ಸುಳ್ಯ ತಾಲೂಕಿನ ವಿವಿದೆಡೆ ಅದರಲ್ಲೂ ಅರಣ್ಯದ ಅಂಚಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಇದೀಗ ಮತ್ತೆ ಕೊಲ್ಲಮೊಗ್ರದಲ್ಲಿ ಕಾಡಾನೆ ದಾಳಿಗೆ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಬೆಳಗ್ಗೆ ಹಾಲು ಸೊಸೈಟಿಗೆ ತೆರಳುವ ವೇಳೆ ಆನೆ ದಾಳಿ ಮಾಡಿದೆ. ಅನೇಕರ ಕೃಷಿಯೂ ಹಾನಿಯಾಗುತ್ತಿದೆ. ಪರಿಹಾರ ಹೇಗೆ ? ಎಂಬುದು ಯಕ್ಷ ಪ್ರಶ್ನೆ. ರೂರಲ್ ಮಿರರ್ ಈ ಬಗ್ಗೆ ಜಾಗೃತಿ ವರದಿ ಪ್ರಕಟ ಮಾಡುತ್ತದೆ. ಕೃಷಿಕರ ಅಭಿಪ್ರಾಯ ತಿಳಿಸಬಹುದು.
ಸುಳ್ಯ ತಾಲೂಕಿನ ಸಂಪಾಜೆ, ಅರಂತೋಡು, ಮಂಡೆಕೋಲು, ಆಲೆಟ್ಟಿ, ಮಡಪ್ಪಾಡಿ, ಕೊಲ್ಲಮೊಗ್ರ ಸೇರಿದಂತೆ ಅರಣ್ಯ ಭಾಗದ ಅಂಚಿನಲ್ಲಿ ಅನೇಕ ವರ್ಷಗಳಿಂದ ಕಾಡಾನೆ ಹಾವಳಿ ಇದೆ. ಹಿಂದೆ ಕೃಷಿ ಹಾನಿ ಮಾಡುತ್ತಿದ್ದ ಕಾಡಾನೆ ಈಚೆಗೆ ಮನುಷ್ಯರ ಮೇಲೂ ದಾಳಿ ಮಾಡಲು ಆರಂಭಿಸಿದೆ. ಕೊಲ್ಲಮೊಗ್ರ ಪ್ರದೇಶದಲ್ಲಿ ಭಾನುವಾರ ಪ್ರಕರಣ ಸೇರಿದರೆ ಗಂಭೀರ ಗಾಯಗೊಂಡ 3 ನೇ ಪ್ರಕರಣವಾಗಿದೆ. ಈ ಹಿಂದೆ ಇಬ್ಬರು ಮೃತಪಟ್ಟಿದ್ದಾರೆ. ತೋಟಕ್ಕೆ ನೀರುಣಿಸಲು ತೆರಳಿದ ವೇಳೆ ಒಬ್ಬರು ಆನೆ ದಾಳಿ ಮಾಡಿ ಸ್ಥಳದಲ್ಲೇ ಮೃತಪಟ್ಟಿದ್ದರೆ ಇನ್ನೊಬ್ಬರು ನೀರಿನ ಪೈಪ್ ದುರಸ್ತಿ ವೇಳೆ ಆನೆ ದಾಳಿ ಮಾಡಿ ಗಾಯಗೊಂಡು ಮೃತಪಟ್ಟಿದ್ದರು. ಹೀಗಾಗಿ ಈಗ ರಾತ್ರಿ ವೇಳೆ ಹಾಗೂ ಮುಂಜಾನೆ ಕೃಷಿಕರು ಓಡಾಟಕ್ಕೆ ಭಯಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕೃಷಿಗೆ ದಾಳಿ ಮಾಡುವ ಕಾಡಾನೆ ಬಾಳೆ, ತೆಂಗು, ಅಡಿಕೆ ಗಿಡ ಸಹಿತ ಎಲ್ಲವನ್ನೂ ನಾಶ ಮಾಡುತ್ತದೆ. ಫಸಲು ಬರಲು ಸಿದ್ಧವಾದ ಗಿಡಗಳು ನಾಶವಾದರೆ ಅಪಾರ ನಷ್ಟವನ್ನು ಕೃಷಿಕರು ಅನುಭವಿಸಬೇಕಾಗುತ್ತದೆ. ಈ ನಾಶಕ್ಕೆ ಕಿಂಚಿತ್ ಪರಿಹಾರ ಮಾತ್ರಾ ಇಲಾಖೆಗಳಿಂದ ದೊರೆಯುತ್ತದೆ. ಸರ್ಕಾರಗಳು ಈ ಬಗ್ಗೆ ಇನ್ನೂ ಗಂಭೀರವಾಗಿ ಯೋಚನೆ ಮಾಡಿಲ್ಲ. ಈಗಾಗಲೇ ಸುಳ್ಯ ತಾಲೂಕಿನಲ್ಲಿ ಅಡಿಕೆ ಹಳದಿ ಎಲೆರೋಗ ಸಹಿತ ವಿವಿಧ ರೋಗಗಳಿಂದ ತುತ್ತಾಗುತ್ತಿರುವ ವೇಳೆ ಆನೆ ದಾಳಿಯೂ ಗಂಭೀರ ಸಮಸ್ಯೆಯಾಗಿದೆ.
ಆನೆ ದಾಳಿ ತಡೆಯಲು ಇಡೀ ರಾತ್ರಿ ಕೃಷಿಕರು ತಮ್ಮ ತೋಟದಲ್ಲಿ ವಿವಿಧ ಪ್ರಯತ್ನ ಮಾಡಿದ್ದೂ ಇದೆ. ತಂಡವಾಗಿ ಇಡೀ ಊರು ಕೆಲಸ ಮಾಡಿದೆ. ವ್ಯಾಟ್ಸಪ್ ಗುಂಪು ರಚನೆ ಮಾಡಿ ಈ ಮೂಲಕ ಮಾಹಿತಿ ರವಾನೆ ಮಾಡಿಕೊಂಡಿದೆ, ವಿದ್ಯುತ್ ಬೇಲಿ ಅಳವಡಿಕೆ, ಕಂದಕ ಹೀಗೇ ವಿವಿಧ ಪ್ರಯತ್ನ ಮಾಡಿದ್ದಾರೆ. ಇದೆಲ್ಲದರ ಫಾಲೋ ಅಪ್ ಜೊತೆಗೆ ಸರ್ಕಾರ ಈ ಸಮಸ್ಯೆಗೆ ಏನು ಮಾಡಬಹುದು ಎಂಬುದರ ಬಗ್ಗೆ ಅಭಿಯಾನ ರೂಪದಲ್ಲಿ ಕೃಷಿಕರ ಅಭಿಪ್ರಾಯ ಬೇಕಾಗಿದೆ. ಈ ಕೆಲಸವನ್ನು ಮಾಧ್ಯಮವಾಗಿ ರೂರಲ್ ಮಿರರ್ ಮಾಡುತ್ತದೆ. ಹೀಗಾಗಿ ಆನೆ ದಾಳಿಯಿಂದ ಕೃಷಿ ರಕ್ಷಣೆಗೆ , ಮನುಷ್ಯರ ರಕ್ಷಣೆಗೆ ಮಾಡಬೇಕಾದ ಮುಂಜಾಗ್ರತೆ ಬಗ್ಗೆ ನಮಗೆ ತಿಳಿಸಿ, ಸರ್ಕಾರ ಮಾಡಬೇಕಾದ ಕ್ರಮಗಳ ಬಗ್ಗೆಯೂ ತಿಳಿಸಿ. ರೂರಲ್ ಮಿರರ್ ಈ ಬಗ್ಗೆ ವರದಿ ಮಾಡುತ್ತಾ ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ವರದಿ ರೂಪದಲ್ಲಿ ದಾಖಲೆ ನೀಡುವ ಪ್ರಯತ್ನ ಮಾಡುತ್ತದೆ. ನಮ್ಮ ವ್ಯಾಟ್ಸಪ್ ಸಂಖ್ಯೆ 9449125447 . ಈ ಸಂಖ್ಯೆಗೆ ವ್ಯಾಟ್ಸಪ್ ಮೆಸೇಜ್ ಮಾಡಬಹುದು. ಅಥವಾ ಅಭಿಪ್ರಾಯವನ್ನು ವಿಡಿಯೋ ಮಾಡಿ ಕಳುಹಿಸಬಹುದು.
ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…
ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…
2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…
ನಾಗಾಲ್ಯಾಂಡ್ನಲ್ಲಿ ರಬ್ಬರ್ ಕೃಷಿ ಸುಮಾರು 29,794 ಹೆಕ್ಟೇರ್ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್ನಲ್ಲಿ ಸೂಕ್ತ…
ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…
ಸೆ.8ರಿಂದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ.…