ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

September 14, 2026
8:21 AM
ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ವಿಘ್ನಗಳು ಇಲ್ಲದ ಬದುಕನ್ನು ಬೇಡುವುದಕ್ಕಿಂತ, ವಿಘ್ನಗಳ ನಡುವೆಯೂ ಸರಿಯಾದ ದಾರಿ ಕಂಡುಕೊಳ್ಳುವ ಬುದ್ಧಿ ಮತ್ತು ಧೈರ್ಯವನ್ನು ಬೆಳೆಸಿಕೊಳ್ಳುವುದೇ ಗಣೇಶತತ್ತ್ವದ ಆಂತರಿಕ ಆಶಯ.

ಗಣೇಶ ಚತುರ್ಥಿ ಎಂದರೆ ನಮ್ಮ ನೆನಪಿನಲ್ಲಿ ಮೊದಲು ಮೂಡುವುದು ಒಂದು ಮುದ್ದಾದ ಆನೆಯ ಮುಖ. ಅದರ ಮುಂದೆ ಹೊತ್ತಿ ಉರಿಯುವ ದೀಪ, ಗಂಧದ ಪರಿಮಳ, ಹೂವಿನ ಅಲಂಕಾರ, ಕಿವಿಗೆ ಬೀಳುವ ಮಂತ್ರಘೋಷ, ಮೋದಕದ ಸಿಹಿ ಇವೆಲ್ಲವೂ ಸೇರಿ ನಮ್ಮೊಳಗೆ ಬಾಲ್ಯದ ನೆನಪುಗಳನ್ನೂ, ಭಕ್ತಿಯ ಭಾವವನ್ನೂ ಎಬ್ಬಿಸುತ್ತವೆ.ಆದರೆ ಪ್ರತಿವರ್ಷವೂ ಗಣೇಶ ಬರುತ್ತಾನೆ.ನಾವುಪೂಜಿಸುತ್ತೇವೆ.ವಿಸರ್ಜಿಸುತ್ತೇವೆ.ಮತ್ತೆ ಮುಂದಿನ ವರ್ಷಕ್ಕಾಗಿ ಕಾಯುತ್ತೇವೆ.ಮೂರ್ತಿಯನ್ನು ಪೂಜಿಸುವುದಕ್ಕಿಂತ, ಗಣೇಶತತ್ತ್ವವನ್ನು ಬದುಕುವ ಕಾಲ ಇದು.

ಗಣೇಶನನ್ನು ನಾವು ವಿಘ್ನೇಶ್ವರ ಎಂದು ಕರೆಯುತ್ತೇವೆ. ವಿಘ್ನಗಳನ್ನು ನಿವಾರಿಸುವ ದೇವರು ಎಂಬುದು ಇದರ ಸರಳ ಅರ್ಥ. ಆದರೆ ಬದುಕನ್ನು ಸ್ವಲ್ಪ ಆಳವಾಗಿ ನೋಡಿದರೆ ಒಂದು ಸತ್ಯ ಗೋಚರಿಸುತ್ತದೆ ವಿಘ್ನಗಳಿಲ್ಲದ ಬದುಕು ಎಂಬುದೇ ಇಲ್ಲ.ಮನುಷ್ಯ ಹುಟ್ಟಿದ ಕ್ಷಣದಿಂದಲೇ ಅವನ ಮುಂದೆ ಒಂದಲ್ಲ ಒಂದು ವಿಘ್ನ. ಬಾಲ್ಯದಲ್ಲಿ ವಿದ್ಯೆಯ ವಿಘ್ನ, ಯೌವನದಲ್ಲಿ ಉದ್ಯೋಗದ ವಿಘ್ನ, ಬದುಕಿನಲ್ಲಿ ಸಂಬಂಧಗಳ ವಿಘ್ನ, ಸಮಾಜದಲ್ಲಿ ಸಂಘರ್ಷಗಳ ವಿಘ್ನ, ವೃದ್ಧಾಪ್ಯದಲ್ಲಿ ದೇಹದ ಮಿತಿಗಳ ವಿಘ್ನ.

ಹಾಗಾದರೆ ಗಣೇಶನನ್ನು ಪೂಜಿಸುವುದರ ನಿಜವಾದ ಅರ್ಥವೇನು? :  ಬಹುಶಃ ನಮ್ಮ ದಾರಿಯಲ್ಲಿರುವ ಪ್ರತಿಯೊಂದು ವಿಘ್ನವನ್ನೂ ತೆಗೆದುಹಾಕು ಎಂದು ಬೇಡುವುದಕ್ಕಿಂತ, ವಿಘ್ನಗಳ ನಡುವೆಯೂ ದಾರಿ ಕಂಡುಕೊಳ್ಳುವ ಬುದ್ಧಿ ನಮಗೆ ದೊರಕಲಿ ಎಂದು ಪ್ರಾರ್ಥಿಸುವುದೇ ಗಣೇಶಾರಾಧನೆಯ ಆಂತರಿಕ ಆಶಯ. ಅದಕ್ಕಾಗಿಯೇ ಇಂದಿನ ಗಣೇಶೋತ್ಸವವನ್ನು ಸ್ವಲ್ಪ ಹೊಸ ಕಣ್ಣಿನಿಂದ ನೋಡುವ ಅಗತ್ಯವಿದೆ.

ದೊಡ್ಡ ತಲೆ: ವಿಚಾರ ದೊಡ್ಡದಾಗಲಿ, ವಿವಾದವಲ್ಲ : ಗಣೇಶನ ದೊಡ್ಡ ತಲೆ ದೊಡ್ಡದಾಗಿ ಯೋಚಿಸುವುದನ್ನು ಕಲಿಸುತ್ತದೆ. ಇಂದು ಮನುಷ್ಯನ ಸಮಸ್ಯೆಗಳು ಮಾತ್ರ ದೊಡ್ಡದಾಗಿಲ್ಲ; ಅನೇಕ ಸಂದರ್ಭಗಳಲ್ಲಿ ನಮ್ಮ ದೃಷ್ಟಿಕೋನವೇ ಚಿಕ್ಕದಾಗಿದೆ. ಒಂದು ಅಭಿಪ್ರಾಯ ಭಿನ್ನವಾದರೆ ವ್ಯಕ್ತಿಯೇ ಶತ್ರುವಾಗುತ್ತಾನೆ. ಒಂದು ಮಾತು ಇಷ್ಟವಾಗದಿದ್ದರೆ ಸಂಬಂಧವೇ ಮುರಿಯುತ್ತದೆ. ಸಾಮಾಜಿಕ ಜಾಲತಾಣದ ಒಂದು ಸಾಲು ವರ್ಷಗಳ ಸ್ನೇಹವನ್ನೂ ದ್ವೇಷವಾಗಿ ಪರಿವರ್ತಿಸಬಲ್ಲದು. ಇಂತಹ ಕಾಲದಲ್ಲಿ ಗಣೇಶನ ದೊಡ್ಡ ತಲೆ ನಮಗೆ ನೀಡುವ ಸಂದೇಶ ಬಹಳ ಸರಳ: “ವಿಚಾರವನ್ನು ದೊಡ್ಡದಾಗಿಸು; ವಿವಾದವನ್ನು ಅಲ್ಲ.”

ದೊಡ್ಡ ಕಿವಿಗಳು: ಮೊದಲು ಕೇಳುವುದನ್ನು ಕಲಿಯೋಣ: ಗಣೇಶನ ದೊಡ್ಡ ಕಿವಿಗಳು ಮತ್ತೊಂದು ಮಹತ್ವದ ಪಾಠವನ್ನು ಹೇಳುತ್ತವೆ—ಕೇಳುವ ಸಹನೆಯನ್ನು ಬೆಳೆಸಿಕೊಳ್ಳಿ. ಮಾತನಾಡುವವರು ಎಲ್ಲೆಡೆ ಸಿಗುತ್ತಾರೆ. ಆದರೆ ಮನಸ್ಸಿಟ್ಟು ಕೇಳುವವರು ಅಪರೂಪವಾಗುತ್ತಿದ್ದಾರೆ. ಮನೆಯಲ್ಲಿ ಒಬ್ಬರ ಮಾತನ್ನು ಮತ್ತೊಬ್ಬರು ಕೇಳುವುದಿಲ್ಲ. ಪೋಷಕರು ಮಕ್ಕಳ ಮನಸ್ಸನ್ನು ಕೇಳುವುದಿಲ್ಲ; ಮಕ್ಕಳು ಪೋಷಕರ ಕಾಳಜಿಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಸಮಾಜವೂ ತನ್ನ ಅಂಚಿನಲ್ಲಿರುವವರ ಧ್ವನಿಯನ್ನು ಅನೇಕ ಬಾರಿ ಕೇಳಿಸಿಕೊಳ್ಳುವುದಿಲ್ಲ. ಬಹುಶಃ ಅದಕ್ಕಾಗಿಯೇ ಗಣೇಶನ ಕಿವಿಗಳು ಇಷ್ಟು ದೊಡ್ಡದಾಗಿವೆ!. ಕೇಳುವುದು ಎಂದರೆ ಒಪ್ಪಿಕೊಳ್ಳುವುದಲ್ಲ; ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು.

ಸಣ್ಣ ಕಣ್ಣುಗಳು: ಗುರಿಯ ಕಡೆ ದೃಷ್ಟಿ ಇರಲಿ :  ಗಣೇಶನ ಸಣ್ಣ ಕಣ್ಣುಗಳು ಏಕಾಗ್ರತೆಯ ಪಾಠವನ್ನು ಕಲಿಸುತ್ತವೆ. ನಮ್ಮ ಕಾಲದ ದೊಡ್ಡ ಸಮಸ್ಯೆ ಅವಕಾಶಗಳ ಕೊರತೆಯಲ್ಲ; ಗಮನದ ಚಂಚಲತೆ. ಕೈಯಲ್ಲಿ ಮೊಬೈಲ್, ಮುಂದೆ ಪರದೆ, ಮನಸ್ಸಿನಲ್ಲಿ ಸಾವಿರ ಆಸೆಗಳು. ಆದರೆ ಗುರಿಯ ಕಡೆ ದೃಷ್ಟಿ ನಿಲ್ಲುವುದೇ ಕಷ್ಟವಾಗಿದೆ. ಗಣೇಶನ ಕಣ್ಣುಗಳು ನಮಗೆ ನೆನಪಿಸುವುದು, “ಜಗತ್ತನ್ನು ನೋಡಲು ಕಣ್ಣುಗಳಿರಲಿ; ಗುರಿಯನ್ನು ಕಾಣಲು ದೃಷ್ಟಿಯಿರಲಿ.”

ದೊಡ್ಡ ಹೊಟ್ಟೆ: ಎಲ್ಲದಕ್ಕೂ ಪ್ರತಿಕ್ರಿಯೆ ಬೇಕಿಲ್ಲ : ಗಣೇಶನ ದೊಡ್ಡ ಹೊಟ್ಟೆಯನ್ನು ಕೇವಲ ಪೌರಾಣಿಕ ರೂಪಲಕ್ಷಣವಾಗಿ ನೋಡುವುದಕ್ಕಿಂತ, ಬದುಕಿನ ಕಹಿಯನ್ನೂ ಜೀರ್ಣಿಸಿಕೊಳ್ಳುವ ಸಾಮರ್ಥ್ಯದ ಸಂಕೇತವಾಗಿ ನೋಡಬಹುದು. ಪ್ರತಿ ಮಾತಿಗೂ ಪ್ರತಿಕ್ರಿಯೆ. ಪ್ರತಿ ಟೀಕೆಗೆ ಉತ್ತರ. ಪ್ರತಿ ಅಪಮಾನಕ್ಕೆ ಪ್ರತೀಕಾರ—ಇದು ಇಂದಿನ ಬದುಕಿನ ವೇಗವಾಗಿ ಬದಲಾಗುತ್ತಿದೆ. ಆದರೆ ಪ್ರೌಢತೆ ಎಂದರೆ ಎಲ್ಲದಕ್ಕೂ ಉತ್ತರಿಸುವುದಲ್ಲ. ಯಾವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು, ಯಾವುದನ್ನು ಅಲ್ಲಿಯೇ ಬಿಟ್ಟು ಮುಂದೆ ಸಾಗಬೇಕು ಎಂಬ ವಿವೇಕವೂ ಪ್ರೌಢತೆಯೇ.

ಏಕದಂತ: ಕೆಲವೊಮ್ಮೆ ಬಿಡುವುದೂ ಬದುಕಿನ ಪಾಠ :  ಗಣೇಶನ ಏಕದಂತವೂ ಆಳವಾದ ಸಂದೇಶವೊಂದನ್ನು ನೀಡುತ್ತದೆ. ಬದುಕಿನಲ್ಲಿ ಎಲ್ಲವನ್ನೂ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವು ನೋವುಗಳನ್ನು ಬಿಡಬೇಕು. ಕೆಲವು ಅಹಂಕಾರಗಳನ್ನು ಮುರಿಯಬೇಕು. ಕೆಲವು ಸಂಬಂಧಗಳಲ್ಲಿ ಕ್ಷಮಿಸಬೇಕು. ಕೆಲವು ನೆನಪುಗಳನ್ನು ಮೌನವಾಗಿ ಹಿಂದಕ್ಕೆ ಕಳುಹಿಸಬೇಕು. ಬಿಡುವುದೂ ಸೋಲಲ್ಲ; ಕೆಲವೊಮ್ಮೆ ಅದು ಬುದ್ಧಿಪೂರ್ವಕವಾಗಿ ಮುಂದೆ ಸಾಗುವ ಮಾರ್ಗ.

ಮೂಷಕ: ಆಸೆಗಳ ಮೇಲೆ ವಿವೇಕದ ಸವಾರಿ : ಗಣೇಶನು ಮೂಷಕದ ಮೇಲೆ ಕುಳಿತಿರುವ ಚಿತ್ರವೂ ಅಷ್ಟೇ ಅರ್ಥಪೂರ್ಣ. ಅಷ್ಟು ದೊಡ್ಡ ದೇವತೆ; ಅಷ್ಟು ಚಿಕ್ಕ ವಾಹನ! ಇದನ್ನು ಒಂದು ಸುಂದರ ರೂಪಕವಾಗಿ ನೋಡಬಹುದು. ಮನುಷ್ಯನ ಆಸೆಗಳು ಮೂಷಕದಂತೆ ಚಂಚಲವಾಗಿ ಎಲ್ಲೆಡೆ ಓಡಾಡಬಹುದು. ಅವುಗಳನ್ನು ಸಂಪೂರ್ಣವಾಗಿ ನಾಶಮಾಡುವುದು ಪರಿಹಾರವಲ್ಲ. ಬದಲಾಗಿ ಅವುಗಳ ಮೇಲೆ ನಮ್ಮ ವಿವೇಕದ ನಿಯಂತ್ರಣವಿರಬೇಕು. ಆಸೆಗಳು ನಮ್ಮನ್ನು ನಡೆಸಬಾರದು; ವಿವೇಕವು ಆಸೆಗಳನ್ನು ನಡೆಸಬೇಕು.

ಗಣೇಶೋತ್ಸವ ಪ್ರಕೃತಿಯ ಉತ್ಸವವೂ ಆಗಲಿ : ಇಂದು ಗಣೇಶೋತ್ಸವದ ಸಂಭ್ರಮ ಹೆಚ್ಚಾಗಿದೆ. ಆದರೆ ಅದರ ಜೊತೆಗೆ ನಮ್ಮ ಜವಾಬ್ದಾರಿಯೂ ಹೆಚ್ಚಾಗಬೇಕು. ಮಣ್ಣಿನ ಗಣೇಶನನ್ನು ಪ್ರತಿಷ್ಠಾಪಿಸಿ, ಪರಿಸರಕ್ಕೆ ಹಾನಿಕರ ವಸ್ತುಗಳಿಂದ ಅಲಂಕರಿಸುವುದರಲ್ಲಿ ಅರ್ಥವಿಲ್ಲ. ನದಿ, ಕೆರೆ, ಸಮುದ್ರಗಳನ್ನು ಮಲಿನಗೊಳಿಸಿ ಪ್ರಕೃತಿಯನ್ನು ಪೂಜಿಸುವುದರಲ್ಲಿ ಯಾವ ಧರ್ಮವೂ ಇಲ್ಲ. ಗಣೇಶನು ಪ್ರಕೃತಿಯಿಂದಲೇ ಬಂದವನು. ಮಣ್ಣಿನಿಂದ ರೂಪುಗೊಂಡು ಮತ್ತೆ ಮಣ್ಣಿಗೇ ಸೇರುವ ಮೂರ್ತಿ ನಮಗೆ ಬಹುದೊಡ್ಡ ಸತ್ಯವನ್ನು ನೆನಪಿಸುತ್ತದೆ, “ನೀನು ಪ್ರಕೃತಿಯ ಭಾಗ; ಪ್ರಕೃತಿಯ ಒಡೆಯನಲ್ಲ.” ಆದ್ದರಿಂದ ಗಣೇಶೋತ್ಸವ ಕೇವಲ ಧಾರ್ಮಿಕ ಆಚರಣೆಯಾಗದೆ ಸಾಮಾಜಿಕ ಜಾಗೃತಿಯ ಉತ್ಸವವೂ ಆಗಬೇಕು.

ಅನ್ನದಾನ, ರಕ್ತದಾನ, ಆರೋಗ್ಯ ಶಿಬಿರ, ವಿದ್ಯಾರ್ಥಿಗಳಿಗೆ ನೆರವು, ಸ್ವಚ್ಛತಾ ಅಭಿಯಾನ, ಪರಿಸರ ಸಂರಕ್ಷಣೆ—ಇಂತಹ ಸಮಾಜಮುಖಿ ಕಾರ್ಯಗಳ ಮೂಲಕ ಗಣೇಶತತ್ತ್ವವನ್ನು ಜನರ ಬದುಕಿನೊಳಗೆ ಕೊಂಡೊಯ್ಯಬಹುದು.

ಗಣೇಶನ ಮುಂದೆ ನಾವು ಏನು ಕೇಳಬೇಕು? :  ಕೊನೆಗೆ ಗಣೇಶನ ಮುಂದೆ ಕೈಮುಗಿದು ನಿಂತಾಗ, “ನನ್ನ ಜೀವನದಲ್ಲಿ ಯಾವ ವಿಘ್ನವೂ ಬರದಂತೆ ಮಾಡು” ಎಂದು ಕೇಳುವುದಕ್ಕಿಂತ, “ವಿಘ್ನಗಳು ಬಂದಾಗ ಕುಗ್ಗದ ಮನಸ್ಸನ್ನು ಕೊಡು. ಸೋಲು ಬಂದಾಗ ಮುರಿಯದ ಧೈರ್ಯ ಕೊಡು. ಅವಕಾಶ ಬಂದಾಗ ಅಹಂಕಾರಪಡದ ವಿವೇಕ ಕೊಡು. ಯಶಸ್ಸು ಬಂದಾಗ ಹಂಚಿಕೊಳ್ಳುವ ಹೃದಯ ಕೊಡು. ಎಲ್ಲಕ್ಕಿಂತ ಮುಖ್ಯವಾಗಿ, ಸರಿಯಾದ ದಾರಿಯನ್ನು ಗುರುತಿಸುವ ಬುದ್ಧಿ ಕೊಡು.” ಎಂದು ಕೇಳುವುದು ಬಹುಶಃ ಗಣೇಶಾರಾಧನೆಯ ಇನ್ನೊಂದು ಅರ್ಥ.

ದೇವರು ನಮ್ಮ ದಾರಿಯಲ್ಲಿರುವ ಪ್ರತಿಯೊಂದು ಕಲ್ಲನ್ನೂ ತೆಗೆದುಹಾಕುತ್ತಾನೆ ಎಂಬ ನಂಬಿಕೆಗಿಂತ, ಕಲ್ಲುಗಳ ನಡುವೆಯೂ ದಾರಿ ಮಾಡಿಕೊಂಡು ನಡೆಯುವ ಶಕ್ತಿಯನ್ನು ನಮ್ಮೊಳಗೆ ಬೆಳೆಸುತ್ತಾನೆ ಎಂಬ ನಂಬಿಕೆ ಹೆಚ್ಚು ಅರ್ಥಪೂರ್ಣ. ಗಣೇಶೋತ್ಸವ ಮುಗಿಯುತ್ತದೆ. ಮೂರ್ತಿ ನೀರಿನಲ್ಲಿ ಕರಗುತ್ತದೆ. ಹೂವು ಒಣಗುತ್ತದೆ. ದೀಪ ಆರಿಹೋಗುತ್ತದೆ.

ಆದರೆ ಗಣೇಶನ ಸಂದೇಶ ನಮ್ಮೊಳಗೆ ಉಳಿದರೆ? : ಅದೇ ನಿಜವಾದ ವಿಸರ್ಜನೆಯಲ್ಲ; ನಿಜವಾದ ಪ್ರತಿಷ್ಠಾಪನೆ. ಹೀಗಾಗಿ ಈ ಬಾರಿ ಗಣೇಶನನ್ನು ಮನೆಗೆ ತರುವುದಷ್ಟೇ ಬೇಡ. ಅವನ ವಿಶಾಲ ಚಿಂತನೆಯನ್ನು ನಮ್ಮ ತಲೆಯಲ್ಲಿ, ಅವನ ಶ್ರವಣಶಕ್ತಿಯನ್ನು ನಮ್ಮ ಕಿವಿಯಲ್ಲಿ, ಅವನ ಏಕಾಗ್ರತೆಯನ್ನು ನಮ್ಮ ದೃಷ್ಟಿಯಲ್ಲಿ, ಅವನ ಸಹನೆಯನ್ನು ನಮ್ಮ ಹೃದಯದಲ್ಲಿ, ಅವನ ವಿವೇಕವನ್ನು ನಮ್ಮ ಬದುಕಿನಲ್ಲಿ ಪ್ರತಿಷ್ಠಾಪಿಸೋಣ. ವಿಘ್ನಗಳನ್ನು ದೂರ ಮಾಡುವ ಗಣೇಶನನ್ನು ಪೂಜಿಸುವುದರ ಜೊತೆಗೆ, ವಿಘ್ನಗಳ ಮುಂದೆ ಕುಗ್ಗದ ‘ಗಣೇಶತತ್ತ್ವ’ವನ್ನು ಬದುಕೋಣ. ಅದೇ ಇಂದಿನ ಗಣೇಶೋತ್ಸವದ ನಿಜವಾದ ಪ್ರಸ್ತುತತೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ
September 13, 2026
9:08 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?
September 13, 2026
12:16 PM
by: ಸಾಯಿಶೇಖರ್ ಕರಿಕಳ
ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು
September 13, 2026
8:13 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror