ಅಡಿಕೆ ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಕ್ರಮ – ಸರ್ಕಾರಕ್ಕೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಒತ್ತಾಯ

June 23, 2026
8:11 PM
ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಕಾಪರ್ ಸಲ್ಫೇಟ್ ಕೊರತೆ, ಬೆಳೆ ವಿಮೆ ವಿಳಂಬ, ಕಳಪೆ ಅಡಿಕೆ ಆಮದು ಹಾಗೂ ಉತ್ಪಾದನಾ ವೆಚ್ಚ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಒತ್ತಾಯಿಸಿದೆ. ಅಡಿಕೆಗೆ ಕನಿಷ್ಠ ಆಮದು ದರ ₹451ಕ್ಕೆ ಏರಿಕೆ, ಪರ್ಯಾಯ ರೋಗನಿಯಂತ್ರಣ ಉತ್ಪನ್ನಗಳಿಗೆ ಸಹಾಯಧನ ಹಾಗೂ ಬೆಳೆ ವಿಮೆ ಪರಿಹಾರ ತ್ವರಿತ ಬಿಡುಗಡೆಗೆ ಸಂಘ ಆಗ್ರಹಿಸಿದೆ.

ಅಡಿಕೆ ಬೆಳೆಗಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತುರ್ತು ಗಮನಹರಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಒತ್ತಾಯಿಸಿದೆ.

ಈಚೆಗೆ ನಡೆದ ಸಂಘದ ಸಭೆಯಲ್ಲಿ ಅಡಿಕೆ ಬೆಳೆಗಾರರ ಪ್ರಮುಖ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದ್ದು, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದೆ.

ಮಳೆಗಾಲದಲ್ಲಿ ಅಡಿಕೆ ತೋಟಗಳಲ್ಲಿ ಕೊಳೆರೋಗ ನಿಯಂತ್ರಣಕ್ಕೆ ಬಳಸಲಾಗುವ ಬೋರ್ಡೋ ದ್ರಾವಣ ತಯಾರಿಕೆಗೆ ಅಗತ್ಯವಿರುವ ಕಾಪರ್ ಸಲ್ಫೇಟ್ ಹಾಗೂ ಸುಣ್ಣದ ಕೊರತೆ ಗಂಭೀರ ಸಮಸ್ಯೆಯಾಗಿದೆ. ಸಲ್ಪ್ಯೂರಿಕ್ ಆಸಿಡ್ ಮತ್ತು ತಾಮ್ರದ ಕೊರತೆಯಿಂದ ಕಾಪರ್ ಸಲ್ಫೇಟ್ ಉತ್ಪಾದನೆ ಹಾಗೂ ಸರಬರಾಜು ಅಡಚಣೆಗೆ ಒಳಗಾಗಿದ್ದು, ದರ ಏರಿಕೆ ಮತ್ತು ಕಳಪೆ ಗುಣಮಟ್ಟದ ಉತ್ಪನ್ನಗಳ ಮಾರಾಟದ ಬಗ್ಗೆ ಆತಂಕ ವ್ಯಕ್ತವಾಗಿದೆ. ಸರ್ಕಾರ ಗುಣಮಟ್ಟ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಂಘ ಆಗ್ರಹಿಸಿದೆ.

ಬೋರ್ಡೋ ದ್ರಾವಣಕ್ಕೆ ಪರ್ಯಾಯವಾಗಿ ಬಳಸಬಹುದಾದ ಪರಿಣಾಮಕಾರಿ ರೋಗನಿಯಂತ್ರಣ ಸಿಂಪಡಣೆಗಳ ಕುರಿತು ಕೇಂದ್ರ ತೋಟಗಾರಿಕಾ ಇಲಾಖೆ, ರಾಜ್ಯ ತೋಟಗಾರಿಕಾ ಇಲಾಖೆ ಹಾಗೂ ಸಿಪಿಸಿಆರ್‌ಐ ವೈಜ್ಞಾನಿಕ ಶಿಫಾರಸುಗಳನ್ನು ಪ್ರಕಟಿಸಬೇಕು. ಜೊತೆಗೆ ಪರ್ಯಾಯ ಉತ್ಪನ್ನಗಳಿಗೂ ಸಹಾಯಧನ ನೀಡಬೇಕು ಎಂದು ಸಂಘ ಮನವಿ ಮಾಡಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಪ್ರಸ್ತುತ ಕಾಪರ್ ಸಲ್ಫೇಟ್‌ಗೆ ನೀಡಲಾಗುತ್ತಿರುವ ಸಹಾಯಧನ ಹಾಗೂ ಪ್ರಮಾಣದಲ್ಲಿ ಹೆಚ್ಚಳ ಅಗತ್ಯವಿದೆ ಎಂದು ಸಂಘ ತಿಳಿಸಿದೆ. ಹಿಂದೆ 2-3 ಬಾರಿ ಸಿಂಪಡಣೆ ಸಾಕಾಗುತ್ತಿದ್ದರೆ, ಈಗ ರೋಗದ ತೀವ್ರತೆಯಿಂದ 4-5 ಬಾರಿ ಸಿಂಪಡಣೆ ಮಾಡಬೇಕಾಗಿರುವುದರಿಂದ ವೆಚ್ಚ ಹೆಚ್ಚಾಗಿದೆ ಎಂದು ಹೇಳಿದೆ.

ಹವಾಮಾನ ಆಧಾರಿತ ಅಡಿಕೆ ಬೆಳೆ ವಿಮೆಯ ಪ್ರೀಮಿಯಂ ಪಾವತಿಗೆ ಜುಲೈ ಅಂತ್ಯದವರೆಗೆ ಅವಕಾಶ ನೀಡಿರುವುದನ್ನು ಸ್ವಾಗತಿಸಿದ ಸಂಘ, ಕಳೆದ ಕೆಲವು ವರ್ಷಗಳಿಂದ ಅತಿಯಾದ ಬಿಸಿಲಿನ ಪರಿಣಾಮ ಎಳೆ ಅಡಿಕೆ ಉದುರುವಿಕೆ ಹಾಗೂ ಹಿಂಗಾರ ಒಣಗುವ ಸಮಸ್ಯೆಗಳು ಹೆಚ್ಚಾಗುತ್ತಿರುವುದನ್ನು ಉಲ್ಲೇಖಿಸಿದೆ. ಮಳೆ ಹಾಗೂ ತಾಪಮಾನ ವೈಪರೀತ್ಯಗಳನ್ನು ವೈಜ್ಞಾನಿಕವಾಗಿ ದಾಖಲಿಸಿ, ಹವಾಮಾನ ವೈಪರೀತ್ಯದಿಂದ ಉಂಟಾಗುವ ನಷ್ಟಗಳಿಗೆ ಸಮರ್ಪಕ ಪರಿಹಾರ ಮತ್ತು ವಿಮಾ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದೆ.

ಕಳೆದ ಸಾಲಿನ ಬೆಳೆ ವಿಮೆ ಪರಿಹಾರ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು. ಕಳೆದ ಬಾರಿಯಂತೆ ಈ ವರ್ಷವೂ ವಿಳಂಬವಾಗಬಾರದು ಎಂದು ಸಂಘ ಒತ್ತಾಯಿಸಿದೆ.

ದೇಶಕ್ಕೆ ಕಳಪೆ ಗುಣಮಟ್ಟದ ಅಡಿಕೆ ಅಕ್ರಮ ಮಾರ್ಗಗಳಿಂದ ಆಮದು ಆಗುತ್ತಿರುವುದು ದೇಶೀಯ ಬೆಳೆಗಾರರಿಗೆ ದೊಡ್ಡ ಹೊಡೆತವಾಗಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಕಳಪೆ ಗುಣಮಟ್ಟದ ಅಡಿಕೆ ಸಾಗಾಟಕ್ಕೆ ತಡೆ ಉಂಟಾಗಿರುವ ಘಟನೆಗಳು ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತವೆ. ಹೀಗಾಗಿ ಕಳಪೆ ಗುಣಮಟ್ಟದ ಅಡಿಕೆ ಆಮದು ಸಂಪೂರ್ಣ ನಿಷೇಧಿಸಬೇಕು ಎಂದು ಸಂಘ ಒತ್ತಾಯಿಸಿದೆ.

ಅಡಿಕೆ ಎಲೆಚುಕ್ಕಿ ಸೇರಿದಂತೆ ವಿವಿಧ ರೋಗಬಾಧೆಗಳು ಹೆಚ್ಚುತ್ತಿರುವುದರಿಂದ ಉತ್ಪಾದನಾ ವೆಚ್ಚ ಏರಿಕೆಯಾಗಿದೆ. ಕಾರ್ಮಿಕರ ಕೂಲಿ, ಸಿಂಪಡಣೆ ವೆಚ್ಚ ಹಾಗೂ ನಿರ್ವಹಣಾ ವೆಚ್ಚಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಅಡಿಕೆ ಉತ್ಪಾದನಾ ವೆಚ್ಚ ಪ್ರತಿ ಕೆ.ಜಿ.ಗೆ ಸುಮಾರು ₹450 ತಲುಪಿದೆ ಎಂದು ಸಂಘ ತಿಳಿಸಿದೆ. ಆದ್ದರಿಂದ ಕನಿಷ್ಠ ಆಮದು ದರವನ್ನು ₹451ಕ್ಕೆ ಏರಿಸಿ ದೇಶೀಯ ಬೆಳೆಗಾರರ ಹಿತಾಸಕ್ತಿಯನ್ನು ರಕ್ಷಿಸಬೇಕು ಎಂದು ಆಗ್ರಹಿಸಿದೆ.

ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳ ಪ್ರವೇಶದ ಕುರಿತು ಸಮಗ್ರ ಅಧ್ಯಯನ ನಡೆಸದೆ ಯಾವುದೇ ನಿರ್ಧಾರ ಕೈಗೊಳ್ಳಬಾರದು. ಇದರ ಪರಿಣಾಮಗಳನ್ನು ಕೃಷಿಕರು ಹಾಗೂ ಸಾಮಾನ್ಯ ಗ್ರಾಹಕರ ದೃಷ್ಟಿಯಿಂದ ಗಂಭೀರವಾಗಿ ಪರಿಶೀಲಿಸಬೇಕು ಎಂದು ಸಂಘ ಅಭಿಪ್ರಾಯಪಟ್ಟಿದೆ.

ಕೃಷಿ ಯಾಂತ್ರೀಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಕ್ಯಾನ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಿತರಣೆ ಕುರಿತು ಇರುವ ನಿರ್ಬಂಧಗಳನ್ನು ಪರಿಶೀಲಿಸಿ ಅನುಕೂಲಕರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಕಾಡಂಚಿನ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ರಕ್ಷಣೆ ದೊಡ್ಡ ಸವಾಲಾಗಿರುವುದರಿಂದ ಕೃಷಿ ರಕ್ಷಣೆಗೆ ಸರ್ಕಾರದ ಅನುಮತಿಯೊಂದಿಗೆ ರೈತರು ಹೊಂದಿರುವ ಕೋವಿ ಪರವಾನಿಗೆಗಳ ನವೀಕರಣ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದೆ.

ಈ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಇಲ್ಲಿ ಕಮೆಂಟ್‌ ಮಾಡಿ…

The All India Arecanut Growers Association has urged both the Karnataka and Central governments to immediately address key challenges faced by arecanut farmers. The association highlighted issues such as copper sulphate shortage, rising disease management costs, crop insurance delays, climate-related crop losses, poor-quality arecanut imports, increasing production costs, electricity sector privatization concerns, fuel access for farm machinery, and firearm license renewal issues for crop protection in wildlife-prone areas.

ಜಾಹೀರಾತು
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನೈಸರ್ಗಿಕ ಕೃಷಿಗೆ ರಾಜಸ್ಥಾನದ ದೊಡ್ಡ ಹೆಜ್ಜೆ : 32 ಸಂಸ್ಥೆಗಳೊಂದಿಗೆ ಒಪ್ಪಂದ, ರೈತರಿಗೆ ತಂತ್ರಜ್ಞಾನ – ಮಾರುಕಟ್ಟೆ ಬೆಂಬಲ
July 13, 2026
10:46 PM
by: ದ ರೂರಲ್ ಮಿರರ್.ಕಾಂ
ಬಾಂಗ್ಲಾದೇಶದಲ್ಲಿ ಭೀಕರ ಪ್ರವಾಹ – ಭಾರಿ ಮಳೆಯಿಂದ 50 ಕ್ಕೂ ಅಧಿಕ ಮಂದಿ ಸಾವು ; 10 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಕಷ್ಟ
July 13, 2026
10:16 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ |13-07-2026 | ಕರ್ನಾಟಕದಲ್ಲಿ ಮುಂಗಾರು ದುರ್ಬಲ – ಮುಂದಿನ 10 ದಿನ ಜೋರು ಮಳೆ ಇಲ್ಲ
July 13, 2026
2:42 PM
by: ಸಾಯಿಶೇಖರ್ ಕರಿಕಳ
ಅಮರನಾಥದ ಹಿಮ ಶಿವಲಿಂಗ 90% ಕರಗಿತು…! ಹವಾಮಾನ ಬದಲಾವಣೆಯೇ ಕಾರಣವೇ?
July 13, 2026
7:17 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror