Advertisement
ಅನುಕ್ರಮ

#ನಾನುಕೃಷಿಕ #ಮಣ್ಣಿಗೆಮೆಟ್ಟಿಲು | ಕೃಷಿಗೆ ಇಳಿದ ಎಂಟೆಕ್‌ ಪದವೀಧರ | ಪೇಟೆಯಿಂದ ಕೃಷಿ ಭೂಮಿಗೆ ಬಂದ ಯುವತಿ…! | ಪ್ರವಾಹದ ವಿರುದ್ಧದ ಆಯ್ಕೆ ಇವರದು |

Share

ಆ ಯುವಕ ಎಂಟೆಕ್‌ ಪದವೀಧರ. ಯುವತಿ ಎಂವಿಎ ಪದವೀಧರೆ. ಇಬ್ಬರದೂ ಪ್ರವಾಹದ ವಿರುದ್ಧದ ಆಯ್ಕೆ. ಯಶಸ್ಸು ಅವರ ಕೆಲಸ ಮೇಲಿದೆ. ಈಗಿನ ಅವರ ನಿಶ್ಚಯದ ಪ್ರಕಾರ ಅವರು ಗೆಲುವು ಕಂಡಿದ್ದಾರೆ. ಸಮಾಜವು ಅವರ ಗೆಲುವಿನ ದಾರಿಯನ್ನು ಸುಗಮಗೊಳಿಸಲಿ.

ಕೃಷಿ , ಗ್ರಾಮೀಣ ಬದುಕು ಎಂದಾಗಲೇ , “ಸಹವಾಸವೇ ಬೇಡ” ಎನ್ನುವವರ ಸಂಖ್ಯೆಯೇ ಹೆಚ್ಚಿರುವಾಗ ಇಲ್ಲಿ ಇವರಿಬ್ಬರೂ ಮಾಡಿಕೊಂಡಿರುವ ಆಯ್ಕೆ ಒಂದು ಹೆಮ್ಮೆ. ಗ್ರಾಮೀಣ ಭಾರತವು ಬೆಳಗಲು ಇಂತಹ ಇನ್ನಷ್ಟು ಆಯ್ಕೆಯ ದಾರಿಗಳು ಹೆಚ್ಚಾಗಬೇಕು.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರಿನ ಯುವಕ ಸುಬ್ರಹ್ಮಣ್ಯ ಪ್ರಸಾದ. ಇವರು ಎಂಟೆಕ್‌ ಪದವೀಧರ. ವ್ಯಾಸಂಗದ ಬಳಿಕ ಸುಳ್ಯದಲ್ಲಿ  ಕೆಲವು ಸಮಯ ಉಪನ್ಯಾಸಕನಾಗಿ ಕೆಲಸ ಮಾಡಿದರು. ನಂತರ ಕೃಷಿಗೆ ಇಳಿದ. ಕಲಿಕೆಯ ಕೊನೆಯ ಹಂತದಲ್ಲಿದ್ದಾಗ ಸುಬ್ರಹ್ಮಣ್ಯ ಪ್ರಸಾದ ಅವರ ತಂದೆ ತೀರಿಕೊಂಡರು. ಕಲಿಕೆಯನ್ನು ಅರ್ಧಕ್ಕೆ ಬಿಡಲಿಲ್ಲ, ಎಂಟೆಕ್‌ವರೆಗೂ ಓದಿದರು, ಉದ್ಯೋಗವೂ ಸಿಕ್ಕಿತು. ಆದರೆ ಉದ್ಯೋಗ ಹಾಗೂ ಕೃಷಿಯಲ್ಲಿ  ಸುಬ್ರಹ್ಮಣ್ಯ ಪ್ರಸಾದ್ ಆಯ್ಕೆ ಮಾಡಿದ್ದು ಕೃಷಿ. ತಮ್ಮ ಕೃಷಿ ಭೂಮಿಯನ್ನು ಉಳಿಸಬೇಕು ಎಂದು ಕೃಷಿ ಕಾಯಕಕ್ಕೆ ಇಳಿದರು. ಕೃಷಿಯಲ್ಲಿ ಸಹಜವಾದ ಸವಾಲುಗಳು ಇದ್ದವು. ಇದೆಲ್ಲವನ್ನೂ ಎದುರಿಸಿದರು. ಈ ನಡುವೆ ತಾಯಿಯ ಜೊತೆಗೇ ಕೃಷಿ ಬದುಕು ಸಾಗಿಸಿದರು. ಬದುಕಿನ ಪ್ರಮುಖ ಘಟ್ಟಗಳಲ್ಲಿ ಒಂದಾಗಿರುವ ವೈವಾಹಿಕ ಬದುಕಿನ ಕಡೆಗೆ ನೋಟ ಹರಿಸಿದಾಗ ಇನ್ನೊಂದು ಸವಾಲನ್ನು ಎದುರಿಸಿದ್ದು ಸುಬ್ರಹ್ಮಣ್ಯ ಪ್ರಸಾದ. ಹುಡುಗ ಎಂಟೆಕ್‌ ಕಲಿತಿದ್ದಾರೆ ಎಂದಾಗ ಕಣ್ಣು ಹಾಯಿಸುವ ಯುವತಿಯ ಮನೆಯವರು , ಕೃಷಿ ಬದುಕು ಎಂದಾಗ,”ಬೇರೆ ಕಡೆಗೆ ಒಂದು ಪ್ರಪೋಸಲ್‌ ಬಂದಿದೆ, ಮತ್ತೆ ಹೇಳುತ್ತೇವೆ” ಎನ್ನುತ್ತಿದ್ದರು.  ಒಬ್ಬ ಸಹೃದಯ ಮನಸಿನ ಯುವಕನಿಗೂ ಕೊನೆಗೆ ಕೃಷಿಯೇ ಸಂಕಷ್ಟ ಎನ್ನುವ ಹಾಗೆ ಅನಿಸುವ ಮೊದಲೇ, ಮತ್ತೊಂದು ಇಂತಹದ್ದೇ ಮನಸಿನ ಕುಟುಂಬ ಜೊತೆಯಾಯಿತು.

ಮೂಲತ: ಕೃಷಿ ಕುಟುಂಬದಿಂದ ಬಂದಿರುವ ವಕೀಲರಾಗಿರುವ ಸತ್ಯನಾರಾಯಣ ಭಟ್ ಹಾಗೂ ‌ ಸಂತ ಆಗ್ನೆಸ್‌ ಕಾಲೇಜಿನಲ್ಲಿ ಗಣಿತಶಾಸ್ತ್ರ   ಉಪನ್ಯಾಸಕಿಯಾಗಿರುವ ವಿದ್ಯಾಸರಸ್ವತಿ ಅವರ ಪುತ್ರಿ ಅಕ್ಷತಾ ಅವರು ಆಳ್ವಾಸ್‌ ಕಾಲೇಜಿನಲ್ಲಿ ಎಂವಿಎ(ಮಾಸ್ಟರ್‌ ಆಫ್‌ ವಿಷುವಲ್‌ ಆರ್ಟ್) ಓದಿದವರು.‌ ಅತ್ಯಂತ ಚೆನ್ನಾಗಿ ಚಿತ್ರ ಬಿಡಿಸುತ್ತಾರೆ. ಕಲಾವಿದೆ. ಎಂವಿಎ ಓದಿರುವ ಕಾರಣದಿಂದ ಉತ್ತಮ ಉದ್ಯೋಗಾವಕಾಶಗಳೂ ಇದ್ದವು. ಈ ಕುಟುಂಬವು ಸದ್ಯ ಮಂಗಳೂರಿನಲ್ಲಿ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸಹಜವಾಗಿಯೇ ಗ್ರಾಮೀಣ ಬದುಕು, ಕೃಷಿಯ ಕಡೆಗೆ ನಗರದಿಂದ ಬರುವುದು  ಕಡಿಮೆಯೇ. ಆದರೆ ಈ ಕುಟುಂಬ ಅದಕ್ಕಿಂತ ಭಿನ್ನವಾಗಿ ಯೋಚಿಸಿತು. ಗ್ರಾಮೀಣ ಬದುಕಿನ ಬಗ್ಗೆ ಆಸಕ್ತಿ ಹೊಂದಿರುವ  ಮಗಳ ಭವಿಷ್ಯ ಹಾಗೂ ಪ್ರಶಾಂತ ವಾತಾವರಣದ ಖುಷಿಯನ್ನು ಯೋಚಿಸಿದರು. ಹೀಗಾಗಿ ಎಂಟೆಕ್‌ ಮಾಡಿರುವ, ಕೃಷಿ ಮಾಡುತ್ತಿರುವ ಯುವಕ ಸುಬ್ರಹ್ಮಣ್ಯ ಪ್ರಸಾದ ಮೆಚ್ಚುಗೆಯಾದರು. ಅಕ್ಷತಾ ಅವರೂ ಕೂಡಾ ಕೃಷಿ, ಗ್ರಾಮೀಣ ಬದುಕಿನ ಬಗ್ಗೆ ಪ್ರೀತಿ ಇದ್ದವರಾಗಿದ್ದರು. ಹೀಗಾಗಿ ಮಾತುಕತೆಗಳು ನಡೆದು ಮದುವೆಯಾದರು.

ಸಹಜವಾಗಿಯೇ ಇಲ್ಲಿ ಅಕ್ಷತಾ ಅವರಿಗೂ ಅವರ ಮನೆಯವರಿಗೂ ಒಮ್ಮತ ಇದ್ದರೂ ಬಂಧುಗಳು, ಇಷ್ಟರು ಹಳ್ಳಿ ಬದುಕು, ಗ್ರಾಮೀಣ ಸವಾಲುಗಳ ಬಗ್ಗೆ ಮಾತನಾಡಿದರು. ಈ ಕಾರಣದಿಂದ ಕೊಂಚ ಸಮಯ ಅನಿಶ್ಚಿತವಾದ ನಿರ್ಧಾರಗಳು ಇದ್ದವು. ಆದರೆ ಈ ಎಲ್ಲಾ ಸವಾಲುಗಳನ್ನೂ ಬದಿಗೆ ಸರಿಸಿ ಮನಸಿಗೆ ಹಿತವಾಗುವ ನಿರ್ಧಾರಕ್ಕೆ ಬಂದಿದ್ದರು. ಈಗ ಅಕ್ಷತಾ ಅವರೂ ಖುಷಿಯಾಗಿದ್ದಾರೆ, ಸುಬ್ರಹ್ಮಣ್ಯ ಪ್ರಸಾದ್‌ ಅವರೂ ಖುಷಿಯಾಗಿದ್ದಾರೆ.

ಪ್ರವಾಹದ ವಿರುದ್ಧದ ಆಯ್ಕೆ ಇಬ್ಬರದೂ. ಎಲ್ಲರೂ ವಿದ್ಯಾವಂತರಾಗಿ ನಗರಕ್ಕೆ ತೆರಳಿದರೆ, ಸುಬ್ರಹ್ಮಣ್ಯ ಪ್ರಸಾದ ಕಲಿತು ಕೃಷಿಗೆ ಬಂದವರು. ಹಳ್ಳಿಯಿಂದ ನಗರದ ವಾತಾವರಣಕ್ಕೆ ತೆರಳುವ ಹುಡುಗಿಯರು ಹೆಚ್ಚಾಗಿರುವಾಗ ನಗರದ ವಾತಾವರಣದಿಂದ ಹಳ್ಳಿಗೆ ಬಂದ ಯುವತಿ ಅಕ್ಷತಾ.  ಇಬ್ಬರ ಆಯ್ಕೆಯೂ ಪ್ರವಾಹದ ವಿರುದ್ಧ. ಸುಬ್ರಹ್ಮಣ್ಯ ಪ್ರಸಾದ ಈ ಸವಾಲನ್ನು ಮೊದಲೇ ತೆಗೆದುಕೊಂಡಿದ್ದಾರೆ. ಏಕೆಂದರೆ, ಅನೇಕರು ಮದುವೆ ಆಗುವ ತನಕ ನಗರದಲ್ಲಿ ಉದ್ಯೋಗದಲ್ಲಿದ್ದು ನಂತರ ಕೃಷಿಗೆ ಮರಳುವವರು ಇದ್ದಾರೆ. ಈಚೆಗೆ ಕೊರೋನಾ ಕಾಲದಲ್ಲಿ ಕೃಷಿಯೇ ಉದ್ಯೋಗ ಎಂದು ಅರಿತು ಬಂದವರಿದ್ದಾರೆ. ಅದುವರೆಗೂ ಕೃಷಿ ಉದ್ಯೋಗವೇ ಅಲ್ಲ ಎಂದು ತಿಳಿದವರು ಅನೇಕರಿದ್ದರು. ಕೊರೋನಾ ನಂತರ ಕೃಷಿಯೂ ಹೆಮ್ಮೆಯ ಉದ್ಯೋಗ ಅನಿಸಿದೆ. ಈ ಬದಲಾವಣೆಯ ಕಾರಣದಿಂದ ಈಗ ಕೃಷಿಯೂ ಬೆಳವಣಿಗೆ ಕಾಣುತ್ತಿದೆ, ಗೌರವ ಹೆಚ್ಚಾಗಿದೆ. ಈ ಎಲ್ಲಾ ಸವಾಲುಗಳನ್ನು ಸುಬ್ರಹ್ಮಣ್ಯ ಪ್ರಸಾದ ಹಿಂದೆಯೇ ದಾಟಿದ್ದರು. ಆಗ  ಸುಬ್ರಹ್ಮಣ್ಯ ಪ್ರಸಾದರಿಗೆ ಅದು ಅನಿವಾರ್ಯವೂ ಆಗಿದ್ದಿರಬಹುದು. ಆದರೆ ಎಂಟೆಕ್‌ ಪದವಿಯಾಗಿ ಹಳ್ಳಿಯಲ್ಲಿ ನಿಲ್ಲುವ  ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುವುದು ಸುಲಭ ಅಲ್ಲ.

ಈ ಇಬ್ಬರ ನಿರ್ಧಾರ ಸಮಾಜದಲ್ಲಿ ಆದರ್ಶ ಎನ್ನುವುದು ಕಷ್ಟ. ಆದರೆ ಒಂದು ಮಾದರಿ ಹೌದು. ಇಬ್ಬರ ಆಯ್ಕೆಯಲ್ಲೂ ಗುರಿ ಸ್ಪಷ್ಟ ಇದೆ. ಸುಬ್ರಹ್ಮಣ್ಯ ಪ್ರಸಾದ ಕೃಷಿ ಮಾಡಿದರೆ ಅಕ್ಷತಾ ಕಲಾವಿದೆಯಾಗಿ ಇಂದಿನ ಆಧುನಿಕ ಗ್ರಾಮೀಣ ಭಾಗದಲ್ಲಿ ಉದ್ಯೋಗ ಮಾಡಬಲ್ಲಳು, ಮನೆಯೊಡತಿಯಾಗಿಯೂ ನಿರ್ವಹಣೆ ಮಾಡಬಲ್ಲಳು. ಈಗ ಸಮಾಜ ಮಾಡಬೇಕಾದ್ದು ಇವರ ಆಯ್ಕೆಗೆ ಪ್ರೋತ್ಸಾಹ. ಹತ್ತಾರು ಋಣಾತ್ಮಕ ಪ್ರಶ್ನೆಗಳ ಮೂಲಕ ಅವರನ್ನು ಮಾನಸಿಕವಾಗಿ ಸೋಲಿಸಬಾರದು ಅಷ್ಟೇ.  ಅವರ ಇಬ್ಬರ ಆಯ್ಕೆ ಸರಿಯಾಗಿದೆ. ಕೃಷಿ ಬೆಳೆಸುವ ಸುಬ್ರಹ್ಮಣ್ಯ ಪ್ರಸಾದರ ಕನಸುಗಳು ನನಸಾಗಲಿ, ಅಕ್ಷತಾ ಅವರ ಕಲಾವಿದೆ ಮನಸ್ಸು ಇನ್ನಷ್ಟು ಬೆಳೆಯಲಿ ಎಂಬ ಹಾರೈಕೆ ಇರಲಿ. ಏಕೆಂದರೆ ಗ್ರಾಮೀಣ ಭಾರತ ಬೆಳಗಲು, ಗಟ್ಟಿಯಾಗಲು ಇಂತಹ ಇನ್ನಷ್ಟು ಆಯ್ಕೆಗಳು ಬೇಕಿವೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

“ಮೇ 26ಕ್ಕೇ ಮುಂಗಾರು ಎಂಟ್ರಿ!” ಕರ್ನಾಟಕದಲ್ಲಿ ಭಾರೀ ಮಳೆ ಅಲರ್ಟ್‌, ಮೀನುಗಾರರಿಗೆ ಎಚ್ಚರಿಕೆ

ನೈರುತ್ಯ ಮುಂಗಾರು ಮೇ 26ರಂದು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು IMD…

11 hours ago

ಕರ್ನಾಟಕಕ್ಕೆ ಭಾರೀ ಮಳೆ ಅಲರ್ಟ್‌ | ಬೆಂಗಳೂರಿನಲ್ಲಿ ಮಳೆ ಸಂಕಷ್ಟ, ಜಿಲ್ಲೆಗಳಲ್ಲಿ ಬೆಳೆಗಳು ಕೊಚ್ಚಿ ಹೋದವು…!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸಿದ್ದು, ಬೆಂಗಳೂರಿನಲ್ಲಿ ಜಲಾವೃತ ಪರಿಸ್ಥಿತಿ…

14 hours ago

ಅಡಿಕೆ ಮಾರುಕಟ್ಟೆ ಏಕೆ ನಿಂತಿತು..? ಸವಾಲು ಮತ್ತು ರೈತರ ಭವಿಷ್ಯದ ಪ್ರಶ್ನೆಗಳು ಏನು…?

ಅಡಿಕೆ ಇಳುವರಿ ಕಡಿಮೆಯಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಧಾರಣೆ ಏರಿಕೆಯಾಗದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.…

24 hours ago

ಗೋಮಯದಿಂದ ಗ್ರೀನ್‌ ಎನರ್ಜಿ | ದೆಹಲಿಯಲ್ಲಿ 300 ಟನ್ ಜೈವಿಕ ಅನಿಲ ಘಟಕ – ಯಮುನಾ ಮಾಲಿನ್ಯ ತಡೆಗೆ ಮೆಗಾ ಪ್ಲಾನ್‌

ದೆಹಲಿಯ ಗಾಜಿಪುರದಲ್ಲಿ ದಿನಕ್ಕೆ 300 ಟನ್ ಸಾಮರ್ಥ್ಯದ ಜೈವಿಕ ಅನಿಲ ಘಟಕ ಸ್ಥಾಪನೆಗೆ…

1 day ago

ಇಂಡೋ ಫಾಲಿ, ಬರ್ಮಾ ಗೋಟಾ ಹಾವಳಿ : ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಗೆ ನಿಜವಾಗಿಯೂ ಎಷ್ಟು ಹೊಡೆತ?

ಇಂಡೋ ಫಾಲಿ ಮತ್ತು ಬರ್ಮಾ ಗೋಟಾ ಅಡಿಕೆ ಆಮದು ಹೆಚ್ಚಾದರೂ ಮಂಗಳೂರು ಚಾಲಿ…

2 days ago