ಅಡಿಕೆಯ ಹಳದಿ ಎಲೆ ರೋಗದಿಂದ ಭವಿಷ್ಯದ ಅಭದ್ರತೆ ನಡುವೆ ಕೃಷಿ ಪ್ರಯೋಗ |

October 29, 2024
7:19 AM
ಅಡಿಕೆಯ ಹಳದಿ ಎಲೆ ರೋಗ ಭವಿಷ್ಯತ್ತಿನ ಬಗ್ಗೆ ಅಭದ್ರತೆ ಮೂಡಿಸಿದೆ.ಅದನ್ನು ಎದುರಿಸಲು ಇದೀಗ ಅಡಿಕೆ ತೋಟದೊಳಗೆ ಬದಲಾವಣೆಯ ಪ್ರಯತ್ನ‌ ಆರಂಭಿಸಿದ್ದಾರೆ. ಒಂದು ಸಾಲು ಅಡಿಕೆ ಮರವಾದರೆ ಇನ್ನೊಂದು ಸಾಲು ಹಲಸಿನ ಮರ ನಡುತ್ತಿದ್ದಾರೆ. ಇಂತಹ ಹಲವು ಪ್ರಯತ್ನ ನಡೆಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ರೆಂಜಾಳದಲ್ಲಿರುವ ಸದಾಶಿವ ಮಹಾಗಣಪತಿ ದೇವಳದ ಅರ್ಚಕರಾಗಿರುವ ಸುಬ್ರಹ್ಮಣ್ಯ ಭಟ್ಟರ ಮನೆಗೆ  ಹೋಗಿದ್ದೆ.ತಲಪಿದಾಗ ಅವರು ತಮ್ಮ ಅಡಿಕೆ ತೋಟಕ್ಕೆ ಜೀವಾಮೃತ ಹಾಕುವ ಕೆಲಸ ಮಾಡುತ್ತಿದ್ದರು.ಕೆಲಸ ಮುಗಿಸಿದ ಬಳಿಕ ನಮ್ಮೊಡನೆ ಮಾತುಕತೆಗಿಳಿದರು….…..ಮುಂದೆ ಓದಿ….

ದಶಕದ ಹಿಂದೆ ಬ್ರಹ್ಮಾವರದ ಕೆವಿಕೆಯಲ್ಲಿ ಕೃಷಿಕರಿಗಾಗಿ ನಡೆದಿದ್ದ ಆರು ತಿಂಗಳ ಅವಧಿಯ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಂತೆ.ಕೃಷಿ ಬಗೆಗೆ ಅನೇಕ ವಿಷಯಗಳನ್ನು ತಿಳಿದುಕೊಂಡದ್ದು ಅಲ್ಲಿ.ಸಾವಯವ ಕೃಷಿ,ಜೀವಾಮೃತದ ಬಗ್ಗೆಯೂ ಅಲ್ಲೇ ಮಾಹಿತಿ ಸಿಕ್ಕಿದ್ದು.

ಮನೆಯಲ್ಲಿ ಅವರ ತಂದೆಯವರ ಉಸ್ತುವಾರಿಯಲ್ಲಿ ಕೃಷಿ ನಡೆಯುತ್ತಿತ್ತು.ಅವರ ಕಾಲಾನಂತರ ಇವರ ಉಸ್ತುವಾರಿ.ತಮ್ಮ ಉಸ್ತುವಾರಿಯಲ್ಲಿ ತಾನು ಕಲಿತಿದ್ದ ಅನೇಕ ವಿಷಯಗಳನ್ಬು ಅನುಷ್ಟಾನಿಸಲು ಪ್ರಯತ್ನಿಸಿದರು. ಸಾಧ್ಯವಿದ್ದಷ್ಟು ಸಾವಯವ ವಸ್ತುಗಳನ್ನು ,ಸೊಪ್ಪು,ಅಡಿಕೆ ಸಿಪ್ಪೆ……., ತೋಟಕ್ಕೆ ಹಾಕುತ್ತಾರೆ.ಆದರೆ ಎಲ್ಲರಂತೆ ಅಡಿಕೆ ಮರದ ಬುಡಕ್ಕಲ್ಲ,ಬದಲಾಗಿ ಎರಡು ಅಡಿಕೆ ಮರದ ನಡುವೆ ಅಥವಾ ಸಾಲುಗಳ ನಡುವೆ.ಯಾವುದೇ ಗೊಬ್ವರವನ್ನು ಮರದ ಬುಡಕ್ಕೆ ಹಾಕಲಿಕ್ಕಿಲ್ಲ, ಬದಲಾಗಿ ಬುಡದಿಂದ ಸಾಕಷ್ಟು ದೂರದಲ್ಲಿ ಸುತ್ತಲೂ ಹಾಕುವುದು.ಮತ್ತು ಸಾಲುಗಳ ಮಧ್ಯ ಹಾಕುವುದು.
ತೋಟದೊಳಗಿರುವ ಎಲ್ಲ ಮರಗಳಿಗೂ ಕಾಳುಮೆಣಸಿನ ಬಳ್ಳಿ ಹಬ್ಬಿಸುವ ಯತ್ನ ಮಾಡುತ್ತಿದ್ದಾರೆ.ಐದು ವರ್ಷದ ಹಿಂದೆ ತೋಟದ ಅಲ್ಲಲ್ಲಿ ಹಳದಿ ಎಲೆ ರೋಗ ಅಡಿಕೆ ಮರಕ್ಕೆ ಬಂದದ್ದನ್ಬು ಗುರುತಿಸಿದರು. ಆದರೆ ಅದು ವಿಶೇಷವಾಗಿ ಪಸರಿಸಿಲ್ಲ ಎಂಬುದು ಅವರ ಅಭಿಮತ.ಇದೀಗ ಎಲೆ ಚುಕ್ಕೆ ರೋಗ ವ್ಯಾಪಕವಾಗಿದೆ.ಅದರ ನಿಯಂತ್ರಣಕ್ಕಾಗಿ ಅವರೇನನ್ನೂ ಮಾಡುತ್ತಿಲ್ಲ.ಪ್ರಕೃತಿಗೇ ಅದರ ನಿಯಂತ್ರಣದ ಜವಾಬ್ದಾರಿ ವಹಿಸಿ ಬಿಟ್ಟಿದ್ದಾರೆ.ಆದರೂ ಅವರ ಅಭಿಮತದಂತೆ ಕಳೆದ ವರ್ಷದಿಂದ ಈ ವರ್ಷ ಎಲೆ ಚುಕ್ಕೆಯ ತೀವ್ರತೆ ಸಾಕಷ್ಟು ಕಡಿಮೆಯಾಗಿದೆ.…..ಮುಂದೆ ಓದಿ….

ಅಡಿಕೆಯ ಹಳದಿ ಎಲೆ ರೋಗ ಭವಿಷ್ಯತ್ತಿನ ಬಗ್ಗೆ ಅಭದ್ರತೆ ಮೂಡಿಸಿದೆ.ಅದನ್ನು ಎದುರಿಸಲು ಇದೀಗ ಅಡಿಕೆ ತೋಟದೊಳಗೆ ಬದಲಾವಣೆಯ ಪ್ರಯತ್ನ‌ ಆರಂಭಿಸಿದ್ದಾರೆ. ಒಂದು ಸಾಲು ಅಡಿಕೆ ಮರವಾದರೆ ಇನ್ನೊಂದು ಸಾಲು ಹಲಸಿನ ಮರ ನಡುತ್ತಿದ್ದಾರೆ.ಅರಣ್ಯ ಇಲಾಖೆಯಿಂದ ತಂದ ಹಲಸಿನ ಗಿಡಗಳು.ಮೂವತ್ತು ಅಡಿ ಎತ್ತರ ಹೋದ ಬಳಿಕ ತುದಿ ಕತ್ತರಿಸುವುದು.ತೋಟದ ಒಳಗಡೆ ಆದ ಕಾರಣ ಗೆಲ್ಲು ವಿಪರೀತ ಬರುವುದಿಲ್ಲ.ಹಲಸಿನ ಗಿಡಕ್ಕೆ ಕಾಳುಮೆಣಸಿನ ಬಳ್ಳಿ ನಡುವುದು.

ಅಡಿಕೆ ತೋಟದಲ್ಲಿ ಕೊಳೆ ರೋಗ ತಡೆಯಲು ವರ್ಷಕ್ಕೆ ಎರಡು ಬಾರಿ COC ಸಿಂಪರಣೆ ಮಾಡುವುದು.
ಸಾವಯವದತ್ತ ಒಲವು ಜಾಸ್ತಿ. ಹಾಗಾಗಿ ಹಸು ಸಾಕಣಿಕೆ ಇದೆ. ದನಗಳಲ್ಲಿ ಭೇದವಿಲ್ಲ. ಜರ್ಸಿ ದನ ಅಂತ ತಿರಸ್ಕಾರ ಇಲ್ಲ. ಅದನ್ನು ಹಿಂಡಿ ,ಡೈರಿಯಲ್ಲಿ ಸಿಗುವ ಜೋಳದ ಹುಲ್ಲು,ತೋಟದಲ್ಲಿರುವ ಹುಲ್ಲು ಹಾಕಿ ಸಾಕಣಿಕೆ.ಸಿಕ್ಕಿದ ಹಾಲು ಡೈರಿಗೆ.ಹಾಗಂತ ಡೈರಿಗೆ ಹಾಲು ಹಾಕಲೇ ಬೇಕು ಎಂಬ ಒತ್ತಡ ಇಲ್ಲ.ಸಮಯಾವಕಾಶ ಇಲ್ಲದೇ ಹೋದಾಗ ಹಾಲನ್ನು ಮೊಸರು ಮಾಡಿ ನಂತರ ಮಜ್ಜಿಗೆ ಮಾಡಿ ಅದನ್ಜು ಜೀವಾಮೃತಕ್ಕೆ ಹಾಕುವುದು.

ದನದ ಸಗಣಿ ಬಯೋಗ್ಯಾಸ್ ಘಟಕಕ್ಕೆ.ಬಲೂನ್ ಮಾದರಿಯ ಬಯೋಗ್ಯಾಸ್ ಘಟಕ.ಮನೆಯ ಉಪಯೋಗಕ್ಕೆ ಬೇಕಷ್ಟು ಗ್ಯಾಸ್ ಉತ್ಪಾದನೆ ಆಗುತ್ತದೆ.ವಿದ್ಯುತ್ತಿಗಾಗಿ‌ ಸೋಲಾರ್ ಪ್ಯಾನಲ್ ಇದೆ.ಹಾಗಾಗಿ ಮೆಸ್ಕಾಂ ಕರೆಂಟ್ ಬಳಕೆ ತೀರಾ ಕನಿಷ್ಟ.ಗೋಮೂತ್ರ ನೇರವಾಗಿ ಒಂದು ಬ್ಯಾರೆಲಿಗೆ ಬೀಳುವಂತಹ ವ್ಯವಸ್ಥೆ. ಜೀವಾಮೃತ ತಯಾರಿಕೆಗಾಗಿ ಸದ್ಯ ಇಪ್ಪತ್ತು ಬ್ಯಾರೆಲುಗಳಿವೆ.ಒಳಸುರಿಗಳನ್ಬೆಲ್ಲ ಹಾಕಿದ ಬಳಿಕ ಅದನ್ನು ನಿಯಮಿತವಾಗಿ ತಿರುಗಿಸುವ ಜವಾಬ್ದಾರಿ ಇವರದ್ದೇ.ತೋಟಕ್ಕೆ ಕೊಂಡೊಯ್ಯವ ಸಂದರ್ಭದಲ್ಲಿ ಆವಶ್ಯಕತೆ ಇದ್ದಾಗಲಷ್ಟೇ ಕೆಲಸಗಾರರ ಬಳಕೆ.ಅವರಿದ್ದರೂ ಕೊನೆಯ ಹಂತದ ಎರೆಯುವ ಕೆಲಸ ಇವರದ್ದೇ.…..ಮುಂದೆ ಓದಿ….

ಏಕೆಂದರೆ ಮರದ ಬುಡಕ್ಕೆ ಜೀವಾಮೃತ ಹಾಕಲಿಕ್ಕಿಲ್ಲ.ಎರಡೂವರೆ ಅಡಿ ದೂರದಲ್ಲಿ ವೃತ್ತಾಕಾರವಾಗಿ ಜೀವಾಮೃತ ಹಾಕುವುದು.ಒಂದು ಮರಕ್ಕೆ ಒಂದು ಕೊಡದಷ್ಟು ಜೀವಾಮೃತ ಒಂದು ಬಾರಿಗೆ.ಜೊತೆಗೆ ಎರಡು ಸಾಲಿನ ನಡುವಿನ ಜಾಗದಲ್ಲಿ ಕೂಡಾ ಜೀವಾಮೃತ ಹಾಕುವುದು.ಯಾವುದೇ ಕಾರಣಕ್ಕೂ ಕಾಳುಮೆಣಸಿನ ಬುಡಕ್ಕೆ ಜೀವಾಮೃತ ಬೀಳದಂತೆ ಎಚ್ಚರ ಬೇಕು. ಬಿದ್ದರೆ ಬಳ್ಳಿ ಸಾಯುತ್ತದೆ. ವರ್ಷಕ್ಕೆ ಮೂರು ಬಾರಿ ಇದೀಗ ಜೀವಾಮೃತ ಹಾಕಲು ಸಾಧ್ಯವಾಗುತ್ತಿದೆ. ಸಂಪೂರ್ಣ ಸಮರ್ಪಕವಾಗಿ ತೋಟ ನಿರ್ವಹಿಸ ಬೇಕಾದರೆ ಒಂದು ಎಕರೆ ಅಡಿಕೆ ತೋಟಕ್ಕೆ ಒಂದು ದನ ಇರಬೇಕು ಎಂಬುದು ಇವರ ಅಭಿಮತ.ಆ ಹಂತಕ್ಕೆ ಅವರಿನ್ನೂ ತಲುಪಿಲ್ಲ.ತಲುಪಬೇಕೆಂಬ ಅಭಿಲಾಷೆ,ಪ್ರಯತ್ನ ಇದೆ.

ಕೃಷಿ ಕ್ಷೇತ್ರದಲ್ಲಿ ಒಂದಷ್ಟು ಸಿದ್ಧ ವಾದಗಳಿವೆ. ಅವುಗಳು ಸರಿಯಲ್ಲ ಅಂತ ಎಷ್ಟು ಬೇಕಿದ್ದರೂ ಪುರಾವೆಗಳು ಲಭಿಸಿದರೂ ಆ ವಾದಕ್ಕಳಿವಿಲ್ಲ. ಮತ್ತೆ ಮತ್ತೆ ಒಬ್ಬರಲ್ಲದಿದ್ದರೆ ಇನ್ನೊಬ್ವರು ಆ ಸಿದ್ಧವಾದ ಮಂಡಿಸುತ್ತಿರುತ್ತಾರೆ. ಎಷ್ಟೋ ಬಾರಿ ನಾವು ಒಂದು ಸಿದ್ಧ ಮನೋಭೂಮಿಕೆಯೊಂದಿಗೆ ಜಗತ್ತನ್ನು‌ ನೋಡುತ್ತೇವೆ.ಅದಕ್ಕೆ ಭಿನ್ನವಾದ ವಿಷಯ ನಮ್ಮೆದುರಿಗೇ ಬಂದು ನಿಂತರೂ ನಾವು ಅದನ್ನು ಗುರುತು ಹಿಡಿಯಲಾರೆವು.

ಕೃಷಿಕರ ಮಾಮೂಲು ಆಪಾದನೆ ಇದೆ.ಕೃಷಿ ಸಂಶೋಧನಾ ಕೇಂದ್ರ,ವಿಸ್ತರಣಾ ಘಟಕಗಳಿಂದ ಏನೂ ಪ್ರಯೋಜನವಿಲ್ಲ. ಅದನ್ನು ಮುಚ್ಚಿದರೂ ಏನೂ ನಷ್ಟವಿಲ್ಲ.ಆದರೆ ಕೆವಿಕೆಯಲ್ಲಿ ಆರು ತಿಂಗಳ ಕೃಷಿ ತರಬೇತಿ ವ್ಯವಸ್ಥೆ ಇರುವುದು ಎಷ್ಟು ಜನರಿಗೆ ಗೊತ್ತು?

ಕೃಷಿ ವಿಜ್ಞಾನ ಕೇಂದ್ರಗಳು ಸಾವಯವ ಕೃಷಿ ವ್ಯವಸ್ಥೆಯನ್ನು ವಿರೋಧಿಸುತ್ತದೆ ಮತ್ತು ರಾಸಾಯನಿಕ‌ ಕೃಷಿಯನ್ನು ಹೇರುತ್ತದೆ ಎಂಬುದು ಇನ್ನೊಂದು ಆಪಾದನೆ.ಆದರೆ ಈ ಕೃಷಿಕರು ಜೀವಾಮೃತದ ಬಗ್ಗೆ ತಿಳಿದುಕೊಂಡದ್ದೇ ಕೆವಿಕೆಯ ತರಬೇತಿಯಲ್ಲಿ. ಸಾವಯವದತ್ತ ಒಲವು ಮೂಡಿದ್ದೇ ಅಲ್ಲಿ.

ಜೀವಾಮೃತ ಫಲಕಾರಿಯಾಗಬೇಕಾದರೆ ದೇಶೀ ಗೋವಿನ ಸಗಣಿ,ಗೋಮೂತ್ರಗಳನ್ನಷ್ಟೇ ಬಳಸ ಬೇಕಾದ್ದು ಎಂಬುದು ಇನ್ನೊಂದು ವಾದ.ಈ ವಾದ ಮುಂದುವರೆದು ದೇಶೀ ಗೋವು ಅಂದರೆ ಮಲೆನಾಡ ಗಿಡ್ಡ ತಳಿ ಮಾತ್ರ ಅಂತ ಪರಿಗಣಿತವಾಗಿ ಬಿಡುತ್ತದೆ.ಆದರೆ ಈ ಕೃಷಿಕರು ಸಾಮಾನ್ಯ ಅರ್ಥದಲ್ಲಿ ಗೋವು ಎಂದು ಸಾಮಾನ್ಯ ಸಮಾಜ ಪರಿಗಣಿಸುವ ಪ್ರಾಣಿಯ ಸಗಣಿ ,ಗೋ ಮೂತ್ರ ಬಳಸಿ ತಯಾರಿಸಿದ ಜೀವಾಮೃತದಲ್ಲಿ ಫಲಿತಾಂಶ ಕಂಡುಕೊಂಡವರು.

ಹಲವು ರೈತರೊಡನೆ ಮಾತನಾಡಿದಾಗ,ಅವರ ಅಭಿಮತಗಳನ್ನು ಕೇಳಿದಾಗ ಇದೇ ಮಾದರಿ ಅಸ್ತಿತ್ವದಲ್ಲಿ ಇರುವ ಹಲವು ಸಿದ್ದ ವಾದಗಳ ಬದಲಿಗೆ ಇನ್ನೊಂದು ವಾಸ್ತವ ನಮ್ಮ ಮುಂದೆ ತೆರೆಯುತ್ತದೆ.ನಮ್ಮಲ್ಲಿ ಬಹುತೇಕರೂ ಇವುಗಳನ್ನು ಗುರುತಿಸುವಲ್ಲಿ ಸೋಲುತ್ತೇವೆ.ಮತ್ತೆ ಮತ್ತೆ ಸಿದ್ದ ಮಾದರಿಗೆ ಜೋತು ಬೀಳುತ್ತೇವೆ.

ಬರಹ :
ರಮೇಶ್‌ ದೇಲಂಪಾಡಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರಮೇಶ್‌ ದೇಲಂಪಾಡಿ

ರಮೇಶ್‌ ದೇಲಂಪಾಡಿ ಅವರು ಕೃಷಿಕರು. ಪ್ರಯೋಗಶೀಲ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಅಡಿಕೆ, ತೆಂಗು, ತಾಳೆ, ರಬ್ಬರ್‌ ಇವರ ಪ್ರಮುಖ ಕೃಷಿ. ಅಡಿಕೆ ಬೇರುಹುಳ, ಅಡಿಕೆ ಹಳದಿ ಎಲೆರೋಗ ಸೇರಿದಂತೆ ಕೃಷಿ ಸಂಬಂಧಿತ ವಿಚಾರಗಳಲ್ಲಿ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ

ಬರಗಾಲದಿಂದ ಹೆಚ್ಚಾಗಬಹುದು ಆ್ಯಂಟಿಬಯೋಟಿಕ್ ಪ್ರತಿರೋಧ..! ಹೊಸ ಸಂಶೋಧನೆಯ ಎಚ್ಚರಿಕೆ
June 15, 2026
7:14 AM
by: ದ ರೂರಲ್ ಮಿರರ್.ಕಾಂ
ಜೇನುನೊಣಗಳ ಅಳಿವು ಕೃಷಿಗೂ, ಆಹಾರ ಭದ್ರತೆಗೂ ದೊಡ್ಡ ಅಪಾಯ – ತಜ್ಞರ ಎಚ್ಚರಿಕೆ
June 15, 2026
7:06 AM
by: ದ ರೂರಲ್ ಮಿರರ್.ಕಾಂ
ಒಂದು ಹಕ್ಕಿಯ ಫೋಟೋಗಾಗಿ 7 ತಿಂಗಳು ಕಾಯ್ದ ವ್ಯಕ್ತಿ..!, 60ನೇ ಹುಟ್ಟುಹಬ್ಬವನ್ನೂ ವಿಭಿನ್ನವಾಗಿ ಆಚರಿಸಿದರು..!
June 14, 2026
11:58 PM
by: ಮಹೇಶ್ ಪುಚ್ಚಪ್ಪಾಡಿ
₹1.11 ಕೋಟಿ ಮೌಲ್ಯದ ಕಳಪೆ ಗುಣಮಟ್ಟದ ಅಡಿಕೆ ವಶಕ್ಕೆ – ಮಹಾರಾಷ್ಟ್ರದ ಕೋಲ್ಡ್ ಸ್ಟೋರೇಜ್‌ನಲ್ಲೂ ಕಳಪೆ ಅಡಿಕೆ ದಾಸ್ತಾನು..!
June 14, 2026
10:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror