The Rural Mirror ವಾರದ ವಿಶೇಷ

ಸ್ವಲ್ಪ ಕಾಯಿರಿ….. ಬಿ ಎಸ್‌ ಎನ್‌ ಎಲ್‌ ಹಳ್ಳಿಗಳಿಗೂ ಸ್ಪೀಡ್‌ ಇಂಟರ್ನೆಟ್‌ ಕೊಡ್ತಾ ಇದೆ….! | ಪ್ರಧಾನಿಗಳ ಘೋಷಣೆ ಫಾಲೋಅಪ್‌ ಮಾಡಿದ ಯುವಕರು |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಪ್ರತೀ ಹಳ್ಳಿಗಳಿಗೆ ಇಂಟರ್ನೆಟ್‌ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ  ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಘೋಷಣೆ ಮಾಡಿದರು. ಎಲ್ಲರೂ ಅದು ಹೇಗೆ ಎಂದು  ಯೋಚಿಸಿದರು, ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಮಾಡಿದರು. ಬಿ ಎಸ್‌ ಎನ್‌ ಎಲ್‌ ಈಗಾಗಲೇ ಎಲ್ಲಾ ಸೌಲಭ್ಯ ಕಡಿತ ಮಾಡುತ್ತಿದೆ. ಹೀಗಾಗಿ ಇದೂ ಖಾಸಗೀ ನೆಟ್ವರ್ಕ್‌ ವಿಸ್ತರಣೆ ಎಂದರು.
Advertisement

ಆದರೆ ಸುಳ್ಯದ ಇಬ್ಬರು ಯುವಕರು ಇದರ ಹಿಂದೆ ಬಿದ್ದು ಯಶಸ್ಸು ಕಂಡರು. ಅತ್ಯಂತ ವೇಗ ಇಂಟರ್ನೆಟ್‌ ಹಳ್ಳಿಯಲ್ಲೂ ಬಿ ಎಸ್‌ ಎನ್‌ ಎಲ್‌ ಮೂಲಕ ಪಡೆಯಲು ಸಾಧ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸುಳ್ಯದ ದೊಡ್ಡತೋಟದಲ್ಲಿ  ಈ ಸೇವೆ ಈಗ ಆರಂಭವಾಗಿದೆ. ಆದರೆ ಈಗಲೇ ಗಡಿಬಿಡಿ ಮಾಡಬೇಡಿ, ಇನ್ನೂ ಕೆಲವು ದಿನ ಕಾಯಿರಿ ದ ಕ ಜಿಲ್ಲೆಯ ಎಲ್ಲಾ ಕಡೆಯಲ್ಲೂ ಈ ಸೇವೆ ಸಿಗಲಿದೆ.

ಯುವಕರು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ಹಳ್ಳಿಗಳಿಗೂ ವಿಸ್ತರಣೆ ಮಾಡಲು ಸಾಧ್ಯವಿದೆ. ಆದರೆ ಪ್ರಧಾನಿಗಳ ಮಾದರಿಯ ಇಚ್ಛಾ ಶಕ್ತಿ ಹಳ್ಳಿಗಳವರೆಗೆ ಇರಬೇಕು. ಅದರಲ್ಲೂ ರಾಜಕೀಯ ಸ್ಪರ್ಶ ಇಲ್ಲದೇ ಇದ್ದರೆ ಎಲ್ಲಾ ಕಾರ್ಯದಲ್ಲೂ ಯಶಸ್ಸು ಸಾಧ್ಯವಿದೆ. ಅದಕ್ಕೆ ಉದಾಹರಣೆ ಸುಳ್ಯ ತಾಲೂಕಿನ ದೊಡ್ಡತೋಟದಲ್ಲಿ ಈಗ ಆರಂಭವಾಗಿರುವ ಬಿ ಎಸ್‌ ಎನ್‌ ಎಲ್‌ ಏರ್‌ ಫೈಬರ್‌ ವ್ಯವಸ್ಥೆ. (BSNL Air Fiber ). ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊದಲ ಬಾರಿ ದೊಡ್ಡತೋಟದಲ್ಲಿ  ಆರಂಭವಾಗಿರುವ ಈ ಸೇವೆಯ ಹಿಂದೆ ಇಬ್ಬರು ಯುವಕರ ಪಾತ್ರವಿದೆ.

ಸುಳ್ಯ ತಾಲೂಕಿನಲ್ಲಿ ದೂರವಾಣಿ ಸಂಪರ್ಕ ವ್ಯವಸ್ಥೆ ತೀರಾ ಹಿಂದೆ ಇದೆ. ಬಿ ಎಸ್‌ ಎನ್‌ ಎಲ್‌ ವ್ಯವಸ್ಥೆ ಇದ್ದರೂ ಸಂಪರ್ಕವಂತೂ ಇಲ್ಲ. ಅಧಿಕಾರಿಗಳು ಇಂದಿಗೂ ಸೂಕ್ತ ರೀತಿಯಲ್ಲಿ ಸ್ಪಂದನೆ ಮಾಡುತ್ತಿಲ್ಲ. ಖಾಸಗಿ ವ್ಯವಸ್ಥೆಗಳು ಲಾಭದಾಯಕ ದಾರಿ ಮಾತ್ರಾ ನೋಡುತ್ತವೆಯೇ ಹೊರತು ಸೇವೆಯ ದಾರಿಯಲ್ಲಿ ಕಂಡುಬರುತ್ತಿಲ್ಲ. ಹೀಗಾಗಿ ಗ್ರಾಮೀಣ ಭಾಗಗಳಲ್ಲಿ  ಇಂದಿಗೂ ಇಂಟರ್ನೆಟ್‌, ಡಿಜಿಟಲ್‌ ಇಂಡಿಯಾದ ಉದ್ದೇಶ ಸಾಕಾರವಾಗಿಲ್ಲ. ಹೀಗಾಗಿ ದೊಡ್ಡತೋಟದ ಸಾಯಿರಂಜನ್‌ ಕಲ್ಚಾರು ಹಾಗೂ ಸದಾಶಿವ ಕೊಡಪ್ಪಾಲ ಎಂಬ ಇಬ್ಬರು ಯುವಕರು  ಗ್ರಾಮೀಣ ಭಾಗಕ್ಕೂ ಇಂಟರ್ನೆಟ್‌ ವ್ಯವಸ್ಥೆಯಾಗಬೇಕು ಎಂದು  ಹೋರಾಟಕ್ಕೆ ಇಳಿದಿದ್ದರು.ಇವರಿಗೆ ಮಾರ್ಗದರ್ಶನ ನೀಡಿದವರು ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ ಉಬರಡ್ಕ. 

ದೊಡ್ಡತೋಟದಲ್ಲಿ ಹಲವು ಸಮಯಗಳಿಂದ ಇಂಟರ್ನೆಟ್‌ ವ್ಯವಸ್ಥೆ ಸರಿ ಇರಲಿಲ್ಲ. ಇದಕ್ಕಾಗಿ ಬಿ ಎಸ್‌ ಎನ್‌ ಎಲ್‌ ಜೊತೆ ಸಂಪರ್ಕ ಮಾಡಿದರೂ FTTH, BBNL  ಸೇರಿದಂತೆ ವಿವಿಧ ವ್ಯವಸ್ಥೆ ಇದ್ದರೂ ಯಾವುದೇ  ಪ್ರಯೋಜನವಾಗಿಲ್ಲ. ಇದೇ ಸಮಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತೀ ಹಳ್ಳಿಗಳಿಗೆ ಇಂಟರ್ನೆಟ್‌ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಘೋಷಣೆ ಮಾಡಿದರು. ಈ ಬಗ್ಗೆ ಯುವಕ ಸಾಯಿರಂಜನ್‌ ಕಲ್ಚಾರು , ಸದಾಶಿವ ಕೊಡಪ್ಪಾಲ ಹಾಗೂ ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ ಉಬರಡ್ಕ ಈ ಬಗ್ಗೆ ಮಾತುಕತೆ ನಡೆಸಿದರು. ಅದರ ಜೊತೆಗೆ ಇಂಟರ್ನೆಟ್‌ ಸಂಪರ್ಕಕ್ಕಾಗಿ ದೆಹಲಿ ಮಟ್ಟದ ಬಿ ಎಸ್‌ ಎನ್‌ ಎಲ್ ಅಧಿಕಾರಿಗಳವರೆಗೆ ದೂರು, ಮಾತುಕತೆ ನಡೆಸಿದ್ದರು.

Advertisement

ಹಳ್ಳಿಗಳಿಗೂ ಪ್ರಧಾನಿ ನರೇಂದ್ರ ಮೋದಿ ಅವರ ಈ ಕನಸನ್ನು  ಹೇಗೆ ತರಬಹುದು ಎಂದು ಯೋಚಿಸಿದರು. ತಕ್ಷಣವೇ ಯುವಕ ಸಾಯಿರಂಜನ್‌ ಕಲ್ಚಾರು ಈ ಬಗ್ಗೆ ಸ್ಥಳೀಯ ಬಿ ಎಸ್‌ ಎನ್‌ ಎಲ್‌ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಯಾವುದೇ ಮಾಹಿತಿ ಇರಲಿಲ್ಲ. ನಂತರ ಇ ಮೈಲ್‌ ಮೂಲಕ ಹಿರಿಯ ಅಧಿಕಾರಿಗಳನ್ನು  ಸಂಪರ್ಕಿಸಿದಾಗ ಏರ್‌ ಫೈಬರ್‌ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ ಬಳಿಕ ದಕ ಜಿಲ್ಲೆಯ ಬಿ ಎಸ್‌ ಎನ್‌ ಎಲ್ ಅಧಿಕಾರಿಗಳ ಮೂಲಕ ದೊಡ್ಡತೋಟದಲ್ಲಿ  ಏರ್‌ ಫೈಬರ್‌ ವ್ಯವಸ್ಥೆಗೆ ಮುಂದಡಿ ಇರಿಸಿದರು.ಹಲವು ಸುತ್ತಿನ ವಿಡಿಯೋ ಕಾನ್ಫರೆನ್ಸ್‌, ಆಡಿಯೋ ಕಾನ್ಫರೆನ್ಸ್‌ ಹಾಗೂ ಇ ಮೈಲ್‌ ಮಾತುಕತೆ ನಡೆದಿತ್ತು. ಖಾಸಗಿ ಸಂಸ್ಥೆ ಹಾಗೂ ಬಿ‌ ಎಸ್‌ ಎನ್‌ ಎಲ್ ಸಹಭಾಗಿತ್ವದಲ್ಲಿ ನಡೆಯುವ ಈ ಭಾರತ್ ಏರ್‌ ಫೈಬರ್‌ ವ್ಯವಸ್ಥೆ  ಇದೀಗ ಚಾಲೂ ಆಗಿದೆ.‌ ಇದರ ತಾಂತ್ರಿಕ ವ್ಯವಸ್ಥೆಯನ್ನು ಯುವಕ ಸದಾಶಿವ ಕೊಡಪ್ಪಾಲ ಮಾಡಿದರೆ ಉಳಿದ ಮಾತುಕತೆಗಳನ್ನು ಯುವಕ ಸಾಯಿರಂಜನ್‌ ಕಲ್ಚಾರು ಮಾಡಿದರು. ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ ಉಬರಡ್ಕ ಮಾರ್ಗದರ್ಶನ ನೀಡಿದ್ದರು.

ಸದ್ಯ ದೊಡ್ಡತೋಟದಲ್ಲಿ ಖಾಸಗಿ ಸಂಸ್ಥೆ ಸೆಲ್‌ ಟೋನ್‌ ಇದರ ವಿಷ್ಣುಪ್ರಸಾದ್‌ ಅವರ  ಸಂಸ್ಥೆಯ ಮೂಲಕ  ಇಂಟರ್ನೆಟ್ ಸಂಪರ್ಕ ನೀಡುವ ವ್ಯವಸ್ಥೆಯಾಗುತ್ತಿದೆ. ಆರಂಭದಲ್ಲಿ  ಉತ್ತಮ ವೇಗದಿಂದ ಕೂಡಿದ ಇಂಟರ್ನೆಟ್‌ ವ್ಯವಸ್ಥೆ ಇದೆ. ಈಗಾಗಲೇ ಕೆಲವು ಮಂದಿ ಸಂಪರ್ಕ ಪಡೆದಿದ್ದಾರೆ.‌ ಈ ಬಗ್ಗೆ ಬಿ ಎಸ್‌ ಎನ್‌ ಎಲ್‌ ಸ್ಥಳೀಯ ಮಟ್ಟದ ಅಧಿಕಾರಿಗಳನ್ನು ಸಂಪರ್ಕ ಮಾಡಬಹುದಾಗಿದೆ.

ಇಂಟರ್ನೆಟ್‌ ವೇಗ

ಪ್ರಧಾನಿಗಳ ಯೋಚನೆ ಹಾಗೂ ಯೋಜನೆಯನ್ನು ಯಾವುದೇ ರಾಜಕಾರಣಿಯ ಸಹಾಯವಿಲ್ಲದೆ  ಹಳ್ಳಿಗಳಿಗೆ ತಲಪಿಸುವ ಇಂತಹ ಯುವಕರ ಸತತ ಪ್ರಯತ್ನ ಸಾರ್ವತ್ರಿಕವಾಗಿ ಶ್ಲಾಘನೆಗೆ ಪಾತ್ರವಾಗಿದೆ. ಇಂತಹ ಯುವಕರ ತಂಡ ಹಳ್ಳಿಗಳಲ್ಲಿ  ಬೆಳೆಯಬೇಕು ಎನ್ನುವುದು ಎಲ್ಲರ ಆಶಯ.ಈಗ ಬೇಕಿರುವುದು ಬಿ ಎಸ್‌ ಎನ್‌ ಎಲ್‌ ಸ್ಥಳೀಯ ಅಧಿಕಾರಿಗಳ ಸಹಾಯ ಹಾಗೂ ತಕ್ಷಣದ ಸ್ಪಂದನೆ.

(ಗಮನಿಸಿ: ಗ್ರಾಮೀಣ ಭಾಗಕ್ಕೆ ಇಂಟರ್ನೆಟ್‌ ವ್ಯವಸ್ಥೆಗಾಗಿ ಸತತ ಪ್ರಯತ್ನ ಮಾಡಿದ ಈ ಯುವಕರಿಗೆ  ಅವರ ವ್ಯವಹಾರ, ಉದ್ಯೋಗದ ನಡುವೆ ಕರೆ ಮಾಡಿ ಅಥವಾ ಇಂಟರ್ನೆಟ್ ಸಂಪರ್ಕಕ್ಕಾಗಿ ದಯವಿಟ್ಟು ಒತ್ತಡ ತರಬಾರದಾಗಿ ವಿನಂತಿ. ಹೆಚ್ಚಿನ ಮಾಹಿತಿ ಬಿ ಎಸ್‌ ಎನ್‌ ಎಲ್‌ ಸ್ಥಳೀಯ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದು )

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಅಮರನಾಥ ಯಾತ್ರೆ ಹಿನ್ನೆಲೆ | ಜುಲೈ 1 ರಿಂದ ಆಗಸ್ಟ್  ತಿಂಗಳವರೆಗೆ ಅಮರನಾಥ ಹಾರಾಟ ನಿಷೇಧ ವಲಯ

ಜಮ್ಮು - ಕಾಶ್ಮೀರ ಸರ್ಕಾರ ಅಮರನಾಥ ಗುಹೆ ದೇಗುಲಕ್ಕೆ ಹೋಗುವ ಎಲ್ಲಾ ಮಾರ್ಗಗಳನ್ನು…

4 hours ago

ಹವಾಮಾನ ವರದಿ | 18-06-2025 | ರೈತರೇ ಗಮನಿಸಿ- ಜೂ.21 ರವರೆಗೆ ಮಳೆ ಕಡಿಮೆ ಇರಲಿದೆ | ಔಷಧಿ ಸಿಂಪಡಣೆಗೆ ಸಿಗಬಹುದು ಅವಕಾಶ |

ಅರಬ್ಬಿ ಸಮುದ್ರದ ವಾಯುಭಾರ ಕುಸಿತದಂತಹ ತಿರುವಿಕೆಯು ರಾಜಸ್ಥಾನ ತಲುಪಿದ್ದು, ಅಲ್ಲಿ ಶಿಥಿಲಗೊಳ್ಳುವ ಲಕ್ಷಣಗಳಿವೆ.…

7 hours ago

ಹಂಸ ಮಹಾಪುರುಷ ರಾಜಯೋಗ | ಈ 3 ರಾಶಿಯವರಿಗೆ ಸಂಪತ್ತಿನ ಸುರಿಮಳೆ..!

2025 ರಲ್ಲಿ ಗುರು ಗ್ರಹವು ತನ್ನ ಸ್ವಂತ ರಾಶಿಯಾದ ಮೇಷದಲ್ಲಿ ಸಂಚರಿಸುತ್ತಿದ್ದಾಗ, ಶುಕ್ರ…

12 hours ago

ರಾಜ್ಯದ 6 ಕಡೆ ಕೌಶಲ್ಯ ಪ್ರಯೋಗಾಲಯ ನಿರ್ಮಿಸಲು ಸರ್ಕಾರ ನಿರ್ಧಾರ

ಮಂಗಳೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕಚೇರಿ ಕಟ್ಟಡ…

21 hours ago

ಕೋಲಾರದಲ್ಲಿ ಬಾಕಿ ಇರುವ 3610 ಜಮೀನಿನ ಸರ್ವೆ ಮುಂದಿನ ಎರಡು ತಿಂಗಳೊಳಗಾಗಿ ಪೂರ್ಣ

ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳಲ್ಲಿ ರೈತರಿಗೆ ಮಂಜೂರಾಗಿರುವ ಜಮೀನುಗಳಿಗೆ ಪೋಡಿ ದುರಸ್ತಿ ಮಾಡಲಾಗುತ್ತಿದೆ.…

21 hours ago

ಭಾರಿ ಮಳೆಗೆ ಮೂರು ಜನರು ಬಲಿ | ಕರಾವಳಿ ಜಿಲ್ಲೆಗಳಲ್ಲಿ ಜೂ.21 ರವರೆಗೆ ವ್ಯಾಪಕ ಮಳೆ |  ಹವಾಮಾನ ಇಲಾಖೆ ಮುನ್ಸೂಚನೆ

ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಿದೆ.…

21 hours ago