ಅಡಿಕೆ ಬೆಳೆಗಾರರಿಗೆ ಈಚೆಗೆ ಕಾಡುತ್ತಿರುವ ಸಮಸ್ಯೆಗಳಲ್ಲಿ ಎಲೆಚುಕ್ಕಿ ಹಾಗೂ ಹಳದಿ ಎಲೆರೋಗ. ಅದರಲ್ಲೂ ಸಂಪಾಜೆ ಸೇರಿದಂತೆ ಹಲವು ಕಡೆಗಳಲ್ಲಿ ಅಡಿಕೆ ಹಳದಿ ಎಲೆರೋಗದಿಂದ ತೋಟವೇ ನಾಶವಾಗಿತ್ತು. ಇದೀಗ ಅನೇಕ ವರ್ಷಗಳ ಬಳಿಕ ಸತತ ಪ್ರಯತ್ನದಿಂದ ಸಂಪಾಜೆಯಂತಹ ಹಳದಿ ಎಲೆರೋಗ ಹಾಟ್ಸ್ಫಾಟ್ ಪ್ರದೇಶದಲ್ಲಿ ಅಡಿಕೆ ಬೆಳೆದು ಕೃಷಿಕರೊಬ್ಬರು ಫಸಲು ಕಂಡಿದ್ದಾರೆ.
ಸುಳ್ಯ ತಾಲೂಕು ಗಡಿಭಾಗವಾದ ಸಂಪಾಜೆಯ ಜೇಡ್ಲ ಪ್ರದೇಶದಲ್ಲಿರುವ ಕೃಷಿಕ ಶ್ರೀಧರ್ ಭಟ್ ಜೇಡ್ಲ ಅವರು ಅನೇಕ ವರ್ಷಗಳಿಂದ ಅಡಿಕೆ ಕೃಷಿ ಮಾಡಿಕೊಂಡು ಬಂದವರು. ಸುಮಾರು 20 ವರ್ಷಗಳ ಹಿಂದೆ ಹಳದಿ ಎಲೆರೋಗ ಕಾಣಿಸಿಕೊಂಡು ಅಡಿಕೆ ತೋಟ ನಾಶವಾಗಿತ್ತು. ಅಡಿಕೆ ಬೆಳೆ ಸಂಪೂರ್ಣ ನಾಶವಾಗಿ ರಬ್ಬರ್ ಸೇರಿದಂತೆ ಪರ್ಯಾಯ ಬೆಳೆಯತ್ತ ಹೋದವರು. 2016 ರ ಸುಮಾರಿಗೆ ಇದ್ದ ಅಡಿಕೆ ಮರಗಳನ್ನು ಕಡಿದು ಮತ್ತೆ ಅಡಿಕೆ ಗಿಡಗಳ ಮರುನಾಟಿ ಮಾಡಿದರು. ಸತತ ಪ್ರಯತ್ನದಿಂದ ಹಾಗೂ ಸೂಕ್ತ ರೀತಿಯಲ್ಲಿ ತೋಟ ನಿರ್ವಹಣೆ ಮಾಡುತ್ತಾ ಬಂದರು. ಗಿಡ ಉತ್ತಮವಾಗಿ ಬೆಳೆಯಿತು.
ಕಳೆದ ವರ್ಷ ಮೂಲತ: ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು ಇಂದೋರ್ನ ಶ್ರೀಸಿದ್ಧಿ ಎಗ್ರಿ ಕೆಮಿಕಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಪೆರುವೋಡಿ ನಾರಾಯಣ ಭಟ್ ಅವರ ಸಂಪರ್ಕದಿಂದ ಕೆಲವು ಔಷಧಿಗಳನ್ನು ಹಳದಿ ಎಲೆರೋಗ ನಿಯಂತ್ರಣಕ್ಕಾಗಿ ಹಾಗೂ ಗಿಡಗಳ ಬೆಳವಣಿಗೆಗೆ ಅಗತ್ಯವಾದ ಔಷಧಿಗಳನ್ನು ಅವರ ಸಲಹೆಯಂತೆಯೇ ಬಳಕೆ ಮಾಡಿದರು. ಅಂದರೆ ಹಳದಿ ಎಲೆರೋಗವು ಟೊಮೆಟೋ ಸೇರಿದಂತೆ ಹಲವು ಬೆಳೆಗಳಲ್ಲಿ ಕಾಣಿಸುತ್ತಿದೆ. ಈ ಬೆಳೆಗಳಲ್ಲಿ ಮಾಡುವ ಪ್ರಯೋಗಗಳನ್ನು ಅಡಿಕೆ ಬೆಳೆಯ ಹಳದಿ ಎಲೆರೋಗದಲ್ಲೂ ಪ್ರಯೋಗ ಮಾಡಿದರು. ಇದೀಗ ಸಂಪಾಜೆಯಲ್ಲೂ ಈ ಪ್ರಯೋಗವನ್ನು ಮಾಡಿದ್ದಾರೆ. ಹೀಗಾಗಿ ಸದ್ಯ ಅಡಿಕೆ ಫಸಲು ಉತ್ತಮವಾ ಸಂಪಾಜೆಯ ಜೇಡ್ಲದಲ್ಲಿ ಕಂಡುಬಂದಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ. ಇನ್ನೂ ಒಂದೆರಡು ವರ್ಷ ಇದೇ ಔಷಧಿಯ ಪ್ರಯೋಗ ನಡೆದ ಬಳಿಕ ಅಂತಿಮವಾದ ನಿರ್ಧಾರಕ್ಕೆ ಬರಬೇಕಿದೆ.ಆರಂಭದ ಹಂತದಲ್ಲಿ ಅಡಿಕೆ ಬೆಳೆಯಲ್ಲಿ ಈ ಪ್ರಯೋಗ ಯಶಸ್ಸಾಗಿದ್ದು ಸಂಪಾಜೆಯ ಜೇಡ್ಲ ಶ್ರೀಧರ ಭಟ್ ಅವರು ಈ ಪ್ರಯೋಗದಲ್ಲಿ ವಿಶ್ವಾಸ ಹೊಂದಿದ್ದಾರೆ. ಅಡಿಕೆಯ ಗುಣಮಟ್ಟದಲ್ಲಿ ಕೂಡಾ ಹಳದಿ ಎಲೆರೋಗ ಪೀಡತ ಪ್ರದೇಶದ ಮಾದರಿಯಂತಹ ಯಾವುದೇ ವ್ಯತ್ಯಾಸಗಳು ಕಂಡುಬಂದಿಲ್ಲ.
ಅಡಿಕೆ ಹಳದಿ ಎಲೆರೋಗ ನಿಯಂತ್ರಣ ಹಾಗೂ ನಿವಾರಣೆಯ ದೃಷ್ಟಿಯಿಂದ ವಿವಿಧ ಪ್ರಯತ್ನಗಳು ನಡೆಯುತ್ತಲೇ ಇದೆ. ವೈಜ್ಞಾನಿಕ ಅಧ್ಯಯನ , ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿದೆ. ಈ ಕಡೆ ಹಳದಿ ಎಲೆರೋಗದ ಹಾಟ್ ಸ್ಫಾಟ್ ಪ್ರದೇಶದಲ್ಲೂ ಮತ್ತೆ ಮತ್ತೆ ಅಡಿಕೆ ಗಿಡ ನಾಟಿ ಮಾಡುತ್ತಲೇ ಇದ್ದಾರೆ. ಇದೀಗ ಇಂತಹ ಹೊಸ ಪ್ರಯೋಗದ ಮೂಲಕ ಅಡಿಕೆ ಗಿಡಗಳ ಆಯಸ್ಸು ಹೆಚ್ಚಿಸುವ, ಉತ್ತಮ ಫಸಲು ನೀಡುವ ಪ್ರಯೋಗಗಳು ಅಡಿಕೆ ಬೆಳೆಗಾರರಿಗೆ ಭರವಸೆ ಮೂಡಿಸುತ್ತಿದೆ.
ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…
ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…