#GrapeGrowers| ಏಷ್ಯಾದ ಉತೃಷ್ಟ ಒಣ ದ್ರಾಕ್ಷಿಗೆ ಬೆಲೆ ಕುಸಿತ | ಶಾಲಾ ಬಿಸಿಯೂಟದಲ್ಲಿ ಒಣದ್ರಾಕ್ಷಿ ವಿತರಿಸಲು ರೈತರ ಒತ್ತಾಯ |

June 23, 2023
1:15 PM

ಒಣ ದ್ರಾಕ್ಷಿ, ಯಾರಿಗೆ ಇಷ್ಟ ಇಲ್ಲ ಹೇಳಿ..? ಪಾಯಸ, ಕೇಸರಿ ಬಾತ್ ತಿನ್ನುವಾಗ ಅಲ್ಲಲ್ಲಿ ದ್ರಾಕ್ಷಿ ಬಾಯಿಗೆ ಸಿಕ್ಕಿದ್ರೆ ಅದರ ರುಚಿನೇ ಬೇರೆ. ಏಷ್ಯಾ ಖಂಡದಲ್ಲೇ  ಉತೃಷ್ಟ ಗುಣಮಟ್ಟದ ದ್ರಾಕ್ಷಿಯನ್ನು ವಿಜಯಪುರ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ವಿಜಯಪುರ ಜಿಲ್ಲೆ ದ್ರಾಕ್ಷಿಯ ತವರೂರು. ಇಲ್ಲಿ ತಯಾರಾಗೋ ಒಣದ್ರಾಕ್ಷಿ ವಿದೇಶಗಳಿಗೂ ರಫ್ತಾಗುತ್ತದೆ.ಈಚೆಗೆ ದ್ರಾಕ್ಷಿ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ.

ಈ ಬಾರಿ ದ್ರಾಕ್ಷಿ ಬೆಳೆಗಾರರ ಪಾಲಿಗೆ ಸಿಹಿಯಾಗಬೇಕಿದ್ದ ದ್ರಾಕ್ಷಿ ಕಹಿಯಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿರೋ ಬೆಳೆಗಾರರಿಗೆ ಅದಕ್ಕೆ ತಕ್ಕ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಉತ್ತಮ ಫಸಲು ಬಂದರೂ, ಒಣ ದ್ರಾಕ್ಷಿ ತಯಾರಿಸಿ ನಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆ ಕಾರಣ ವರ್ಷದಿಂದ ವರ್ಷಕ್ಕೆ ಹೆಚ್ಚು ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಕಳೆದ ಮೂರು ವರ್ಷಗಳ ಪ್ರಮಾಣವನ್ನು ನೋಡಿದರೆ,  ಪ್ರತಿ ವರ್ಷ 2 ರಿಂದ 3 ಸಾವಿರ ಹೆಕ್ಟೇರ್ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆ ಜಿಲ್ಲೆಯಲ್ಲಿ ಹೆಚ್ಚಳವಾಗಿದೆ. 2020 ರಲ್ಲಿ 17000 ಹೆಕ್ಟೇರ್, 2021 ರಲ್ಲಿ 21000 ಹೆಕ್ಟೇರ್ 2022 ರಲ್ಲಿ 25000 ಕ್ಕೂ ಆಧಿಕ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗಿದೆ.

ರಾಜ್ಯದಲ್ಲಿ 36.371 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಈ ಪೈಕಿ ವಿಜಯಪುರ ಜಿಲ್ಲೆಯಲ್ಲಿಯೇ 25.575 ಹೆಕ್ಟರ್ ಪ್ರದೇಶದಲ್ಲಿಯೇ ದ್ರಾಕ್ಷಿ ಬೆಳೆಯಲಾಗುತ್ತಿದೆ. ರಾಜ್ಯದ ಒಟ್ಟು ದ್ರಾಕ್ಷಿಯಲ್ಲಿ ಶೇಕಡಾ 70.32ರಷ್ಟು ದ್ರಾಕ್ಷಿ ವಿಜಯಪುರದಲ್ಲಿಯೇ ಬೆಳೆಯಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ದ್ರಾಕ್ಷಿ ಬೆಳೆಗಾರರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂಬುದು ಖುಷಿಯ ವಿಚಾರ.  ಹಸಿ ದ್ರಾಕ್ಷಿಯನ್ನು ಮಾರಾಟಕ್ಕೆ ಮುಂದಾಗಿದ್ದವರಿಗೆ ಸೈಕ್ಲೋನ್ ಶಾಪವಾಗಿ ಕಾಡಿ ಹಸಿ ದ್ರಾಕ್ಷಿ ಬೆಲೆಯನ್ನು ಕುಗ್ಗಿಸಿತ್ತು. 20 ರಿಂದ 30 ರೂಪಾಯಿ  ಪ್ರತಿ ಕೆಜಿಗೆ ಕಡಿಮೆ ದರಕ್ಕೆ ಹಸಿ ದ್ರಾಕ್ಷಿ ಮಾರಾಟ ಮಾಡಲು ಒಪ್ಪದೇ ಅದನ್ನು ಒಣದ್ರಾಕ್ಷಿ ಮಾಡಲು ರೈತರು ಮುಂದಾದರು.

ಆದರೆ ಒಣ ದ್ರಾಕ್ಷಿ ಮಾಡುವಾಗಲೂ 25 ದಿನಗಳ ಕಾಲ ಹಸಿ ದ್ರಾಕ್ಷಿಯನ್ನು ಒಣ ದ್ರಾಕ್ಷಿ ಮಾಡುವ ಪ್ರಕ್ರಿಯೆಯಲ್ಲೂ ಬೆಳೆಗಾರರು ನಷ್ಟವನ್ನು ಅನುಭವಿಸಿದರು. ಹಾಗೂ ಹೀಗೂ ಮಾಡಿ ಒಣದ್ರಾಕ್ಷಿ ಮಾಡಿ ಮಾರಾಟ ಮಾಡಲು ಹೋದರೆ ಮಾರುಕಟ್ಟೆಯಲ್ಲಿ ಒಣದ್ರಾಕ್ಷಿಗೆ ಬೆಲೆಯೇ ಇಲ್ಲವಾಗಿದೆ.

ಹಸಿ ದ್ರಾಕ್ಷಿಯನ್ನು ಒಣದ್ರಾಕ್ಷಿಯನ್ನಾಗಿ ಮಾಡಿದರೆ ಅದನ್ನು ಕೋಲ್ಡ್ ಸ್ಟೋರೇಜ್ ನಲ್ಲೇ ಇಡಬೇಕು. 8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇರಿಸಬೇಕು. ಜಿಲ್ಲೆಯಲ್ಲಿ ಬಹುತೇಕ ಜನ ದ್ರಾಕ್ಷಿ ಬೆಳೆಗಾರರ ಸ್ವಂತ ಕೋಲ್ಡ್ ಸ್ಟೋರೇಜ್ ಇಲ್ಲ. ಸ್ವಂತ ಕೋಲ್ಡ್ ಸ್ಟೋರೇಜ್ ಹೊಂದುವ ಶಕ್ತಿಯೂ ರೈತರಿಗಿಲ್ಲ. ಸಂಘ ಸಂಸ್ಥೆಗಳ ಹಾಗೂ ಖಾಸಗಿ ವ್ಯಕ್ತಿಗಳ ಕೋಲ್ಡ್ ಸ್ಟೋರೇಜ್ ಗಳಲ್ಲಿ ಒಣ ದ್ರಾಕ್ಷಿಯನ್ನು ಇಡಬೇಕಾಗುತ್ತದೆ.

ಒಂದು ಟನ್ ಒಣ ದ್ರಾಕ್ಷಿಗೆ ಪ್ರತಿ ತಿಂಗಳು 500 ರೂಪಾಯಿ ಶುಲ್ಕವನ್ನು ಭರಿಸಬೇಕು. ಇದು ಒಂದು ರೀತಿಯಲ್ಲಿ ರೈತರಿಗೆ ಹೊರೆಯಾಗುತ್ತದೆ. ಮೊದಲೇ ಒಂದು ಎಕರೆ ದ್ರಾಕ್ಷಿ ಬೆಳೆಯಲು 2 ರಿಂದ 3 ಲಕ್ಷ ರೂಪಾಯಿ ಖರ್ಚು ಮಾಡಿರೋ ರೈತರು ಒಣದ್ರಾಕ್ಷಿ ಇಡಲು ಮತ್ತೇ ಕೋಲ್ಡ್ ಸ್ಟೋರೇಜ್ ಶುಲ್ಕ ಭರಿಸಲು ಹೈರಾಣಾಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ವ್ಯಾಪಾರಸ್ಥರು ಕಡಿಮೆ ದರಕ್ಕೆ ಒಣದ್ರಾಕ್ಷಿ ಮಾರಾಟಕ್ಕೆ ತೆಗೆದುಕೊಳ್ಳುತ್ತಾರೆ.

ಒಣದ್ರಾಕ್ಷಿ ಅಂದರೆ ಸಾಕು ಅದು ಅರಬ್ ದೇಶಗಳ ಹಡಗು ಹತ್ತುತ್ತದೆ. ಬಂಗಾರದ ಬಣ್ಣ ಹಾಗೂ ಹಸಿರು ಏಲಕ್ಕಿ ಬಣ್ಣದ ಜಿಲ್ಲೆಯ ಒಣದ್ರಾಕ್ಷಿಗೆ ಹೆಚ್ಚು ಬೇಡಿಕೆಯಿದೆ. ನಂಬರ್ ಒನ್ ಗುಣಮ್ಟಟದ ಒಣ ದ್ರಾಕ್ಷಿ ಹೆಚ್ಚಾಗಿ ವಿದೇಶಗಳಿಗೆ ರಫ್ತಾಗುತ್ತದೆ. ಈ ವರ್ಷ ಒಣ ದ್ರಾಕ್ಷಿ ಹೆಚ್ಚು ಉತ್ಪಾದನೆಯಾದರೂ ಸಹ ದರವಿಲ್ಲದೇ ರೈತರು ಸಂಕಷ್ಟಕ್ಕೆ ಇಡಾಗಿದ್ದಾರೆ.

ಕಳೆದ ಬಾರಿ 150 ರಿಂದ 180 ರೂಪಾಯಿಗೆ ಒಂದು ಕೆಜಿ ಒಣದ್ರಾಕ್ಷಿ ಮಾರಾಟವಾಗಿತ್ತು. ಆದರೆ ಈ ವರ್ಷ ಕೇವಲ 80 ರಿಂದ 110 ರೂಪಾಯಿ ಕೆಜಿ ಒಣದ್ರಾಕ್ಷಿ ಮಾರಾಟವಾಗುತ್ತಿದೆ. ಈ ದರಕ್ಕೆ ದ್ರಾಕ್ಷಿ ಬೆಳೆಗಾರರು ಒಣದ್ರಾಕ್ಷಿಯನ್ನು ಮಾರಾಟ ಮಾಡಲಾಗದೇ ಅದನ್ನು ಶೀತಲಗೃಹದಲ್ಲಿಯೂ ಇಡಲಾಗದೇ ಅಡಗತ್ತರಿಯಲ್ಲಿ ಸಿಲುಕಿದಂತಾಗಿದ್ದಾರೆ

ಈ ವರ್ಷ ಬೆಲೆ ಕುಸಿತ ಕಂಡಿರುವ ಕಾರಣ ದ್ರಾಕ್ಷಿ ಬೆಳೆಗಾರರ ಸಂಘ ಸಭೆ ನಡೆಸಿದೆ. ಸಭೆಯಲ್ಲಿ ದ್ರಾಕ್ಷಿ ಬೆಳೆಗಾರರು ತಮ್ಮ ಸಂಕಷ್ಟಗಳ ಬಗ್ಗೆ ಚರ್ಚೆ ನಡೆಸಿದ್ದು, ರಾಜ್ಯ ಸರ್ಕಾರ ದ್ರಾಕ್ಷಿ ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಶಾಲೆಯಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಒಣದ್ರಾಕ್ಷಿ ಸೇರಿಸಿ ವಾರಕ್ಕೆ ಒಂದು ದಿನವಾದರೂ ಮಕ್ಕಳಿಗೆ ಕನಿಷ್ಟ 50 ಗ್ರಾಂ ಒಣದ್ರಾಕ್ಷಿ ಸವಿಯಲು ಅವಕಾಶ ನೀಡಬೇಕೆಂದು ಒತ್ತಾಯ ಮಾಡಲಾಗಿದೆ.  ಇದರಿಂದ ಒಣ ದ್ರಾಕ್ಷಿಗೆ ಉತ್ತಮ ದರ ನೀಡಲು ಸಾಧ್ಯವಾಗುತ್ತದೆ. ಈ ಮೂಲಕ ಒಣ ದ್ರಾಕ್ಷಿ ಮಾರಾಟವಾದರೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ದ್ರಾಕ್ಷಿ ಬೆಳೆಗಾರರಿಗೆ ಸಹಾಯವಾಗುತ್ತದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. ದ್ರಾಕ್ಷಿ ಬೆಳೆಗಾರರ ನೆರವಿಗೆ ಸರ್ಕಾರ ಬರಬೇಕೆಂದು ಒತ್ತಾಯಿಸೋ ನಿರ್ಣಯವನ್ನೂ ಸಹ ದ್ರಾಕ್ಷಿ ಬೆಳೆಗಾರರ ಸಭೆಯಲ್ಲಿ ಕೈಗೊಳ್ಳಲಾಯಿತು. ಶೀಘ್ರ ಸಿಎಂ ಭೇಟಿಗೆ ನಿಯೋಗ ತೆರಳಿ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧಾರ‌ ಕೈಗೊಳ್ಳಲಾಗಿದೆ.

(Source :ಅಂತರ್ಜಾಲ ಸಂಗ್ರಹ )

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅವೈಜ್ಞಾನಿಕ ಮಳೆ ವರದಿ ಶೈಕ್ಷಣಿಕ ವಲಯಕ್ಕೆ ತೊಂದರೆ – ಹವಾಮಾನ ಮುನ್ಸೂಚನೆ ಕುರಿತು ಎಸ್.ಎಲ್. ಭೋಜೆಗೌಡ ಕಳವಳ
July 26, 2026
3:04 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 26-07-2026 | ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕು – ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ | ಕರಾವಳಿ–ಮಲೆನಾಡಿನಲ್ಲಿ 10 ದಿನ ಮಳೆಯ ಸಾಧ್ಯತೆ
July 26, 2026
2:49 PM
by: ಸಾಯಿಶೇಖರ್ ಕರಿಕಳ
ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಚೆಸ್ ಚಾಂಪಿಯನ್‌ ಶಿಪ್‌ ಗೆ ಸಜ್ಜು – ಆಗಸ್ಟ್ 2 ರಿಂದ 8 ರವರೆಗೆ ದೇಶದ 600ಕ್ಕೂ ಅಧಿಕ ಸ್ಪರ್ಧಿಗಳು ಭಾಗಿ
July 25, 2026
7:44 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ
July 25, 2026
6:46 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror