ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿಗಳ ತಡೆಗೆ BIS ಮಾನದಂಡ ಕಾರಣವೇ ? ಯಾವ ಅಡಿಕೆ ಉತ್ತಮ? ಗ್ರೇಡ್ ಹೇಗೆ ನಿರ್ಧಾರ?

July 4, 2026
9:45 PM
ಭಾರತೀಯ BIS ಮಾನದಂಡದ ಪ್ರಕಾರ ಅಡಿಕೆಯ ಗುಣಮಟ್ಟವನ್ನು ತೇವಾಂಶ, ಅಫ್ಲಾಟಾಕ್ಸಿನ್, ಕೀಟ ಹಾನಿ, ಒಳಭಾಗದ ಗುಣಮಟ್ಟ ಹಾಗೂ ಕಟ್ ಟೆಸ್ಟ್ ಆಧರಿಸಿ ಗ್ರೇಡ್ ಮಾಡಲಾಗುತ್ತದೆ. ಈ ಮಾನದಂಡಗಳು ದೇಶೀಯ ವ್ಯಾಪಾರ ಮತ್ತು ರಫ್ತಿಗೆ ಅಧಿಕೃತ ಮಾರ್ಗಸೂಚಿಯಾಗಿವೆ.

ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಕರ್ನಾಟಕದಿಂದ ಸಾಗಾಟವಾಗುತ್ತಿದ್ದ ಅಡಿಕೆ ಲಾರಿಗಳನ್ನು ಆಹಾರ ಮತ್ತು ಔಷಧ ಆಡಳಿತ (FDA) ಹಾಗೂ ಇತರ ತನಿಖಾ ಸಂಸ್ಥೆಗಳು ತಡೆದು ಪರಿಶೀಲಿಸುತ್ತಿರುವ ಘಟನೆಗಳು ಅಡಿಕೆ ಬೆಳೆಗಾರರಿಗೆ ಮತ್ತು ವ್ಯಾಪಾರಿಗಳಿಗೆ ಆತಂಕ ಮೂಡಿಸಿವೆ. ಈ ಬೆಳವಣಿಗೆಯ ನಂತರ “BIS ಗುಣಮಟ್ಟದ ಮಾನದಂಡ ಜಾರಿಯೇ ಇದಕ್ಕೆ ಕಾರಣವೇ?” ಎಂಬ ಪ್ರಶ್ನೆ ವ್ಯಾಪಕವಾಗಿ ಕೇಳಿಬರುತ್ತಿದೆ.

ಅಡಿಕೆ ವ್ಯಾಪಾರ, ಸಂಸ್ಕರಣೆ ಹಾಗೂ ರಫ್ತಿನಲ್ಲಿ ಗುಣಮಟ್ಟಕ್ಕೆ ಮಹತ್ವದ ಸ್ಥಾನವಿದೆ. ಭಾರತೀಯ ಮಾನದಂಡಗಳ ಸಂಸ್ಥೆ (BIS) ರೂಪಿಸಿರುವ IS 16962:2018 ಮಾನದಂಡವು ಒಣಗಿಸಿದ ಹಾಗೂ ಬೇಯಿಸಿ ಒಣಗಿಸಿದ ಅಡಿಕೆಯ ಗುಣಮಟ್ಟ, ಗ್ರೇಡ್, ಪರೀಕ್ಷಾ ವಿಧಾನ, ಪ್ಯಾಕಿಂಗ್ ಹಾಗೂ ಲೇಬಲಿಂಗ್‌ಗೆ ಅಧಿಕೃತ ಮಾರ್ಗಸೂಚಿಯನ್ನು ನೀಡುತ್ತದೆ. ಈ ಮಾನದಂಡದ ಪ್ರಕಾರ ಅಡಿಕೆಯ ಗುಣಮಟ್ಟವನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ ಗ್ರೇಡ್ ನೀಡಲಾಗುತ್ತದೆ. ಅಂದರೆ ಅಡಿಕೆಯ ಗುಣಮಟ್ಟವನ್ನು ನಿರ್ಧರಿಸುವ ತಾಂತ್ರಿಕ ಮಾನದಂಡಗಳು ಇವೆ. ಇದರಲ್ಲಿ ತೇವಾಂಶದ ಮಿತಿ, ಅಫ್ಲಾಟಾಕ್ಸಿನ್ ಪ್ರಮಾಣ, ಕೀಟ ಹಾನಿ, ಹುಳು, ಗ್ರೇಡಿಂಗ್,ಪ್ಯಾಕಿಂಗ್ ಹಾಗೂ ಲೇಬಲಿಂಗ್ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳಿವೆ. ಈ ಮಾನದಂಡದ ಉದ್ದೇಶ ಉತ್ತಮ ಗುಣಮಟ್ಟದ ಅಡಿಕೆಯನ್ನು ಗುರುತಿಸುವುದು, ಆದರೆ ರಸ್ತೆ ಮೇಲೆ ವಾಹನಗಳನ್ನು ತಡೆದು ವಶಪಡಿಸಿಕೊಳ್ಳುವ ಅಧಿಕಾರವನ್ನು ಈ ನಿಯಮಗಳು ಹೊಂದಿಲ್ಲ.

ಹಾಗಾದರೆ ಲಾರಿಗಳನ್ನು ಯಾಕೆ ತಡೆಯುತ್ತಿದ್ದಾರೆ? :  ಲಭ್ಯ ಮಾಹಿತಿಯ ಪ್ರಕಾರ ಅಧಿಕಾರಿಗಳ ಪರಿಶೀಲನೆಯ ಪ್ರಮುಖ ಕಾರಣಗಳಲ್ಲಿ ಒಂದು  ಅಕ್ರಮ ಆಮದು ಹಾಗೂ ಅಡಿಕೆ ಮಿಶ್ರಣದ ಬಗ್ಗೆ ಅನುಮಾನ.  ಇಂಡೋನೇಷ್ಯಾ, ಬರ್ಮಾ ಸೇರಿದಂತೆ ಕೆಲವು ದೇಶಗಳಿಂದ ಅಕ್ರಮವಾಗಿ ಬಂದ ಅಡಿಕೆಯನ್ನು ಭಾರತೀಯ ಅಡಿಕೆಯೊಂದಿಗೆ ಬೆರೆಸಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಗಂಭೀರವಾದ ತನಿಖೆ ನಡೆಯುತ್ತಿದೆ. ಈ ಹಿಂದೆ ಇದೇ ಕಾರಣದಿಂದ ಮಹಾರಾಷ್ಟ್ರದ ನಾಗ್ಪುರ ಸೇರಿದಂತೆ ಅಸ್ಸಾಂ ರಾಜ್ಯದ ಕೆಲವು ಕಡೆ ದಾಳಿಯೂ ಆಗಿತ್ತು. ಮಹಾರಾಷ್ಟ್ರದ ವಿವಿದೆಡೆ ಕೋಲ್ಡ್‌ ಸ್ಟೋರೇಜ್‌ ಗಳಲ್ಲೂ ವಿದೇಶಿ ಅಡಿಕೆ ದಾಸ್ತಾನು ಮಾಡಲಾಗಿತ್ತು. ಹೀಗಾಗಿ ಈಗ ಅಡಿಕೆಯನ್ನೇ ತಡೆಯಲಾಗುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಹೀಗಾಗಿ ಆಹಾರ ಸುರಕ್ಷತಾ ಅಧಿಕಾರಿಗಳು ಅಡಿಕೆ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸುತ್ತಿದ್ದಾರೆ. ಪರಿಶೀಲನೆಯಲ್ಲಿ ಅಡಿಕೆಯಲ್ಲಿರುವ ಅಫ್ಲಾಟಾಕ್ಸಿನ್, ತೇವಾಂಶ, ಹುಳು, ಕೀಟ ಹಾನಿ ಹಾಗೂ ಅಡಿಕೆಯಲ್ಲಿರುವ ಕಲಬೆರಕೆ ಪರೀಕ್ಷೆ ನಡೆಯುತ್ತದೆ. ಈ ಪರೀಕ್ಷೆಗಳಲ್ಲಿ BIS ಮತ್ತು FSSAI ಮಾನದಂಡಗಳು ಉಲ್ಲೇಖವಾಗುವ ಸಾಧ್ಯತೆಯೇ ಹೆಚ್ಚಿದೆ.  ಈ ಸಂದರ್ಭ BIS ನ ಎಲ್ಲಾ ನಿಯಮವನ್ನೂ ಪರಿಶೀಲನೆ ಮಾಡಲಾಗುತ್ತದೆ.

ನಿಯಮದ ಪ್ರಕಾರ ಅಡಿಕೆಯ ವಿಧಗಳು : ಬಿಳಿ ಅಡಿಕೆ (White Areca Nut), ಕೆಂಪು ಅಡಿಕೆ (Red Areca Nut), ಸಂಪೂರ್ಣ ಅಡಿಕೆ (Whole) ಹಾಗೂ ಸೀಳು ಅಡಿಕೆ (Split) ಎಂಬ ವಿಧ ಮಾಡಲಾಗಿದೆ.  ಗ್ರೇಡ್‌ಗಳ ವಿವರಗಳು ಹೀಗಿದೆ, ಬಿಳಿ ಅಡಿಕೆಯಲ್ಲಿ ಗ್ರೇಡ್–1, ಗ್ರೇಡ್–2, ಗ್ರೇಡ್–3. ಕೆಂಪು ಅಡಿಕೆಯಲ್ಲಿ Whole – ಗ್ರೇಡ್ 1, 2, 3 ಮತ್ತು Split – ಗ್ರೇಡ್ 1, 2 ಇವೆ.

ಗುಣಮಟ್ಟದ ಪ್ರಮುಖ ಮಾನದಂಡಗಳ ಪ್ರಕಾರ ಉತ್ತಮ ಗುಣಮಟ್ಟದ ಅಡಿಕೆಯಲ್ಲಿ ಕೃತಕ ಬಣ್ಣ ಅಥವಾ ಸಂರಕ್ಷಕ ಪದಾರ್ಥಗಳು ಇರಬಾರದು. ಕಲ್ಲು, ಮಣ್ಣು, ಧೂಳು ಸೇರಿದಂತೆ ಯಾವುದೇ ಕಲ್ಮಶ ಇರಬಾರದು. ತೇವಾಂಶ (Moisture) ಗರಿಷ್ಠ 7% ಇರಬೇಕು. ಅಫ್ಲಾಟಾಕ್ಸಿನ್ (Aflatoxin) ಪ್ರಮಾಣ 15 ppb ಮೀರಬಾರದು. ಕೀಟ ಹಾನಿ, ಹುಳು (Mould), ಹೊಗೆ ವಾಸನೆ ಹಾಗೂ ಕಲಬೆರಕೆ ಇರಬಾರದು. ಅಡಿಕೆಯ ಎಲ್ಲಾ ಗ್ರೇಡ್‌ಗಳಲ್ಲಿಯೂ ಕೀಟ ಹಾಗೂ ಹುಳು ಹಿಡಿದ ಅಡಿಕೆ ಇರಬಾರದು.

ಪ್ಯಾಕಿಂಗ್ ಮತ್ತು ಲೇಬಲಿಂಗ್ ಕೂಡಾ ಇಲ್ಲಿ ಮುಖ್ಯವಾಗುತ್ತದೆ. ಅಡಿಕೆಯನ್ನು ಸ್ವಚ್ಛ ಹಾಗೂ ಒಣ ಗೋಣಿ ಚೀಲ ಅಥವಾ ಸೂಕ್ತ ಪ್ಯಾಕಿಂಗ್‌ನಲ್ಲಿ ತುಂಬಬೇಕು. ಒಂದು ಚೀಲದಲ್ಲಿ ಒಂದೇ ಗ್ರೇಡ್‌ನ ಅಡಿಕೆ ಇರಬೇಕು. ಲೇಬಲ್‌ನಲ್ಲಿ ಕಡ್ಡಾಯವಾಗಿ ಉತ್ಪನ್ನದ ಹೆಸರು, ಉತ್ಪಾದಕ/ಪ್ಯಾಕರ್ ಹೆಸರು, ನಿವ್ವಳ ತೂಕ, ಗ್ರೇಡ್, ಕೊಯ್ಲಿನ ವರ್ಷ, ಮೂಲ ದೇಶ ಹಾಗೂ ಕಾನೂನುಬದ್ಧ ಮಾಹಿತಿ ಇರಬೇಕು.

ಇಷ್ಟೇ ಅಲ್ಲ, ಕಟ್ ಟೆಸ್ಟ್ ಕೂಡಾ ನಡೆಯುತ್ತದೆ. ಅಡಿಕೆಯ ಗುಣಮಟ್ಟವನ್ನು ಪರಿಶೀಲಿಸಲು 100 ಅಡಿಕೆಗಳನ್ನು ಉದ್ದವಾಗಿ ಕತ್ತರಿಸಿ ಒಳಭಾಗವನ್ನು ಪರೀಕ್ಷಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅಡಿಕೆ ಹುಳು ಹಿಡಿದಿದೆಯೇ?, ಹಳದಿ ಅಥವಾ ಕಪ್ಪು ಒಳಭಾಗವಿದೆಯೇ?, ಬಲಿಯದ ಅಡಿಕೆಯೇ? ಕೀಟ ಹಾನಿಯಾಗಿದೆಯೇ? ಎಂಬ ಅಂಶಗಳನ್ನು ಪರಿಶೀಲಿಸಿ ಶೇಕಡಾವಾರು ಲೆಕ್ಕ ಹಾಕಿ ಗ್ರೇಡ್ ನಿರ್ಧರಿಸಲಾಗುತ್ತದೆ.

ಇದಿಷ್ಟು BIS ನಿಯಮಗಳ ಪರಿಶೀಲನೆಯಾದರೆ ಉಳಿದ  ದಾಖಲೆಗಳ ಪರಿಶೀಲನೆ ನಡೆಯುತ್ತದೆ. ಈಗ ಅಧಿಕಾರಿಗಳು ಪರಿಶೀಲಿಸುತ್ತಿರುವ ದಾಖಲೆಗಳು e-Way Bill,  GST ದಾಖಲೆ, ಖರೀದಿ ಬಿಲ್, ಮೂಲದ ದಾಖಲೆ ಹಾಗೂ ಆಹಾರ ಸುರಕ್ಷತಾ ನಿಯಮಗಳ ಪಾಲನೆಯನ್ನು ಗಮನಿಸುತ್ತಾರೆ. ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಲಾರಿಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುತ್ತಿದೆ.

ಈಗ ಲಾರಿಗಳ ತಡೆಗೆ BIS ಮಾನದಂಡವೇ ಸಂಪೂರ್ಣ ಕಾರಣವಲ್ಲ. ಕಾನೂನು ಬಿಗಿಯಾದಂತೆ BIS ಮಾನದಂಡವೂ ಕಾರಣವಾಗಿದೆ. ಪ್ರಸ್ತುತ ನಡೆಯುತ್ತಿರುವ ಕ್ರಮಗಳಲ್ಲಿ ಮುಖ್ಯವಾಗಿ ಆಹಾರ ಸುರಕ್ಷತೆ, ಅಕ್ರಮ ಆಮದು, ತೆರಿಗೆ ದಾಖಲೆಗಳ ಪರಿಶೀಲನೆ ಹಾಗೂ ಕಲಬೆರಕೆ ತಡೆಗೆ ಮತ್ತು ಮಹಾರಾಷ್ಟ್ರದಲ್ಲಿ ಜಾರಿಯಾದ ನೂತನ ಕಾನೂನು ಕೂಡಾ ತಡೆಯಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಮುಂದೆ ಏನಾಗಬಹುದು? : ಇದುವರೆಗೂ ಕಾನೂನು ಬಿಗಿಯಾಗದ ಕಾರಣ ಅಡಿಕೆ ಸಾಗಾಟ ಸರಿಯಾಗಿತ್ತು. ಮಹಾರಾಷ್ಟ್ರದಲ್ಲಿ ಆಹಾರ ಸುರಕ್ಷತೆಯ ಕಾನೂನು ಬಿಗಿಯಾದ ಬಳಿಕ ವಿದೇಶಿ ಕಳಪೆ ಅಡಿಕೆ ಕೋಲ್ಡ್‌ ಸ್ಟೋರೇಜ್‌ಗಳಲ್ಲಿ ದಾಸ್ತಾನು ಬೆಳಕಿಗೆ ಬಂದ ಬಳಿಕ BIS ನಿಯಮಗಳೂ ಜಾರಿಗೆ ಬಂದವು.  ಸಾಗಾಟದ ಮೇಲೂ ತಡೆಯಾದವು. ಆಹಾರ ಸುರಕ್ಷತಾ ಇಲಾಖೆಗಳು BIS ಹಾಗೂ FSSAI ಮಾನದಂಡಗಳನ್ನು ಕಟ್ಟುನಿಟ್ಟಾಗಿ ಎಲ್ಲೆಡೆಯೂ ಅನುಸರಿಸಲು ಆರಂಭಿಸಿದರೆ,  ಗುಣಮಟ್ಟದ ಅಡಿಕೆ ಮಾತ್ರಾ ಸಾಗಾಟವಾಗಬಹುದು. ಆಗ ಅವುಗಳಿಗೆ ಮಾತ್ರಾ ಹೆಚ್ಚಿನ ಮೌಲ್ಯ ಸಿಗಬಹುದು.  ಗುಣಮಟ್ಟ ಕಳಪೆಯಾದ ಅಡಿಕೆ ಮಾರುಕಟ್ಟೆಗೆ ಬರಲು ಕಷ್ಟವಾಗಬಹುದು. ರಫ್ತು ಮಾರುಕಟ್ಟೆಯಲ್ಲಿ ಅವಕಾಶ ಸಿಕ್ಕಿದರೆ ಭಾರತೀಯ ಅಡಿಕೆಯ ವಿಶ್ವಾಸಾರ್ಹತೆ ಹೆಚ್ಚಾಗಬಹುದು. ರೈತರು, ಸಂಸ್ಕರಣಾ ಘಟಕಗಳು ಮತ್ತು ವ್ಯಾಪಾರಿಗಳು ಗುಣಮಟ್ಟ ಹಾಗೂ ದಾಖಲೆ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಬಹುದು.

The BIS standard IS 16962:2018 specifies quality requirements, grading, testing methods, sampling, packaging, and labeling for white and red areca nuts in India. It defines moisture limits, aflatoxin limits, permissible defects, grading criteria, and cut-test procedures, serving as the official benchmark for domestic trade, exports, and quality certification.

ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಕಮೆಂಟ್‌ ಮೂಲಕ ತಿಳಿಸಿ…

 

View this post on Instagram

 

A post shared by Rural Mirror (@theruralmirror)

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜಾಕ್‌ಫ್ರೂಟ್ ಸ್ಪೈಸಿ – ಹಲಸಿನ ಕಾಯಿಯಿಂದ 5 ನಿಮಿಷದಲ್ಲಿ ರುಚಿಕರ ಸ್ನ್ಯಾಕ್..!
July 4, 2026
3:44 PM
by: ದಿವ್ಯ ಮಹೇಶ್
ಅಡಿಕೆ ಬೆಳೆ ನಷ್ಟಕ್ಕೆ ಎನ್‌ಡಿಆರ್‌ಎಫ್ ಪರಿಹಾರ ತೀರಾ ಕಡಿಮೆ…! ಪ್ರಕೃತಿ ವಿಕೋಪದಲ್ಲಿ ರೈತರಿಗೆ ಅನ್ಯಾಯ?
July 4, 2026
2:59 PM
by: ದ ರೂರಲ್ ಮಿರರ್.ಕಾಂ
ಭಾರತದ ಹಲಸಿನ ಹಣ್ಣಿನ ರಾಜಧಾನಿ ಎಲ್ಲಿದೆ ಗೊತ್ತಾ..?
July 4, 2026
12:59 PM
by: ದ ರೂರಲ್ ಮಿರರ್.ಕಾಂ
ಉತ್ತಮ ಗುಣಮಟ್ಟದ ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ; ರಾಸಾಯನಿಕ ಮಿಶ್ರಣವೇ ಅಪಾಯ – ಎಸ್.ಆರ್. ಸತೀಶ್ಚಂದ್ರ
July 4, 2026
12:16 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror