ಅಡಿಕೆ ಕೃಷಿಕರಿಗೆ ಆತ್ಮಾವಲೋಕನ ಬೇಡವೇ? | ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಏಕೆ ?

October 17, 2022
6:27 PM
ಕೃಷಿಕ ಎ ಪಿ ಸದಾಶಿವ ಅವರು ಅಡಿಕೆಯ ಬಗ್ಗೆ ಕಳೆದ ಕೆಲವು ಸಮಯಗಳಿಂದ ಕಂಡುಬರುತ್ತಿದ್ದ ರೋಗಗಳು ಹಾಗೂ ನಿಯಂತ್ರಣಗಳು ಮತ್ತು ರೋಗನಿರೋಧಕ ಶಕ್ತಿಯ ಬಗ್ಗೆ ಗಮನಿಸಿ ಅಡಿಕೆ ಬೆಳೆಗಾರರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಇದು ಎಂದು ಹೇಳಿದ್ದಾರೆ. ಅವರು ಈ ಬಗ್ಗೆ ಬರೆದ ಬರಹ ಇಲ್ಲಿದೆ…

ಕೆಲ ದಿನಗಳ ಹಿಂದೆ ಪ್ರಬಂದ ಅಂಬುತೀರ್ಥ ಅವರು ಬರೆದ ವಿಶ್ಲೇಷಣಾತ್ಮಕ ಲೇಖನ ಒಂದನ್ನು ಓದಿದೆ. ಅಡಿಕೆ ಮರದ ಎಲೆ ಚುಕ್ಕಿ ರೋಗದಿಂದ ಮಲೆನಾಡಿನ ರೈತರ ಸಂಕಷ್ಟ, ನೋವು, ದುಃಖ, ದುಮ್ಮಾನ ಎಲ್ಲವನ್ನು ವಿವರಿಸಿದ್ದರು. ಪರಿಹಾರಕ್ಕೆ ಗಮನಕೊಟ್ಟು ಪರಿಹಾರ ಕಾಣದ ವಿಷಯವನ್ನು ಹೇಳಿದ್ದರು. ಇತ್ತೀಚೆಗೆ ಕರಾವಳಿ ಭಾಗದಲ್ಲೂ ಇದು ಹಬ್ಬುತ್ತಿದೆ ಎಂಬುದನ್ನು ಬರೆದಿದ್ದರು. ಅವರು ಹೇಳಿದಂತೆ ಕರಾವಳಿಯ ರೈತರು ಯುದ್ಧೋಪಾದಿಯಲ್ಲಿ ಪರಿಹಾರದ ಕಡೆಗೆ ನಾನಾ ಪ್ರಯೋಗಗಳತ್ತ ನಿರತರಾದುದನ್ನು ಓದುತ್ತಲೂ ಇದ್ದೇನೆ. ಕರಾವಳಿ ಭಾಗದ ಪುತ್ತೂರಿನ ರೈತನಾಗಿ, ಆಧುನಿಕ ಕೃಷಿ ಕ್ರಮವನ್ನು ಕೆಲವು ವರ್ಷ ಅನುಭವಿಸಿ ಪಾರಂಪರಿಕ ಜ್ಞಾನವೇ ಶ್ರೇಷ್ಠ ಎಂಬ ಅನುಭವದ ಒಂದೆರಡು ಮಾತುಗಳನ್ನು ಬರೆಯಲಿಚ್ಚಿಸುತ್ತೇನೆ.

Advertisement
Advertisement

ಪ್ರಕೃತಿಯಲ್ಲಿ ಸಮಸ್ತ ಜೀವಕೋಟಿಗಳಿಗೂ ಸೃಷ್ಟಿ ಸ್ಥಿತಿ ಲಯ ಎಂಬುದು ಸರ್ವ ವಿಧಿತ. ಅಡಿಕೆಯನ್ನು ಸೃಷ್ಟಿ ಮಾಡಿದ ಪ್ರಕೃತಿ ಅಗತ್ಯ ಬಂದರೆ ಲಯಕ್ಕಾಗಿ ಅದರೊಂದಿಗೆ ಸೃಷ್ಟಿ ಮಾಡಿದ ಅನೇಕ ಕಾಯಿಲೆಗಳಲ್ಲಿ ಹಳದಿ ರೋಗ ಎಲೆಚುಕ್ಕಿ ರೋಗ ಪೆಂತಿ ಇತ್ಯಾದಿಗಳ ಪಟ್ಟಿ ಮುಂದುವರಿಯುತ್ತದೆ . ಎಲ್ಲಾ ಕೀಟಾಣುಗಳು, ರೋಗಾಣುಗಳು ತಮ್ಮ ತಮ್ಮ ಅವಕಾಶಕ್ಕಾಗಿ ಕಾಯುತ್ತಲೇ ಇರುತ್ತವೆ. ಗಿಡಗಳಿಗೆ ನಿರೋಧಕ ಶಕ್ತಿ ಇದ್ದಾಗ, ಸ್ವಯಂ ನಿಯಂತ್ರಣ ವ್ಯವಸ್ಥೆ ಇದ್ದಾಗ ಲಯಕಾರಕಗಳಿಗೆ ಬಗ್ಗದೇ ಇರುತ್ತದೆ. ಒಂದು ಅಡಿಕೆ ಮರದಲ್ಲಿ ವರ್ಷವೊಂದರ ಏಳರಿಂದ ಎಂಟು ಸೋಗೆ ಉದುರುತ್ತದೆ ಎಂದಾದಲ್ಲಿ ಚುಕ್ಕಿ ರೋಗದ ಗುರುತುಗಳು ಕೆಳಗಿನ ಸೋಗೆಗಳಲ್ಲಿ ಅನೇಕ ಮರಗಳಲ್ಲಿ ಕಂಡುಬರುತ್ತದೆ. ಇದನ್ನು ಪ್ರಾಯ ಸಂದಂತೆ ಮನುಷ್ಯನ ಚರ್ಮ ಸುಕ್ಕುಗಟ್ಟಿದಂತೆ ಎನ್ನಬಹುದು. ಈ ಸುಕ್ಕುಗಟ್ಟುವಿಕೆ ಮೇಲ್ಮುಖವಾಗಿ ಚಲಿಸಿದರೆ, ( ಹೊಸ ಸೋಗೆಗಳಿಗೆ ಹಬ್ಬಿದರೆ) ಬಾಲ ವೃದ್ಧಾಪ್ಯ ಅಂತ ಕರೆಸಿಕೊಳ್ಳಬಹುದು. ಮರವೊಂದಕ್ಕೆ ರೋಗನಿರೋಧಕ ಶಕ್ತಿ ಇಲ್ಲದಾಗ ಇದು ಸಾಧ್ಯವಾಗಿ ಅಕಾಲ ವೃದ್ಧಾಪ್ಯ ಬರಬಹುದು. ಇದಕ್ಕೆ ಕಾರಣವೇ ನಮ್ಮ ಆಧುನಿಕ ಕೃಷಿ ಪದ್ಧತಿ ಎಂದು ನನ್ನ ಅನಿಸಿಕೆ.

Advertisement

ಮಾಂಸಾಹಾರವನ್ನು ಸ್ವೀಕರಿಸದ ದನಗಳಿಗೆ ಅಧಿಕ ಮಾಂಸದ ಮತ್ತು ಹಾಲಿನ ಉತ್ಪತ್ತಿಗಾಗಿ, ಮಾಂಸವನ್ನು ತಿನ್ನಿಸಿದ್ದು ಆ ಮೂಲಕ ಲಕ್ಷ ಗಟ್ಟಲೆ ಸಂಖ್ಯೆಯಲ್ಲಿ ದನಗಳಿಗೆ ಹುಚ್ಚು ರೋಗ ಕಂಡುಬಂದದ್ದು ಮತ್ತು ಅವುಗಳ ಮಾರಣಹೋಮ ನಡೆದದ್ದು ವೈಜ್ಞಾನಿಕ ಜಗತ್ತಿನ ಇತಿಹಾಸದ ಕಪ್ಪು ಚುಕ್ಕೆ. ಅದೇ ರೀತಿ ಯಾವ ಕಾರಣಕ್ಕೂ ರಾಸಾಯನಿಕ ವಸ್ತುಗಳನ್ನು ಸ್ವೀಕರಿಸದ ಭೂಮಿಗೆ ಮತ್ತು ಸಸ್ಯಗಳಿಗೆ ಅಧಿಕ ಇಳುವರಿಗಾಗಿ ರಾಸಾಯನಿಕಗಳನ್ನು ಸುರಿದರೆ, ಸಹಜವಾಗಿಯೇ ತನ್ನ ಶಕ್ತಿಯನ್ನು ಕಳೆದುಕೊಂಡು ಅಕಾಲ ವೃದ್ಯಾಪ್ಯದೆಡೆಗೆ ನಡೆಯಲಾರವೇ? ಭತ್ತದ ಕೃಷಿಯಲ್ಲಿ ಇದನ್ನು ನಾನು ಅನುಭವಿಸಿದ್ದೇನೆ. ಬಳ್ಳಾರಿ ಸುತ್ತು ಮುತ್ತು ರಾಸಾಯನಿಕ ಯುಕ್ತ ನೀರು ಕುಡಿದುದರಿಂದಾಗಿ ಗ್ರಾಮವಿಡೀ ಅಕಾಲ ವೃದ್ಧಾಪ್ಯಕ್ಕೆ ಈಡಾದುದು ಎಲ್ಲಿಯೋ ಓದಿದ ನೆನಪು. ರೋಗರಕ್ಕಸ ನಿಯಂತ್ರಣ ತಪ್ಪಿದಾಗ ಎಷ್ಟೇ ನಿರೋಧಕ ಶಕ್ತಿಯುಳ್ಳ ಮರಗಳಿಗೂ ತೊಂದರೆ ಕೊಡಬಹುದು. ಉದಾಹರಣೆಗೆ ಕೊರೊನಾ ರೋಗಪೀಡಿತರನ್ನು ಬಹುವಾಗಿ ಕಾಡಿದರೂ ರೋಗ ರಹಿತರನ್ನೂ ಕಾಡದೇ ಬಿಡಲಿಲ್ಲ.

ಅಡಿಕೆಗೋ ಸಹಸ್ರಮಾನದ ಇತಿಹಾಸ. ದನದ ಗೊಬ್ಬರವಲ್ಲದೆ ಬೇರೆ ಗೊಬ್ಬರ ಸ್ವೀಕರಿಸಿ ಗೊತ್ತಿಲ್ಲ. ಹಾಗೆ ಸ್ವೀಕರಿಸುತ್ತಿರಬೇಕಾದರೆ ಈಗಿನಂತೆ,ಮಹಾಳಿಯ ಹೊರತಾದ ವೈವಿಧ್ಯಮಯವಾದ ರೋಗ,ಕೀಟ ಹಾವಳಿಗಳ ಬಗ್ಗೆಯೂ ಗೊತ್ತಿಲ್ಲ. ಹಾಗಿರುವಾಗ ವೈಜ್ಞಾನಿಕ ಕ್ರಿಷಿ ಪದ್ಧತಿಯೆಡೆಗೆ ಹೋದುದರ ಪರಿಣಾಮವಾಗಿ ಹೊಸ ಹೊಸ ರೋಗಗಳನ್ನು ಸೃಷ್ಟಿ ಮಾಡಿದಂತೆ ಅಲ್ಲವೇ?( ಸಹಜ ಆಹಾರವನ್ನು ನೀಡದೆ ಅಸಹಜ ಆಹಾರವನ್ನು ನೀಡಿದ ಪರಿಣಾಮ )

Advertisement

ವಿಜ್ಞಾನಿಗಳ ತಂಡದ ವಿಡಿಯೋ ಸಂದೇಶದ ತುಣುಕನ್ನೊಂದು ಕೇಳುತ್ತಿದ್ದೆ. ರೋಗನಿರೋಧಕ ಶಕ್ತಿಯ ಕುಂಠಿತವೇ ಎಲೆ ಚುಕ್ಕಿ ರೋಗದ ಹಬ್ಬುವಿಕೆಗೆ ಕಾರಣ ಎಂಬ ಸ್ಪಷ್ಟ ಸಂದೇಶವನ್ನು ಹೇಳುತ್ತಿದ್ದರು. ಪರಿಹಾರವಾಗಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆಯೂ ಹೇಳುತ್ತಿದ್ದರು. ಆದರೆ ಪೋಷಕಾಂಶಗಳು ಸಸ್ಯಮೂಲ ಅಥವಾ ಪ್ರಾಣಿಮೂಲಗಳಿಂದಲೇ ದೊರೆಯಬೇಕು, ರಾಸಾಯನಿಕ ಮೂಲಗಳಿಂದ ಅಲ್ಲ ಎಂಬುದನ್ನು ವಿವರಿಸುವಲ್ಲಿ ಸೋತಂತೆ ಕಂಡಿತು.

ಈ ಕಾರಣದಿಂದ ಕೃಷಿಕನ ಆತ್ಮಾವಲೋಕನಕ್ಕೆ ಕಾಲ ಕೂಡಿಬಂದಿದೆ. ನಿಯಂತ್ರಣ ಮೀರಿ, ಹಳದಿ ರೋಗ, ಪೆಂತಿ ಬಾಧೆ, ಸಿಂಗಾರ ಒಣಗುರೋಗ, ಎಲೆ ಚುಕ್ಕಿ ರೋಗ ಹಬ್ಬುತ್ತಿದೆ. ಒಣ ಸಿಂಗಾರ ತೆಗೆಯಿರಿ, ಚುಕ್ಕಿ ರೋಗದ ಸೋಗೆ ಕಡಿಯಿರಿ, ಹಳದಿ ಬಂದರೆ ಗಿಡವನ್ನು ಕಿತ್ತು ಬಿಸಾಡಿರಿ, ಪೆಂತಿಗೊಂದು ಸ್ಪ್ರೇ, ಚುಕ್ಕಿಕೊಂದು ಸ್ಪ್ರೇ, ಸಿಂಗಾರ ಒಣಗಿಗೆ ಮತ್ತೊಂದು ಸ್ಪ್ರೇ, ಮಹಾಳಿಗೆ ಮಾಮೂಲು ಇದ್ದದ್ದೇ ಆದಲ್ಲಿ ಅಡಿಕೆಗಾಗಿ ನಾವೋ? ನಮಗಾಗಿ ಅಡಿಕೆಯೋ? ಬದುಕಿಗಾಗಿ ಕೃಷಿಯೋ? ಕೃಷಿಗಾಗಿ ಬದುಕೋ?ಎಂಬ ಭಾವ ಬಾರದೇ ಇದ್ದೀತೆ? ಹಾಗಾದರೆ ನಮ್ಮ ಪ್ರಕೃತಿ,ನಮ್ಮ ಅಡಿಕೆ ಮರಗಳು ಅಷ್ಟು ದುರ್ಭಲವೇ ? ಇವುಗಳನ್ನೆಲ್ಲ ಬಳಸಿದರೆ ಇನ್ನೊಂದು ಹೊಸ ರಾಕ್ಷಸನ ಸೃಷ್ಟಿಗೆ ಶ್ರೀಕಾರ ಆಗಲಾರದೆ ? ಈ ದಿಕ್ಕಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳದೆ ಇದ್ದರೆ ಅಡಿಕೆ ಕೃಷಿ ನಾಶನಿಶ್ಚಿತ. ಪರಿಹಾರ ಕಾಣಬೇಕಾದದ್ದು ಮೂಲಕ್ಕೆ ಹೊರತು ರೋಗ ಲಕ್ಷಣಗಳಿಗಲ್ಲ. ಸಾಂಕುನಾಯೆ ಸೇಂಕುವೆ ಎಂಬುದು ತುಳು ಗಾದೆ.ಅತಿಯಾಗಿ ಕೊಂಡಾಟದಲ್ಲಿ ತಿನ್ನಿಸಿ ವ್ಯಾಯಾಮರಹಿತ ಜೀವನವನ್ನು ಕಲಿಸಿದ ಮಕ್ಕಳ ಬಗ್ಗೆ ಈ ಮಾತು ಪ್ರಚಲಿತದಲ್ಲಿದೆ. ಇದು ಅಡಿಕೆಗೂ ಅನ್ವಯ.ಹತ್ತಿಪ್ಪತ್ತು ವರ್ಷದ ಪ್ರಯೋಗಾಲಯದ ವಿಜ್ಞಾನಕ್ಕಿಂತ, ನೂರಾರು ವರ್ಷದ ಅನುಭವದ ವಿಜ್ಞಾನವೇ ಶ್ರೇಷ್ಠ.

Advertisement

ಮಾಯೆ ಒಮ್ಮೊಮ್ಮೆ ತೋರುವಳು ಮಿಗಿಲಕ್ಕರೆಯ,
ಮಾಯಿಪಳು ಗಾಯಗಳನು ಈವಳು ಇಷ್ಟಗಳ,
ಮೈಯ ನೀಮ್ ಮರೆಯೆ ನೂಕುವಳಾಗ ಪಾತಳಕೆ,
ಪ್ರೇಯಪೂತನಿಯವಳು ಮಂಕುತಿಮ್ಮ.

ಅಧಿಕ ಇಳುವರಿಎಂಬ ಮಾಯ ಪೂತನಿಯ ಹಿಂದೆ ಹೋದಲ್ಲಿ ಮೈ ಮರೆಯುವಂತೆ ಮಾಡಿಯಾಳು. ಮೈ ಮರೆತಾಗ ಪಾತಾಳಕ್ಕೆ ಇಳಿಯುವುದಂತೂ ನಿಶ್ಚಿತ.

Advertisement
ಬರಹ:
ಎ. ಪಿ. ಸದಾಶಿವ ಮರಿಕೆ.
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

ಇದನ್ನೂ ಓದಿ

ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
ಚುನಾವಣೆ ಹಾಗೂ “ನೀತಿ” ಸಂಹಿತೆ ಮತ್ತು ಜಗಳ…! |
April 18, 2024
3:00 PM
by: ಮಹೇಶ್ ಪುಚ್ಚಪ್ಪಾಡಿ
ದೇವರು ಧರ್ಮ ಭಕ್ತಿ ಒಂದು ಒಣ ಆಡಂಬರವಲ್ಲ, ಅದು ನಮ್ಮ ಆತ್ಮಸಾಕ್ಷಿಯ ನಡವಳಿಕೆ | ರಾಮನವಮಿ ಪ್ರಯುಕ್ತ ಬರೆಯುತ್ತಾರೆ ವಿವೇಕಾನಂದ. ಎಚ್. ಕೆ.
April 17, 2024
4:37 PM
by: ವಿವೇಕಾನಂದ ಎಚ್‌ ಕೆ
ಅಡಿಕೆ ತೋಟಕ್ಕೆ ಉದಿ ಏಕೆ ಹಾಕಬೇಕು…?
April 15, 2024
7:55 PM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror