ಸಸ್ಯ ಪರಿಚಯ | ‘ಮರಳಿ ತನ್ನಿ ಮರೆತ ಸೊಪ್ಪನ್ನ’ ಹೊನಗನೆ ಸೊಪ್ಪು

August 23, 2025
4:04 PM

ಬೇಲಿ ಬದಿಯಲ್ಲಿ, ಗದ್ದೆ ಬದಿಯಲ್ಲಿ ಅಥವಾ ನೀರಿನ ಸೆಲೆ ಇರುವ ಪ್ರದೇಶಗಳಲ್ಲಿ ತಾನಾಗಿಯೇ ಹುಟ್ಟಿ ಬೆಳೆಯುವ ಗಿಡ ಹೊನಗನೆ. ಹಸುರು ಎಲೆಗಳ ಮಧ್ಯೆ ಪುಟ್ಟ ಪುಟ್ಟ ಬಿಳಿ ಹೂಗಳಿಂದ ಕಂಗೊಳಿಸುವ ಈ ಸಸ್ಯ ಕಾಡು ಸಸ್ಯ. ಇದರ ಮಹತ್ವವನ್ನು ತಿಳಿಯದ ಜನರು ಇದನ್ನು ಕಳೆ ಸಸ್ಯ ಎಂದು ಕಿತ್ತು ಬಿಸಾಡುತ್ತಾರೆ. ಆದರೆ ಪೋಷಕಾಂಶಗಳ ಆಗರವಾಗಿರುವ ಈ ಸಸ್ಯದ ಬಳಕೆಯನ್ನು ಎಲ್ಲರೂ ಮಾಡಬಹುದಾಗಿದೆ. ಈ ಸಸ್ಯದ ಬಳಕೆಯಿಂದ ಕಣ್ಣಿನ ಆರೋಗ್ಯ ಕಾಪಾಡಲು ಸಾಧ್ಯ. ಅಸ್ಪಷ್ಟ ದೃಷ್ಟಿಯ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಸತತ ಆರು ತಿಂಗಳ ಕಾಲ ಆಹಾರದಲ್ಲಿ ಈ ಸೊಪ್ಪನ್ನು ಬಳಕೆ ಮಾಡಿ ಕಣ್ಣಿನ ಆರೋಗ್ಯ ಸುಧಾರಿಸಿಕೊಂಡಿದ್ದಾರೆ. ಕಬ್ಬಿಣದ ಸತ್ವ ಮತ್ತು ಇತರ ಪೋಷಕಾಂಶಗಳ ಆಗರವಾಗಿರುವ ಈ ಸಸ್ಯದ ಬಳಕೆ ನಮ್ಮ ದಿನನಿತ್ಯದ ಊಟದ ತಟ್ಟೆಗೆ ಬರಬೇಕಿದೆ.

ಈ ಗಿಡದ ಸಸ್ಯ ಶಾಸ್ತ್ರೀಯ ಹೆಸರು Alternanthera sessilis ಎಂದು. ಆಯುರ್ವೇದದಲ್ಲಿ ಮತ್ಸಾಕ್ಷಿ ಎಂದು ಕರೆಯಲ್ಪಡುವ ಈ ಸಸ್ಯವು ವಾಂತಿ, ಭೇದಿ, ಕಫ ಮುಂತಾದ ಕಾಯಿಲೆಗೆ ಔಷಧವಾಗಿ ಬಳಕೆಯಲ್ಲಿದೆ. ಶ್ವಾಸಕೋಶದ ಸಮಸ್ಯೆಗಳನ್ನು, scabies, ಜ್ವರ, ಗಾಯ ಹಾಗೂ ಬೊಕ್ಕೆ ನಿವಾರಣೆಗೂ ಈ ಸಸ್ಯದ ರಸ ಪ್ರಯೋಜನ ಕಾರಿ. ಹೊಟ್ಟೆಯೊಳಗೆ ಗ್ಯಾಸ್ ತುಂಬಿದಾಗ, ಅಥವಾ ವಾಕರಿಕೆಯ ಭಾವನೆ ಉಂಟಾದಾಗ ಈ ಸೊಪ್ಪಿನ ಕಷಾಯ digestive stimulant  ಆಗಿ ಕೆಲಸ ಮಾಡುತ್ತದೆ. ಇದರ ಕಷಾಯವನ್ನು ಉಪ್ಪಿನ ಜತೆ ಸೇವಿಸಿದರೆ ರಕ್ತ ವಾಂತಿ ಕಡಿಮೆಯಾಗುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿ ಮತ್ತು ನ್ಯೂಸ್ ಎಲರ್ಟ್ ಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ ಸೇರಿಕೊಳ್ಳಿ….

ನಾವು ಮಳೆಗಾಲದಲ್ಲಿ ಸಮೃದ್ಧ ವಾಗಿ ದೊರಕುವ ಹೊನಗನೆ ಸೊಪ್ಪನ್ನು ಚಟ್ನಿ, ತಂಬುಳಿ, ಬಸ್ಸಾರು, ಸಾಂಬಾರು ರೂಪಗಳಲ್ಲಿ ಬಳಸುತ್ತೇವೆ. ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿ ದೋಸೆಹಿಟ್ಟಿಗೆ ಸೇರಿಸಿ ದೋಸೆಯ ರುಚಿಯನ್ನು ಹೆಚ್ಚಿಸಿಕೊಳ್ಳಬಹುದು. ಆ ಮೂಲಕ ನಮ್ಮ ಆರೋಗ್ಯಕ್ಕೆ ಪೂರಕ ಶಕ್ತಿಯನ್ನು ಶರೀರದಲ್ಲಿ ಕಾಪಾಡಿಕೊಳ್ಳಬಹುದು. ನೀರಿನಾಶ್ರಯವಿರುವ ಇರುವ ಜಾಗದಲ್ಲಿ ನೆಟ್ಟು ಬೆಳೆಸಿದರೆ ವರ್ಷ ಪೂರ್ತಿ ಈ ಗಿಡದ ಸೊಪ್ಪನ್ನು ಆಹಾರದಲ್ಲಿ ಬಳಕೆ ಮಾಡಬಹುದು.

ಪೊದರು ಸಸ್ಯವಾಗಿ ಬೆಳೆಯುವ ಹೊನಗನೆ ಸಪೂರ ಉದ್ದುದ್ದವಾದ ಕಡ್ಡಿಯಂತಿದ್ದು ಅಲ್ಲಲ್ಲಿ ಮೂಡಿದ ಗಂಟುಗಳ ಗೆಲ್ಲುಗಳಾಗಿ ಹರಡಿಕೊಂಡಿರುತ್ತದೆ. ಪ್ರತಿ ಗಂಟಿಗೂ ಐದಾರು ಎಲೆಗಳು ಹಾಗೂ ಅವುಗಳ ನಡುವೆ ಒಂದು ಬಿಳಿ ಹೂ ಇರುತ್ತದೆ. ಹೂವನ್ನು ಕೊಯ್ಯದೆ ಚಿಗುರುಗಳನ್ನು ಮಾತ್ರ ಕೊಯ್ದು ಉಪಯೋಗಿಸುವುದೇ ಕ್ರಮ. ಉತ್ತರ ಕನ್ನಡದ ಹಳ್ಳಿಗಳಲ್ಲಿ ಈ ಗಿಡದ ಬಳಕೆ ಜಾಸ್ತಿ ಇದೆಯಂತೆ. ಆದರೆ ದಕ್ಷಿಣ ಕನ್ನಡದ ಕಡೆ ಇದರ ಬಳಕೆ ಕಡಿಮೆಯಾಗಿದೆ. ಅದು ಈ ಪ್ರದೇಶದಲ್ಲಿ ಮರೆತೇ ಬಿಟ್ಟ ಸೊಪ್ಪು ಎಂದಾಗಿದೆ. ಆದರೆ ಈಗೀಗ ಪ್ರಾಕೃತಿಕ ಸಸ್ಯಗಳ ಬಗೆಗೆ ಒಲವು ಜಾಸ್ತಿಯಾಗಿರುವುದರಿಂದ ಈ ಸೊಪ್ಪಿನ ಬಳಕೆ ಮಾಡುವವರು ಹೆಚ್ಚಾಗುತ್ತಿದ್ದಾರೆ. ಉದಾಹರಣೆಗೆ ಇತ್ತೀಚೆಗೆ ಮಂಗಳೂರಲ್ಲಿ ಸೊಪ್ಪಿನ ಮೇಳ ಜರಗಿದಾಗ ಹೊನಗನೆ ಸೊಪ್ಪು ಕೂಡಾ ಸ್ಟಾಲ್ಗಳಲ್ಲಿ ಜಾಗ ಪಡೆದಿತ್ತು. ದೃಷ್ಟಿ ದೋಷವನ್ನು ಸರಿಪಡಿಸುವ ಶಕ್ತಿಯನ್ನು ಹೊಂದಿರುವ ಈ ಸೊಪ್ಪನ್ನು ವಾರದಲ್ಲಿ ಒಮ್ಮೆಯಾದರೂ ಆಹಾರದಲ್ಲಿ ಉಪಯೋಗಿಸುವ ಮೂಲಕ ನಾವು ಆರೋಗ್ಯವಂತರಾಗಬಹುದು.

ನಾವು ನಮ್ಮ ಶಾಲೆಯಲ್ಲಿ ಮಕ್ಕಳಿಗೆ ‘ಎಲೆಯರಿವು’ ಎಂಬ ಕಾರ್ಯಕ್ರಮವನ್ನು ಮಾಡುತ್ತೇವೆ. ಮಕ್ಕಳು ವಾರದಲ್ಲಿ ಒಂದು ದಿನವಾದರೂ ಆಹಾರದಲ್ಲಿ ಹಸಿರು ಸೊಪ್ಪಿನ ಬಳಕೆ ಮಾಡಬೇಕು ಎಂಬ ಮಾಹಿತಿ ನೀಡುವ ಕಾರ್ಯಕ್ರಮವಿದು. ಒಂದೆಲಗ, ಸಾಂಬ್ರಾಣಿ ಸೊಪ್ಪು, ವಿಟಮಿನ್ ಸೊಪ್ಪು, ಹೊನಗನೆ ಸೊಪ್ಪು, ನುಗ್ಗೆ ಸೊಪ್ಪು, ಕರಿಬೇವು ಮುಂತಾಗಿ ಯಾವುದಾದರೂ ಹಸಿರು ಸೊಪ್ಪನ್ನು ವಾರದಲ್ಲಿ ಒಂದು ದಿನವಾದರೂ ಆಹಾರದಲ್ಲಿ ಬಳಸಬೇಕು. ಈ ವಿಷಯ ತಿಳಿದ ಮಕ್ಕಳು ಆಸಕ್ತಿ ವಹಿಸಿ ಹಸಿರು ಸೊಪ್ಪನ್ನು ಆಹಾರದಲ್ಲಿ ಬಳಕೆ ಮಾಡಲು ಮನೆಯವರಲ್ಲಿ ಕೇಳಿಕೊಳ್ಳುತ್ತಾರೆ. ವಾರ ವಾರ ಮಕ್ಕಳು ಈ ಹಸಿರು ಸೊಪ್ಪನ್ನು ಬಳಸಿದ ಬಗ್ಗೆ ತರಗತಿಯಲ್ಲಿ ಮಾಹಿತಿ ಹಂಚಿಕೊಳ್ಳುತ್ತಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಜಯಲಕ್ಷ್ಮಿ ದಾಮ್ಲೆ

ಜಯಲಕ್ಷ್ಮಿ ದಾಮ್ಲೆ ಅವರು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದಾರೆ. ಪರಿಸರ ಸಂಬಂಧಿತ ಬರಹ, ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದಾರೆ.

ಇದನ್ನೂ ಓದಿ

ರಬ್ಬರ್ ತೋಟ ಹಸಿರಾಗಿರಬಹುದು… ಆದರೆ ಕಾಡಿಗೆ ಪರ್ಯಾಯವಲ್ಲ…! ಮಲೇಷ್ಯಾ ಅಧ್ಯಯನ ವರದಿ
July 27, 2026
6:55 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ
July 25, 2026
6:46 AM
by: ದ ರೂರಲ್ ಮಿರರ್.ಕಾಂ
18 ಕರಿಮೆಣಸು ತಳಿಗಳ ನರ್ಸರಿ ನಿರ್ಮಿಸಿ ಯಶಸ್ಸು ಕಂಡ ಯುವ ರೈತ
July 24, 2026
6:22 AM
by: ದ ರೂರಲ್ ಮಿರರ್.ಕಾಂ
ಹಲಸಿನ ಬೀಜದ ಸಿಪ್ಪೆಯಿಂದ ಕೈಗಾರಿಕಾ ಬಳಕೆಯ ಸೆಲ್ಯುಲೋಸ್..! ರೈತರಿಗೆ ಮೌಲ್ಯವರ್ಧನೆಯ ಹೊಸ ಅವಕಾಶ
July 19, 2026
8:11 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror