟ್ಟಿಗೆ’ ರೂಢಿಯಾಗಿದೆ. ಇದಿಲ್ಲದೆ ಐದಾರು ತಿಂಗಳು ತಾಳಿಕೊಳ್ಳುವ ಗಂಧದ ಚಟ್ನಿಪುಡಿ, ನುಗ್ಗೆಸೊಪ್ಪಿನ ಚಟ್ನಿಪುಡಿ, ಚೂರಿಮುಳ್ಳಿಸೊಪ್ಪಿನ ಚಟ್ನಿಪುಡಿ….ಎಷ್ಟಿಲ್ಲ! ಇಂತಹ ಹಲವು ಪುಡಿಗಳು ಜಯಕ್ಕನ ಬೆರಳ ತುದಿಯಲ್ಲಿದ್ದುವು.

ಏಳೆಂಟು ವರುಷಗಳ ಹಿಂದೊಮ್ಮೆ ಪುತ್ತೂರಿನ ಗಿಡ ಗೆಳೆತನ ಸಂಘ ‘ಸಮೃದ್ಧಿ’ಯು ಅರ್ಧ ದಿವಸದ  ‘ತಂಬುಳಿ ದಿನ’ವನ್ನು ಹಮ್ಮಿಕೊಂಡಿತ್ತು. ಅಂದು ಜಯಲಕ್ಷ್ಮೀ ದೈತೋಟರು ಹೇಳಿದ್ದ ಒಂದು ಮಾತು ಈಗಲೂ ಕಿವಿಯಲ್ಲಿ ರಿಂಗಣಿಸುತ್ತದೆ – ‘ವಾಣಿಜ್ಯ ದೃಷ್ಟಿಯಿಂದ ಬೆಳೆಸುವ ತರಕಾರಿಗಳನ್ನು ಕೀಟ, ರೋಗದಿಂದ ಮುಕ್ತವಾಗಿಸಲು ವಿಷ ಸಿಂಪಡಣೆ ಬೇಕು. ಇದನ್ನು ತಿಂದು ನಮ್ಮ ಆರೋಗ್ಯ ಯಾಕೆ ಹಾಳುಮಾಡಿಕೊಳ್ಳಬೇಕು? ತರಕಾರಿಯನ್ನು ಮನೆಯಲ್ಲೇ ಬೆಳೆಸಿ. ಇಲ್ಲದಿದ್ದರೆ ತಂಬುಳಿ ಮಾಡಿ ಉಣ್ಣಿ. ನಿಮ್ಮ ಹಿತ್ತಿಲಲ್ಲಿ ಬಾಳೆಕಾಯಿ ಇಲ್ವಾ, ಬಳಸಿ. ಮಾರುಕಟ್ಟೆಯಿಂದ ತರಕಾರಿಯನ್ನು ಎಲ್ಲಿಯವರೆಗೆ ಖರೀದಿಸುವ ಆಸಕ್ತಿ ಇರುವುದೋ ಅಲ್ಲಿಯವರೆಗೆ ವಿಷ ಹಾಕುವವರು ಇದ್ದೇ ಇರುತ್ತಾರೆ!’

Advertisement

    ‘ಬಿಳಿ ಗುಲಾಬಿ ಹೂ, ದಾಸವಾಳ ಹೂ, ಅಶೋಕ ಹೂ….ಸಿಗುವುದಿಲ್ವಾ. ಹೀರೇಕಾಯಿ ಸಿಪ್ಪೆಯನ್ನು ಒಣಗಿಸಿಟ್ಟುಕೊಂಡರೆ ಚಟ್ನಿ ಮಾಡಬಹುದು. ಕುಂಬಳಬೀಜ, ಸೌತೆಬೀಜ, ಸಿಹಿಕುಂಬಳ ಬೀಜಗಳು ಅಲ್ಲದೆ ನಿಂಬೆಸೊಪ್ಪು, ದೊಡ್ಡಿಸೊಪ್ಪು, ನುಗ್ಗೆಸೊಪ್ಪು..ಗಳನ್ನು ಒಣಗಿಸಿಟ್ಟುಕೊಳ್ಳಿ. ಬೇಕಾದಾಗ ಬಳಸಿ’ – ನಗರದ ತಂಬುಳಿಪ್ರಿಯರನ್ನು ಜಯಕ್ಕ ಆಕರ್ಷಿಸಿದ ಬಗೆಯಿದು.

   ದೈತೋಟ ದಂಪತಿ ದೂರವಾಗಿದ್ದಾರೆ. ದೈತೋಟ ಪರಂಪರೆಯ ಮೂಲಿಕಾ ಜ್ಞಾನವೂ ಮೌನವಾಗಿವೆ. ‘ಆಹಾರ- ಆರೋಗ್ಯ’ಗಳಿಗೆ ಗಟ್ಟಿ ದನಿಯನ್ನು ಕೊಡುತ್ತಿದ್ದ ಇವರ ಸಾಧನೆ ದಾಖಲಾದುದು ಕಡಿಮೆ. ಬದುಕಿನುದ್ದಕ್ಕೂ ವೈಯಕ್ತಿಕವಾಗಿ ಎಷ್ಟು ನೋವುಂಡಿದ್ದರೋ, ಅಷ್ಟೇ ಬದಲಾಗುತ್ತಿರುವ ಆಹಾರದ ವಿಧಾನದತ್ತಲೂ ವಿಷಾದಗಳಿದ್ದುವು. ಅಗಲಿದ ಜಯಲಕ್ಷ್ಮೀ ದೈತೋಟರಿಗಿದು ಅಕ್ಷರ ನಮನ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಹವಾಮಾನ ವರದಿ | 10-06-2025 | ಜೂ.11 ರಿಂದ ರಾಜ್ಯದ ವಿವಿದೆಡೆ ಉತ್ತಮ ಮಳೆಯ ಮುನ್ಸೂಚನೆ

ಜೂನ್ 12ರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಉತ್ತಮ ಹಾಗೂ ಕೆಲವು ಭಾಗಗಳಲ್ಲಿ ಭಾರಿ…

2 hours ago

ಮುಂದಿನ 4-5 ದಿನಗಳಲ್ಲಿ ದೇಶದ ವಾಯುವ್ಯ ಭಾಗಗಳಲ್ಲಿ ತೀವ್ರ ತಾಪಮಾನ | ದಕ್ಷಿಣದಲ್ಲಿ ಉತ್ತಮ ಮಳೆ |

ಜೂನ್‌ 12 ರಿಂದ 15 ರವರೆಗೆ ಕರ್ನಾಟಕದಲ್ಲಿ  ಮತ್ತು ಜೂನ್ 13 ರಿಂದ…

8 hours ago

ಈರುಳ್ಳಿ ಮತ್ತು ಕೆಂಪುಮೆಣಸಿನಕಾಯಿ ಬೆಳೆಗಳಿಗೆ ವಿಮಾ ಸೌಲಭ್ಯ ಅಧಿಸೂಚನೆ

ಗದಗ ಜಿಲ್ಲೆಯಲ್ಲಿ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ…

9 hours ago

11 ವರ್ಷಗಳಲ್ಲಿ ಭಾರತದ ಕಡು ಬಡವರ ಸಂಖ್ಯೆ ತಗ್ಗಿದೆ – ಸಚಿವ ಪ್ರಹ್ಲಾದ್ ಜೋಶಿ

ಕಳೆದ 11 ವರ್ಷಗಳಲ್ಲಿ ಭಾರತದ ಕಡು ಬಡವರ ಸಂಖ್ಯೆ ಶೇಕಡ 21.1 ರಿಂದ…

9 hours ago

25 ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್ ಹೆದ್ದಾರಿಗಳ ನಿರ್ಮಾಣ -ಸಚಿವ ನಿತಿನ್‌ ಗಡ್ಕರಿ

ಬಂದರು ಸಂಪರ್ಕಕ್ಕಾಗಿ ಮತ್ತು ಧಾರ್ಮಿಕ ಪ್ರವಾಸೋದ್ಯಮಕ್ಕಾಗಿ 3 ಸಾವಿರ ಕಿಲೋ ಮೀಟರ್‌ಗಿಂತ  ಹೆಚ್ಚಿನ…

9 hours ago

ಧನ, ಧಾನ್ಯ, ಸಂಪತ್ತಿಗಾಗಿ ಇಂತಹ ಕೆಲಸಗಳನ್ನು ಮಾಡಿ…

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

9 hours ago