ನಮ್ಮನೆಯ ಈ ಲಾಲಿ ತಂಡ ಇದೆಯಲ್ಲ……! | ಕೃಷಿಕ ಟಿ ಆರ್‌ ಸುರೇಶ್ಚಂದ್ರ ಬರೆಯುತ್ತಾರೆ… |

July 10, 2022
9:58 PM
ಈಚೆಗೆ ಚಾರ್ಲಿ ಹೆಸರು ಭಾರೀ ಪೇಮಸ್ಸಾಯಿತು. ಒಂದು ನಾಯಿಯ ಕತೆ ಅನೇಕರಿಗೆ ಇಷ್ಟವಾಯಿತು. ಆದರೆ ಪ್ರತೀ ಮನೆಯಲ್ಲೂ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಪ್ರತೀ ಮನೆಯಲ್ಲೂ ನಾಯಿಯದ್ದು ಒಂದೊಂದು ಕತೆ. ಕೃಷಿಕರಿಗಂತೂ ನಾಯಿ ಬೇಕೇ ಬೇಕು. ಹಾಗೆ ನಾಯಿಯ ಜೊತೆಗಿನ ಕೃಷಿಕ ಒಡನಾಟದ ಬಗ್ಗೆ ಕೃಷಿಕ ಟಿ ಆರ್‌ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ…

ಹನ್ನೆರಡು ವರ್ಷದ ಪುಟ್ಟ ನಾಯಿ… ನಮ್ಮನೆ ನಾಯಿ… ಹೆಸರು ಮಂಜು…ಜೊತೆಗಾತಿಯೊಬ್ಬಳಿದ್ದಳು ಸಂಜು…ಹತ್ತು ವರ್ಷಕ್ಕೆ ಮಂಜುವನ್ನು ಬಿಟ್ಟು ಹೊಗೇ ಬಿಟ್ಲ್ಳು. ಇವಕ್ಕೆಲ್ಲ ಹಿರಿಯಕ್ಕ ಪುಟ್ಟ ಪ್ರೀತಿಯ ಲಾಲಿ…..

ಲಾಲಿಯ ನೇತೃತ್ವದ ಸಂಜು ಮಂಜುಗಳು ನಮ್ಮನೆ ಕಾವಲು ಪಡೆಯಾಗಿತ್ತು. ಲಾಲಿ ಕೂಡಾ,ತನ್ನ ಹದಿಮೂರನೇ ವರ್ಷಕ್ಕೆ ಬಿಟ್ಟೋಯ್ತು. ಈಗ ಮಂಜು ಏಕಾಂಗಿ… ಅವನಿಗೆ ಜೊತೆಯಾಗಿ ಬಂದವ ರಾಣ. ಅದ್ರೆ ರಾಣ ದಢೂತಿ ಜರ್ಮನ್ ಶೆಫರ್ಡ್, ಆದರೆ ಈ ಲಾಲಿ ತಂಡದ ಮಂಜು ಪುಟ್ಟ ಶರೀರದ ಡೇಶ್ ಹೌಂಡ್. ಮಂಜನಿಗೂ ರಾಣನಿಗೂ ಸೇರಿ ಬರೋದೇ ಇಲ್ಲ….ರಾಣ ಇವನನ್ನ ಆಟಕ್ಕೆ ಕರೆದರೆ ಗುರ್ರೆನ್ನುತ್ತಾನೆ ಮಂಜ….ಕಾರಣ ಮಂಜ ಹನ್ನೆರಡು ವರ್ಷದ ಅಜ್ಜ, ರಾಣ ಎಂಟು ತಿಂಗಳ ಪೋರ. ಮಂಜನ ಗುರ್ರೆಂಬ ಗದರುವಿಕೆಗೇ ರಾಣ ದೂರ ದೂರ…ಮಂಜನನ್ನು ಮುಟ್ಟವ ಸಾಹಸ ಇಂದಿನ ತನಕವೂ ಈ ರಾಣ ಮಾಡಿಲ್ಲ. ಕಾರಣ ಮಂಜನ ಹಿರಿತನ.

ಈ ಮಂಜ ಇದ್ದಾನಲ್ಲಾ….ಈಗ್ಗೆ ,ಏಕಾಂಗಿಯಾದ ನಂತರ ನಮ್ಮೊಂದಿಗೆ ಹೆಚ್ಚೆಚ್ಚು ಒಡನಾಟ. ಮನೆಯ ಮೆಟ್ಟುಕಲ್ಲೇ ತನ್ನ ಸಿಂಹಾಸನ, ಪರಿವೀಕ್ಷಣಾ ಗೋಪುರ. ಈ ಲಾಲಿ ತಂಡ ಡೇಶ್ಹೋಂಡಗಳು ತುಂಬಾ ಸೂಕ್ಷ್ಮ ಮತಿಗಳು. ತನ್ನ ಗೂಡಿನಿಂದ ನೂರು ಮೀಟರ್ ದೂರದಲ್ಲಿರುವ ಗೇಟ್ ತೆಗೆದ ಶಬ್ದ ದಲ್ಲೇ ಮನೆಯವರೋ,ಅತಿಥಿಗಳೋ ಎಂದು ಗುರುತಿಸಿ,ಅದಕ್ಕೆ ತಕ್ಕಂತೆ ಬೊಗಳುವ ಸ್ವರ ವ್ಯತ್ಯಾಸದಲ್ಲಿ ಸಂಜ್ಞೆ ಕೊಡಬಲ್ಲವು. ನೊಡಲು ಚಿಕ್ಕದಾದರೂ ಕೀರ್ತಿ, ಶೌರ್ಯ ದೊಡ್ಡದು.ಹಿಡಿದ ಕೆಲಸ ಮುಗಿಸಿಯೇ ಬರುವ ಲಿಲಿಪುಟ್ ಗಳು. ಚಿಕ್ಕವೆಂದು ಕಡೆಗಣಿಸಲು ಅಸಾದ್ಯವಾದವು. ನಾವೊಂದು ಸುತ್ತು ತಿರುಗುವಾಗ ಅವು ಎಂಟು ಸುತ್ತು ತಿರುಗಿರುತ್ತವೆ.ಅಷ್ಟು ಚಾಣಾಕ್ಷಮತಿಗಳು ಈ ಪುಟ್ಟ ಕಾವಲುಪಡೆ.

ಹೌದು..
ನಾವು ತೋಟಕ್ಕೋ, ಗುಡ್ಡಕ್ಕೋ ಹೋದಲ್ಲೆಲ್ಲಾ ನಮ್ಮನ್ನು ಅನುಸರಿಸಿ, ನಾವು ನೋಡಿದ್ದನ್ನು ನೊಡುತ್ತಾ, ನಮ್ಮ ಹಿಂದೆಯೇ ಅನುಸರಿಸುತ್ತಾ ಬರುವುದು ಇವನ ಕಾಯಕ.ಹಲಸಿನಣ್ಣು ಇವನ ಪ್ರಿಯ ಹಣ್ಣು. ತೊಟದೊಳಗಿನ ಎಲ್ಲಾ ಮರಗಳ ಹಣ್ಣಿನ ಪರಿಚಯ ಇವನಿಗಿದೆ. ಗದರಿದರೆ ಒಮ್ಮೆ ಹಿಂದೆ ಬಂದಂತೆ ಮಾಡಿ ಪುನಃ ಹಲಸಿನ ಬುಡಕ್ಕೆ ಓಡಿಹೋಗಿ ತಿಂದು ಬಾರದಿದ್ದರೆ ಈತನಿಗೆ ಸಮಾದಾನವೇ ಆಗದು.

ಹಾಂ..
ಇಂದೂ ಎಂದಿನಂತೆಯೇ ನನ್ನ ಹಿಂದೆಯೇ ತೋಟಕ್ಕೆ ಅನುಸರಿಸಿದಾತ…ಪುನಃ ಹಿಂದಕ್ಕೆ ಬರಲು ತೊರೆಯ ದಾಟಲು ಹಾಕಿದ ಪಾಲದಲ್ಲಿ ಅಳುಕಿದ. ಯಾವಾಗಲೂ ದಾಟುತ್ತಿದ್ದವ ಕೆಳಗಿನ ನೀರ ಪ್ರವಾಹಕ್ಕೆ ಹೆದರಿದ,..ಆದರೂ….ನನ್ನ ಕರೆಗೆ ಒಗೊಟ್ಟ….ಪಾಪ…ಒಡೋಡಿ ಬಂದ..ಈ ದಡ ಸೇರಿದ ಸಂತಸದಲ್ಲಿ ಪಾಪ…ಕೆಳಕ್ಕೆ ಬಿದ್ದೇ ಬಿಟ್ಟ….ನೀರಿಗಲ್ಲ..ತೊರೆಯ ಬದಿಯ ಬದುವಿಗೆ….ಕುಂಯಿಗೊಟ್ಟು ಅಲ್ಲೇ ಮೇಲಿದ್ದ ನನ್ನ ಕರೆದ…ಅಸಹಾಯಕನಾಗಿದ್ದ….ಪಾಪ…ಕೆಳಗಿಳಿದ ನಾನು ಅವನನ್ನೆತ್ತಿ ಮೇಲಕ್ಕಿಟ್ಟೆ….ಮುಂದೆ ಹೋಗಲಿಲ್ಲ…ಹೋಗೆಂದರೂ ಮೇಲೆ ನಿಂತು ನನ್ನನ್ನೇ ನೋಡಿ ಕುಂಯಿಂ ಕುಯಿಂ ಎಂದ….ಯಾಕೆ ಗೊತ್ತಾ…ನಾನು ಕೆಳಗಿದ್ದೆನಲ್ಲಾ….ಪಾಪ…ನಾನು ಮೇಲೆ ಬಂದಾಗ ಈ ಮಂಜು ಖುಷಿ ಖುಷಿಯಿಂದ ಬಾಲ ಅಲ್ಲಾಡಿಸುತ್ತಾ ಓಡೋಡಿ ಮುಂದೆ ಹೋದ….ಪ್ರಾಮಾಣಿಕ,ನಿಷ್ಕಾಮ ಪ್ರೀತಿ ಅಂದರೆ ಇದೇ ಅಲ್ಲವೇ…
ಪ್ರೀತಿ ತಪ್ಪೇನಲ್ಲ
ಆತುಮವು ಮಣ್ಣಲ್ಲ
ಯಾತನೆಯರಿಯದನೆ
ಸುಖವನರಿತವನಿಲ್ಲ
ಆತುರದಿ ನೋಯ್ಪೆದೆಯ
ಬೆಂಕಿಸೋಕದ ನರನು
ಪೂತಾತ್ಮನೆಂತಹನೋ
ಮರುಳಮುನಿಯಾ.
ಬರಹ :
ಟಿ ಆರ್‌ ಸುರೇಶ್ಚಂದ್ರ, ಕಲ್ಮಡ್ಕ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ
August 26, 2026
5:00 PM
by: ಮಹೇಶ್ ಪುಚ್ಚಪ್ಪಾಡಿ
ಕೆಲವು ಸಂಬಂಧಗಳನ್ನು ಉಳಿಸುವುದು ಮೌನವೇ..
August 21, 2026
6:28 AM
by: ಮಹೇಶ್ ಪುಚ್ಚಪ್ಪಾಡಿ
ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?
August 13, 2026
6:50 AM
by: ಮಹೇಶ್ ಪುಚ್ಚಪ್ಪಾಡಿ
ಆಕೆ ಏಕೆ ತನ್ನ ನೋವನ್ನು ಯಾರಿಗೂ ಹೇಳುವುದಿಲ್ಲ..?
August 3, 2026
3:37 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror