ಮೂಲಿಕಾ ತಜ್ಞೆ ಜಯಲಕ್ಷ್ಮೀ ವೆಂಕಟರಾಮ ದೈತೋಟ

August 11, 2019
1:00 PM

ಪಾಣಾಜೆ ವೈದ್ಯ ಮನೆತನದ ಮೂಲಿಕಾ ತಜ್ಞ ವೆಂಕಟರಾಮ ದೈತೋಟರು ದಿವಂಗತರಾಗಿ ಎರಡು ವರುಷವಾಯಿತಷ್ಟೇ. ಅವರ ಪತ್ನಿ ಜಯಲಕ್ಷ್ಮೀ ದೈತೋಟರು (76) ಮೊನ್ನೆ 2019 ಆಗಸ್ಟ್ 4ರಂದು ಗಂಡನನ್ನು ಅನುಸರಿಸಿದರು. ನಿಜಾರ್ಥದಲ್ಲಿ ಮೂಲಿಕಾ ಲೋಕ ಬಡವಾಯಿತು.

Advertisement
Advertisement
Advertisement

ಜಯಲಕ್ಷ್ಮೀ ದೈತೋಟರು ವೆಂಕಟ್ರಾಮರ ಚಿಕಿತ್ಸಾ ಜಯದ ಚಾಲನಾ ಶಕ್ತಿಯಾಗಿದ್ದರು. ಹುಟ್ಟೂರು ಸಾಗರ ತಾಲೂಕು ಮುಂಡಿಗೇಸರ. ವೈದ್ಯ ಹಿನ್ನೆಲೆಯವರು. ಇವರ ಅಜ್ಜ ಜನಪದ ವೈದ್ಯರು. ತಂದೆ ಸೂರ್ಯನಾರಾಯಣ ರಾವ್. ತಾಯಿ ನಾಗವೇಣಿ. ಒಬ್ಬ ಅಣ್ಣ, ಇಬ್ಬರು ತಮ್ಮಂದಿರು. ಕನ್ನಡ ಎಂ.ಎ.ಪದವೀಧರೆ. 1971ರಲ್ಲಿ ವೆಂಕಟರಾಮರ ಕೈಹಿಡಿದು ದೈತೋಟದ ಸೊಸೆಯಾದರು. ಶಾಲಾ ಕಲಿಕೆ ಐದರಲ್ಲಿರುವಾಗಲೇ ಅಜ್ಜಿ ಮದ್ದಿನಲ್ಲಿ ಪರಿಣತೆ.

Advertisement

ಪಾರಂಪರಿಕ ಜ್ಞಾನವಾಹಿನಿ ಇವರಲ್ಲೂ ಹರಿದಿತ್ತು. ಪ್ರಾಕೃತಿಕ ತಂಬುಳಿ, ಆಹಾರದ ಪದ್ದತಿಯಲ್ಲಿ ಇವರು ಮನೆತಾಯಿ. ನಮ್ಮ ಕಣ್ಣಿಗೆ ಪರಿಸರದಲ್ಲಿರುವ ಗಿಡ, ಮರಗಳು ಕಳೆಯಾಗಿಯೋ, ಕಾಡಾಗಿಯೋ ಕಾಣುತ್ತದೆ. ಆದರೆ ಜಯಲಕ್ಷ್ಮಿಯವರಿಗೆ ಅವೆಲ್ಲವೂ ಆಹಾರವಸ್ತುವಾಗಿ, ಔಷಧೀಯ ವಸ್ತುವಾಗಿ ಕಾಣುತ್ತಿತ್ತು.

“ನಿತ್ಯ ಒಂದಲ್ಲ ಒಂದು ಸಸ್ಯ, ಕೆತ್ತೆ, ಬೇರು, ಹೂ.. ಗಳಿಂದ ತಂಬುಳಿ, ಸಾರು, ಪದಾರ್ಥಗಳನ್ನು ತಯಾರಿಸಬಹುದು. ಅಷ್ಟು ಸಮೃದ್ಧ ಸಂಪನ್ಮೂಲ ಪ್ರಕೃತಿಯಲ್ಲಿದೆ. ಆಗಲೇ ಆರೋಗ್ಯ. ಆದರೆ ಅದನ್ನು ನೋಡಲು ಆರೋಗ್ಯಪೂರ್ಣ ಕಣ್ಣುಗಳು ಬೇಕು” ಎನ್ನುತ್ತಿದ್ದರು. ಇವರ ಮನೆಯಡುಗೆಯಲ್ಲಿ ಟೊಮೆಟೋ, ಬೀನ್ಸ್ ಗಳಿದ್ದಿರಲಿಲ್ಲ. ಗೆಡ್ಡೆ, ಸಾರು, ತಂಬುಳಿ.. ಹೀಗೆ ನಿತ್ಯಾಹಾರ.

Advertisement

ದೈತೋಟರು ನಿರ್ವಹಿಸುತ್ತಿದ್ದ ‘ಆಹಾರ-ಔಷಧಿ’ ತರಬೇತಿ ಶಿಬಿರಗಳಲ್ಲಿ ಜಯಲಕ್ಷ್ಮೀ ದೈತೋಟರದು ಸಮಾನ ಪಾಲು. ಮೂಲಿಕಾ ಪರಿಚಯ, ವೈದ್ಯಚಿಕಿತ್ಸಾ ವಿಧಾನದ ವಿವರಣೆ ವೆಂಕಟ್ರಾಮರದ್ದಾದರೆ, ಪಾರಂಪರಿಕ ಆಹಾರ ಸಿದ್ದತೆಯ ಕುರಿತು ಜಯಲಕ್ಷ್ಮಿಯವರು ವಿವರಿಸುತ್ತಿದ್ದರು. ಹಲವು ಕಡೆಗಳಲ್ಲಿ ಶಿಬಿರಗಳಾಗಿವೆ.

   “ನಮ್ಮ ಹೊಟ್ಟೆಯೆಂದರೆ ತ್ಯಾಜ್ಯ ತುಂಬುವ ಚೀಲವಲ್ಲ. ಅದು ಶರೀರದ ಅತಿ ಪ್ರಮುಖ ಅಂಗ. ಜಠರದ ಆರೋಗ್ಯ ಸರಿಯಿದ್ದರೆ ಮಾತ್ರ ದೇಹಾರೋಗ್ಯ. ಅದು ಕೊಡುವ ಚೈತನ್ಯದಿಂದ ಆರೋಗ್ಯ, ಭಾಗ್ಯ.” ವೆಂಕಟರಾಮ ದೈತೋಟ ಮತ್ತು ಜಯಲಕ್ಷ್ಮೀ ದೈತೋಟ ದಂಪತಿ ಸಂದರ್ಭ ಬಂದಾಗಲೆಲ್ಲಾ ಹೇಳುವ ಕಿವಿಮಾತು. ಕಾರ್ಯಾಗಾರ, ಶಿಬಿರಗಳಲ್ಲಿ ಆಹಾರ ವಿಚಾರದಲ್ಲಿ ಕಟ್ಟುನಿಟ್ಟಾದ  ಕ್ರಮವನ್ನು ಹೇಳುತ್ತಿದ್ದರು. ಇದನ್ನು ತಮ್ಮ ‘ಅನ್ನ-ಆರೋಗ್ಯ-ಔಷಧ’  ಪುಸ್ತಿಕೆಯಲ್ಲಿ ಸವಿಸ್ತಾರವಾಗಿ ವಿವರಿಸಿದ್ದಾರೆ.

Advertisement

   ದಶಕದ ಹಿಂದೆ ಶಿರಸಿ ತಾಲೂಕಿನ ಕಳವೆಯಲ್ಲಿ ‘ಅಡವಿಅಡುಗೆ’  ಕಾರ್ಯಾಗಾರ ನಡೆದಿತ್ತು. ವೆಂಕಟರಾಮ ದೈತೋಟ ಮತ್ತು ಜಯಲಕ್ಷ್ಮೀ ದೈತೋಟರು ಸಾರಥ್ಯ ವಹಿಸಿದ್ದರು. ಎರಡು ದಿವಸಗಳ ಕಾಲ ಜರುಗಿದ ಕಾರ್ಯಕ್ರಮದ ಊಟದ ಬಟ್ಟಲಿನಲ್ಲಿ ಎಲ್ಲವೂ ಹಸಿರು ಮಾತ್ರೆಗಳೇ! ಅಂದಿನ ಶಿಬಿರದಲ್ಲಿ ನಾನೂ ಭಾಗವಹಿಸಿದ್ದು ನನ್ನ ನೆನಪಿನ ತೇವ ಆರಿಲ್ಲ!

ಅಂದು ತಂಬುಳಿ-ಕಷಾಯಗಳದ್ದೇ ಕಾರುಬಾರು. ಅಂದು ದಾಖಲಾದ ತಂಬುಳಿಗಳು ಅರುವತ್ತಕ್ಕೂ ಮಿಕ್ಕಿ. ‘ನಾವು ಪ್ರಕೃತಿಯಿಂದ ದೂರವಾಗಿದ್ದೇವೆ, ಪ್ರಕೃತಿಯಿಂದ ದೂರವಾದಷ್ಟೂ ನಮಗೆ ಖಾಯಿಲೆ ತಪ್ಪಿದ್ದಲ್ಲ’ ಎನ್ನುತ್ತಿದ್ದ ದೈತೋಟ ದಂಪತಿ ‘ಸಸ್ಯಗಳನ್ನು ಉಳಿಸಬೇಕು, ಬೆಳೆಸಬೇಕು. ಮರೆತುಹೋದ ತಂಬುಳಿಗಳನ್ನು ಪುನಃ ಅಡುಗೆ ಮನೆಗೆ ಸ್ವಾಗತಿಸುವ ತಂಬುಳಿ ಕಾರ್ಯಾಗಾರಗಳು ನಡೆಯುತ್ತಿರುವುದು ಕಾಲದ ಆವಶ್ಯಕತೆ’ ಎನ್ನುತ್ತಿದ್ದರು.

Advertisement

ನಮ್ಮಲ್ಲಿ ಆಹಾರವಸ್ತುಗಳನ್ನು ಕಾಪಿಡಲು ‘ತಂಪುಪೆಟ್ಟಿಗೆ’ ರೂಢಿಯಾಗಿದೆ. ಇದಿಲ್ಲದೆ ಐದಾರು ತಿಂಗಳು ತಾಳಿಕೊಳ್ಳುವ ಗಂಧದ ಚಟ್ನಿಪುಡಿ, ನುಗ್ಗೆಸೊಪ್ಪಿನ ಚಟ್ನಿಪುಡಿ, ಚೂರಿಮುಳ್ಳಿಸೊಪ್ಪಿನ ಚಟ್ನಿಪುಡಿ….ಎಷ್ಟಿಲ್ಲ! ಇಂತಹ ಹಲವು ಪುಡಿಗಳು ಜಯಕ್ಕನ ಬೆರಳ ತುದಿಯಲ್ಲಿದ್ದುವು.

ಏಳೆಂಟು ವರುಷಗಳ ಹಿಂದೊಮ್ಮೆ ಪುತ್ತೂರಿನ ಗಿಡ ಗೆಳೆತನ ಸಂಘ ‘ಸಮೃದ್ಧಿ’ಯು ಅರ್ಧ ದಿವಸದ  ‘ತಂಬುಳಿ ದಿನ’ವನ್ನು ಹಮ್ಮಿಕೊಂಡಿತ್ತು. ಅಂದು ಜಯಲಕ್ಷ್ಮೀ ದೈತೋಟರು ಹೇಳಿದ್ದ ಒಂದು ಮಾತು ಈಗಲೂ ಕಿವಿಯಲ್ಲಿ ರಿಂಗಣಿಸುತ್ತದೆ – ‘ವಾಣಿಜ್ಯ ದೃಷ್ಟಿಯಿಂದ ಬೆಳೆಸುವ ತರಕಾರಿಗಳನ್ನು ಕೀಟ, ರೋಗದಿಂದ ಮುಕ್ತವಾಗಿಸಲು ವಿಷ ಸಿಂಪಡಣೆ ಬೇಕು. ಇದನ್ನು ತಿಂದು ನಮ್ಮ ಆರೋಗ್ಯ ಯಾಕೆ ಹಾಳುಮಾಡಿಕೊಳ್ಳಬೇಕು? ತರಕಾರಿಯನ್ನು ಮನೆಯಲ್ಲೇ ಬೆಳೆಸಿ. ಇಲ್ಲದಿದ್ದರೆ ತಂಬುಳಿ ಮಾಡಿ ಉಣ್ಣಿ. ನಿಮ್ಮ ಹಿತ್ತಿಲಲ್ಲಿ ಬಾಳೆಕಾಯಿ ಇಲ್ವಾ, ಬಳಸಿ. ಮಾರುಕಟ್ಟೆಯಿಂದ ತರಕಾರಿಯನ್ನು ಎಲ್ಲಿಯವರೆಗೆ ಖರೀದಿಸುವ ಆಸಕ್ತಿ ಇರುವುದೋ ಅಲ್ಲಿಯವರೆಗೆ ವಿಷ ಹಾಕುವವರು ಇದ್ದೇ ಇರುತ್ತಾರೆ!’

Advertisement

    ‘ಬಿಳಿ ಗುಲಾಬಿ ಹೂ, ದಾಸವಾಳ ಹೂ, ಅಶೋಕ ಹೂ….ಸಿಗುವುದಿಲ್ವಾ. ಹೀರೇಕಾಯಿ ಸಿಪ್ಪೆಯನ್ನು ಒಣಗಿಸಿಟ್ಟುಕೊಂಡರೆ ಚಟ್ನಿ ಮಾಡಬಹುದು. ಕುಂಬಳಬೀಜ, ಸೌತೆಬೀಜ, ಸಿಹಿಕುಂಬಳ ಬೀಜಗಳು ಅಲ್ಲದೆ ನಿಂಬೆಸೊಪ್ಪು, ದೊಡ್ಡಿಸೊಪ್ಪು, ನುಗ್ಗೆಸೊಪ್ಪು..ಗಳನ್ನು ಒಣಗಿಸಿಟ್ಟುಕೊಳ್ಳಿ. ಬೇಕಾದಾಗ ಬಳಸಿ’ – ನಗರದ ತಂಬುಳಿಪ್ರಿಯರನ್ನು ಜಯಕ್ಕ ಆಕರ್ಷಿಸಿದ ಬಗೆಯಿದು.

   ದೈತೋಟ ದಂಪತಿ ದೂರವಾಗಿದ್ದಾರೆ. ದೈತೋಟ ಪರಂಪರೆಯ ಮೂಲಿಕಾ ಜ್ಞಾನವೂ ಮೌನವಾಗಿವೆ. ‘ಆಹಾರ- ಆರೋಗ್ಯ’ಗಳಿಗೆ ಗಟ್ಟಿ ದನಿಯನ್ನು ಕೊಡುತ್ತಿದ್ದ ಇವರ ಸಾಧನೆ ದಾಖಲಾದುದು ಕಡಿಮೆ. ಬದುಕಿನುದ್ದಕ್ಕೂ ವೈಯಕ್ತಿಕವಾಗಿ ಎಷ್ಟು ನೋವುಂಡಿದ್ದರೋ, ಅಷ್ಟೇ ಬದಲಾಗುತ್ತಿರುವ ಆಹಾರದ ವಿಧಾನದತ್ತಲೂ ವಿಷಾದಗಳಿದ್ದುವು. ಅಗಲಿದ ಜಯಲಕ್ಷ್ಮೀ ದೈತೋಟರಿಗಿದು ಅಕ್ಷರ ನಮನ.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ

ಇದನ್ನೂ ಓದಿ

ಅತಿಯಾದ ಇಂಟರ್ನೆಟ್‌ ಬಳಕೆ ಮಕ್ಕಳ ಮೇಲೆ ಆಗುವ ಪರಿಣಾಮ ಏನು ? | ಫಿನ್‌ಲ್ಯಾಂಡ್‌ನಲ್ಲಿ ನಡೆಸಿದ ಸರ್ವೆಯ ವರದಿ ಬಹಿರಂಗಪಡಿಸಿದ ಅಂಶಗಳು ಏನೇನು..?
April 21, 2024
11:05 AM
by: ಮಿರರ್‌ ವಿಶ್ಲೇಷಣೆ
ಕಾಡ್ಗಿಚ್ಚು ಕೇವಲ ಜನರಿಗೆ ಅಪಾಯವಲ್ಲ | ಹವಾಮಾನ ಬದಲಾವಣೆಯ ಮೇಲೂ ಪರಿಣಾಮ |
April 16, 2024
3:48 PM
by: ದ ರೂರಲ್ ಮಿರರ್.ಕಾಂ
ಪರಿಸರ ಶಾಲೆ | ಮಕ್ಕಳಿಗೆ ಪಾಠದ ಅಂಕದಷ್ಟೇ ಪರಿಸರ ಕಾಳಜಿಯೂ ಅಗತ್ಯ | ಪುತ್ತೂರಿನ ಈ ಪ್ಲೇ ಸ್ಕೂಲ್‌ ಮಾದರಿ ಏಕೆ..?
April 6, 2024
2:11 PM
by: ಮಹೇಶ್ ಪುಚ್ಚಪ್ಪಾಡಿ
ಅಡಿಕೆ ಮಿತ ಬಳಕೆ ಹಾನಿಕಾರಕವಲ್ಲ | 1974 ರಿಂದಲೇ ವರದಿ ಇದೆ…!, ನ್ಯಾಯಾಲಯಕ್ಕೆ ಸಲ್ಲಿಸುವವರು ಯಾರು…? |
April 5, 2024
9:20 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror