ತೆಂಗು-ಕೊಬ್ಬರಿ ಮಾರುಕಟ್ಟೆಗೆ ಭಾರೀ ಹೊಡೆತ – ಬೆಲೆ ಕುಸಿತ ತಾತ್ಕಾಲಿಕವೇ ಅಥವಾ ದೀರ್ಘಾವಧಿ ಸಂಕಷ್ಟವೇ?

June 11, 2026
2:38 PM
ದಕ್ಷಿಣ ಭಾರತದ ತೆಂಗು ಹಾಗೂ ಕೊಬ್ಬರಿ ಮಾರುಕಟ್ಟೆಯಲ್ಲಿ ಬೆಲೆಗಳು ಭಾರೀ ಕುಸಿತ ಕಂಡಿದ್ದು, ಹೆಚ್ಚಿದ ಉತ್ಪಾದನೆ ಮತ್ತು NAFED ಖರೀದಿ ವಿಳಂಬ ಪ್ರಮುಖ ಕಾರಣಗಳಾಗಿವೆ. ರೈತರ ರಕ್ಷಣೆಗೆ ಸರ್ಕಾರ ತಕ್ಷಣ ಗಮನಹರಿಸಬೇಕಾದ ಅಗತ್ಯ ಇದೆ.

ಕೆಲ ತಿಂಗಳ ಹಿಂದೆ ಕೆಜಿಗೆ ₹80-85 ದರ ತಲುಪಿದ್ದ ತೆಂಗು ಈಗ ₹40-45 ಕ್ಕೆ ಇಳಿದಿದೆ. ತಮಿಳುನಾಡಿನಲ್ಲಿ NAFED ಮೂಲಕ ನಡೆಯಬೇಕಿದ್ದ ಕೊಬ್ಬರಿ ಖರೀದಿ ವಿಳಂಬವಾಗಿರುವುದು ಮಾರುಕಟ್ಟೆಯ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ. ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ತೆಂಗು ಬೆಳೆಗಾರರಿಗೆ ಈಗ ಸಂಕಷ್ಟವಾಗುತ್ತಿದೆ.

ರೈತ ಸಂಘಟನೆಗಳ ಪ್ರಕಾರ, ಕನಿಷ್ಠ ಬೆಂಬಲ ಬೆಲೆ (MSP) ಘೋಷಣೆಯಾಗಿದ್ದರೂ ಖರೀದಿ ಆರಂಭವಾಗದಿರುವುದರಿಂದ ರೈತರು ಖಾಸಗಿ ವ್ಯಾಪಾರಿಗಳ ಮೇಲೆ ಅವಲಂಬಿತರಾಗಿದ್ದಾರೆ. ಪರಿಣಾಮವಾಗಿ ಕೊಬ್ಬರಿ ಸಂಗ್ರಹ ಹೆಚ್ಚಾಗಿ, ಗುಣಮಟ್ಟ ಕುಸಿದು, ಬೆಲೆ ಇಳಿಕೆಗೆ ಕಾರಣವಾಗಿದೆ.

Advertisement

ನಾನು ಸ್ವತಃ ತೆಂಗಿನ ಮರ ಹತ್ತುವ ಕಾಯಕ ಮಾಡುವವನಾಗಿ ಮತ್ತು ತೆಂಗಿನ ವ್ಯಾಪಾರಿಯಾಗಿ ಮಾರುಕಟ್ಟೆಯ ಸ್ಥಿತಿಯನ್ನು ಹತ್ತಿರದಿಂದ ನೋಡುತ್ತಿದ್ದೇನೆ. ಕಳೆದ ಕೆಲವು ತಿಂಗಳುಗಳಿಂದ ರೈತರು ಉತ್ತಮ ದರದ ನಿರೀಕ್ಷೆಯಲ್ಲಿ ತೆಂಗಿನಕಾಯಿ, ಕೊಬ್ಬರಿ ಸಂಗ್ರಹಿಸಿಕೊಂಡಿದ್ದಾರೆ. ಆದರೆ ರೈತರಿಗೆ ನ್ಯಾಯಯುತ ಬೆಲೆ ಸಿಗದ ಕಾರಣ ಸಂಕಷ್ಟ ಪಡುತ್ತಿದ್ದಾರೆ. ತೆಂಗು ಆಧಾರಿತ ಉತ್ಪನ್ನಗಳ ಬಳಕೆಯನ್ನು ಸರ್ಕಾರ ಉತ್ತೇಜಿಸಬೇಕು.
 ಪ್ರಾಣೇಶ್ ಹೆಜಮಾಡಿ, ಮಾಜಿ ಅಧ್ಯಕ್ಷರು, ಹೆಜಮಾಡಿ ಗ್ರಾಮ ಪಂಚಾಯತ್, ಕಾಪು ತಾಲೂಕು

ಬೆಲೆ ಕುಸಿತದ ಹಿಂದೆ ವಿವಿಧ ಕಾರಣಗಳನ್ನು ಹೇಳಲಾಗುತ್ತಿದೆ. 2025ರಲ್ಲಿ ತೆಂಗು ಹಾಗೂ ಕೊಬ್ಬರಿ ಬೆಲೆಗಳು ದಾಖಲೆ ಮಟ್ಟ ತಲುಪಿದ್ದವು. ಉತ್ತಮ ದರದ ನಿರೀಕ್ಷೆಯಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಕೊಯ್ಲು ನಡೆಸಿದರು. ಕೇರಳ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಉತ್ಪಾದನೆ ಏರಿಕೆಯಾಗಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ತೆಂಗು ಸರಬರಾಜು ಆಗಿತ್ತು. ಹೀಗಾಗಿ ಕಳೆದ ಸಲ ಉತ್ತಮ ಧಾರಣೆಯೂ ರೈತರಿಗೆ ಲಭ್ಯವಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement

NAFED ಮೂಲಕ ಕೊಬ್ಬರಿ ಖರೀದಿ ಈ ಬಾರಿ ವಿಳಂಬವಾಗುತ್ತಿದೆ. ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳಲ್ಲಿ ಆರಂಭವಾಗಬೇಕಿದ್ದ ಕೊಬ್ಬರಿ ಖರೀದಿ ಪ್ರಕ್ರಿಯೆ ವಿಳಂಬವಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಸರ್ಕಾರದ ಬೆಂಬಲ ಕಡಿಮೆಯಾಗಿ ಖಾಸಗಿ ವ್ಯಾಪಾರಿಗಳ ಪ್ರಭಾವ ಹೆಚ್ಚಾಗಿದೆ. ಇದು ಇಂದು ಧಾರಣೆ ಇಳಿಕೆಗೆ ಪ್ರಮುಖ ಕಾರಣವಾಗುತ್ತಿದೆ.

ತೆಂಗಿನ ಎಣ್ಣೆಯಲ್ಲೂ ಹಾಗೇ, ಈ ಬಾರಿ ಬೇಡಿಕೆ ಕಡಿಮೆಯಾಗುತ್ತಿದೆ. ಕಳೆದ ವರ್ಷ ತೆಂಗಿನೆಣ್ಣೆ ಬೆಲೆ ಅತಿಯಾಗಿ ಏರಿದ್ದರಿಂದ ಗ್ರಾಹಕರು ಅಗ್ಗದ ಪಾಮ್ ಆಯಿಲ್, ಸೂರ್ಯಕಾಂತಿ ಎಣ್ಣೆ ಹಾಗೂ ಸೋಯಾಬೀನ್ ಎಣ್ಣೆಯತ್ತ ಮುಖ ಮಾಡಿದ್ದಾರೆ. ಪರಿಣಾಮವಾಗಿ ತೆಂಗಿನೆಣ್ಣೆ ಬಳಕೆ ಮತ್ತು ಬೇಡಿಕೆ ಕುಸಿದಿದೆ. ಈ ಟ್ರೆಂಡ್‌ ಇನ್ನೂ ಬದಲಾಗಿಲ್ಲ.

Advertisement

ರಫ್ತು ಮಾರುಕಟ್ಟೆ ಕೂಡಾ ಕುಸಿತ ಕಂಡಿದೆ. ಗಲ್ಫ್ ಮತ್ತು ಪಶ್ಚಿಮ ಏಷ್ಯಾದ ರಾಷ್ಟ್ರಗಳಿಗೆ ಸಾಗುತ್ತಿದ್ದ ಮೌಲ್ಯವರ್ಧಿತ ತೆಂಗು ಉತ್ಪನ್ನಗಳ ರಫ್ತು ಮಧ್ಯಪ್ರಾಚ್ಯದ ಉದ್ವಿಗ್ನತೆ ಹಾಗೂ ಸಾಗಣೆ ಸಮಸ್ಯೆಗಳಿಂದ ನಿಧಾನಗೊಂಡಿದೆ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚುವರಿ ಸ್ಟಾಕ್ ಉಳಿದಿದೆ. ಇದು ಮೌಲ್ಯವರ್ಧನೆ ಕ್ಷೇತ್ರದಲ್ಲೂ ತೆಂಗು ಬೇಡಿಕೆ ಕುಸಿಯಲು ಕಾರಣವಾಗಿದೆ.

ಹಿಂದೆ ಹೆಚ್ಚಿನ ದರದಲ್ಲಿ ಖರೀದಿಸಿದ್ದ ವ್ಯಾಪಾರಿಗಳು ಹಾಗೂ ಎಣ್ಣೆ ಮಿಲ್‌ಗಳು ಹೊಸ ಖರೀದಿಯನ್ನು ಕಡಿಮೆ ಮಾಡಿ ಹಳೆಯ ಸ್ಟಾಕ್ ಮಾರಾಟಕ್ಕೆ ಮುಂದಾಗಿವೆ. ಇದು ಮಾರುಕಟ್ಟೆ ಬೆಲೆ ಮೇಲೆ ಮತ್ತಷ್ಟು ಒತ್ತಡ ತಂದಿದೆ. ಯಾವುದೇ ದಾಸ್ತಾನುದಾರರು ಈಗ ತೆಂಗು, ಕೊಬ್ಬರಿ ದಾಸ್ತಾನಿಗೆ ಮುಂದಾಗುತ್ತಿಲ್ಲ. ಹೀಗಾಗಿ ಸಹಜವಾದ ಮಾರುಕಟ್ಟೆ ಪ್ರಕ್ರಿಯೆಯೂ ನಡೆಯುತ್ತಿಲ್ಲ. ಇದಿಷ್ಟೇ ಅಲ್ಲ ಗ್ಯಾಸ್‌ ಸಮಸ್ಯೆಗಳಿಂದ ಈ ಬಾರಿ ಹೋಟೆಲ್‌ಗಳು ಕೂಡಾ ತೆಂಗಿನಕಾಯಿ, ತೆಂಗಿನೆಣ್ಣೆ, ಕೊಬ್ಬರಿಗೆ ಹೆಚ್ಚಿನ ಬೇಡಿಕೆಯನ್ನು ಕೂಡಾ ಸಲ್ಲಿಸಿಲ್ಲ. ಈ ಸಲ ತೀವ್ರ ಬಿಸಿಲಿನ ಕಾರಣ ತೆಂಗಿನಕಾಯಿ ಬೇಗ ಪಕ್ವಗೊಂಡು ಒಂದೇ ಸಮಯದಲ್ಲಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಂದಿದೆ. ಒಮ್ಮೆಲೇ ಮಾರುಕಟ್ಟೆಗೆ ಅಧಿಕ ಪ್ರಮಾಣದ ಪೂರೈಕೆಯಾಗಿರುವುದು ಕೂಡಾ ಧಾರಣೆ ಇಳಿಕೆ ಕಾರಣವಾಗಿದೆ.

Advertisement

ಕಳೆದ ವರ್ಷದ ಬೆಲೆ ಏರಿಕೆಯನ್ನು ನೋಡಿದರೆ ಈಗಿನ ಧಾರಣೆ ಕುಸಿತ ನಿರಾಸೆ ಮೂಡಿಸಿದೆ. ಕೃಷಿಕರಿಗೆ ಸಂಕಷ್ಟವಾಗಿದೆ. ಕಳೆದ ವರ್ಷ ಬೆಳೆ ಕಡಿಮೆ ಇತ್ತು,  ರಫ್ತು ಬೇಡಿಕೆ ಹೆಚ್ಚಿತ್ತು, ತೆಂಗಿನೆಣ್ಣೆ ದರ ದಾಖಲೆ ಮಟ್ಟ ತಲುಪಿತ್ತು ಹಾಗೂ ವ್ಯಾಪಾರಿಗಳು ಭಾರೀ ಪ್ರಮಾಣದಲ್ಲಿ ಸಂಗ್ರಹ ಮಾಡಿದ್ದರು. ಆದರೆ 2026 ರಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಬೆಳೆ ಉತ್ತಮವಾಗಿದೆ, ಬೇಡಿಕೆ ಕಡಿಮೆಯಾಗಿದೆ ಮತ್ತು ರಫ್ತು ಕಡಿಮೆಯಾಗಿದೆ.

ಅಡಿಕೆ ಮಾರುಕಟ್ಟೆಯಲ್ಲೂ ಹಲವು ಬಾರಿ ಇದೇ ರೀತಿಯ ವ್ಯವಸ್ಥೆಯಾಗಿದೆ. ಆದರೆ ಅಂತಹ ಎಲ್ಲಾ ಸಂದರ್ಭದಲ್ಲೀ ಸಹಕಾರಿ ಸಂಸ್ಥೆಗಳು ಅಡಿಕೆ ಕ್ಷೇತ್ರವನ್ನು ಮೇಲೆತ್ತಿವೆ. ಧಾರಣೆ ಕುಸಿತವಾಗದಂತೆ ತಡೆದಿದೆ. ತೆಂಗು ಕ್ಷೇತ್ರದಲ್ಲಿ ಅಂತಹ ಪ್ರಬಲವಾದ ಸಹಕಾರಿ ಸಂಘಗಳು ಕಾಣುತ್ತಿಲ್ಲ. ಧಾರಣೆ ಕುಸಿತದ ನಷ್ಟವನ್ನು ರೈತರು ಅನುಭವಿಸಬೇಕಾದ ಸ್ಥಿತಿ ಬಂದಿದೆ. ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ (MSP) ಘೋಷಣೆಯಾಗಿದ್ದರೂ ಖರೀದಿ ಆರಂಭವಾಗಿಲ್ಲ, ಈ ಬಗ್ಗೆ ಯಾವೊಬ್ಬ ಪ್ರತಿನಿಧಿಗಳೂ ಮಾತನಾಡುತ್ತಿಲ್ಲ. ಮೌನವೇ ಉತ್ತರವಾಗಿದೆ.

Advertisement

ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ, ಬಯಲು ಸೀಮೆಯ ಹಲವು ಕಡೆಯಲ್ಲೂ ತೆಂಗು ಪ್ರಮುಖ ಬೆಳೆ. ಕೇರಳ ಹಾಗೂ ತಮಿಳುನಾಡಿನ ಮಾರುಕಟ್ಟೆ ಕುಸಿತ ಮುಂದಿನ ತಿಂಗಳುಗಳಲ್ಲಿ ಕರ್ನಾಟಕ ಮಾರುಕಟ್ಟೆಯ ಮೇಲೂ ಪರಿಣಾಮ ಈಗಾಗಲೇ ಬಿದ್ದಿದೆ.

ತೆಂಗು ಕೇವಲ ಒಂದು ಕೃಷಿ ಬೆಳೆ ಅಲ್ಲ. ಅದು ರೈತರ ಆರ್ಥಿಕ ಭದ್ರತೆಯ ಆಧಾರವಾಗಿದೆ. 2026 ರ ಮಾರುಕಟ್ಟೆ ಪರಿಸ್ಥಿತಿಯನ್ನು ಗಮನಿಸಿದರೆ, ಮೌಲ್ಯವರ್ಧನೆ, ರಫ್ತು ವಿಸ್ತರಣೆ ಮತ್ತು ಗುಣಮಟ್ಟದ ಉತ್ಪಾದನೆಯ ಮೂಲಕ ತೆಂಗಿನ ಕ್ಷೇತ್ರವು ಇನ್ನಷ್ಟು ಬಲಿಷ್ಠವಾಗಿ ಬೆಳೆಯುವ ವಿಶ್ವಾಸವಿದೆ. ಆದರೆ, ಹವಾಮಾನ ಬದಲಾವಣೆ, ಕಾರ್ಮಿಕರ ಕೊರತೆ ಮತ್ತು ಉತ್ಪಾದನಾ ವೆಚ್ಚದ ಏರಿಕೆ ಸವಾಲುಗಳಾಗಿದ್ದರೂ, ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಯನ್ನು ಗಮನಿಸಿದರೆ 2026 ರ ಉಳಿದ ಅವಧಿಯಲ್ಲಿ ತೆಂಗಿನ ಬೆಲೆಗಳು ಸ್ಥಿರದಿಂದ ಏರಿಕೆ ಪ್ರವೃತ್ತಿಯಲ್ಲಿರುವ ಸಾಧ್ಯತೆ ಹೆಚ್ಚಾಗಿದೆ. ದೇಶೀಯ ಬೇಡಿಕೆ, ಕೊಬ್ಬರಿ ಬೆಂಬಲ ಬೆಲೆ ಹಾಗೂ ಜಾಗತಿಕ ತೆಂಗಿನ ಉತ್ಪನ್ನಗಳ ಬೇಡಿಕೆ ರೈತರಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತಿವೆ. ಅಲ್ಪಾವಧಿಯ ಏರಿಳಿತಗಳಿದ್ದರೂ ದೀರ್ಘಾವಧಿಯಲ್ಲಿ ತೆಂಗಿನ ಕ್ಷೇತ್ರದ ಭವಿಷ್ಯ ಆಶಾದಾಯಕವಾಗಿದೆ.
ಶಿವಾನಂದ ಕುಕ್ಕಾಡಿ, ತೆಂಗಿನಕಾಯಿ ವ್ಯಾಪಾರಸ್ಥರು ಕಡಬ ಮತ್ತು ಬೆಳ್ಳಾರೆ

Advertisement

ಮುಂದಿನ 3-6 ತಿಂಗಳು ಹೇಗಿರಬಹುದು ಧಾರಣೆ?

ತಜ್ಞರ ಅಭಿಪ್ರಾಯದಂತೆ ತಕ್ಷಣಕ್ಕೆ ತೆಂಗಿನ ಧಾರಣೆ ಏರಿಕೆ ಕಷ್ಟ ಇದೆ. ಆದರೆ  NAFED ಮೂಲಕ ಕೊಬ್ಬರಿ ಖರೀದಿಗೆ ವೇಗ ಪಡೆದರೆ ಬೆಲೆ ಸ್ಥಿರವಾಗಬಹುದು, ಏರಿಕೆ ಸಾಧ್ಯತೆಯೂ ಇದೆ. ಅಷ್ಟೇ ಅಲ್ಲ,  ಗಲ್ಫ್ ದೇಶಗಳ ರಫ್ತು ಸುಧಾರಿಸಿದರೆ ಕೂಡಾ ಬೇಡಿಕೆ ಹೆಚ್ಚಾಗಬಹುದು. ಮುಂದೆ ಮಳೆಗಾಲದ ನಂತರ ಹಬ್ಬದ ಋತುವಿನಲ್ಲಿ ತೆಂಗಿನೆಣ್ಣೆ ಬಳಕೆ, ತೆಂಗಿನ ಕಾಯಿ ಬಳಕೆ ಹೆಚ್ಚಾದರೆ ಕೂಡಾ ಮಾರುಕಟ್ಟೆಗೆ ಚೇತರಿಕೆ ಸಿಗಬಹುದು.

Advertisement

 ತೆಂಗಿನ ಬೆಲೆ ಇಳಿಕೆಯ ಇಂತಹ ಸಂದರ್ಭದಲ್ಲಿ ಬೆಳೆಗಾರರು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ತಕ್ಷಣವೇ NAFED ಕೊಬ್ಬರಿ ಖರೀದಿ ಆರಂಭಿಸಬೇಕು. ಕೇರಳದ ಮಾದರಿಯಲ್ಲಿ ರೈತರಿಂದ ನೇರ ತೆಂಗು ಖರೀದಿ ವ್ಯವಸ್ಥೆ ಜಾರಿಯಾಗಬೇಕು.  ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಮೂಲಕ ತೆಂಗಿನೆಣ್ಣೆ ವಿತರಣೆ ಪರಿಗಣಿಸಬೇಕು.  ತೆಂಗು ಆಧಾರಿತ ಮೌಲ್ಯವರ್ಧಿತ ಉತ್ಪನ್ನಗಳಿಗೆ ವಿಶೇಷ ಉತ್ತೇಜನ ನೀಡಬೇಕು. ಪಾಮ್ ಆಯಿಲ್ ಆಮದು ನೀತಿಯನ್ನು ಮರುಪರಿಶೀಲಿಸಬೇಕು ಎಂಬ ಬೇಡಿಕೆ ರೈತರಿಂದ ಇದೆ.ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Coconut and copra prices across South India have fallen sharply due to increased production, delayed NAFED procurement, weak coconut oil demand, export slowdowns, and excess supply. While the decline reflects a market correction after the historic 2025 price rally, delayed procurement has intensified farmer distress. Experts believe timely government intervention and stronger demand could stabilize prices in the coming months.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿ ತಡೆ – ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಗೆ ವರ್ತಕರ ಮನವಿ
July 1, 2026
2:57 PM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 01-07-2026 | ಕರ್ನಾಟಕದಲ್ಲಿ ಇನ್ನೆರಡು ದಿನ ಮಳೆ ಸ್ವಲ್ಪ ಇಳಿಕೆ – ಜುಲೈ 4ರಿಂದ ಮತ್ತೆ ಚುರುಕು!
July 1, 2026
11:29 AM
by: ಸಾಯಿಶೇಖರ್ ಕರಿಕಳ
ಶಿರಾಡಿ ಘಾಟಿಯಲ್ಲಿ ವಾರಾಂತ್ಯದ ಟ್ರಾಫಿಕ್‌ ಜಾಮ್‌ಗೆ ಬ್ರೇಕ್‌ ಯಾವಾಗ? ಶಿರಾಡಿ ಘಾಟಿಗೆ ವಿಶೇಷ ಸಂಚಾರ ಯೋಜನೆ ಜಾರಿ ಅಗತ್ಯ
July 1, 2026
7:52 AM
by: ಮಹೇಶ್ ಪುಚ್ಚಪ್ಪಾಡಿ
ಜುಲೈನಲ್ಲಿ ದೇಶಾದ್ಯಂತ ಸಾಮಾನ್ಯಕ್ಕಿಂತ ಕಡಿಮೆ ಮಳೆ ಸಾಧ್ಯತೆ : ಐಎಂಡಿ ಎಚ್ಚರಿಕೆ
July 1, 2026
7:02 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror