( ಸಾಂದರ್ಭಿಕ ಚಿತ್ರ )
ಇತ್ತೀಚೆಗೆ ಪತ್ರಿಕೆಗಳಲ್ಲಿ ಪುತ್ತೂರಿನ ಸುದ್ದಿ ಬರುವಾಗ ಮಾಮೂಲಾಗಿ ಬರುವುದು ಜಿಲ್ಲಾ ಕೇಂದ್ರವಾಗಲು ಹೊರಟ ಪುತ್ತೂರು ಎಂಬ ವಿಶ್ಲೇಷಣೆಯೊಂದಿಗೆ. ಈ ಉಪನಾಮ ಪುತ್ತೂರಿಗೆ ಯಾಕೆ ಸೇರಿಕೊಳ್ಳುತ್ತದೆ ಎಂದು ನನಗೆ ಅರ್ಥ ಆಗಲಿಲ್ಲ. ಹಾಗಾಗಿ ನನ್ನ ಮತಿಗೆ ಹೊಳೆದ ಒಂದೆರಡು ಮಾತುಗಳನ್ನು ಈ ಬಗ್ಗೆ ಬರೆಯುತ್ತಿದ್ದೇನೆ.
ನಾನೋರ್ವ ಪುತ್ತೂರಿನ ಸಮೀಪದ ಹಳ್ಳಿಯವನಾಗಿ, ಓರ್ವ ಕೃಷಿಕನಾಗಿ ನನ್ನ ಅಭಿಪ್ರಾಯವನ್ನು ಪ್ರಸ್ತುತಪಡಿಸುತ್ತಿದ್ದೇನೆ.
ಒಂದು ಊರಿನ ಅಭಿವೃದ್ಧಿ ಎಂದರೆ ಪೇಟೆ ವಿಸ್ತರಿಸುವುದು, ಕಟ್ಟಡಗಳನ್ನು ಬೆಳೆಸುವುದು, ಮಾರ್ಗಗಳನ್ನು ಅಗಲ ಮಾಡುವುದು, ಅಧಿಕಾರಿಗಳ ಮತ್ತು ಅಧಿಕಾರದ ಹೊಸ ವ್ಯವಸ್ಥೆಯೊಂದನ್ನು ತಯಾರು ಮಾಡುವುದು ಅಲ್ಲ ಎಂದು ನನ್ನ ಭಾವನೆ. ನಮ್ಮ ಪುತ್ತೂರನ್ನು ಒಂದು ಜಿಲ್ಲಾ ಕೇಂದ್ರವಾಗಿಸಬೇಕಾದರೆ ಅಲ್ಲಿಗೆ ಜಿಲ್ಲಾಡಳಿತ ಕಚೇರಿ ಮತ್ತು ಅದಕ್ಕೆ ಬೇಕಾದ ಸಹ ಕಚೇರಿಗಳು ಅಗತ್ಯ. ಇಂತಹ ಕಚೇರಿಗಳಿಗೆ ಅನಂತ ಕಟ್ಟಡಗಳು ಬರಬೇಕಾಗುತ್ತದೆ ಮತ್ತು ಕಟ್ಟಡಗಳಿಗೆ ಅದೆಷ್ಟೋ ಕೋಟಿ ರೂ ಹಣ ವ್ಯಯಿಸಬೇಕಾಗುತ್ತದೆ. ಹೊಸತೊಂದು ಜಿಲ್ಲಾಧಿಕಾರಿ ಮತ್ತು ಅವರ ಸಹ ಅಧಿಕಾರಿವರ್ಗ, ಮತ್ತೊಂದು ಜಿಲ್ಲಾ ಪಂಚಾಯತ್ ಇದಕ್ಕೆಲ್ಲಾ ವ್ಯಯಿಸುವ ಹಣ ಉಳಿಸಿದರೆ ಅದೆಷ್ಟೋ ಹಳ್ಳಿಗಳನ್ನು ಅಭಿವೃದ್ಧಿಪಡಿಸಬಹುದು. ಒಂದು ದೇಶಕ್ಕೆ ಜನಸಂಖ್ಯೆ ಜಾಸ್ತಿಯಾಯಿತು ಎಂದು ದೇಶವನ್ನು ಎರಡು ಮಾಡಲುಂಟೇ? ಎರಡು ಪ್ರಧಾನಿಯನ್ನು ಮಾಡಲು ಉಂಟೆ? ತಾಲೂಕು ತಾಲೂಕನ್ನು ಜಿಲ್ಲಾ ಕೇಂದ್ರವಾಗಿಸಿದರೆ ದೇಶಕ್ಕೆ ಇದನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಉಂಟೇ?
ಜನ ಸಂಖ್ಯೆ ಹೆಚ್ಚಾದಾಗ ಮೂಲಭೂತ ಅಗತ್ಯತೆಗಳನ್ನು ಹೆಚ್ಚು ಮಾಡಬೇಕೇ ವಿನಹ: ಜಿಲ್ಲೆಯನ್ನು ಒಡೆದು ಇನ್ನೊಂದು ಜಿಲ್ಲೆ ಮಾಡುವುದು ಅಲ್ಲ. ಜನಸಂಖ್ಯೆ ಆಧಾರಿತ ಜನಪ್ರತಿನಿಧಿಗಳನ್ನು ಹೆಚ್ಚುಮಾಡಲಿ. ಹಳ್ಳಿ ಹಳ್ಳಿಗಳನ್ನು ಪೇಟೆಗಳಾಗಿ ವಿಸ್ತರಿಸುತ್ತಾ ಹೋದಲ್ಲಿ ಹಳ್ಳಿಗಳಲ್ಲಿ ನಿಂಬವರು ಯಾರು? ಕೃಷಿಯಾಗಿ, ಮರವೆದ್ದು ಪ್ರಕೃತಿಯ ಸಮತೋಲವನ್ನು ಕಾಯ್ದುಕೊಳ್ಳಬೇಕಾದ ಜಾಗಗಳು, ಕಾಂಕ್ರೀಟು ಕಾಡುಗಳಾದರೆ ಮನುಷ್ಯನಿಗೆ ಉಳಿಗಾಲ ಉಂಟೆ? ಕೃಷಿ ಭೂಮಿಗಳು ನಗರಗಳಾಗಿ ಪರಿವರ್ತನೆ ಆಗುವ ಅಗತ್ಯ ಇದೆಯೇ? ನವದೆಹಲಿಯಂತಹ ನಗರಗಳು ವಾತಾವರಣದ ಮಾಲಿನ್ಯದಿಂದ ಪರಿತಪಿಸುತ್ತಿರುವುದು ನಮ್ಮ ಕಣ್ಣಮುಂದಿದೆ. ಇನ್ನೂ ಅಂತಹ ನಗರಗಳ ಸೃಷ್ಟಿ ಬೇಕೆ?
ಅಭಿವೃದ್ಧಿಯಾಗ ಬೇಕಾದುದು ಹಳ್ಳಿಗಳೇ ವಿನಹ ಪೇಟೆಗಳಲ್ಲ. ಅದು ಕೂಡ ಕಟ್ಟಡಗಳ ಮುಖಾಂತರವಲ್ಲ. ಮೂಲಭೂತ ಸೌಕರ್ಯಗಳಾದ ಮಾರ್ಗಗಳು ಮತ್ತು ಶಾಲೆಗಳು ಸಣ್ಣ ಸಣ್ಣ ಆಸ್ಪತ್ರೆಗಳು. ಇಂದು ನಾವು ಹಳ್ಳಿಯ ಶಾಲೆಗಳನ್ನು ನಾಶಪಡಿಸಿ ಹಳ್ಳಿಯ ಮಕ್ಕಳೆಲ್ಲ ಪೇಟೆಯ ಕಡೆಗೆ ಮುಖ ಮಾಡುವಂತಾಗಿದೆ. ಜನಾಭಿಪ್ರಾಯ ರೂಪಿತವಾಗಬೇಕಾದುದು ಹಳ್ಳಿಯ ಅಭಿವೃದ್ಧಿಗೆ ವಿನಹ ಜಿಲ್ಲಾ ಕೇಂದ್ರವಾಗಿಸುವ ಬಗ್ಗೆ ಅಲ್ಲ . ಹಳ್ಳಿ ಬರಡಾಗುವ ಮುನ್ನ ಎಚ್ಚರವಾಗೋಣ.
# ಎ.ಪಿ. ಸದಾಶಿವ. ಮರಿಕೆ
ರಾಜ್ಯದಲ್ಲಿ ಮುಂದಿನ ಎರಡು ದಿನ ಮಳೆಯ ಪ್ರಮಾಣ ಕಡಿಮೆ ಇರಲಿದ್ದು, ಏಪ್ರಿಲ್ 25ರಿಂದ…
ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಮುಂದುವರಿಯಲಿದ್ದು, ಉತ್ತರ ಒಳನಾಡಿನಲ್ಲಿ ಏಪ್ರಿಲ್ 25ರವರೆಗೆ…
ವಿದ್ಯುತ್ ದರ ಏರಿಕೆ ಮತ್ತು ಹಿಂಬದಿ ಬಿಲ್ಲಿಂಗ್ ಕ್ರಮದಿಂದ ಸಣ್ಣ ಮತ್ತು ಮಧ್ಯಮ…
ಮುಳಬಾಗಿಲಿನ ಹೋಟೆಲ್ ಮೇಲೆ ದಾಳಿ ನಡೆಸಿ 30 ಲೀಟರ್ ಅವಧಿ ಮೀರಿದ ತುಪ್ಪ…
ತೊಗರಿ ಬೆಳೆಗಾರರ ಹಿತಕ್ಕಾಗಿ ಖರೀದಿ ಅವಧಿಯನ್ನು ಮೇ 15ರವರೆಗೆ ವಿಸ್ತರಿಸಲಾಗಿದೆ. ಇದರಿಂದ ರೈತರಿಗೆ…
ವಿಜಯಪುರದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಳ ಹಿನ್ನೆಲೆ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್ ವಿಶೇಷ ವಾರ್ಡ್…