ಭಾರತೀಯತೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಮೈಗೂಡಿಸಿಕೊಳ್ಳಬೇಕು. ಭಾರತೀಯತೆ ಹೊರತುಪಡಿಸಿದ ವ್ಯಕ್ತಿ ಸತ್ತಂತೆ. ಹಾಗಾಗಿ ವಿದ್ಯಾರ್ಥಿ ಜೀವನದಿಂದಲೇ ರಾಷ್ಟ್ರ ಚಿಂತನೆಯನ್ನು ಒಡಮೂಡಿಸಿಕೊಳ್ಳಬೇಕು. ರಾಷ್ಟ್ರಭಕ್ತ ಯುವಪಡೆಯನ್ನು ರೂಪಿಸುವುದೇ ಅಂಬಿಕಾ ಶಿಕ್ಷಣ ಸಂಸ್ಥೆಗಳ ಪರಮಗುರಿಯಾಗಿದೆ ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ಪುತ್ತೂರಿನ ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳಿಗೆ ದಾಖಲಾತಿ ಹೊಂದಿದ ಪ್ರಥಮ ಪಿಯು ವಿದ್ಯಾರ್ಥಿಗಳ ಹೆತ್ತವರ ಸಮಾವೇಶವನ್ನು ಪುತ್ತೂರಿನ ಪುರಭವನದಲ್ಲಿ ಉದ್ಘಾಟಿಸಿ ಮಾತನಾಡಿದರು. ಭಾರತೀಯತೆ ಬೆಳೆಸುವ ಕಾರಣದಿಂದಲೇ ಭಗವದ್ಗೀತೆ, ವಿಷ್ಣು ಸಹಸ್ರನಾಮ ಪಠಣ, ಯೋಗ, ನೈತಿಕ ಶಿಕ್ಷಣ ಅಂಬಿಕಾದಲ್ಲಿ ಶೈಕ್ಷಣಿಕ ಭಾಗವಾಗಿಯೇ ಸಾಗುತ್ತದೆ ಎಂದು ಅವರು ತಿಳಿಸಿದರು.
ಮಕ್ಕಳ ಸಾಧನೆಯಲ್ಲಿ ಹೆತ್ತವರ ಶ್ರಮ ಗಣನೀಯವಾದದ್ದು. ಇಂದು ಶಿಕ್ಷಣದ ನಂತರ ವಿದೇಶಕ್ಕೆ ತೆರಳಿ ಅಲ್ಲೇ ನೆಲೆಯಾಗುವ ಯುವ ಸಮೂಹವನ್ನು ಕಾಣುವಾಗ ಖೇದವೆನಿಸುತ್ತದೆ. ತಮ್ಮ ಏಳಿಗೆಗಾಗಿ ತಮ್ಮ ಬದುಕನ್ನು ತ್ಯಾಗ ಮಾಡಿದ ಹೆತ್ತವರನ್ನೇ ತ್ಯಜಿಸಿ ಹೋಗುವಂತಹ ಮನಃಸ್ಥಿತಿ ನಿರ್ಮಾಣ ಆಗಬೇಕೇ ಅಂತ ಯೋಚಿಸಬೇಕು. ಹಾಗಾಗಿ ನಮ್ಮ ದೇಶಕ್ಕಾಗಿ ನಮ್ಮ ಮಕ್ಕಳನ್ನು ಅರ್ಪಿಸುವುದೇ ಹೆತ್ತವರ ಗುರಿಯಾಗಬೇಕು ಎಂದು ಸುಬ್ರಹ್ಮಣ್ಯ ನಟ್ಟೋಜ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶೈಲೇಶ್ ಎಂ.ಎಲ್ ಮಾತನಾಡಿ ಶಿಕ್ಷಣ ಸಂಸ್ಥೆಗಳಲ್ಲಿ ಮಾರ್ಗದರ್ಶನ ದೊರಕುತ್ತದೆ. ಆದರೆ ದೊರೆತ ಶಿಕ್ಷಣ ಹೇಗೆ ಸಾಕಾರಗೊಳ್ಳುತ್ತಿದೆ ಎಂಬುದನ್ನು ಹೆತ್ತವರು ಗಮನಿಸುತ್ತಿರಬೇಕು. ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಜತೆಯಾಗಿ ಸಾಗಿದಾಗ ಗುರಿ ಸಾಧನೆ ಸಾಧ್ಯವಾಗುತ್ತದೆ. ನಿಖರ ಗುರಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾದಾಗ ಉದ್ದೇಶ ಪ್ರಾಪ್ತಿಯಾಗಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ಹಾಗೂ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯೆ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ಜ್ಞಾನ ಹಾಗೂ ಬುದ್ಧಿವಂತಿಕೆ ಪ್ರತ್ಯೇಕವಾದ ವಿಚಾರಗಳು. ಜ್ಞಾನಿಗಳು ಹಲವರಿರುತ್ತಾರೆ. ಆದರೆ ಜ್ಞಾನದೊಂದಿಗೆ ಬುದ್ಧಿವಂತಿಕೆ ಇರುವ ಜನರ ಅವಶ್ಯಕತೆ ಸಮಾಜಕ್ಕೆ ಸಾಕಷ್ಟಿದೆ. ಹಾಗೆಯೇ ನೈತಿಕ ವಿಚಾರಗಳಿರದ ಶಿಕ್ಷಣ ಶೂನ್ಯ ಎಂದರಲ್ಲದೆ ಹತ್ತನೆಯ ತರಗತಿಯಲ್ಲಿ ಪಡೆದ ಅಂಕ ಕೇವಲ ಪಿಯು ತಗರತಿಗೆ ಪ್ರವೇಶಕ್ಕಾಗಿ ಮಾತ್ರ ಉಪಯೋಗಕ್ಕೆ ಬರುತ್ತದೆ. ಆದರೆ ಭವಿಷ್ಯ ನಿರ್ಣಯಿಸುವುದು ಪಿಯು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳು ಎಂಬುದನ್ನು ಮರೆಯಬಾರದು ಎಂದರು. ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರುಗಳಾದ ಡಾ.ಎಂ.ಎಸ್.ಶೆಣೈ, ಡಾ.ಶ್ರೀಕಾಂತ್ ರಾವ್, ಬಾಲಕೃಷ್ಣ ಬೋರ್ಕರ್, ಸುರೇಶ್ ಶೆಟ್ಟಿ, ಪ್ರಸನ್ನ ಭಟ್, ಆಡಳಿತಾದಿಕಾರಿ ಗಣೇಶ್ ಪ್ರಸಾದ್ ಎ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ ಕುಮಾರ್ ಕಮ್ಮಜೆ ಉಪಸ್ಥಿತರಿದ್ದರು. ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ ಸ್ವಾಗತಿಸಿ, ಪ್ರಸ್ತಾವನೆಗೈದರು. ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪಪ್ರಾಚಾರ್ಯ ಗಣೇಶ್ ಪ್ರಸಾದ್ ವಂದಿಸಿದರು. ಇಂಗ್ಲಿಷ್ ಉಪನ್ಯಾಸಕಿ ಸುಚಿತ್ರಾ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.




