ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆಚುಕ್ಕೆ ರೋಗ ನಿಯಂತ್ರಣಕ್ಕಾಗಿ ಸಮುದಾಯ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿರುವ ನಿರ್ವಹಣಾ ಕ್ರಮಗಳ ಪ್ರಾತ್ಯಕ್ಷಿಕೆಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ, ICAR-Central Plantation Crops Research Institute (ಸಿ.ಪಿ.ಸಿ.ಆರ್.ಐ) ವತಿಯಿಂದ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಯೋಜನೆ ಪ್ರಾರಂಭವಾಗಿ ಒಂದು ವರ್ಷವಾದ ಸಲುವಾಗಿ, ಎಲೆ ಚುಕ್ಕೆ ರೋಗದ ಕುರಿತು ಸಂವಾದ ಕಾರ್ಯಕ್ರಮವನ್ನು ಎ.29 ಬುಧವಾರದಂದು ಸುಳ್ಯ ತಾಲೂಕಿನ ಗುತ್ತಿಗಾರು ಕೃಷಿ ಪತ್ತಿನ ಸಹಕಾರ ಸಂಘದ ದೀನ ದಯಾಳ್ ರೈತ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ದ.ಕ.. ಜಿಲ್ಲೆಯ ಸಂಸದರು, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಸಿ ಪಿ ಸಿ ಆರ್ ಐ ಸಂಸ್ಥೆಯ ಪಂಚವಾರ್ಷಿಕ ಪರಿಶೀಲನಾ ಕಮಿಟಿಯ ಅಧ್ಯಕ್ಷರಾಗಿರುವ ಡಾ. ಟಿ. ಜಾನಕಿರಾಮ್ ಮತ್ತು ಇತರ ಸದಸ್ಯರು, ಕ್ಯಾಂಪ್ಕೊ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ, ಗುತ್ತಿಗಾರು ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ ಮತ್ತು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಭಾಗವಹಿಸಲಿದ್ದಾರೆ. ಸಿ ಪಿ ಸಿ ಆರ್ ಐ ಸಂಸ್ಥೆಯು ನಡೆಸುವ ಈ ಕಾರ್ಯಕ್ರಮಕ್ಕೆ ಗುತ್ತಿಗಾರಿನ ಕೃಷಿ ಪತ್ತಿನ ಸಹಕಾರ ಸಂಘದ ಸಹಭಾಗಿತ್ವವಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ

ಎಲೆಚುಕ್ಕೆ ರೋಗದ ಗಂಭೀರತೆ : ಎಲೆಚುಕ್ಕೆ ರೋಗವು ಕಳೆದ ಕೆಲವು ವರ್ಷಗಳಿಂದ ಕೃಷಿಕರನ್ನು ಕಾಡುತ್ತಿದೆ. ಕೊಲೆಟೊಟ್ರೈಕಮ್ ಕಹಾವೇ (ಸಿಗ್ಗಾರೊ) ಎಂಬ ಹೊಸ ಜಾತಿಯ ಶಿಲೀಂದ್ರವು ಉಂಟು ಮಾಡುವ, ಹಳದಿ ಬಣ್ಣದ ಅಂಚು ಇರುವ ಕಂದು ಬಣ್ಣದ ಚುಕ್ಕೆಗಳು ಇದರ ಲಕ್ಷಣ. ಸಣ್ಣ ಚುಕ್ಕೆಗಳು ದೊಡ್ಡದಾಗಿ, ಒಂದಕ್ಕೊಂದು ಬೆಸೆದುಕೊಂಡು ಇಡೀ ಸೋಗೆ ಒಣಗಿ ಸಮಸ್ಯೆಯನ್ನು ಉಂಟು ಮಾಡುತ್ತದೆ. ಗಾಳಿಯಲ್ಲಿ ಈ ರೋಗದ ಸೋಂಕು ಬಹಳ ಬೇಗನೆ ಹರಡುವ ಕಾರಣ ನಿರ್ವಹಣೆಯೂ ಕಷ್ಟ. ಈ ರೋಗಾಣು ಪೂರಕ ವಾತಾವರಣವಿದ್ದಾಗ ಬಹಳ ವೇಗವಾಗಿ ಅಡಿಕೆ ಮರದ ಎಲೆ, ಹಾಳೆ ಮತ್ತು ಕಾಯಿಯ ಮೇಲೆ ಬೆಳೆದು, ಹಾನಿ ಮಾಡುತ್ತದೆ. ಹವಾಮಾನ ಬದಲಾವಣೆಯಿಂದ ಅದರ ಬೆಳವಣಿಗೆಗೆ ಬೇಕಾದ ಪೂರಕ ವಾತಾವರಣವೂ ಇದೆ.
ತಜ್ಞರ ಸಲಹೆ : ಸಿ.ಪಿ.ಸಿ.ಆರ್.ಐ ನಿರ್ದೇಶಕ ಡಾ. ಕೆ ಬಾಲಚಂದ್ರ ಹೆಬ್ಬಾರ್ ಅವರ ಪ್ರಕಾರ, “ರೋಗ ನಿರ್ವಹಣೆಗೆ ಸಿಂಪಡಣೆ ಮಾತ್ರ ಸಾಕಾಗುವುದಿಲ್ಲ. ಸಮೂಹವಾಗಿ ಕ್ರಮ ಕೈಗೊಳ್ಳುವುದು, ರೋಗಬಾಧಿತ ಎಲೆಗಳನ್ನು ತೆಗೆದು ನಾಶ ಮಾಡುವುದು ಮತ್ತು ಮರದ ಆರೋಗ್ಯ ಸುಧಾರಿಸುವುದು ಮುಖ್ಯ.”
ಈ ಹಿನ್ನಲೆಯಲ್ಲಿ ಎಲೆಚುಕ್ಕೆ ಮತ್ತು ಹಳದಿ ರೋಗದ ಕುರಿತಂತೆ ನೇಮಕವಾಗಿರುವ ರಾಷ್ಟ್ರೀಯ ವೈಜ್ಞಾನಿಕ ಕಮಿಟಿಯು ನೀಡಿರುವ ಸಲಹೆಯನ್ನು ಕೇಂದ್ರ ಸರ್ಕಾರದ ಎಂ.ಐ.ಡಿ.ಎಚ್ ಯೋಜನೆಯಡಿ ಸಿ ಪಿ ಸಿ ಆರ್ ಐ ಸಂಸ್ಥೆಯು ಡಾ. ವಿನಾಯಕ ಹೆಗಡೆಯವರ ನೇತೃತ್ವದಲ್ಲಿ ಈ ಪ್ರಾತ್ಯಕ್ಷಿಕೆಯನ್ನು ಕೃಷಿಕರ ತೋಟಗಳಲ್ಲಿ ಮಾಡುತ್ತಿದೆ. ಸುಳ್ಯ ತಾಲೂಕಿನ ನಡುಗಲ್ಲು ಮತ್ತು ಚಣಿಲ, ಹಾಗೂ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರದಲ್ಲಿ ಒಟ್ಟು 21 ಕೃಷಿಕರ 25 ಎಕರೆ ತೋಟದಲ್ಲಿ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಗುತ್ತಿದೆ. ಇದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮತ್ತು ಸಿದ್ದಾಪುರ ತಾಲೂಕಿನಲ್ಲಿ ಸುಮಾರು 25 ಎಕರೆ ತೋಟದಲ್ಲೂ ಪ್ರಾತ್ಯಕ್ಷಿಕೆ ಪ್ರಗತಿಯಲ್ಲಿದೆ. ಇದೇ ಮಾದರಿಯ ಪ್ರಾತ್ಯಕ್ಷಿಕೆಯನ್ನು ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಆರು ತಾಲೂಕಿನ 75 ಎಕರೆ ತೋಟದಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯಡಿ ಔಷಧಿ ಸಿಂಪಡಣೆ ಮಾತ್ರವಲ್ಲದೆ, ಉತ್ತಮ ಕೃಷಿ ಕ್ರಮಗಳನ್ನು ಅನುಸರಿಸಿ ಮರದ ಆರೋಗ್ಯವನ್ನು ಉತ್ತಮಪಡಿಸುವ ಉದ್ದೇಶವಿದೆ.
ಪ್ರಮುಖ ನಿರ್ವಹಣಾ ಕ್ರಮಗಳು
- ಬಸಿಗಾಲುವೆ ಮೂಲಕ ನೀರು ಹರಿವು ವ್ಯವಸ್ಥೆ
- ಮಣ್ಣು ಪರೀಕ್ಷೆಯ ಆಧಾರದ ಮೇಲೆ ಸುಣ್ಣ ಮತ್ತು ಪೋಷಕಾಂಶ ಬಳಕೆ
- ಟ್ರೈಕೋಡರ್ಮ ಹಾಗೂ ಬೇವಿನ ಹಿಂಡಿ ಬಳಕೆ
- ಮಳೆಗಾಲದಲ್ಲಿ ಬೋರ್ಡೋ ಮಿಶ್ರಣ ಸಿಂಪಡಣೆ
- ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಪ್ರಾಪಿಕೊನಜೋಲ್/ಟೆಬುಕೊನಜೋಲ್
- ನಂತರ ಪ್ರಾಪಿನೆಬ್ ಸಿಂಪಡಣೆ
ಪ್ರಮುಖ ಕ್ರಮ: ಒಬ್ಬರ ತೋಟವಲ್ಲ, ಸುತ್ತಮುತ್ತಲಿನ ಎಲ್ಲಾ ತೋಟಗಳಲ್ಲಿ ಸಮೂಹ ಕ್ರಮ
ರೈತರ ಅನುಭವ : ನಡುಗಲ್ಲು ಕೃಷಿಕ ಗಿರೀಶ್ ಗೌಡ ಅವರ ಪ್ರಕಾರ, “ತೋಟ ಉಳಿಯುತ್ತದೆಯೇ ಅನ್ನಿಸಿತ್ತು, ಈಗ ಭರವಸೆ ಬಂದಿದೆ.”
ಸುಬ್ರಹ್ಮಣ್ಯ ಪ್ರಸಾದ್ ಅವರ ಪ್ರಕಾರ, “ಕಳೆದ ವರ್ಷಕ್ಕಿಂತ ರೋಗ ಕಡಿಮೆಯಾಗಿದೆ. ಆದರೆ , ಈ ಬಾರಿ ಸೆಪ್ಟೆಂಬರ್ ವೇಳೆಗೆ ಸ್ಪಷ್ಟ ಫಲಿತಾಂಶ ಸಿಗಬಹುದು.”
ಸಂವಾದ ಕಾರ್ಯಕ್ರಮ ವಿವರ
📍 ಸ್ಥಳ: ಗುತ್ತಿಗಾರು ಕೃಷಿ ಪತ್ತಿನ ಸಹಕಾರ ಸಂಘ
ದಿನಾಂಕ: 29.04.2026, ಬುಧವಾರ
A community-based demonstration program on managing arecanut leaf spot disease has completed one year in Sullia. Organized by ICAR-CPCRI, the initiative shows promising results in reducing disease spread through collective action and scientific practices.


