ಸುಳ್ಯದ ಬಿಜೆಪಿಯ ಹೊಸ ಸಾರಥಿಯ ಮುಂದೆ ಸವಾಲುಗಳು ಹಲವು….

November 12, 2019
9:11 AM

ಸುಳ್ಯ: ಹಲವು ತಿಂಗಳುಗಳಿಂದ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ಸುಳ್ಯ ಮಂಡಲ ಬಿಜೆಪಿಗೆ ಹೊಸ ಸಾರಥಿಯ ಆಯ್ಕೆ ನಡೆದಿದೆ. ಕಳೆದ ಬಾರಿಯಂತೆ ಈ ಬಾರಿಯೂ ಹೊಸ ಮುಖ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಲಿದ್ದಾರೆಯೇ ಎಂದು ನಿರೀಕ್ಷಿಸಲಾಗಿದ್ದರೂ ಹಾಗಾಗಲಿಲ್ಲ. ಮಾಜಿ ಮಂಡಲ ಸಮಿತಿ ಅಧ್ಯಕ್ಷ ಕ್ರಿಯಾಶೀಲ ವ್ಯಕ್ತಿತ್ವದ ಹರೀಶ್ ಕಂಜಿಪಿಲಿ ಬಿಜೆಪಿಯ ಮಂಡಲ ಸಮಿತಿ ಅಧ್ಯಕ್ಷರಾಗಿ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.

ಹರೀಶ್ ಕಂಜಿಪಿಲಿ

ಮೂರು ವರ್ಷದ ಬಳಿಕ ಕಂಜಿಪಿಲಿ ಮತ್ತೊಮ್ಮೆ ಬಿಜೆಪಿಯ ಸಾರಥ್ಯ ವಹಿಸಿಕೊಂಡಿದ್ದು, ಮುಂದಿನ ಮೂರು ವರ್ಷಗಳ ಕಾಲ ಪಕ್ಷವನ್ನು ಮುನ್ನಡೆಸಲಿದ್ದಾರೆ. ಸದಾ ಹೊಸತನವನ್ನು ಹುಡುಕುವ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಮುಖವನ್ನು ಯಾಕೆ ಹುಡುಕಿಲ್ಲಾ ಎಂಬ ಪ್ರಶ್ನೆ ಸ್ವಾಭಾವಿಕವಾಗಿ ಎದ್ದು ಬರುತ್ತದೆ. ಜಿಲ್ಲಾ ಪಂಚಾಯತ್ ಸದಸ್ಯ, ಸುಳ್ಯದ ಪ್ರತಿಷ್ಠಿತ ಭೂ  ಅಬಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಸೇರಿ ಪ್ರಮುಖ ಹುದ್ದೆ ನಿಭಾಯಿಸುವ ಕಂಜಿಪಿಲಿಗೆ ಮತ್ತೊಂದು ಪ್ರಮುಖ ಜವಾಬ್ದಾರಿ ಯಾಕೆ ನೀಡಿದ್ದಾರೆ ಎಂಬ ಕುತೂಹಲ ಹಲವರಲ್ಲಿ ಮೂಡಿದೆ. ಹೊಸ ನಾಯಕರನ್ನು ಏಕೆ ಬೆಳೆಸಲಿಲ್ಲ ಎಂಬ ಪ್ರಶ್ನೆಯೂ ಸಹಜವಾಗಿಯೇ ಎದ್ದಿದೆ.

ಗ್ರಾಮ ಪಂಚಾಯತ್ ನಿಂದ ಹಿಡಿದು ಕೇಂದ್ರದವರೆಗೆ ಎಲ್ಲಾ ಸರಕಾರಗಳು ಬಿಜೆಪಿಯದ್ದೇ ಇದ್ದರೂ, ಬಲಿಷ್ಠವಾಗಿ ಬೆಳೆದು ಆಳವಾಗಿ ಬೇರೂರಿದ್ದರೂ ಸುಳ್ಯದ ಕಮಲ ಪಾಳಯದಲ್ಲಿ ಇತ್ತೀಚೆಗೆ ವಿವಾದಗಳು ತಪ್ಪಿಲ್ಲ. ಡಿಸಿಸಿ ಬ್ಯಾಂಕ್ ಅಡ್ಡಮತದಾನದ ಕಾವು ಇನ್ನೂ ತಣಿದಿಲ್ಲ. ಮತ್ತೆ ಮತ್ತೆ ಅಸಮಾಧಾನಗಳು ಹೊಗೆಯಾಡುತ್ತಲೇ ಇದೆ.  ಶಾಸಕ ಅಂಗಾರರಿಗೆ ಸಚಿವ ಸ್ಥಾನ ಸಿಗದ ಅಸಮಾಧಾನ ತಣ್ಣಗಾದರೂ ಅತೃಪ್ತಿ ಹಾಗೆಯೇ ಹಲವು ಕಡೆ ಕಾಣುತ್ತಿದೆ. ಅಕಾಡೆಮಿಗಳ ನೇಮಕದಲ್ಲಿನ ಕಡೆಗಣನೆ  ಹೀಗೆ ಹಲವು ಸಮಸ್ಯೆಗಳು, ಗೊಂದಲಗಳು, ಭಿನ್ನಾಭಿಪ್ರಾಯಗಳು ಬಿಜೆಪಿಯನ್ನು ಕಾಡಿದೆ. ಇಂತಹ ಸಂದರ್ಭದಲ್ಲಿ ಹೊಸ ಮುಖವನ್ನು ಅಧ್ಯಕ್ಷರನ್ನಾಗಿ ಮಾಡಿ ‘ರಿಸ್ಕ್’ ತೆಗೆದುಕೊಳ್ಳಲು ಪಕ್ಷ ಮುಂದಾಗಿಲ್ಲ ಎಂಬ ವಾದ ಇದೆ. ಹೀಗಾಗಿ ಎಲ್ಲರೂ ಒಪ್ಪುವ, ಎಲ್ಲರನ್ನೂ ಒಪ್ಪಿಸುವ ಅನುಭವಿ ನಾಯಕ ಕಂಜಿಪಿಲಿ ಅವರಿಗೆ ಮತ್ತೊಮ್ಮೆ ಸಾರಥ್ಯ ವಹಿಸಲಾಗಿದೆ. ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಅದನ್ನು ಪರಿಹರಿಸಿ ಅನುಭವ ಇರುವ ಮಾಜಿ ಅಧ್ಯಕ್ಷರಿಗೆ ಮತ್ತೊಮ್ಮೆ ಜವಾಬ್ದಾರಿ ವಹಿಸಲಾಗಿದೆ.

ಹೊಸ ಅಧ್ಯಕ್ಷರ ಮುಂದೆ ಹಲವಾರು ಸವಾಲುಗಳೂ ಇವೆ. ಎಲ್ಲರನ್ನೂ, ಎಲ್ಲವನ್ನೂ ಸಮನ್ವಯದ ಮೂಲಕ ಒಟ್ಟಿಗೆ ಮುನ್ನಡೆಸಬೇಕಾಗಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವುದರ ಜೊತೆಗೆ ಗ್ರಾಮ ಪಂಚಾಯತ್ ಚುನಾವಣೆ, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್, ಸಹಕಾರಿ ಸಂಘಗಳ ಚುನಾವಣೆಗಳನ್ನು ಎದುರಿಸಲು ಪಕ್ಷವನ್ನು ಸನ್ನದ್ಧಗೊಳಿಸಬೇಕಾಗಿದೆ. ಜೊತೆಗೆ ಸುಳ್ಯ ಕ್ಷೇತ್ರಕ್ಕೆ ಹತ್ತಾರು ಬೇಡಿಕೆಗಳಿವೆ. 110 ಕೆ.ವಿ ಸಬ್ ಸ್ಟೇಷನ್, ಸುಳ್ಯದ ಕಸ ವಿಲೇವಾರಿ ಸಮಸ್ಯೆ, ತಾಲೂಕಿನ ಅಡಕೆ ಹಳದಿ ರೋಗ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳು ಕಾಡಿದೆ. ಈ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದರ ಜೊತೆಗೆ ಶಾಸಕರ ಜೊತೆ ಕೈ ಜೋಡಿಸಿ ಕ್ಷೇತ್ರದ ಅಭಿವೃದ್ಧಿಗೆ ಸರಕಾರದಿಂದ ಅನುದಾನ ತರಿಸುವುದಕ್ಕೂ ಪ್ರಯತ್ನ ನಡೆಯಬೇಕಾಗಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಹೊಸ ಮುಖ ಹುಡುಕುವ ಪ್ರಯತ್ನಕ್ಕೆ ಹೋಗದೆ ಅನುಭವಿ ನೇತಾರನಿಗೆ ಮತ್ತೆ ಅಧ್ಯಕ್ಷಗಾದಿ ನೀಡಿದೆ‌ ಎನ್ನಲಾಗಿದೆ. ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಪಕ್ಷದಲ್ಲಿ ಇದ್ದರೂ ಇಲ್ಲಿ ಅನಿವಾರ್ಯವಾಗಿ ಪಕ್ಷ ಎರಡು ಅಥವಾ ಅದಕ್ಕಿಂತ ಹೆಚ್ಚು ಜವಾಬ್ದಾರಿ ಒಬ್ಬರಿಗೇ ವಹಿಸಬೇಕಾಗಿ ಬಂದಿದೆ ಎಂದು ವಿಶ್ಲೇಷಿಸಲಾಗುತ್ತದೆ.

Harish Kanjipili

ಎರಡನೇ ಬಾರಿಗೆ ಮಂಡಲ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಹರೀಶ್ ಕಂಜಿಪಿಲಿ ಈ ಹಿಂದೆ ಮೂರು ವರ್ಷಗಳ ಕಾಲ ಮಂಡಲ ಸಮಿತಿ ಅಧ್ಯಕ್ಷರಾಗಿದ್ದರು. ಅತೀ ಹೆಚ್ಚು ಮತಗಳ ಅಂತರದಿಂದ ಅರಂತೋಡು ಕ್ಷೇತ್ರದಿಂದ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಸುಳ್ಯ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಸುಳ್ಯ ತಾಲೂಕು ಪಂಚಾಯತ್ ಉಪಾಧ್ಯಕ್ಷರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕ್ಷೇತ್ರದ ಮೂಲೆ ಮೂಲೆಗಳನ್ನು ಅರಿತಿರುವ ಕಂಜಿಪಿಲಿ ಕ್ಷೇತ್ರದ ಉದ್ದಗಲಕ್ಕೂ ಚಿರಪರಿಚಿತರಾಗಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್‌ಗೆ ಮಂಗಳೂರಿನಲ್ಲಿ ಅಭಿನಂದನೆ – ಪುಟ್ಟ ಕಲಾವಿದನ ಸಾಧನೆಯ ಹಿಂದಿನ ಪಯಣಕ್ಕೆ ಮೆಚ್ಚುಗೆ
September 14, 2026
2:55 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?
September 14, 2026
12:51 PM
by: ಸಾಯಿಶೇಖರ್ ಕರಿಕಳ
ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ
September 14, 2026
11:33 AM
by: ದ ರೂರಲ್ ಮಿರರ್.ಕಾಂ
ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ
September 14, 2026
11:07 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror