ವಿಶ್ವದಲ್ಲಿ ಅಡಿಕೆ ಕೃಷಿ ಹೇಗಿದೆ..? ಭಾರತದಲ್ಲಿ ಅಡಿಕೆ ಆಮದು ಎಷ್ಟು..?

August 5, 2025
7:22 AM
ವಿಶ್ವದಲ್ಲಿ ಅಡಿಕೆ ಉತ್ಪಾದನೆ ಆಗುವ ಎಲ್ಲಾ ರಾಷ್ಟ್ರಗಳಲ್ಲಿ ಅದರ ಬಳಕೆಯೂ ಆಗುತ್ತಿದೆ.ಇದರೊಂದಿಗೆ ಈ ಎಲ್ಲಾ ರಾಷ್ಟ್ರಗಳು, ಅಡಿಕೆಯ ರಫ್ತು ಮತ್ತು ಆಮದು ಮಾಡುತ್ತಿವೆ.ಆಮದಿನ ದೃಷ್ಟಿಯಿಂದ ನೋಡುವುದಾದರೆ ವಿಶ್ವದಲ್ಲಿ ಅತೀ ಹೆಚ್ಚು ಅಡಿಕೆ ಆಮದು ಮಾಡುವ ರಾಷ್ಟ್ರ ಭಾರತ.

ಅನಾದಿ ಕಾಲದಿಂದಲೂ ವಿಶ್ವದ ನಾನಾ ಬಾಗಗಳಲ್ಲಿ ಉಪಯೋಗಿಸಲ್ಪಡುತಿರುವ ಅಡಿಕೆಗೆ ಅದರದ್ದೇ ಆದ ಇತಿಹಾಸ ಇದೆ.ಸುಮಾರು ನಾಲ್ಕು ಸಾವಿರ ವರ್ಷಗಳಷ್ಟು ಹಿಂದಿನ ಋಗ್ವೇದದಲ್ಲಿ ಈ ಬಗ್ಗೆ ಉಲ್ಲೇಖವಿದ್ದು,ಇದರೊಂದಿಗೆ ಅಜಂಟಾದ ಗುಹೆಗಳಲ್ಲಿ ಇರುವ ಚಿತ್ರಗಳಲ್ಲಿ ಅಡಿಕೆಯೂ ಇದ್ದು,ಇವೆಲ್ಲಾ ಇದರ ಇತಿಹಾಸವನ್ನು ಸಾರುತ್ತಿವೆ. ಅದೇ ರೀತಿಯ ಇತಿಹಾಸವನ್ನು ಏಷಿಯಾದ ನಾನಾ ರಾಷ್ಟ್ರಗಳಲ್ಲಿ ಲಭ್ಯವಿರುವ ಪ್ರಾಚೀನ ಅವಶೇಷಗಳಿಂದ ಅರಿಯಲು ಸಾಧ್ಯ.

ವಿಶ್ವದಲ್ಲಿ ಅಡಿಕೆ ಕೃಷಿಯನ್ನು ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್ , ಇಂಡೋನೇಷಿಯಾ, ಶ್ರೀಲಂಕಾ, ಚೀನಾ, ಥಾಯ್ಲೆಂಡ್, ಮಲೇಷ್ಯಾ, ಮಾಲ್ಡೀವ್ಸ್, ನೇಪಾಳ,‌ ಕೀನ್ಯಾ, ಪಶ್ಚಿಮದ ಪೆಸಿಫಿಕ್ ಪ್ರದೇಶ,ಸಿಂಗಾಪೂರ್,ಮುಂತಾದ ರಾಷ್ಟ್ರಗಳಲ್ಲಿ ಬೆಳೆಸಲಾಗುತ್ತಿದೆ.

ರಾಷ್ಟ್ರಗಳಲ್ಲಿ ಅಡಿಕೆ ಉತ್ಪಾದನೆಯ ಪ್ರಮಾಣ ಹೀಗಿದೆ : 

1. ಭಾರತ : ವಿಶ್ವದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ.ಇಲ್ಲಿ ಇದರ ಪ್ರಮಾಣ ಸುಮಾರು ಹದಿನಾರು ಲಕ್ಷ ಟನ್ ಆಗಿದೆ. ಇದು ವಿಶ್ವದ ಒಟ್ಟು ಉತ್ಪಾದನೆಯ ಶೇಕಡಾ 68 ರಷ್ಟು ಆಗಿದೆ. ಇದರ ಬಳಕೆಯಲ್ಲೂ ಭಾರತ ಮೊದಲನೇ ಸ್ಥಾನದಲ್ಲಿದೆ. ದೇಶ ಅನಾದಿಕಾಲದಿಂದಲೂ ಆಂತರಿಕ ಕೊರತೆಯನ್ನು ನೀಗಿಸಲು ಇದರ ಆಮದನ್ನು ಮಾಡಿಕೊಳ್ಳುತ್ತಿದೆ.

 2.ಬಾಂಗ್ಲಾದೇಶ :ಬಾಂಗ್ಲಾದೇಶದಲ್ಲಿ ಅಡಿಕೆಯ ಉತ್ಪಾದನೆ ಸುಮಾರು ಮೂರು ಲಕ್ಷದ ಮೂವತ್ತಮೂರು ಸಾವಿರ ಟನ್ ಆಗಿದ್ದು, ಇದು ವಿಶ್ವದ ಒಟ್ಟು ಉತ್ಪಾದನೆಯ ಶೇಕಡಾ 13.6 ಆಗಿದೆ. ಇಲ್ಲಿ ಇದರ ಬಳಕೆ ಆಗಿ ಉಳಿದ ಪ್ರಮಾಣ ರಫ್ತು ಆಗುತ್ತದೆ.

3. ಮ್ಯಾನ್ಮಾರ್: ಇಲ್ಲಿ ಇದರ ಉತ್ಪಾದನೆ ಸುಮಾರು ಎರಡು ಲಕ್ಷದ ಮೂವತ್ತಾರು ಸಾವಿರ ಟನ್ ಆಗಿದ್ದು, ಇದು ಶೇಕಡಾ 9.66 ರಷ್ಟು ಆಗಿದೆ.

 4.ಇಂಡೋನೇಷಿಯಾ: ಸಾವಿರಾರು ವರ್ಷಗಳಿಂದ ಇಲ್ಲಿ ಅಡಿಕೆ ಬೆಳೆಸಲಾಗುತ್ತಿದೆ.ಪ್ರಕೃತ ಇಲ್ಲಿನ ಉತ್ಪಾದನೆ ಸುಮಾರು 82 ಸಾವಿರ ಟನ್ ಆಗಿದೆ.ಇದು ಒಟ್ಟು ಉತ್ಪಾದನೆಯ ಶೇಕಡಾ 3.36 ಆಗಿದೆ.ಇಲ್ಲಿ 2014 ರ ಸಮಯದಲ್ಲಿ ಒಮ್ಮೆ ಅಡಿಕೆಗೆ ನಿಷೇಧ ಹೆರಿದ್ದರೂ 2017 ರ ಸಮಯದಲ್ಲಿ ಅದನ್ನು ಹಿಂಪಡೆಯಲಾಯಿತು.

5.ಶ್ರೀಲಂಕಾ : ಅಡಿಕೆಯ ಉತ್ಪಾದನೆ ಇಲ್ಲಿ ಸುಮಾರು ಅರುವತ್ತ ಆರು ಸಾವಿರ ಟನ್ ಆಗಿದ್ದು, ಇದು ಶೇಕಡಾ 2.72 ಆಗಿದೆ.

6. ಥಾಯ್ಲೆಂಡ್ : ಇದರ ಉತ್ಪಾದನೆ ಇಲ್ಲಿ ಸುಮಾರು 48.3 ಸಾವಿರ ಟನ್ ಆಗಿದ್ದು, ವಿಶ್ವದ ಒಟ್ಟು ಉತ್ಪಾದನೆಯ ಶೇಕಡಾ 1.56 ಆಗಿದೆ.

ಇನ್ನು, ನೇಪಾಳದಲ್ಲಿ ಅಡಿಕೆಯ ಉತ್ಪಾದನೆ ಸುಮಾರು 15.7 ಸಾವಿರ ಟನ್ ಆಗಿದ್ದು, ಇದು ಶೇಕಡಾ 0.64 ಆಗಿದೆ. ಇವುಗಳೊಂದಿಗೆ ಭೂತಾನ್,ಚೀನಾ, ಮಲೇಷಿಯಾ,ಮಾಲ್ಡೀವ್ಸ್,ಸಿಂಗಾಪೂರ್ ಇತ್ಯಾದಿ ರಾಷ್ಟ್ರಗಳಲ್ಲಿ ಅಡಿಕೆ ಕೃಷಿ ಆಗುತ್ತಿದೆ. ಚೀನಾ ಒಂದನ್ನು ಬಿಟ್ಟರೆ, ಉಳಿದ ರಾಷ್ಟ್ರಗಳಲ್ಲಿ ಅಡಿಕೆಯ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಇಲ್ಲ ಎಂದು ವಿಶ್ವದ ಆಹಾರ ಮತ್ತು ಕೃಷಿ ಸಂಘಟನೆ ಒದಗಿಸುವ ಅಂಕಿ ಅಂಶಗಳ ಆಧಾರದಲ್ಲಿ ತಿಳಿದುಕೊಳ್ಳಬಹುದು.

ಒಟ್ಟಾಗಿ, ಅಡಿಕೆಯ ಉತ್ಪಾದನಾ ಪ್ರವೃತ್ತಿಯನ್ನು ನೋಡಿದಾಗ ಇದು 1961 ರ ಸಮಯದಲ್ಲಿ ಸುಮಾರು 2 ಲಕ್ಷದ 14 ಸಾವಿರ ಟನ್ ಇದ್ದುದು 2001 ಅಲ್ಲಿ 7,07,860 ಟನ್ ಆಗಿತ್ತು.ಇದೀಗ ಇದರ ಪ್ರಮಾಣ ಸುಮಾರು 24 ಲಕ್ಷ ಟನ್ ಆಗಿ ಹೋಗಿದೆ. ಈ ರೀತಿಯ ವೇಗದ ಬೆಳವಣಿಗೆಗೆ ಮೂಲ ಕಾರಣ ಭಾರತದಲ್ಲಿ ಕಂಡು ಬರುತ್ತಿರುವ ಅಡಿಕೆ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನೆ ಆಗಿದೆ.

ವಿಶ್ವದಲ್ಲಿ ಅಡಿಕೆ ಉತ್ಪಾದನೆ ಆಗುವ ಎಲ್ಲಾ ರಾಷ್ಟ್ರಗಳಲ್ಲಿ ಅದರ ಬಳಕೆಯೂ ಆಗುತ್ತಿದೆ.ಇದರೊಂದಿಗೆ ಈ ಎಲ್ಲಾ ರಾಷ್ಟ್ರಗಳು, ಅಡಿಕೆಯ ರಫ್ತು ಮತ್ತು ಆಮದು ಮಾಡುತ್ತಿವೆ.ಅಡಿಕೆಯ ರಫ್ತು ಮಾಡುವ ಪ್ರಮುಖ ರಾಷ್ಟ್ರಗಳ ಪೈಕಿ ಶ್ರೀಲಂಕಾ ಅಗ್ರ ಸ್ಥಾನದಲ್ಲಿದ್ದು ನಂತರದ ಸ್ಥಾನಗಳಲ್ಲಿ ಭಾರತ, ಇಂಡೋನೇಷಿಯಾ, ಮಾಯನ್ಮಾರ್,ಚೀನಾ,ಥಾಯ್ಲೆಂಡ್,ಸಿಂಗಾಪೂರ್ ಮತ್ತು ಮಲೇಷಿಯಾ ಗಳು ಆಗಿವೆ.ಇಲ್ಲಿ ಬಾಂಗ್ಲಾದೇಶವೂ ಸೇರಿದ್ದು,ಈ ಎಲ್ಲಾ ರಾಷ್ಟ್ರಗಳ ಪೈಕಿ ಇಂಡೋನೇಷಿಯಾದ ರಫ್ತು ಅಧಿಕ ಎಂಬ ಮಾಹಿತಿ ದೊರಕುತ್ತದೆ. ಇಂಡೋನೇಷಿಯಾ ಅಡಿಕೆಯನ್ನು ಹೆಚ್ಚಾಗಿ ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿದ್ದು,ಉಳಿಕೆ ಪ್ರಮಾಣ ಭಾರತವೂ ಸೇರಿದಂತೆ ಇತರೇ ರಾಷ್ಟ್ರಗಳಿಗೆ ರಫ್ತು ಆಗುತ್ತಿದೆ.

ಆಮದಿನ ದೃಷ್ಟಿಯಿಂದ ನೋಡುವುದಾದರೆ ವಿಶ್ವದಲ್ಲಿ ಅತೀ ಹೆಚ್ಚು ಅಡಿಕೆ ಆಮದು ಮಾಡುವ ರಾಷ್ಟ್ರ ಭಾರತ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಮಲೇಶಿಯ, ಚೀನಾ ಮತ್ತು ಸಿಂಗಾಪೂರ್ ಗಳಿವೆ. ಒಂದು ಅಂದಾಜಿನ ಪ್ರಕಾರ ಭಾರತ ವಿಶ್ವದ ಒಟ್ಟು ಆಮದಿನ ಪ್ರಮಾಣದಲ್ಲಿ ಶೇಕಡಾ 22 ರಷ್ಟು ಆಗಿದ್ದು,ರಫ್ತಿನ ಪ್ರಮಾಣ ದೇಶದ ಒಟ್ಟು ಉತ್ಪಾದನೆಯ ಶೇಕಡಾ 5 ಆಗಿದೆ.

ಮೇಲೆ ಹೆಸರಿದ ರಾಷ್ಟ್ರಗಳ ರಫ್ತಿನಲ್ಲಿ ಹೆಚ್ಚಿನ ಪ್ರಮಾಣ ಕಳಪೆ ಗುಣಮಟ್ಟದ ಅಡಿಕೆ ಆಗಿದ್ದು, ಇದು ನಮ್ಮಲ್ಲಿನ ಕೆಳ ದರ್ಜೆಯ ಅಡಿಕೆಗೆ ಸಮಾನ. ಇದರೊಂದಿಗೆ ದೇಶಕ್ಕೆ ಹಸಿ ಅಡಿಕೆ,ತುಂಡು ಅಡಿಕೆ ಇತ್ಯಾದಿಗಳೂ ಹೊರ ರಾಷ್ಟ್ರಗಳಿಂದ ಆಮದು ಆಮದು ಆಗುತ್ತಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

ಡಾ|ವಿಘ್ನಶ್ವರ ಭಟ್ ವರ್ಮುಡಿ ಅವರು ಕೃಷಿಕರು. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯದ ಪೆರ್ಲದ ನಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಂಶೋಧನಾ ಬರಹಗಳು ಪ್ರಕಟವಾಗಿದೆ. ಅಡಿಕೆ ಮಾರುಕಟ್ಟೆ ಬಗ್ಗೆ ಅಧಿಕೃತವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಅಡಿಕೆಯ ಬಗ್ಗೆ ವಿವಿಧ ಬರಹಗಳನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ

ಗ್ರಾಮೀಣ ಮೌಲ್ಯಗಳು ಮತ್ತು ನಗರ ಜೀವನ – ಸಮತೋಲನವೇ ನಿಜವಾದ ಮಾರ್ಗ!
April 18, 2026
7:28 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶಾದ್ಯಂತ ಹವಾಮಾನದಲ್ಲಿ ಬದಲಾವಣೆ..! 13 ರಾಜ್ಯಗಳಲ್ಲಿ ಮಳೆ-ಚಂಡಮಾರುತ ಎಚ್ಚರಿಕೆ, ಉತ್ತರ ಭಾರತದಲ್ಲಿ 40°C ದಾಟಿದ ಉಷ್ಣತೆ
April 18, 2026
7:22 AM
by: ಮಿರರ್‌ ಡೆಸ್ಕ್
ಒಡಿಶಾ ಕರಾವಳಿಯಲ್ಲಿ ಅಕ್ರಮ ಅಡಿಕೆ ಸಾಗಣೆ ಪತ್ತೆ – 700 ಕ್ಕೂ ಹೆಚ್ಚು ಗೋಣಿ ಚೀಲ ವಶಕ್ಕೆ
April 16, 2026
7:25 AM
by: ದ ರೂರಲ್ ಮಿರರ್.ಕಾಂ
ವಿಷು ಹಬ್ಬದ ಅರ್ಥವೇನು ಗೊತ್ತಾ..? ಸೂರ್ಯ ಸಂಕ್ರಮಣದ ಈ ರಹಸ್ಯ ನಿಮ್ಮ ಜೀವನವೇ ಬದಲಾಯಿಸಬಹುದು..!
April 15, 2026
8:02 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror