ತಿಂಗಳೊಂದರ ಹಿಂದೆ ತೋಟಕ್ಕೆ ಔಷಧಿ ಬಿಡುವ ಕಾರ್ಯದಲ್ಲಿ ಮಗ್ನನಾಗಿದ್ದೆ. ಮಧ್ಯಾಹ್ನದ ಹೊತ್ತು ಧ್ವನಿವರ್ಧಕದ ಸ್ವರ ಮನೆಯ ಬಳಿಯಿಂದ ಕೇಳಿಸಿತು. ಯಾವುದೋ ದರ ಕಡಿತದ ಮಾರಾಟದ ಪ್ರಚಾರದ್ದು ಇರಬಹುದು ಅಂತ ಊಹಿಸಿಕೊಂಡು ಮನೆಯ ಬಳಿ ಬಂದೆ. ಆಶ್ಚರ್ಯ ಕಾದಿತ್ತು. ಗ್ರಾಮ ಪಂಚಾಯತಿಯ(Grama panchayat) ಕಸ ಸಂಗ್ರಹಣಾ ವಾಹನ ಮನೆಯಂಗಳದಲ್ಲಿ ನಿಂತಿತ್ತು. ಘನ ತ್ಯಾಜ್ಯದ ಸಂಗ್ರಹಣೆ ಮತ್ತು ವೈಜ್ಞಾನಿಕ ವಿಲೇವಾರಿಯ(Waste management) ಕುರಿತು ಸರಕಾರದ ಜವಾಬ್ದಾರಿಯನ್ನು ತಿಳಿಸಿ ಪ್ರತಿ ವಾರದ ಸಂಗ್ರಹಣೆಗೋಸ್ಕರ ಗೋಣಿಯೊಂದನ್ನು ಕೊಟ್ಟು ತೆರಳಿದರು. ಬಹಳ ಒಳ್ಳೆಯ ವ್ಯವಸ್ಥೆ ಎಂದು ಅವರ ಬೆನ್ನು ತಟ್ಟಿ ಕಳಿಸಿದ್ದೆ.…..ಮುಂದೆ ಓದಿ….
ಮನೆಯೊಂದಕ್ಕೆ ತಿಂಗಳೊಂದರ ಕೇವಲ ಐವತ್ತು ರೂಪಾಯಿಯ ದರವನ್ನು ವಿಧಿಸಿದ್ದಾರೆ. ಪ್ರತಿಯೊಂದು ಮನೆಯವರು ಕಸವನ್ನು ನೀಡುವುದು ಕಡ್ಡಾಯ ಮತ್ತು ಜವಾಬ್ದಾರಿ ಎಂಬ ಕುರಿತು ಕಾಗದವನ್ನು ಹಂಚಿದ್ದಾರೆ. ವೈಜ್ಞಾನಿಕ ವಿಲೇವಾರಿ ಮಾಡದೆ ಇದ್ದರೆ ಆಗುವ ಕಾನೂನಾತ್ಮಕ ದಂಡದ ಬಗ್ಗೆ ಎಚ್ಚರಿಸಿದ್ದಾರೆ. ಸ್ವಚ್ಛ ಭಾರತದ ಕಲ್ಪನೆಗೆ ಬಹಳ ಉತ್ತಮ ವ್ಯವಸ್ಥೆ ಅಂತೂ ಹೌದು.
ಸಾರ್ವಜನಿಕರಾದ ನಾವು ಈ ವ್ಯವಸ್ಥೆಯಲ್ಲಿ ಅತ್ಯಂತ ಜವಾಬ್ದಾರಿಯಿಂದ ಯಾಕೆ ಸೇರಿಕೊಳ್ಳಬೇಕು ಎಂಬುದನ್ನು ಯೋಚಿಸೋಣ. ಕಾನೂನಾತ್ಮಕ ದಂಡನೆಗೆ ಬೆದರಿ ವ್ಯವಸ್ಥೆಗೆ ಸೇರಿಕೊಳ್ಳುವುದಲ್ಲ. ಸೂಕ್ಷ್ಮಗ್ರಾಹಿಗಳಾದವರು ಕಾನೂನಿನ ದಂಡನೆಯಿಂದ ತಪ್ಪಿಸಿಕೊಳ್ಳಬಹುದು ಆದರೆ ಪ್ರಕೃತಿ ಅಥವಾ ದೇವರು ಕೊಡುವ ದಂಡನೆಯಿಂದ ಯಾರೂ ತಪ್ಪಿಸಿಕೊಳ್ಳಲಾರರು ಎಂಬ ಅರಿವು ನಮಗೆಲ್ಲರಿಗೂ ಬರಬೇಕಾಗಿದೆ. ನಾವು ಪ್ರತಿದಿನವೋ,ಪ್ರತಿವಾರವೋ ಪೇಟೆಯಿಂದ ಬರುವಾಗ ಸಾಮಾನುಗಳನ್ನು ತಂದ ಪ್ಲಾಸ್ಟಿಕ್ ಚೀಲಗಳು, ಹರಿದು ತಿಂದ ತಿಂಡಿಗಳ ತೊಟ್ಟೆಗಳು, ಜಗಿದು ಬಿಸಾಡುವ ಗುಟ್ಕಾ ಪ್ಯಾಕೆಟ್ಟುಗಳು, ಅಲ್ಲಲ್ಲಿ ಆಗಾಗ ನಡೆಯುವ ಪೂಜೆ ಪುನಸ್ಕಾರಾದಿ ಕಾರ್ಯಕ್ರಮಗಳಲ್ಲಿ ಬಳಸಿ ಎಸೆಯುವ ಪ್ಲಾಸ್ಟಿಕ್ ಲೋಟಗಳು ಮತ್ತು ಇನ್ನಿತರ ಬಳಸಿ ಬಿಸಾಡುವ ಯಾವುದೇ ಪ್ಲಾಸ್ಟಿಕ್ ಸಾಮಾನುಗಳು ಅಲ್ಲಲ್ಲಿ ನೆಲೆ ನಿಂತು ಅಂತರ್ಜಲವನ್ನು ವಿಷಪೂರಿತವಾಗಿಸುತ್ತದೆ ಎಂಬುದು ನೆನಪಿರಲಿ. ಹರಿದು ಸಮುದ್ರ ಸೇರಿದರೆ ಸಮುದ್ರದ ಉಪ್ಪಿನಲ್ಲಿಯೂ ಪ್ಲಾಸ್ಟಿಕ್ ವಿಷ ಸೇರಿರುತ್ತದೆ ಎಂಬುದು ನೆನಪಿರಲಿ. ಬಿಸಿಯಾದ ಕಾಫಿ ಚಾ ಊಟ ಏನೇ ಇರಲಿ ಪ್ಲಾಸ್ಟಿಕ್ ನಲ್ಲಿ ಬಳಸಿದರೆ ನಮ್ಮ ಶರೀರವನ್ನೇ ಅಣು ರೂಪದಲ್ಲಿ ಹೊಕ್ಕುತ್ತದೆ ಎಂಬುದು ನೆನಪಿರಲಿ. ಈ ಎಲ್ಲಾ ಕಾರಣದಿಂದ ದೇವರು ಕೊಡುವ ಶಿಕ್ಷೆ ಊಹೆಗೂ ನಿಲುಕದ್ದು ಎಂಬುದು ನೆನಪಿರಲಿ.
ಗಂಡಸರಲ್ಲಿ ಬರುವ ಸಂತಾನ ಹೀನತೆ ಮತ್ತು ಹೆಂಗಸರ ಬಂಜೆತನಕ್ಕೆ ಅತ್ಯಂತ ಮೂಲ ಕಾರಣ ಪ್ಲಾಸ್ಟಿಕ್. ಅನೇಕ ಚರ್ಮ ಕಾಯಿಲೆಗಳಿಗೆ ಮೂಲ ಕಾರಣ ಪ್ಲಾಸ್ಟಿಕ್. ಅನೇಕ ಅಲರ್ಜಿಗಳಿಗೂ ಇದು ಕಾರಣವಾಗುತ್ತದೆ. ಪ್ಲಾಸ್ಟಿಕ್ ಹೊತ್ತಿಸಿದರೆ ಬಿಡುಗಡೆಯಾಗುವ ಹೊಗೆಯಂತೂ ನಮ್ಮ ಶ್ವಾಸಕೋಶವನ್ನೇ ಹಾಳು ಕೆಡವಬಹುದು. ಈಗಾಗಲೇ ಹಬ್ಬುತ್ತಿರುವ ಕ್ಯಾನ್ಸರ್ ಮಹಾಮಾರಿ ಮನೆಮನೆಯನ್ನು ತಟ್ಟದಂತೆ ಮಾಡಬೇಕಾದರೆ ಪ್ಲಾಸ್ಟಿಕನ್ನು ಸಾಧ್ಯವಾದಷ್ಟು ತ್ಯಜಿಸಲೇಬೇಕು. ಅನಿವಾರ್ಯವಾಗಿ ಮನೆಗೆ ಬಂದ ಪ್ಲಾಸ್ಟಿಕ್ ಇದ್ದಲ್ಲಿ ಸರಕಾರದ ಈ ವ್ಯವಸ್ಥೆಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಲೇಬೇಕು. ಈ ವ್ಯವಸ್ಥೆ ಇರುವುದು ಸರಕಾರಕ್ಕಾಗಿ ಅಲ್ಲ, ನಮಗಾಗಿ ಎಂಬುದು ನೆನಪಿರಲಿ.
ನಾವು ಆರೋಗ್ಯವಾಗಿ ಇರಬೇಕೆಂಬ ಆಸೆ ಇದ್ದಲ್ಲಿ,ನಮ್ಮ ಮಕ್ಕಳು ಅಥವಾ ಮೊಮ್ಮಕ್ಕಳ ಮುಖ ನೋಡಬೇಕೆಂಬ ಆಸೆ ಇದ್ದಲ್ಲಿ, ನಮ್ಮ ಕಣ್ಣೆದುರೇ ನಮ್ಮ ಪೀಳಿಗೆ ಕ್ಯಾನ್ಸರ್ ನಿಂದ ನರಳುವುದನ್ನು ನೋಡಬಾರದೆಂಬ ಆಸೆ ಇದ್ದಲ್ಲಿ, ಅವರ ಚಾಕರಿ ಮಾಡುವ ಸ್ಥಿತಿ ನಮಗೆ ಬಾರದೇ ಇರಲಿ ಎಂಬ ಆಸೆ ಇದ್ದಲ್ಲಿ, ನಮ್ಮ ಊರು, ನಮ್ಮ ಬೀದಿ,ನಮ್ಮ ತೋಡು ನದಿ ಸ್ವಚ್ಛ ಇರಬೇಕೆಂಬ ಆಸೆ ಇದ್ದಲ್ಲಿ ಪ್ಲಾಸ್ಟಿಕ್ ಅನ್ನು ಎಚ್ಚರದಿಂದ ಬಳಸೋಣ. ಬಳಸಿದ್ದನ್ನು ಎಚ್ಚರಿಕೆಯಿಂದ ವಿಲೇವಾರಿ ಮಾಡುವ ವ್ಯವಸ್ಥೆಯಲ್ಲಿ ತೊಡಗಿಕೊಳ್ಳೋಣ. ಪಂಚಾಯತ್ ವಿಧಿಸುವ 50ಯಾ ಇನ್ನೊಂದಷ್ಟು ಹೆಚ್ಚಿನ ರೂಪಾಯಿಗೆ ಆಸೆ ಪಡದೇ ಇರೋಣ. ಪ್ರಾಮಾಣಿಕ ಪ್ರಜೆಯಾಗೋಣ. ಮುಂದಿನ ಮಳೆಗಾಲದಲ್ಲಿ ಸ್ವಚ್ಛ ನೀರು ತೋಡಿನಲ್ಲಿ ಹರಿಯುವಂತೆ ಮಾಡೋಣ.
ಪ್ರತಿಯೊಬ್ಬರೂ ನೆನಪಿಡಬೇಕಾದದ್ದು ಮನೆಯ ಬಾಗಿಲಲ್ಲೇ ಚೀಲವೊಂದನ್ನು ನೇತು ಹಾಕೋಣ. ಪೇಟೆಗೆ ಹೋಗುವಾಗ ಅದನ್ನೇ ಕೊಂಡೊಯ್ಯೋಣ. ಬಾಗಿಲಲ್ಲಿದ್ದರೆ ನೆನಪಾಗಬಹುದು ಅಲ್ಲವಾದರೆ ಮರೆತು ಹೋಗಬಹುದು.
ಪ್ಲಾಸ್ಟಿಕ್ ತ್ಯಜಿಸಿ ಮನುಕುಲ ಉಳಿಸಿ
ಎ.ಪಿ. ಸದಾಶಿವ ಮರಿಕೆ
ರಾಜ್ಯದ ಹಲವೆಡೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.…
ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಎರಡೂ ಅವಿಭಾಜ್ಯ ಎಂದು ಶ್ರೀ…
ಮಳೆ ಮಾಹಿತಿ ಮೂಲಕ ಕೃಷಿಕರಿಗೆ ನೆರವಾಗುತ್ತಿರುವ ಸಾಯಿಶೇಖರ್ ಕರಿಕಳ ಅವರಿಗೆ ರೈತ ರತ್ನ…
ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಚೆಸ್ ಚಾಂಪಿಯನ್ಶಿಪ್ಗೆ ಭವ್ಯ ಚಾಲನೆ ದೊರೆತಿದ್ದು, ದೇಶದ 28…
ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ತೀವ್ರತೆ ಇಳಿಮುಖವಾಗಲಿದ್ದು, ಆಗಸ್ಟ್ 3ರಿಂದ ತೋಟದ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…