ಅಬ್ದುಲ್ ಕಲಾಂ ಜನುಮದಿನ ಇಂದು…. | ಪ್ರತೀ ವ್ಯಕ್ತಿಯ ಸ್ಫೂರ್ತಿ ಅಬ್ದುಲ್‌ ಕಲಾಂ |

October 15, 2023
9:15 AM
ಇಂದು ಅಬ್ದುಲ್ ಕಲಾಂ. ಅವರ ಹುಟ್ಟು ಹಬ್ಬ. ಪ್ರತೀ ವ್ಯಕ್ತಿಯ ಸ್ಫೂರ್ತಿ ಅವರು. ಅಂತಹ ಸ್ಫೂರ್ತಿಯನ್ನು ನೆನಪಿಸಿಕೊಳ್ಳಬೇಕಾದ, ಆಚರಿಸಬೇಕಾದ ದಿನ ಇಂದು.

‘ಯಶಸ್ವಿಯಾಗುತ್ತೇನೆ ಎಂಬ ನಿರ್ಧಾರ ನಿಮ್ಮಲ್ಲಿ ಪ್ರಬಲವಾಗಿದ್ದರೆ ಸೋಲು ಎಂದಿಗೂ ನಿಮ್ಮನ್ನು ಹಿಮ್ಮೆಟ್ಟಿಸುವುದಿಲ್ಲ. “

ಅಬ್ದುಲ್ ಕಲಾಂ. ಒಬ್ಬ ಕನಸುಗಾರನಿಗೆ, ಒಬ್ಬ ಸಾಧಕನಿಗೆ ಆ ಕ್ಷಣದ ಸಾಧನೆ ಮಾತ್ರ ಪ್ರಾಮುಖ್ಯವಾಗಿರುವುದಿಲ್ಲ. ಮುಂದಿನ ಎಷ್ಟೋ ವರುಷಗಳ ನಂತರದ ಬೆಳವಣಿಗೆಯೂ ಅಷ್ಟೇ ಮುಖ್ಯ. ಚಂದ್ರಯಾನದ ವಿಷಯದಲ್ಲಿ ಕನಸುಕಂಡ ಹಲವು ವಿಜ್ಞಾನಿಗಳಲ್ಲಿ ಪ್ರಮುಖರು ಅಬ್ದುಲ್ ಕಲಾಂ. ನಮ್ಮ ದೇಶ ಕಂಡ ಕ್ರಿಯಾಶೀಲ ರಾಷ್ಟ್ರಪತಿಯಾಗಿ ನಮ್ಮಮನದಲ್ಲಿ ಸದಾ ನೆಲೆಸಿರುವವರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ ಪ್ರಯತ್ನದಲ್ಲಿದೆ ಎಂದು ತಿಳಿದ ನಂತರ, ಕಲಾಂ 2003 ರಲ್ಲಿ ಚಂದ್ರಯಾನದ ಚಂದ್ರನ ಅಧ್ಯಯನವು “ಇಡೀ ದೇಶವನ್ನು, ವಿಶೇಷವಾಗಿ ಯುವ ವಿಜ್ಞಾನಿಗಳು ಮತ್ತು ಮಕ್ಕಳನ್ನು ರೋಮಾಂಚನಗೊಳಿಸಲಿದೆ” ಎಂದು ಹೇಳಿಕೆ ನೀಡಿದ್ದರು. ಜೊತೆಗೆ ಭಾರತದ ಚಂದ್ರಯಾನವು “ಭವಿಷ್ಯದ ಗ್ರಹಗಳ ಅನ್ವೇಷಣೆಯ ಕಡೆಗೆ ಕೇವಲ ಒಂದು ಆರಂಭ” ಎಂದು ಪ್ರತಿಪಾದಿಸಿದರು ಮತ್ತು ಚಂದ್ರಯಾನದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು. ಅವರು ಜೀವಂತವಾಗಿದ್ದರೆ ಚಂದ್ರಯಾನ ೩ ರ ಯಶಸ್ಸನ್ನು ಬಹಳ ಸಂಭ್ರಮಿಸುತ್ತಿದ್ದರು. ಅಲ್ಲದೆ ಅಂತರಿಕ್ಷ ಅಧ್ಯಯನದ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಟ್ಟು ಜಗತ್ತಿನ ಕಣ್ಣಲ್ಲಿ ಪ್ರಮುಖ ಸ್ಥಾನವನ್ನು ನಮ್ಮ ಭಾರತ ಗಳಿಸಲಿದೆ ಎಂಬ ಅವರದೇ ಕನಸು ನನಸಾಗಿತ್ತು.

ತಮಿಳುನಾಡಿನ ರಾಮೇಶ್ವರದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹುಡುಗ ಭಾರತದ ‘ ಕ್ಷಿಪಣಿಗಳ ಜನಕ’ನಾಗಿ ಪ್ರಸಿದ್ಧರಾದರೆಂದರೆ ಸಣ್ಣ ಸಾಧನೆಯಲ್ಲ. ಈ ಪರಿಶ್ರಮದ ಹಿಂದೆ ಅಪಾರವಾದ ಜೀವನ ಪ್ರೀತಿಯಿದೆ. ಮಾತ್ರವಲ್ಲ ಸದಾ ಕ್ರಿಯಾಶೀಲತೆ ನಿರಂತರ ಪ್ರಯತ್ನ, ಸ್ಷಷ್ಟವಾದ ಭವಿಷ್ಯದ ಬಗೆಗಿನ ಕನಸುಗಳು ಅವರ ಯಶಸ್ವಿನ ಗುಟ್ಟುಗಳು.
೧೫ ಒಕ್ಟೋಬರ್ ೧೯೩೧ ರಂದು ಜೈನುಲಬ್ದೀನ್ ಹಾಗೂ ಆಶಿಮಾ ದಂಪತಿಗಳ ಪುತ್ರರಾಗಿ ಅಬ್ದುಲ್ ಕಲಾಂ ರವರು ಜನಿಸಿದರು. ಹೆತ್ತವರ ಬಡತನದ ಅರಿವಿದ್ದ ಕಲಾಂ ರು ಬೆಳಗ್ಗಿನ ತಮ್ಮ ಅಭ್ಯಾಸವನ್ನು ಮುಗಿಸಿ ಪತ್ರಿಕಾ ವಿತರಣೆಯನ್ನು ಮಾಡಿ ಶಾಲೆಗೆ ಹೋಗುತ್ತಿದ್ದರು.

“ನೆಗೆಟಿವ್ ಪರಿಸ್ಥಿತಿಗಳಲ್ಲೂ ಪಾಸಿಟಿವ್ ಆಗಿದ್ದರೆ ನೀವು ಪ್ರತಿ ಬಾರಿಯೂ ಗೆಲ್ಲುತ್ತಿರಿ” ಎಂಬ ಮಾತುಗಳನ್ನು ಹೇಳಿದ್ದು ಮಾತ್ರವಲ್ಲ ಬಾಳಿ ತೋರಿಸಿದರು. ತಮ್ಮ ಜೀವನದ ಪ್ರತಿ ಹಂತದಲ್ಲೂ , ಎಲ್ಲಾ ನಡೆಗಳಲ್ಲೂ, ನಿರ್ಧಾರಗಳಲ್ಲೂ ಪಾಸಿಟಿವ್ ಚಿಂತನೆಗಳನ್ನೇ ಪ್ರತಿಪಾದಿಸಿದರು.

ಮೂಲತಃ ಅವರೊಬ್ಬ ವಿಜ್ಞಾನಿ. ಅಂತರಿಕ್ಷಯಾನ ವಿಜ್ಞಾನಿ, ಅವರಲ್ಲೊಬ್ಬ ಉಪನ್ಯಾಸಕನಿದ್ದ, ಗಣಿತಜ್ಞ, ತಮಿಳು ಕವಿ, ಲೇಖಕ, ವೀಣಾವಾದಕ.

ನಮ್ಮ ದೇಶದ ಪ್ರತಿಷ್ಠಿತ ಸಂಸ್ಥೆಗಳಾದ DRDO ಹಾಗೂ ಇಸ್ರೋ ಸಂಸ್ಥೆಗಳ ಹೆಮ್ಮೆಯ ವಿಜ್ಞಾನಿ ನಮ್ಮ ಅಬ್ದುಲ್ ಕಲಾಂ. ಭಾರತದ ಮೊದಲ ಉಪಗ್ರಹ ಉಡಾವಣೆಯ ಯೋಜನಾ ನಿರ್ದೇಶಕರಾಗಿ ಯಶಸ್ವಿಯಾದವರು. ಭಾರತದ ಅಣುಬಾಂಬ್ ಹಾಗೂ ಕ್ಷಿಪಣಿಗಳ ಜನಕನೆಂದೇ ಖ್ಯಾತರಾದವರು. 1998 ರಲ್ಲಿ ಪೋಖ್ರಾನ್ 2 ನ್ಯೂಕ್ಲಿಯರ್ ಪರೀಕ್ಷೆಯಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದವರು ಕಲಾಂರವರು. 1997 ರಲ್ಲಿ ಅರ್ಹವಾಗಿಯೇ ಭಾರತರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಮ್ಮ ದೇಶ ಕಂಡ ಕೆಲವೇ ಕೆಲವು ಕ್ರಿಯಾಶೀಲ ರಾಷ್ಟ್ರಪತಿ ಗಳಲ್ಲಿ ಅಬ್ದುಲ್ ಕಲಾಂರವರು ಒಬ್ಬರು. ತಮ್ಮ ಎಂದಿನ ಸರಳತೆಯನ್ನು ರಾಷ್ಟ್ರ ಪತಿಯಾಗಿದ್ದಾಗಲೂ ನಿಭಾಯಿಸಿ ಜನಮನ್ನಣೆಗೆ ಪಾತ್ರರಾಗಿದ್ದರು. ತಮ್ಮ ಭಾಷಣಗಳಿಂದ , ಉಪನ್ಯಾಸ ಗಳಿಂದ ಖ್ಯಾತರಾಗಿದ್ದರು. ತಮ್ಮ ಕೊನೆಯ ಉಸಿರನ್ನು ಕೂಡ ಭಾಷಣ ಮಾಡುತ್ತಿದ್ದಂತೆ ವೇದಿಕೆಯಲ್ಲೇ ಪ್ರಾಣ ತ್ಯಾಗ ಮಾಡಿದವರು.

ಮಕ್ಕಳ ಪ್ರೀತಿಯ ಕಲಾಂ ಅಜ್ಜ ಆಗಿದ್ದರು. ಇಂದು ಅವರ ಹುಟ್ಟು ಹಬ್ಬ. ಅವರ ಹುಟ್ಟು ಹಬ್ಬವನ್ನು ಮಕ್ಕಳ ಹಬ್ಬವಾಗಿ ಆಚರಿಸುವುದರಲ್ಲಿ ನಿಜವಾಗಿಯೂ ಒಂದು ಅರ್ಥವಿದೆಯಲ್ಲವೇ.?

ಬರಹ :
ಅಶ್ವಿನಿಮೂರ್ತಿಅಯ್ಯನಕಟ್ಟೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಮಿಜೋರಾಂನಲ್ಲಿ ಅಕ್ರಮವಾಗಿ ಅಡಿಕೆ ಸಾಗಾಟಕ್ಕೆ ತಡೆ – ₹54.88 ಲಕ್ಷ ಮೌಲ್ಯದ 98 ಚೀಲ ವಶ
April 18, 2026
10:06 PM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 18-04-2026 | ರಾಜ್ಯದ ಬಹುತೇಕ ಕಡೆ ಸೆಖೆ ಮುಂದುವರಿಕೆ – ಏಪ್ರಿಲ್ 19 ರಿಂದ ಕರಾವಳಿಯಲ್ಲಿ ಮಳೆ ಆರಂಭ!
April 18, 2026
1:37 PM
by: ಸಾಯಿಶೇಖರ್ ಕರಿಕಳ
ಗ್ರಾಮೀಣ ಮೌಲ್ಯಗಳು ಮತ್ತು ನಗರ ಜೀವನ – ಸಮತೋಲನವೇ ನಿಜವಾದ ಮಾರ್ಗ!
April 18, 2026
7:28 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶಾದ್ಯಂತ ಹವಾಮಾನದಲ್ಲಿ ಬದಲಾವಣೆ..! 13 ರಾಜ್ಯಗಳಲ್ಲಿ ಮಳೆ-ಚಂಡಮಾರುತ ಎಚ್ಚರಿಕೆ, ಉತ್ತರ ಭಾರತದಲ್ಲಿ 40°C ದಾಟಿದ ಉಷ್ಣತೆ
April 18, 2026
7:22 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror