ಬರ್ಮಾ ಅಡಿಕೆ ಕಳ್ಳಸಾಗಾಣಿಕೆಯನ್ನು ಪೊಲೀಸರು ಮತ್ತೆ ಪತ್ತೆ ಮಾಡಿದ್ದಾರೆ. ಅಸ್ಸಾಂನ ಹೈಲಕಂಡಿ ಪ್ರದೇಶದಲ್ಲಿ ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ಬರ್ಮಾ ಅಡಿಕೆಯನ್ನು ಅಸ್ಸಾಂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದೀಗ ರೈಲಿನ ಮೂಲಕ ಅಡಿಕೆ ಕಳ್ಳಸಾಗಾಣಿಕೆ ನಡೆಸುವ ಜಾಲ ಪತ್ತೆಯಾಗಿದೆ.
ಪೊಲೀಸರ ತಂಡವು ಮಿಜೋರಾಂನ ಬೈರಾಬಿಯಿಂದ ಕ್ಯಾಚಾರ್ ಜಿಲ್ಲೆಯ ಸಿಲ್ಚಾರ್ಗೆ ತೆರಳುತ್ತಿದ್ದ ರೈಲಿನ ಎರಡು ಬೋಗಿಗಳಿಂದ 560 ಕ್ಕೂ ಹೆಚ್ಚು ಚೀಲಗಳಿದ್ದ ಬರ್ಮಾದ ಅಡಿಕೆಯನ್ನು ವಶಪಡಿಸಿಕೊಂಡಿದೆ. ಅಸ್ಸಾಂ-ಮಿಜೋರಾಂ ಗಡಿಯ ಸಮೀಪದಲ್ಲಿರುವ ಈ ರೈಲು ನಿಲ್ದಾಣವು ಹೈಲಕಂಡಿ ಬಳಿಯಲ್ಲಿದೆ. ವಶಪಡಿಸಿಕೊಂಡ ಬರ್ಮಾ ಅಡಿಕೆಯನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ರೈಲಿನ ಎರಡು ಬೋಗಿಗಳನ್ನು ಮುಚ್ಚಿರುವುದನ್ನು ನೋಡಿದ ರೈಲ್ವೆ ನಿಲ್ದಾಣದಲ್ಲಿದ್ದ ಕೆಲವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬೋಗಿಗಳನ್ನು ಪರಿಶೀಲನೆ ನಡೆಸಿದಾಗ ಬರ್ಮಾ ಅಡಿಕೆ ಇರುವುದು ಪತ್ತೆಯಾಗಿದೆ. ತೆರಿಗೆ ರಹಿತವಾಗಿ ಅಕ್ರಮವಾಗಿ ಅಡಿಕೆ ಸಾಗಾಟ ನಡೆಯುತ್ತಿತ್ತು. ಇದೀಗ ರೈಲ್ವೇ ಮೂಲಕವೂ ಅಕ್ರಮವಾಗಿ ಅಡಿಕೆ ಸಾಗಾಣಿಕೆ ಮಾಡುವುದರ ಬಗ್ಗೆ ಗಂಭೀರ ತನಿಖೆ ಆರಂಭವಾಗಿದೆ.
ಬರ್ಮಾದ ಅಡಿಕೆಯನ್ನು ಮಿಜೋರಾಂನಿಂದ ಪಶ್ಚಿಮ ಬಂಗಾಳಕ್ಕೆ ಕಳ್ಳಸಾಗಣೆ ಮಾಡಿ ಅಲ್ಲಿಂದ ದೇಶದ ವಿವಿದೆಡೆಗೆ ಸಾಗಾಟ ಮಾಡುವ ಜಾಲ ಇದರ ಹಿಂದಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಕಳೆದ ತಿಂಗಳಿನಿಂದಲೂ ಕೂಡಾ ಭಾರೀ ಪ್ರಮಾಣದಲ್ಲಿ ಅಡಿಕೆ ಕಳ್ಳಸಾಗಾಣಿಕೆಯನ್ನು ಪೊಲೀಸರು ತಡೆದಿದ್ದರು. ಜ.28 ರಂದು ಕೂಡಾ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ಅಡಿಕೆ ಅಕ್ರಮ ಸಾಗಾಟ ತಡೆಯಲಾಗಿತ್ತು. ಜ 5 ರಂದು ಮೂರು ಲಾರಿಗಳಿಂದ ಬರ್ಮಾ ಅಡಿಕೆಯನ್ನು ವಶಪಡಿಸಿಕೊಂಡು ಏಳು ಜನರನ್ನು ಬಂಧಿಸಲಾಗಿತ್ತು, ಜ 3 ರಂದು ಕರೀಮ್ಗಂಜ್ ಜಿಲ್ಲೆಯಲ್ಲಿ ಎರಡು ಲಾರಿಗಳಿಂದ 1 ಕೋಟಿ ಮೌಲ್ಯದ ಅಡಿಕೆ ವಶಪಡಿಸಿಕೊಳ್ಳಲಾಯಿತು ಮತ್ತು ನಾಲ್ವರನ್ನು ಬಂಧಿಸಲಾಯಿತು.
ಇದೀಗ ಕಳೆದ ಕೆಲವು ಸಮಯಗಳಿಂದ ಅಡಿಕೆ ಅಕ್ರಮ ಸಂಪೂರ್ಣ ತಡೆಯಲಾಗಿದ್ದರೂ ಮತ್ತೆ ಅಕ್ರಮ ಚಟುವಟಿಕೆಗಳು ಬಹುದೊಡ್ಡ ಮಾಫಿಯಾ ಮಾದರಿಯಲ್ಲಿಯೇ ಅಡಿಕೆ ಕಳ್ಳ ಸಾಗಾಣಿಕೆ ನಡೆಯುತ್ತಿದೆ. ಸರ್ಕಾರದ ಕಟ್ಟುನಿಟ್ಟಿನ ಕ್ರಮದ ಕಾರಣದಿಂದ ಅಡಿಕೆ ಕಳ್ಳಸಾಗಾಣಿಕೆಗೆ ಬ್ರೇಕ್ ಬೀಳುತ್ತಿದೆ. ಈ ಕಾರಣದಿಂದ ದಕ್ಷಿಣ ಭಾರತದ ಅಡಿಕೆ ಧಾರಣೆ ಬಹುಪಾಲು ಸ್ಥಿರತೆಯ ಹಾದಿಯಲ್ಲಿ ಸದ್ಯ ಇದೆ.