ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಚುನಾವಣೆ | ಈ ಬಾರಿಯೂ ಕೋವಿ ಠೇವಣಾತಿ ಗೊಂದಲ | ಕೃಷಿಕರಿಗೆ ತಪ್ಪದ ಬವಣೆ | ಮೂರು ವರ್ಷಗಳಿಂದಲೂ ರೈತರ ಬೇಡಿಕೆಗೆ ಸಿಗದ ಮಾನ್ಯತೆ |

March 20, 2024
10:42 PM
ಚುನಾವಣೆಯ ಹೊತ್ತಿಗೆ ಕೋವಿ ಠೇವಣಾತಿ ಇಡುವುದರಲ್ಲಿ ರೈತರಿಗೆ ವಿನಾಯತಿ ನೀಡಬೇಕು ಎನ್ನುವ ಒತ್ತಾಯ ಈ ಬಾರಿಯೂ ಕೇಳಿ ಬಂದಿದೆ. ಸುಳ್ಯದಲ್ಲಿ ಈ ಬಗ್ಗೆ ಸಭೆ ನಡೆಸಲು ರೈತರು ತೀರ್ಮಾನಿಸಿದ್ದಾರೆ. ರೈತರ ಬೇಡಿಕೆಗೆ ಸ್ಪಂದನೆ ದೊರೆಯದೇ ಇದ್ದರೆ ಚುನಾವಣಾ ಹಬ್ಬದಲ್ಲಿ ಪಾಲ್ಗೊಳ್ಳದೇ ಇರುವ ಬಗ್ಗೆಯೂ ಚರ್ಚೆ ನಡೆದಿದೆ.

ವಿಶ್ವದ ಅತಿದೊಡ್ಡ ಚುನಾವಣಾ ಹಬ್ಬ ಆರಂಭವಾಗಿದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎನ್ನುವುದು ದೊಡ್ಡ ಹಬ್ಬ. ಈ ಹಬ್ಬದ ಯಶಸ್ಸಿಗೆ ಹಲವು ತಯಾರಿಗಳು ನಡೆಯಬೇಕಾಗುತ್ತದೆ.  ಅಂತಹ ತಯಾರಿಯಲ್ಲಿ ಗ್ರಾಮೀಣ ಭಾಗದ ರೈತರಿಗೆ ಇದೊಂದು ಚುನಾವಣೆಯೇ ಬಾರದಿದ್ದರೆ ಸಾಕು ಎನ್ನುವ ಹಾಗೆ ಆಗಿದೆ ವ್ಯವಸ್ಥೆ. ಕಳೆದ 3-4 ವರ್ಷಗಳಿಂದ ಈ ಬಗ್ಗೆ ರೈತರು ಧ್ವನಿ ಎತ್ತುತ್ತಿದ್ದರೂ ಯಾವ ಪ್ರಯೋಜನವೂ ಆಗಿಲ್ಲ. ಹೀಗಾಗಿ ಈ ಚುನಾವಣಾ ಹಬ್ಬದ ಸಂಭ್ರಮದಲ್ಲಿ ರೈತರು ಮಾತ್ರಾ ಶೋಕ, ಅಸಮಾಧಾನ, ವಿಷಾದವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ರೈತರಿಗೆ ತೊಂದರೆಯಾಗುವುದು ಕೋವಿ ಠೇವಣಾತಿ. 

Advertisement
Advertisement

ಗ್ರಾಮೀಣ ಭಾಗದಲ್ಲಿ ಕೃಷಿಯೇ ಬದುಕಿಗೆ ಜೀವನಾಧಾರ. ಕೃಷಿ ರಕ್ಷಣೆಯೇ ರೈತನ ಸವಾಲು. ಮಂಗಗಳು, ಕಾಡು ಪ್ರಾಣಿಗಳು ಸೇರಿದಂತೆ ಹತ್ತು ಹಲು ಸಮಸ್ಯೆ. ಇಂತಹ ಸಮಸ್ಯೆಗಳು ಬಂದಾಗ ಭಯಪಡಿಸಿ ಕೃಷಿ ರಕ್ಷಿಸಲು ರೈತ ಹೆಣಗಾಡುತ್ತಾನೆ. ಕೋವಿ ಸಿಡಿಸದೇ ಇದ್ದರೂ ಕೋವಿ ತೋರಿಸಿದರೆ ಮಂಗ ಓಡುತ್ತದೆ ಎನ್ನುವ ಹಾಗೆ ಇದೆ ಪರಿಸ್ಥಿತಿ. ಆದರೆ ಪ್ರತೀ ವರ್ಷ ಒಂದೊಲ್ಲೊಂದು ಚುನಾವಣೆ ಬಂದಾಗ ರೈತರ ಪಾಲಿಗೆ ಮಾತ್ರಾ ಸಂಕಷ್ಟ. ಕೃಷಿ ರಕ್ಷಣೆಗೆಂದೇ ಅನುಮತಿ ಪಡೆದು ಇರಿಸಿಕೊಂಡ ಕೋವಿಯನ್ನು ಠೇವಣಾತಿ ಇರಿಸಲು ಆದೇಶವಾಗುತ್ತದೆ.  ಸುಮಾರು ಎರಡು ತಿಂಗಳ ಕಾಲ ಈ ಠೇವಣಾತಿ ಇರುತ್ತದೆ. ಈ ಸಮಯದಲ್ಲಿ ಕೃಷಿ ಹಾನಿಯಾಗುವುದು ಇರುತ್ತದೆ. ಈ ಬಾರಿಯೂ ಅಂತಹ ಆದೇಶವಾಗಿದೆ. ರೈತರು ಸಹಜವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಚ್ಚರಿ ಎಂದರೆ ರೈತರ ನೆರವಿಗೆ ಬರಬೇಕಾದ ಜನಪ್ರತಿನಿಧಿಗಳು ಪ್ರತೀ ಬಾರಿಯೂ ಮೌನವಾಗಿದ್ದಾರೆ. ಅಧಿಕಾರಿಗಳು ಕಾನೂನು ಹೆಸರು ಹೇಳುತ್ತಾರೆ. ಮತ ಕೇಳಲು ಬರುವ ಯಾವ ಪಕ್ಷಗಳು ರೈತರ ಈ ಸಮಸ್ಯೆ ಬಗ್ಗೆ ಮಾತನಾಡುವುದಿಲ್ಲ. ಹೀಗಾಗಿ ರೈತರು ಏಕೆ ಮತ ನೀಡಬೇಕು ಎಂದೂ ಪ್ರಶ್ನೆ ಮಾಡಿದ್ದು ಇದೆ. ಆದರೆ ಚುನಾವಣಾ ಹಬ್ಬದಲ್ಲಿ ಭಾಗವಹಿಸಬೇಕು ಎನ್ನುವ ನೆಲೆಯಲ್ಲಿ ಇದುವರೆಗೂ ಭಾಗವಹಿಸಿದ್ದಾರೆ. ಅದೇ ದೌರ್ಬಲ್ಯ ಎಂದು ಭಾವಿಸಿಕೊಂಡಿದ್ದಾರೆ ಜನಪ್ರತಿನಿಧಿಗಳು, ಪಕ್ಷಗಳು ಹಾಗೂ ಅಧಿಕಾರಿಗಳು.

Advertisement

ಕಳೆದ 3-4 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಸಮಯದಲ್ಲಿ ಕೋವಿ ಠೇವಣಾತಿಯ ಬಗ್ಗೆ ಚರ್ಚೆ ಆಗುತ್ತಿದೆ. ಆರಂಭದಲ್ಲಿ ಕೋವಿ ಠೇವಣಾತಿ ವಿನಾಯತಿಗೆ ತಾಲೂಕಿನಲ್ಲಿ ಅಧಿಕಾರಿಗಳಿಗೆ ಅರ್ಜಿ ನೀಡಿ ವಿನಾಯತಿ ಪಡೆಯಬೇಕಾಗಿತ್ತು. ನಂತರ ಜಿಲ್ಲಾಧಿಕಾರಿಗಳಿಗೆ ಅರ್ಜಿ ನೀಡಬೇಕು ಎಂದಾಗಿತ್ತು, ಈಗ ಮತ್ತೆ ತಾಲೂಕಿನ ಅಧಿಕಾರಿಗಳಿಗೆ ವಿನಾಯಿತಿ ಅರ್ಜಿ ನೀಡಬೇಕು.. ಹೀಗೇ ಗೊಂದಲಗಳು ಪ್ರತೀ ಬಾರಿ.

ಕಳೆದ ವರ್ಷ ಖಾಸಗಿಯಾಗಿ ಹಾಗೂ ಸುಮಾರು 50 ರಷ್ಟು ಕೋವಿದಾರರು ನ್ಯಾಯಾಲಯದ ಮೊರೆ ಹೋದರು. ರೈತರಿಗೆ ಕೃಷಿ ರಕ್ಷಣೆಗೆಂದು ಇರುವ ಕೋವಿಯನ್ನು ಚುನಾವಣೆಯ ಸಮಯದಲ್ಲಿ ಠೇವಣಾತಿ ಇರಿಸುವುದಕ್ಕೆ ವಿನಾಯಿತಿ ನೀಡಬೇಕು ಎಂದು ವಾದಿಸಿದ್ದರು. ಈ ಸಂದರ್ಭದಲ್ಲಿ ನ್ಯಾಯಾಲಯವು ಚುನಾವಣಾ ಘೋಷಣೆಯ ಜೊತೆಗೇ ಸಮಿತಿ ರಚಿಸಿ ಅದಕ್ಕೆ ಕೋವಿದಾರರು ಅರ್ಜಿ ಸಲ್ಲಿಸಿ ಅಲ್ಲಿಂದ ವಿನಾಯತಿ ಪಡೆಯಬೇಕು ಎಂದು ಸೂಚನೆ ನೀಡಿತ್ತು. ಈ ಮಾದರಿಯಲ್ಲಿ ಕೆಲವು ರೈತರು ಕಳೆದ ಚುನಾವಣೆಯ ವೇಳೆ ಕೋವಿ ಠೇವಣಾತಿಯಿಂದ ವಿನಾಯತಿ ಪಡೆದಿದ್ದರು. ಈ ಬಾರಿ ಮತ್ತೆ ಅದೇ ಸಮಸ್ಯೆ…!

Advertisement

ಚುನಾವಣಾ ಆಯೋಗವು ಮುಕ್ತ ಹಾಗೂ ನ್ಯಾಯಸಮ್ಮತವಾದ ಚುನಾವಣೆಗೆ ಸೂಚನೆ ನೀಡಿದೆ. ಮುಕ್ತ ಹಾಗೂ ನ್ಯಾಯಸಮ್ಮತವಾದ ಚುನಾವಣೆಗೆ ಶಸ್ತ್ರಾಸ್ತಗಳ ಠೇವಣಾತಿ ಇರಿಸಬೇಕು ಎನ್ನುವುದು ಕಾನೂನು. ಅಷ್ಟೇ ಅಲ್ಲ, ನ್ಯಾಯಸಮ್ಮತ ಹಾಗೂ ಮುಕ್ತವಾದ ಚುನಾವಣೆಗೆ ಬೇಕಾದ ಎಲ್ಲಾ ಕ್ರಮಗಳನ್ನೂ ಚುನಾವಣಾ ಆಯೋಗ ಮಾಡಬೇಕು. ಅಚ್ಚರಿ ಎಂದರೆ ರೈತರಿಗೆ ಕಾನೂನುಗಳು ಅಳವಡಿಕೆಯಾದರೆ, ನ್ಯಾಯಸಮ್ಮತವಾದ ಚುನಾವಣೆಗೆ ಬೇಕಾದ ಇತರ ಹಲವು ಅಂಶಗಳು ಕಾನೂನಿನಲ್ಲಿದ್ದರೂ ಅದು ಜಾರಿಯಾಗುವುದಿಲ್ಲ…!. ಈಗ  ಈ ಕಾನೂನಿನಲ್ಲಿ ರೈತರಿಗೆ ವಿನಾಯಿತಿ ನೀಡಬೇಕು ಎನ್ನುವುದು ವಾದ.

ಮುಕ್ತ ಹಾಗೂ ನ್ಯಾಯ ಸಮ್ಮತವಾದ ಚುನಾವಣೆಗೆ ರೈತರ ಕೋವಿಯಿಂದ ಇದುವರೆಗೆ ಸಮಸ್ಯೆಯಾಗಿಲ್ಲವಾದ್ದರಿಂದ ವಿನಾಯಿತಿ ನೀಡಬೇಕು ಎನ್ನುವುದು ರೈತರ ವಾದ. ಒಂದು ವೇಳೆ ಕ್ರಿಮಿನಲ್‌ ಕೇಸು ಹಿನ್ನೆಲೆಯ ಅಥವಾ ಯಾವುದಾದರೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ರೈತರ ಬಳಿ ಕೋವಿ ಇದ್ದರೆ ಅಂತಹವರಿಗೆ ಚುನಾವಣಾ ನಿಯಮದ ಪ್ರಕಾರ ಕೋವಿ ಠೇವಣಾತಿಗೆ ಕಡ್ಡಾಯ ಮಾಡಬಹುದು, ಆದರೆ ಸಾಮಾನ್ಯ ರೈತರೂ ಠೇವಣಾತಿ ಇರಿಸಬೇಕು ಎನ್ನುವುದು ಸರಿಯಲ್ಲ ಎನ್ನುವುದು ಬಹುತೇಕ ಕೃಷಿಕರ ಅಭಿಪ್ರಾಯ.

Advertisement

ಇದೀಗ ಮತ್ತೆ ಕೋವಿ ಠೇವಣಾತಿಯ ಚರ್ಚೆ ಆರಂಭವಾಗಿದೆ. ಸುಳ್ಯದಲ್ಲಿ ಕೋವಿ ಹೊಂದಿರುವ , ಕೇಸು ಇಲ್ಲದ ಕೃಷಿಕರು ಸಭೆ ಸೇರಿ ಈ ಬಗ್ಗೆ ಚರ್ಚೆ  ನಡೆಸಲು ಮುಂದಾಗಿದ್ದಾರೆ. ಯಾವುದೇ ಸ್ಪಂದನೆ ದೊರೆಯದೇ ಇದ್ದರೆ ಮತದಾನವನ್ನೇ ಬಹಿಷ್ಕಾರ ಮಾಡಿದರೆ ಹೇಗೆ ..? ಚುನಾವಣಾ ಹಬ್ಬದಿಂದಲೇ ದೂರ ಇದ್ದರೆ ಹೇಗೆ ಎನ್ನುವ ಚರ್ಚೆಗಳು ಈಗ ಆರಂಭವಾಗತೊಡಗಿದೆ. ಅಧಿಕಾರಿಗಳು, ಪಕ್ಷಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನಿಸುವುದು ಒಳಿತು.

Farmers are keeping gun deposits during elections. This has been a problem for the past several years.no one responding about this problem. Now they are thinking of holding a meeting of farmers and not participating in the election process.

Advertisement

 

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ | ಯಾಕೆ ಗೊತ್ತಾ…?
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror