ಮಂಗಳೂರಿನಿಂದ ಪುತ್ತೂರಿಗೆ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸುಳ್ಯದ ತಾಲೂಕಿನ ಬೆಳ್ಳಾರೆಯ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರಣ ರಸ್ತೆ ಅವ್ಯವಸ್ಥೆ. ಆ ರಸ್ತೆಯಲ್ಲೂ ಬಸ್ಸು ಚಾಲಕನ ಅಜಾಗರೂಕತೆಯ ಬಸ್ಸು ಚಾಲನೆ. ಈಗ ಆಸ್ಪತ್ರೆಗೆ ದಾಖಲಾದ ಯುವಕನ ಬದುಕಿನ ಪ್ರಶ್ನೆಗೆ ಯಾರು ಹೊಣೆ ? ಇಲಾಖೆಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ತಕ್ಷಣವೇ ಸ್ಪಂದಿಸಬೇಕಿದೆ.
ಸುಳ್ಯ ತಾಲೂಕಿನ ಬೆಳ್ಳಾರೆಯ ವಿಜಯ ಕುಮಾರ್ ಎಂಬವರು ಸುಳ್ಯದಲ್ಲಿ ಮೊಬೈಲ್ ಅಂಗಡಿ ಇರಿಸಿಕೊಂಡಿದ್ದರು. ಕಾರ್ಯನಿಮಿತ್ತ ಮಂಗಳೂರಿಗೆ ಹೋಗಿ ವಾಪಾಸ್ ಬೆಳ್ಳಾರೆಗೆ ಆಗಮಿಸುತ್ತಿದ್ದರು. ವಾಪಾಸ್ ಬರುವಾಗ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಕುಳಿತಿದ್ದರು. ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದಾಗ ಕಲ್ಲಡ್ಕ ಬಳಿ ರಸ್ತೆ ಅವ್ಯವಸ್ಥೆಯ ನಡುವೆಯೂ ಬಸ್ಸು ಚಾಲಕ ವೇಗವಾಗಿ ಚಲಾಯಿಸುತ್ತಿದ್ದ ಕಾರಣ ಹಾಗೂ ರಸ್ತೆ ಗುಂಡಿಯಿಂದ ಕೂಡಿದ್ದರಿಂದ ಬಸ್ಸು ರಸ್ತೆಯ ಗುಂಡಿಗೆ ಬಿದ್ದಿದೆ. ಈ ಸಮಯದಲ್ಲಿ ಪ್ರಯಾಣಿಕ ವಿಜಯ ಕುಮಾರ್ ಅವರು ಬಸ್ಸಿನಲ್ಲಿ ಎತ್ತಿ ಹಾಕಿದ ಅನುಭವಾಗಿ ದೇಹದಲ್ಲಿ ಸೊಂಟದಿಂದ ಕೆಳಭಾಗದ ಸ್ಪರ್ಶ ಕಳೆದುಕೊಂಡಿದೆ. ತಕ್ಷಣವೇ ವಿಜಯ್ ಅವರು ಬೊಬ್ಬೆ ಹೊಡೆದ ಬಳಿಕ ಬಸ್ಸು ನಿಲ್ಲಿಸಿದ ಚಾಲಕ ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಇದೀಗ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರಿಗೆ ಸರ್ಜರಿ ನಡೆಸಬೇಕಾಗಿದೆ. ಬೆನ್ನುಹುರಿ ಹಾಗೂ ಕುತ್ತಿಗೆ ಸಮೀಪದ ಎಲುಬು ಜಖಂಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸರ್ಜರಿ ಬಳಿಕವೂ ಸುಧಾರಣೆ ಬಗ್ಗೆ ಮುಂದೆ ಯೋಚಿಸಬೇಕಾಗಿದೆ.
ಬಿ ಸಿ ರೋಡು-ಕಲ್ಲಡ್ಕ ರಸ್ತೆ ಅವ್ಯವಸ್ಥೆ ಬಗ್ಗೆ ಹಲವು ಬಾರಿ ಪ್ರಯಾಣಿಕರು, ಸಾರ್ವಜನಿಕರು ಹೇಳಿದ್ದರೂ ಇದುವರೆಗೂ ಯಾವುದೇ ಇಲಾಖೆಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಬಸ್ಸು ಚಾಲಕರೂ ಕೂಡಾ ಆ ಹೊಂಡದ ರಸ್ತೆಯಲ್ಲಿ ವೇಗವಾಗಿ ಬಸ್ಸು ಚಾಲನೆ ಮಾಡುತ್ತಾ ಸಾಗುವುದರ ಬಗ್ಗೆಯೂ ಸಾರ್ವಜನಿಕರು ದೂರಿದ್ದಾರೆ. ಆದರೆ ಯಾವ ಅವ್ಯವಸ್ಥೆ ಬಗ್ಗೆಯೂ ಎಲ್ಲಾ ಜನಪ್ರತಿನಿಧಿಗಳು ಮೌನವಹಿಸಿದ್ದರು. ಇದೀಗ ಬೆಳ್ಳಾರೆಯ ವಿಜಯ ಕುಮಾರ್ ಅವರಿಗೆ ಆಗಿರುವ ದೈಹಿಕ ಸಮಸ್ಯೆಗೆ ಯಾರು ಹೊಣೆ ? ಮೊಬೈಲ್ ಅಂಗಡಿ ಹೊಂದಿರುವ ಅವರು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ತಾನು ಮಾಡದ ತಪ್ಪಿಗೆ, ಇಲಾಖೆಯ ಅವ್ಯವಸ್ಥೆಯಿಂದ ಆಗಿರುವ ಈ ದುರಂತದಿಂದ ಅವರ ಮುಂದಿನ ಬದುಕಿನ ಪ್ರಶ್ನೆ ಏನು ? ಇಲಾಖೆಗಳು ಈ ಬಗ್ಗೆ ತಕ್ಷಣವೇ ಸೂಕ್ತ ಕ್ರಮಗೊಳ್ಳಬೇಕು, ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಲಾಖೆಗಳ, ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಜನಸಾಮಾನ್ಯರಿಗೆ ಆಗುವ ಇಂತಹ ತೊಂದರೆಗಳಿಗೆ ಇಲಾಖೆಗಳು ಹಾಗೂ ಗುತ್ತಿಗೆದಾರರೇ ಹೊಣೆಯಾಗಬೇಕು ಎಂದು ವಿಜಯ ಮಿತ್ರರು ಹೇಳಿದ್ದಾರೆ.
ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…
ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…
ಅಸ್ಸಾಂನಲ್ಲಿ ಐಸಿಎಆರ್–ಐಎಆರ್ಐ ಸಂಸ್ಥೆ “ನೈಸರ್ಗಿಕ ಕೃಷಿ” ವಿಷಯದಡಿ ಕಿಸಾನ್ ಮೇಳ 2026 ಆಯೋಜಿಸಿತು.…
ಜಾಗತಿಕ ತಾಪಮಾನ ಏರಿಕೆಯಿಂದ ಭಾರತದಲ್ಲಿ ಮಾರುತ ಮಳೆಯ ತೀವ್ರತೆ ಹೆಚ್ಚುತ್ತಿರುವುದು ಹೊಸ ಅಧ್ಯಯನದಲ್ಲಿ…
ಮ್ಯಾನ್ಮಾರ್ನಿಂದ ಅಕ್ರಮ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಬಿಗುಗೊಳಿಸಿದೆ.…
ಕೊಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಸೆಣಬು ವಲಯ ಸುಧಾರಣೆ, ಸುಸ್ಥಿರ ಕೃಷಿ ಹಾಗೂ ಮೀನುಗಾರಿಕೆ…