ಹಲವಾರು ಸವಾಲುಗಳ ನಡುವೆ ಅಡಿಕೆ ಬೆಳೆ ಭವಿಷ್ಯವೇನು…?

November 3, 2024
7:08 AM
ಮಲೆನಾಡಿನ ಅಡಿಕೆ ಬೆಳೆ ಚಿಂತಕರು ಮುಂದೊಂದು ದಿನ ಬಯಲು ಸೀಮೆಯ ಅಡಿಕೆ ಬೆಳೆಗಾರರಿಗೆ ಅಡಿಕೆ ಬೆಲೆ ಕುಸಿತವೋ ಮತ್ತೇನೋ ಸಮಸ್ಯೆ ಬಂದರೆ ಅವರು ಅಡಿಕೆ ಬೆಳೆಯ ಬಗ್ಗೆ ಯಾವುದೇ ಭಾವನಾತ್ಮಕತೆ ಇಲ್ಲದೇ ಸಂಪೂರ್ಣ ತೋಟವನ್ನೇ ಕಿತ್ತು ಬಿಸಾಡಿ ಹೊಸ ಬೆಳೆ ಬೆಳೆಯುತ್ತಾರೆ. ಎಂದು ವಿಶ್ಲೇಷಣೆ ಮಾಡುತ್ತಿದ್ದರು. ಆದರೆ ಈ ಸಲ ಹಾಗಾಗೋಲ್ಲ...

ಮಲೆನಾಡು ಕರಾವಳಿಯ ಐದು ಜಿಲ್ಲೆಯ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಎಲೆಚುಕ್ಕಿ, ಹಳದಿಎಲೆ , ಅಡಿಕೆ ಕೊಳೆ ಶಿಲೀಂದ್ರ ಮತ್ತು ಅತಿಯಾದ ಅಡಿಕೆ ಬೆಳೆ ವಿಸ್ತರಣೆ ಯ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಈ ಸಮಸ್ಯೆಗಳಿಂದ ಬಚಾವಾಗಿ ಅಡಿಕೆ ಬೆಳೆಯಲ್ಲಿ ಉಜ್ವಲ ಭವಿಷ್ಯ ಕಾಣುವುದು ಕನಸಿನ ಮಾತೇ..? ಹೀಗೊಂದು ಪ್ರಶ್ನೆ ದೀಪಾವಳಿಯ ನಡುವೆ ಎದ್ದಿದೆ.

Advertisement

ಆದರೆ ಎಲೆಚುಕ್ಕಿ ,ಹಳದಿಎಲೆ, ಕೊಳೆ ರೋಗ ಈ ತರಹದ ಸಮಸ್ಯೆ ಗಳಿಲ್ಲದ ಬಯಲು ಸೀಮೆಯ ಅಡಿಕೆ ಬೆಳೆಗಾರರಿಗೆ ಸವಾಲೆಂದರೆ ನೀರಾವರಿ ಲಭ್ಯತೆಯ ಸಮಸ್ಯೆ ಮಾತ್ರ. ಏಕೆಂದರೆ ಹೆಚ್ಚು ಆಳಕ್ಕೆ ಹೋಗದ ಅಡಿಕೆ ಮರದ ಬೇರು ಬಹಳ ದಿನಗಳ ಕಾಲ ನೀರಿಲ್ಲದೇ ಬದುಕಲಾರದು.

ಇದನ್ನು ಬಿಟ್ಟರೆ ಅಡಿಕೆ ಬೆಳೆ ವಿಸ್ತರಣೆ ಸಮಸ್ಯೆ ಅಲ್ಲಿನ ಚಾಲ್ತಿ ಅಡಿಕೆ ಬೆಳೆಗಾರರಿಗೂ ಕಾಡಲಿದೆ. ಈ ವಿಸ್ತರಣೆಯಿಂದ ಅಡಿಕೆ ಬೆಳೆ ಕನಿಷ್ಠ ಬೆಲೆಗೆ ಕುಸಿಯುತ್ತದೆಯೇ…?. ಅಡಿಕೆ ಬೆಲೆ ಕ್ವಿಂಟಾಲ್ ಗೆ ಐದಾರು ಸಾವಿರ ರೂಪಾಯಿಯ ಕನಿಷ್ಠ ಬೆಲೆ ಕುಸಿಯುತ್ತದೆಯಾ…? ಮುಂದೊಂದು ದಿನ ಬಯಲು ಸೀಮೆಯ ಅಡಿಕೆ ಬೆಳೆಗಾರರು ತಮ್ಮ ಅಡಿಕೆ ಉತ್ಪನ್ನವನ್ನು ಬೆಲೆ ಕುಸಿತಕ್ಕಾಗಿ ಎಪಿ ಎಂ ಸಿ ಅಂಗಳದಲ್ಲಿ ಚೆಲ್ಲಿ ಹೋಗುತ್ತಾರಾ..?

ಮಲೆನಾಡು ಕರಾವಳಿಯ ಬಯಲು ಸೀಮೆಯ ಯಾವುದೇ ಚಾಲ್ತಿ ಅಡಿಕೆ ಬೆಳೆಗಾರ ಮತ್ತು ಹೊಸದಾಗಿ ಅಡಿಕೆ ತೋಟ ವಿಸ್ತರಣೆ ಮಾಡುವವರೆಲ್ಲರ ಒಳಗಿನ ಅದಮ್ಯ ವಿಶ್ವಾಸವೇನೆಂದರೆ ಅಡಿಕೆ ಬೆಲೆ ತೀರಾ ಕನಿಷ್ಠ ಬೆಲೆಗೆ ಕುಸಿಯದು … ಅಂತ.. ಆದರೆ ಈ ಎಲೆಚುಕ್ಕಿ ಶಿಲೀಂಧ್ರ ಮಲೆನಾಡು ಕರಾವಳಿಯ ಸಾಂಪ್ರದಾಯಿಕ ಅಡಿಕೆ ಬೆಳೆಗಾರರಿಗೆ ಹಂತ ಹಂತವಾಗಿ ದಾಳಿ ಮಾಡಲಿದೆ ….

ಇದು ಪುಲಕೇಶಿ, ಒಂದನೇ ಪುಲಕೇಶಿ, ಇಮ್ಮಡಿ ಪುಲಕೇಶಿ, ಮುಮ್ಮಡಿ ಪುಲಕೇಶಿ, ನಾಲ್ಮಡಿ ಪುಲಕೇಶಿ ಎನ್ನುವ ಹಾಗೆ ಹಂತ ಹಂತವಾಗಿ ನಾಲ್ಕೈದು ವರ್ಷಗಳಲ್ಲಿ ಮಲೆನಾಡು ಕರಾವಳಿಯ ಬಹುತೇಕ ಎಲ್ಲ ಅಡಿಕೆ ತೋಟಗಳನ್ನು ಎಲೆಚುಕ್ಕಿ ಶಿಲೀಂಧ್ರ ಆಪೋಷಣ ತೆಗೆದುಕೊಳ್ಳುವ ಸಾಧ್ಯತೆ ಇದೆ…

ಕಾರಣ..‌, “ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಮತ್ತು ಆರ್ದ್ರ ವಾತಾವರಣ” , ಮೊದಲು ಮಲೆನಾಡು ಕರಾವಳಿಯಲ್ಲಿ ಜೂನ್ ನಲ್ಲಿ ಮಳೆಗಾಲ ಆರಂಭವಾಗಿ ಆಗಷ್ಟ್ ಕೊನೆಯಲ್ಲಿ ಒಂದು ಹಂತದ ಮಳೆಗಾಲ ಮುಗಿಯುತ್ತಿತ್ತು. ಸೆಪ್ಟೆಂಬರ್ ನಲ್ಲಿ ಅಲ್ಲಲ್ಲಿ ಸಣ್ಣ ಸಣ್ಣ ಮಳೆ ಬರುತ್ತಿತ್ತು.

ಆದರೆ, ಈಗ ಜೂನ್ ಒಂದು ತಿಂಗಳಿಡಿ ಮಳೆಗಾಲ ಬರೋದೇ ಇಲ್ಲ…!. ಮಳೆಗಾಲ ಆರಂಭವಾಗೋದೇ ಜುಲೈ ತಿಂಗಳಲ್ಲಿ…! ಮುಗಿಯೋದು ಅಕ್ಟೋಬರ್ ನಲ್ಲಿ ..! ಈ ಒಂದು ತಿಂಗಳ ಮಳೆಗಾಲದ ವ್ಯತ್ಯಾಸ ಅಡಿಕೆಗೆ ಕಾಡುವ ಶಿಲೀಂದ್ರ ರೋಗಕ್ಕೆ ಅತಿ ಸೂಕ್ತವಾಗಿದೆ. ಈ ಒಂದು ತಿಂಗಳ ಮಳೆಗಾಲದ ವ್ಯತ್ಯಾಸ ಕಳೆದ ಹತ್ತು ವರ್ಷಗಳ ಈಚೆಯಿಂದ ಖಾಯಂ ಆಗಿದೆ. ಈ ವಾತಾವರಣ ಫೈಲ್ ಆದ ಕಾರಣಕ್ಕೆ ಎಲೆಚುಕ್ಕಿ ಶಿಲೀಂಧ್ರ ರೋಗವನ್ನು ಯಾವುದೇ ಶಿಲೀಂದ್ರ ನಾಶಕದಿಂದ ನಿಯಂತ್ರಣ ಮಾಡುವುದು ಅಸಾಧ್ಯ.

ಮಲೆನಾಡು ಕರಾವಳಿಯ ಅಡಿಕೆ ನಾಶದ ಲಾಭ ಬಯಲು ಸೀಮೆ ಪ್ರದೇಶದ ಅಡಿಕೆ ಬೆಳೆಗೆ ದೊಡ್ಡ ಲಾಭವಾಗಲಿದೆ.
ಇದರ ಜೊತೆಯಲ್ಲಿ ಬಯಲು ಸೀಮೆಯ ಬೋರ್ ವೆಲ್ ನೀರಾವರಿ ಯ ಆಧಾರದ ಸಹಸ್ರಾರು ಎಕರೆ ಅಡಿಕೆ ತೋಟಗಳು ಬೋರ್ ವೆಲ್ ಬತ್ತಿ ಮುಂದಿನ ದಿನಗಳಲ್ಲಿ ನಾಶವಾಗುತ್ತದೆ. ಮುಂದಿನ ದಿನಗಳಲ್ಲಿ ಆಣೆಕಟ್ಟು ನೀರಾವರಿ ಯ ಅಡಿಕೆ ತೋಟಗಳು ಮಾತ್ರ ಉಳಿತದೆ. ಅದೂ ಬಯಲು ಸೀಮೆಯ ಅಡಿಕೆ ಬೆಳೆಗಾರರಿಗೆ ದೊಡ್ಡ ಅಡ್ವಾಂಟೇಜು.

ಹಿಂದೆಲ್ಲಾ, ಮಲೆನಾಡಿನ ಅಡಿಕೆ ಬೆಳೆ ಚಿಂತಕರು ಮುಂದೊಂದು ದಿನ ಬಯಲು ಸೀಮೆಯ ಅಡಿಕೆ ಬೆಳೆಗಾರರಿಗೆ ಅಡಿಕೆ ಬೆಲೆ ಕುಸಿತವೋ ಮತ್ತೇನೋ ಸಮಸ್ಯೆ ಬಂದರೆ ಅವರು ಅಡಿಕೆ ಬೆಳೆಯ ಬಗ್ಗೆ ಯಾವುದೇ ಭಾವನಾತ್ಮಕತೆ ಇಲ್ಲದೇ ಸಂಪೂರ್ಣ ತೋಟವನ್ನೇ ಕಿತ್ತು ಬಿಸಾಡಿ ಹೊಸ ಬೆಳೆ ಬೆಳೆಯುತ್ತಾರೆ. ಎಂದು ವಿಶ್ಲೇಷಣೆ ಮಾಡುತ್ತಿದ್ದರು. ಆದರೆ ಈ ಸಲ ಹಾಗಾಗೋಲ್ಲ…
ಅಡಿಕೆ ಗೆ ಅದೆಷ್ಟೇ ಬೆಲೆ ಕುಸಿದರೂ ಅವರಿಗೆ ಚಾಲ್ತಿ ಸಾಲಿನ ಎಲ್ಲಾ ಬೆಳೆಗಳಿಗೆ ಹೋಲಿಸಿದರೆ ಅಡಿಕೆಯಷ್ಟು ಲಾಭದ , ಸುಲಭದ ಬೆಳೆ ಬೇರಿಲ್ಲ….!!

ಅಡಿಕೆ ನ ಒಂದು ಸಲ ಹಾಕಿ ಬೇಸಿಗೆಯಲ್ಲಿ ನೀರು ಕಟ್ಟುವ ವ್ಯವಸ್ಥೆ ಮಾಡಿದರೆ ಮುಗುದೋಯ್ತು.. ಮತ್ತೆ ವರ್ಷ ವರ್ಷವೂ ಬೆಳೆ ಚೇಣಿ ಕೊಟ್ಟು ದುಡ್ಡು ಎಣಿಸೋದೇ ಎನ್ನುವ ಭಾವನೆ ಇದೆ.

ಬಯಲು ಸೀಮೆಯ ಅಡಿಕೆ ಬೆಳೆಗಾರರಿಗೆ ಇರುವ ಏಕೈಕ ಸವಾಲು ಎಂದರೆ ಮಲೆನಾಡಿನಲ್ಲಿ ಮಳೆಗಾಲದಲ್ಲಿ ಚೆನ್ನಾಗಿ ಮಳೆ ಬಂದು ತುಂಗಭದ್ರಾ ಇತರ ನದಿಗಳ ಆಣೆಕಟ್ಟು ತುಂಬ ಬೇಕು ಮತ್ತು ಏಪ್ರಿಲ್ ಮೇ ತಿಂಗಳಲ್ಲಿ ಆಣೆಕಟ್ಟಿನ ಚಾನಲ್ ನಲ್ಲಿ ಅಡಿಕೆ ಬೆಳೆಗಾರರಿಗೆ ನೀರು ಹರಿಸಬೇಕು… ಅಷ್ಟೇ……. ‌‌‌ಇದೊಂದು ಸಮಸ್ಯೆ ಹೊರತುಪಡಿಸಿ ಬೇರಾವ ಸಮಸ್ಯೆಯೂ ಬಯಲು ಸೀಮೆಯ ಅಡಿಕೆ ಬೆಳೆಗಾರರಿಗೆ ಇಲ್ಲ..!

ನಮ್ಮ ಮಲೆನಾಡಿನಲ್ಲಿ ಕೆಜಿ‌ ಅಡಿಕೆ ಗೆ ಬೀಳುವ ವರ್ಕಿಂಗ್ ಕ್ಯಾಪಿಟಲ್ ನ ಹತ್ತು ಭಾಗವೂ ಬಯಲು ಸೀಮೆಯ ಅಡಿಕೆ ಗೆ ಬೀಳೋಲ್ಲ…!! ಮಳೆಗಾಲ ಕಳೆದ ಮೇಲೆ ಟ್ರಾಕ್ಟರ್ ನಲ್ಲಿ ಇಡೀ ತೋಟ ಉಳುಮೆ ಮಾಡಿ ಒಂದಷ್ಟು ಕೆಮಿಕಲ್ ಬುಡಕ್ಕೆ ಒಗಾಯಿಸಿ, ಬೇಸಿಗೆ ಯಲ್ಲಿ ಗದ್ದೆಗೆ ನೀರು ಕಟ್ಟಿ ದಂತೆ ಇಡೀ ತೋಟಕ್ಕೆ ನೀರು ಕಟ್ಟಿ ನಿಲ್ಲಿಸಿದರೆ ಮುಗೀತು..

ನಮ್ಮಲ್ಲಿ ತರಹ ಬಯಲು ಸೀಮೆಯ ಪ್ರದೇಶದಲ್ಲಿ ಚಿಕ್ಕ ಬೆಳೆಗಾರರು ಇಲ್ಲ. ಬಹುತೇಕ ಅಡಿಕೆ ಬೆಳೆಗಾರರು ಸ್ವಂತ ಅಡಿಕೆ ಸಂಸ್ಕರಣೆ ಮಾಡೋಲ್ಲ. ಎಲ್ರೂ ಚೇಣಿ ಗೆ ಅಡಿಕೆ ಕೊಡ್ತಾರೆ. ಬಯಲು ಸೀಮೆಯ ಅಡಿಕೆ ಬೆಳೆಗಾರರಿಗೆ ಎಷ್ಟೇ ಕಡಿಮೆ ಬೆಲೆಗೆ ಅಡಿಕೆ ಬೆಲೆ ಕುಸಿದರೂ ಅವರೇಜು ಲಾಭ..ಅಕಸ್ಮಾತ್ತಾಗಿ ಕೆಲವು ಬಯಲು ಪ್ರದೇಶದ ಬೆಳೆಯನ್ನೂ ಅವರು ಮನಸು ಮಾಡಿದರೆ ಅಂತರಬೆಳೆಯಾಗಿ ಬೆಳೆಯಲು ಸಾಧ್ಯ.  ಆದರೆ ಬಯಲು ಸೀಮೆಯ ಕೃಷಿಕ ರಿಗೆ ಅಡಿಕೆ ಬೆಳೆಯಷ್ಟು ಮಾರ್ಜಿನ್ ಇನ್ಯಾವುದೇ ಬೆಳೆಯಲ್ಲೂ ಸಿಗೋಲ್ಲ.ಬಯಲುಸೀಮೆಯ ಅಡಿಕೆ ಬೆಳೆಗಾರರಿಗೆ ಅಡಿಕೆ ಬೆಲೆ ಕ್ವಿಂಟಾಲ್ ಗೆ ಇಪ್ಪತ್ತೈದು ಸಾವಿರ ರೂಪಾಯಿ ಬೆಲೆ ಬಂದರೂ ಭರ್ಜರಿ ಲಾಭ ‌..!!

ನಾಲ್ಕು ನಾಲ್ಕು ಸಲ ಬೋರ್ಡೋ ಕೊನಾಜಾಲುಗಳು ಸುಟ್ಟಿದ್ದು ಸುಡುಗಾಡು ಔಷಧ ಸಿಂಪಡಣೆ ಮಾಡಿ , ಕಪ್ಪು ಕೀಸಿ , ಮಂಗ ಕಾಡುಕೋಣ ಹಂದಿ ಕಾದು ದಕ್ಕಿದ ಅರ್ಧ ಇಳುವರಿಯ ಬೆಳೆಗೆ ಇಪ್ಪತ್ತೈದು ಮೂವತ್ತು ಸಾವಿರ ಬೆಲೆ ಅಡಿಕೆ ಗೆ ಬಂದರೆ ಮಲೆನಾಡಿನ ಅಡಿಕೆ ಬೆಳೆಗಾರರು ಉಳಿಯಲು ಸಾಧ್ಯವೇ…!!??

ಖಂಡಿತವಾಗಿಯೂ ಇನ್ನೊಂದು ನಾಲ್ಕೈದು ವರ್ಷಗಳಲ್ಲಿ ಇದೆಲ್ಲಾ ಸಂಭವಿಸಲಿದೆ.. ಇದನ್ನು ಕೋಡಿ ಶ್ರೀ ಗಳು ಹೇಳುವುದು ಬೇಡ… ಮುಕ್ತವಾಗಿ ಗಮನಿಸಿದರೆ ಎಲ್ರಿಗೂ ಮನದಟ್ಟು ಆಗುತ್ತದೆ.

ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರ ಬಂಧುಗಳೇ, ನಮ್ಮ ಅಡಿಕೆ ಖರೀದಿದಾರರಿಗೆ ಗುಣಮಟ್ಟ ರುಚಿ ಬೇಡ. ಇದು ಸಾಂಪ್ರದಾಯಿಕ ಅಡಿಕೆ ಬೆಳೆಯ ಮೇಲಿನ ಅತಿದೊಡ್ಡ ಹಿನ್ನೆಡೆ.ಒಂದು ವೇಳೆ ಖರೀದಿದಾರ ಸಾಂಪ್ರದಾಯಿಕ ಅಡಿಕೆ ಬೇಕು ಎನ್ನುವ ಆಸಕ್ತಿ ಆಸೆ ಇದ್ದಿದ್ದರೆ ಮಲೆನಾಡು ಕರಾವಳಿಯ ಅಡಿಕೆ ಬೆಳೆಗೆ ಶಾಶ್ವತವಾಗಿ ಬೆಲೆ ಮತ್ತು ಬೇಡಿಕೆ ಇರುತ್ತಿತ್ತು…

ಈಗ ಅಡಿಕೆ ಖರೀದಿದಾರ ಕುಟ್ಟಿ ಪುಡಿ ಮಾಡಿ ಬಳಸುವವ ..‌.. ಅವನಿಗೆ quality ಬೇಡ quantity ಬೇಕು…. ಅವನ ಅವಶ್ಯಕತೆಯ quantity ಬಯಲು ಸೀಮೆಯ ಪ್ರದೇಶದಲ್ಲೇ ಆಗಿ ಹೋಗುತ್ತದೆ….!!!

ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರು ಎಲೆಚುಕ್ಕಿ ಶಿಲೀಂಧ್ರ ವೋ ಹಳದಿಎಲೆ ರೋಗ ವೋ ಅಡಿಕೆ ಕೊಳೆ ರೋಗವೋ ಸೇರಿದಂತೆ ಎಲ್ಲಾ ಪ್ರತಿಕೂಲ ವಾತಾವರಣವನ್ನು ಎದುರಿಸಿ ಕಷ್ಟ ಪಡುವುದುಕ್ಕಿಂತ ಭವಿಷ್ಯದ ಬಗ್ಗೆ ಈಗಲೇ ಜಾಗೃತಿಯಾಗಿ ನೇರವಾಗಿ ಅಡಿಕೆಯ ಉತ್ಪತ್ತಿಯನ್ನು ನಂಬಿಕೊಂಡ ಬೆಳೆಗಾರರು ಪರ್ಯಾಯ ಉತ್ಪನ್ನದ ಬಗ್ಗೆ ಚಿಂತನೆ ಮಾಡಿ ಆ ಬಗ್ಗೆ ಮುಂದಡಿ ಇಡುವುದಕ್ಕೆ ಇದು ಸುಸಮಯ. ಅಡಿಕೆ ಬೆಳೆಗಾರರೇ ಜಾಗೃತರಾಗಿ….

ಬರಹ :
ಪ್ರಬಂಧ ಅಂಬುತೀರ್ಥ

Traditional Arecanut farmers in five districts along the Malenadu , coastal are currently grappling with issues such as leaf spot disease, yellow leaf disease, Arecanut fungus, and the negative impacts of excessive Arecanut cultivation. Is it possible for these traditional farmers to overcome these challenges and envision a prosperous future for their betelnut crops?

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಯೇನೆಕಲ್ಲು ಬಚ್ಚನಾಯಕ ನಮ್ಮ ಕಾರ್ಣಿಕದ ಆರಾಧ್ಯ ಶಕ್ತಿ
March 31, 2025
8:32 PM
by: ದ ರೂರಲ್ ಮಿರರ್.ಕಾಂ
ಈ ಪಾತ್ರೆಗೆ ಕ್ಷಯವಿಲ್ಲ!
March 30, 2025
8:00 AM
by: ನಾ.ಕಾರಂತ ಪೆರಾಜೆ
ಹೊಸರುಚಿ | ಗುಜ್ಜೆ ಪಲಾವ್
March 29, 2025
8:00 AM
by: ದಿವ್ಯ ಮಹೇಶ್
2025 ರಲ್ಲಿ ಕುಬೇರ ರಾಜ ಯೋಗ | 7 ರಾಶಿಯವರಿಗೆ ಅದೃಷ್ಟದ ಪರ್ವ ಕಾಲ
March 29, 2025
7:11 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group