ಭಾರತೀಯರಿಗೆ ಚಿನ್ನದೊಂದಿಗೆ ಅವಿನಾಭಾವ ಸಂಬಂಧವಿದೆ. ಚಿನ್ನ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ಅದಕ್ಕಾಗಿಯೇ ಪ್ರತಿಯೊಬ್ಬ ಮಹಿಳೆ ಚಿನ್ನದ ಆಭರಣಗಳನ್ನು ಧರಿಸುತ್ತಾರೆ. ಆದರೆ ಈಗ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಾಗಾಗಿ ಇಷ್ಟು ಬೆಲೆಬಾಳುವ ಚಿನ್ನ ಉಚಿತವಾಗಿ ಸಿಕ್ಕರೆ ಯಾರಾದರೂ ಬಿಡುತ್ತಾರಾ? ನಾ ಮುಂದು ತಾ ಮುಂದು ಎಂದು ದಾಂಗುಡಿ ಇಡುತ್ತಾರೆ. ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಇಂತಹದ್ದೇ ಘಟನೆ ನಡೆದಿದೆ. ಜಿಲ್ಲೆಯ ಪರ್ಕಂಡಿ ಗ್ರಾಮದ ನದಿಯಲ್ಲಿ ಚಿನ್ನ ಪತ್ತೆಯಾಗಿದೆ. ಈ ಸುದ್ದಿ ಹರಡುತ್ತಲೇ ಊರಿನವರೆಲ್ಲ ನದಿಯ ದಡದಲ್ಲೇ ಕಾಲ ಕಳೆಯುತ್ತಿದ್ದಾರೆ. ಅಸಲಿಗೆ ಅಲ್ಲಿ ನಡೆಯುತ್ತಿರುವುದೇನು…..?
ನದಿಯ ದಡದಲ್ಲಿ ಚಿನ್ನ ಪತ್ತೆಯಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ನದಿ ದಡದಲ್ಲಿ ನೆರೆದಿದ್ದಾರೆ. ಬಂಗಾರದ ಹುಡುಕಾಟದಲ್ಲಿ ಕೆಲವರು ಕೈಯಿಂದ, ಇನ್ನು ಕೆಲವರು ಸಲಾಕೆಗಳಿಂದ ನದಿಯ ದಡವನ್ನು ಅಗೆಯುತ್ತಿದ್ದಾರೆ. ಈ ಘಟನೆ ಬಿರ್ಭೂಮ್ನ ರಾರಾಯ್ನಲ್ಲಿರುವ ಪರ್ಕಂಡಿ ಗ್ರಾಮದಲ್ಲಿ ನಡೆದಿದೆ.
ಹಲವರಿಗೆ ಚಿನ್ನದ ತುಂಡುಗಳು ಸಿಕ್ಕಿದೆ:ಬನ್ಸ್ಲೋಯ್ ನದಿ ಪರ್ಕಂಡಿ ಗ್ರಾಮದ ಮೂಲಕ ಹರಿಯುತ್ತದೆ. ಮಳೆಗಾಲದಲ್ಲಿ ಈ ನದಿ ತುಂಬಿ ಹರಿಯುತ್ತದೆ. ಬೇಸಿಗೆಯಲ್ಲಿ ನೀರು ಹೇರಳವಾಗಿರುವುದಿಲ್ಲ. ಈಗಂತೂ ನೀರು ಕಡಿಮೆಯಾಗಿದೆ. ಆದರೆ ಈ ನದಿಯ ಮರಳಿನಲ್ಲಿ ಚಿನ್ನ ಸಿಕ್ಕಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿಕೊಂಡಿದೆ. ಕೆಲವರಿಗೆ ಚಿನ್ನ ಸಿಕ್ಕಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಎಲ್ಲರೂ ನದಿ ದಂಡೆಗೆ ಹೋಗಿ ಮರಳು ಅಗೆಯಲು ಶುರು ಮಾಡಿದ್ದಾರೆ. ಹಾಗೆ ಅಗೆದವರಲ್ಲಿ ಕೆಲವರಿಗೆ ಚಿನ್ನ ಸಿಕ್ಕಿದೆ.
ಎರಡು ದಿನಗಳ ಹಿಂದೆ ಚಿನ್ನಪತ್ತೆ:ಜಾರ್ಖಂಡ್ ಮೂಲದ ವ್ಯಕ್ತಿಯೊಬ್ಬನಿಗೆ ಎರಡು ದಿನಗಳ ಹಿಂದೆ ನದಿ ದಂಡೆಯಲ್ಲಿ ಚಿನ್ನ ಸಿಕ್ಕಿದೆ. ಈತನೇ ಬನ್ಸ್ಲೋಯ್ ನದಿಯ ದಡದಲ್ಲಿ ಚಿನ್ನವನ್ನು ಕಂಡುಕೊಂಡ ಮೊದಲ ವ್ಯಕ್ತಿ. ಈ ಸುದ್ದಿ ಎಲ್ಲರಿಗೂ ತಿಳಿಯುತ್ತಿದ್ದಂತೆ ಗ್ರಾಮಸ್ಥರೆಲ್ಲ ನದಿಗೆ ಬಂದು ಚಿನ್ನ ಹುಡುಕುತ್ತಿದ್ದಾರೆ. ಸ್ಥಳೀಯ ಮೂಲಗಳ ಪ್ರಕಾರ, ಚಿನ್ನದ ನಾಣ್ಯಗಳಂತಹ ಅನೇಕ ದುಂಡಗಿನ ವಸ್ತುಗಳು ಕಂಡುಬಂದಿವೆ. ಇದೀಗ ಹಗಲು ರಾತ್ರಿಯನ್ನದೆ ನದಿ ದಡದಲ್ಲಿ ಗ್ರಾಮಸ್ಥರು ಚಿನ್ನದ ಹುಡುಕಾಟ ನಡೆಸುತ್ತಿದ್ದಾರೆ.
15 ವರ್ಷಗಳ ಹಿಂದೆಯೂ ಚಿನ್ನ ಪತ್ತೆಯಾಗಿತ್ತು:ಎರಡು ದಿನಗಳ ಹಿಂದೆ ಇಲ್ಲಿನ ನದಿಯಲ್ಲಿ ಮರಳಿನಲ್ಲಿ ಚಿನ್ನ ಪತ್ತೆಯಾಗಿತ್ತು ಎಂದು ಸ್ಥಳೀಯ ಯುವಕ ಸುಜನ್ ಶೇಖ್ ಹೇಳಿದ್ದಾನೆ. ಅವನೂ ಕೂಡ ಇಲ್ಲಿಗೆ ಬಂದು ಚಿನ್ನಕ್ಕಾಗಿ ಹುಡಕಾಟ ನಡೆಸಿದ್ದಾನೆ, ಆದರೆ ಆತನಿಗೆ ಏನೂ ಸಿಕ್ಕಿಲ್ಲ. ಆದರೆ ಅನೇಕರಿಗೆ ಸಣ್ಣ ಚಿನ್ನದ ನಾಣ್ಯಗಳು ಸಿಕ್ಕಿವೆ. ಆದರೆ ಈ ಚಿನ್ನಾಭರಣಗಳು ಎಲ್ಲಿಂದ ಬಂದವು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ
ಬ್ರಿಟಿಷರ ಕಾಲದಲ್ಲಿ ಸಂಪದ್ಭರಿತ ಪಟ್ಟಣವೆಂದೇ ಹೆಸರಾಗಿದ್ದ ಮಹೇಶಪುರ ರಾಜಬರಿಯ ಅನೇಕ ಅರಮನೆಗಳು ಸುವರ್ಣರೇಖಾ ನದಿ ನೀರಿನಲ್ಲಿ ಮುಳುಗಡೆಯಾಗಿದೆ ಎಂದು ಜನರು ಹೇಳುತ್ತಾರೆ. 15 ವರ್ಷಗಳ ಹಿಂದೆ ಈ ನದಿಯ ದಡದಲ್ಲಿ ಚಿನ್ನ ಪತ್ತೆಯಾಗಿತ್ತು. ಹಾಗಾಗಿ ಈ ಸುವರ್ಣರೇಖಾ ನದಿಯ ನೀರು ಹಲವು ಮಾರ್ಗಗಳಲ್ಲಿ ಹರಿದು ಬನ್ಸ್ಲೋಯ್ ನದಿಗೆ ಸೇರುವುದರಿಂದ ಚಿನ್ನದ ವಸ್ತುಗಳು ಅಲ್ಲಿಂದಲೇ ತೇಲಿ ಬರುತ್ತಿರಬಹುದು ಎನ್ನಲಾಗುತ್ತಿದೆ.
ಪೊಲೀಸ್ ಬಿಗಿ ಬಂದೋಬಸ್ತ್:ಪರ್ಕಂಡಿ ಗ್ರಾಮಕ್ಕೆ ಚಿನ್ನದ ಹುಡುಕಾಟಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ. ಇದರಿಂದ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡಿದ್ದು, ಪೊಲೀಸರನ್ನು ನಿಯೋಜಿಸಿದೆ. ಪೊಲೀಸರು ಯಾವುದೇ ಅವಘಡಗಳು ಸಂಭವಿಸದಂತೆ ನದಿ ಬಳಿ ಕಾವಲು ಕಾಯುತ್ತಿದ್ದಾರೆ. ನದಿಯ ಸಮೀಪ ಯಾರಿಗೂ ಪ್ರವೇಶ ನೀಡುತ್ತಿಲ್ಲ. ಈ ಬಗ್ಗೆ ಭಾರತೀಯ ಪುರಾತತ್ವ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ರಾಮ್ಪುರಹತ್ ಉಪವಿಭಾಗಾಧಿಕಾರಿ ತಿಳಿಸಿದ್ದಾರೆ.
ಸುವರ್ಣರೇಖಾ ನದಿಯನ್ನು ಈಗಾಗಲೇ ಚಿನ್ನದ ನದಿ ಎಂದು ಕರೆಯಲಾಗುತ್ತದೆ. ಅಲ್ಲಿನ ನದಿಯ ನೀರಿನಲ್ಲಿ ಬಂಗಾರ ಹರಿಯುತ್ತಿದೆ ಎಂಬ ಮಾತು ಮೊದಲಿನಿಂದಲೂ ಇದೆ. ಇದೀಗ ಬನ್ಸ್ಲೋಯ್ ನದಿಯಲ್ಲಿ ಚಿನ್ನ ಪತ್ತೆಯಾಗಿರುವುದು ಗಮನ ಸೆಳೆಯುತ್ತಿದೆ.
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…
ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…
ರಬ್ಬರ್ ತೋಟಗಳು ಹಸಿರಾಗಿದ್ದರೂ ಅವು ನೈಸರ್ಗಿಕ ಮಳೆಕಾಡಿನ ಜೀವವೈವಿಧ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು…
ಭಾರತದ ಅಡುಗೆ ಎಣ್ಣೆ ಆಮದು ಎಂಟು ತಿಂಗಳಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಜೂನ್ನಲ್ಲಿ ಆಮದು…
ಕೇರಳದಲ್ಲಿ ಉತ್ಪಾದನೆಯಾಗುವ ಬಹುತೇಕ ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ ಸುಮಾರು ₹1,200 ಕೋಟಿ…
ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…