ದೇಶದಲ್ಲಿ ಉದ್ಯೋಗ ಆಸಕ್ತ ಯುವಕರ ಸಂಖ್ಯೆ ಏರುತ್ತಲೇ ಇದೆ. ಕಾರಣ ವರ್ಷಕ್ಕೆ ಲಕ್ಷಗಟ್ಟಲೆಯಲ್ಲಿ ಯುವಕರು ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಣ ಮುಗಿಸಿ ಪ್ರತೀ ವರ್ಷ ಹೊರಬರುತ್ತಿದ್ದಾರೆ. ಯಾವುದೇ ಸರ್ಕಾರಗಳು ಎಷ್ಟೇ ಪ್ರಯತ್ನ ಮಾಡಿದರೂ ಉದ್ಯೋಗ ನೀಡುವುದು ಕಷ್ಟ ಸಾಧ್ಯ. ಇಂದು ಉದ್ಯೋಗ ಎಂದರೇನು ? ಎನ್ನುವುದರ ಡೆಫಿನೇಶನ್ ಏನೆಂದೇ ಅರ್ಥವಾಗದ ಸ್ಥಿತಿ ಇದು. ಕೃಷಿಯೂ ಒಂದು ಉದ್ಯೋಗ ಎನ್ನುವುದೇ ತಿಳಿದಿಲ್ಲ, ಕೃಷಿಯಲ್ಲೂ ಉದ್ಯೋಗ ಮಾಡಬಹುದು. ಆದರೆ ಐಡಿಯಾ ಮಾಡಿಕೊಳ್ಳಬೇಕು ಅಷ್ಟೇ. ಈಗ ಡ್ರೋನ್ ತಂತ್ರಜ್ಞಾನ ಕೃಷಿಯಲ್ಲಿ ಕ್ರಾಂತಿ ಮಾಡುತ್ತಿದೆ, ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುತ್ತಿದೆ.
ಶಿಕ್ಷಣ ಮುಗಿಸಿದ ಅನೇಕರಿಗೆ ಕೃಷಿಯೂ ಒಂದು ಉದ್ಯೋಗ ಎನ್ನುವುದು ತಿಳಿದಿಲ್ಲ, ಕೃಷಿಕರ ಮಕ್ಕಳೂ ಇಂದು ಕೃಷಿ ಎಂದರೆ ಉದ್ಯೋಗ ಎನ್ನುವುದನ್ನು ಮರೆತಿದ್ದಾರೆ. ಹೀಗಾಗಿ ಕೃಷಿಗೆ ವಿದ್ಯಾಂತರು ಬರುವುದು ಕಡಿಮೆಯೇ ಎನ್ನುವ ಹಾಗಾಗಿದೆ. ಆದರೆ ಇದೀಗ ರೈತರನ್ನು ಅತ್ಯಾಧುನಿಕ ಕೃಷಿಯತ್ತ ಸೆಳೆಯುವ ಕೆಲಸ ನಡೆಯುತ್ತಿದೆ. ವಿದ್ಯಾವಂತ ಯುವಕರನ್ನು ಕೃಷಿಯತ್ತ ಸೆಳೆಯಲು ಕೆಲಸ ಮಾಡಲಾಗುತ್ತಿದೆ. ಇದೀಗ ಡ್ರೋನ್(Drone), ಹೊಸ ಉದ್ಯೋಗ ಅವಕಾಶಗಳನ್ನೂ ಸೃಷ್ಟಿಸಿದೆ. ಯುವಕರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಫ್ಕೋ ಕಂಪನಿ ಯುವಕರ ಪಾಲಿಗೆ ಬೆಳಕಾಗಿದೆ. ಕೃಷಿ ಚಟುವಟಿಕೆಗಳಿಗೆ ಕೂಲಿಕಾರರು ಸಿಗುತ್ತಿಲ್ಲ. ಹಾಗಾಗಿ, ರೈತರು ಆಧುನಿಕತೆ ಕಡೆ ಮುಖ ಮಾಡುತ್ತಿದ್ದಾರೆ. ಭೂಮಿಯಲ್ಲಿ ರೆಂಟೆ, ಕುಂಟೆ ಹೊಡೆಯಲು, ಕಳೆ ತೆಗೆಯಲು ಯಂತ್ರಗಳನ್ನೇ ಹೆಚ್ಚೆಚ್ಚು ಬಳಸುತ್ತಿದ್ದಾರೆ. ಅದರ ಜೊತೆಗೆ ಡ್ರೋನ್ ಬಳಕೆಯೂ ಹೆಚ್ಚಾಗುತ್ತಿದೆ.
ನಿರುದ್ಯೋಗಿ ಯುವಕರಿಗೆ ಉದ್ಯೋಗ ಮತ್ತು ರೈತರ ಬೆಳೆಗಳಿಗೆ ಡ್ರೋನ್ ಮೂಲಕ ಔಷಧಿ ಸಿಂಪಡಿಸುವ ನಿಟ್ಟಿನಲ್ಲಿ ಇಫ್ಕೋ ಸಂಸ್ಥೆ ಕಿಸಾನ್ ಉಡಾನ್ ಯೋಜನೆಯಡಿ ದೇಶಾದ್ಯಂತ 2,500, ರಾಜ್ಯದಲ್ಲಿ 200, ಬೆಳಗಾವಿ ಜಿಲ್ಲೆಯಲ್ಲಿ 20 ಯುವಕರಿಗೆ ಉತ್ತಮ ತರಬೇತಿ ನೀಡಿದೆ. ಅಲ್ಲದೇ ಒಬ್ಬ ಯುವಕನಿಗೆ 1 ಡ್ರೋನ್, 1 ವಿದ್ಯುತ್ ಚಾಲಿತ ತ್ರಿಚಕ್ರ ವಾಹನ, 4 ಬ್ಯಾಟರಿ, 1 ಜನರೇಟರ್ ಸೇರಿ ಮತ್ತಿತರ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಗಿದೆ. ಹೀಗೆ ಇಫ್ಕೋ ಸಂಸ್ಥೆಯ ನೆರವಿನೊಂದಿಗೆ ಕೆಲಸ ಆರಂಭಿಸಿರುವ ಯುವಕರು ಸೋಯಾಬಿನ್ ಸೇರಿ ಮತ್ತಿತರ ಬೆಳೆಗಳಿಗೆ ಡ್ರೋನ್ ಮೂಲಕ ಔಷಧಿ ಸಿಂಪಡಿಸಿ, ಪ್ರತಿದಿನ ಏನಿಲ್ಲ ಎಂದರೂ 5 ಸಾವಿರ ಆದಾಯ ಗಳಿಸುತ್ತಿದ್ದಾರೆ. ಕೆಲಸ ಇಲ್ಲದೇ ಕಂಗಾಲಾಗಿದ್ದ ಇವರೆಲ್ಲಾ ಈಗ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಈಚೆಗೆ ಇಪ್ಕೋ ಕಂಪನಿಯ ಮೂಲಕ ಬೆಳಗಾವಿಯಲ್ಲಿ ಕೃಷಿ ಭೂಮಿಯಲ್ಲಿ ಒಮ್ಮೆಲೇ 36 ಡ್ರೋನ್ ಮೂಲಕ ಕೃಷಿಗೆ ಪೋಷಕಾಂಶಗಳನ್ನು ಸಿಂಪಡಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.(ವಿಡಿಯೋ ಇದೆ… )
‘ಈಟಿವಿ ಭಾರತ್’ ಜೊತೆಗೆ ಮಾತನಾಡಿದ ತಾಲೂಕಿನ ಯುವಕ ಅಭಯ್ ಕುಲಕರ್ಣಿ, “ಎರಡು ವರ್ಷ ಬೆಂಗಳೂರಲ್ಲಿ ಕೆಲಸ ಮಾಡಿದ ಬಳಿಕ ಊರಿಗೆ ಬಂದು ಮನೆಯಲ್ಲಿ ಖಾಲಿ ಇದ್ದೆ. ಇಫ್ಕೋ ಕಂಪನಿ ನನಗೆ ಅವಕಾಶ ನೀಡಿತು. ಚನ್ನೈನಲ್ಲಿ 20 ದಿನ ಡ್ರೋನ್ ಫೈಲಟ್ ಟ್ರೇನಿಂಗ್ ನೀಡಿದರು. ಇದಾದ ಒಂದು ತಿಂಗಳ ನಂತರ ಡ್ರೋನ್ ಕೊಟ್ಟರು. ಈ ವೇಳೆ ಡ್ರೋನ್ ನಿರ್ವಹಣೆ ತರಬೇತಿ ನೀಡಿದರು. ನಮಗೆ ಪೆಟ್ರೋಲ್, ಡೀಸೆಲ್ ಹಾಕಲು ಅನಾನುಕೂಲ ಆಗುತ್ತದೆ ಎಂದು ವಿದ್ಯುತ್ ಚಾಲಿತ ತ್ರಿಚಕ್ರ ವಾಹನ ಒದಗಿಸಿದ್ದಾರೆ. ಪ್ರತಿ ದಿನ 10 ಎಕರೆ ಔಷಧಿ ಸಿಂಪಡಿಸುತ್ತಿದ್ದೇವೆ. ದಿನಕ್ಕೆ ಕನಿಷ್ಠ 4-5 ಸಾವಿರ ಆದಾಯ ಬರುತ್ತಿದೆ” ಎಂದು ಹೇಳಿದರು.
ಮತ್ತೋರ್ವ ಯುವಕ ಹನುಮಂತ ದಳವಾಯಿ ಮಾತನಾಡಿ, “ಇಫ್ಕೋ ಕಂಪನಿ ಆವಿಷ್ಕಾರ ಮಾಡಿರುವ ನ್ಯಾನೋ ಯೂರಿಯಾ ಔಷಧಿ ಸಿಂಪಡಣೆಯಿಂದ ಭೂಮಿ ಫಲವತ್ತತೆ ಉಳಿಯುತ್ತಿದೆ. ಇದರಿಂದ ರೈತರಿಗೆ ಅನುಕೂಲ ಆಗುವುದರ ಜೊತೆಗೆ ನಾವು ಕೂಡ ಬದುಕು ಕಟ್ಟಿಕೊಳ್ಳುತ್ತಿದ್ದೇವೆ” ಎಂದು ಹೇಳಿದರು.
ಇಫ್ಕೋ ಕ್ಷೇತ್ರಾಧಿಕಾರಿ ನವೀನ ಪಾಟೀಲ ಮಾತನಾಡಿ, “ಹೊಲಗಳಲ್ಲಿ ಔಷಧಿ ಸಿಂಪಡಣೆ ಮಾಡಲು ರೈತರಿಗೆ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಅಲ್ಲದೇ ಹಾವು, ಚೇಳು ಕಡಿಸಿಕೊಂಡು ಅನೇಕ ರೈತರು ಸಾವನ್ನಪ್ಪಿದ ಉದಾಹರಣೆಗಳೂ ಇವೆ. ಹಾಗಾಗಿ, ರೈತರಿಗೆ ಉಪಯೋಗ ಆಗಬೇಕು ಮತ್ತು ಇದ್ದ ಊರಲ್ಲಿ ಯುವಕರಿಗೆ ಕೆಲಸ ನೀಡುವ ಉದ್ದೇಶದಿಂದ ಡ್ರೋನ್ ನೀಡಲಾಗಿದೆ. ತಿಂಗಳಿಗೆ ಸುಮಾರು 60-70 ಸಾವಿರ ರೂ. ಗಳಿಸುತ್ತಿದ್ದಾರೆ. ಈ ಮೊದಲು ರೈತರು 1 ಎಕರೆ ಕೈ ಪಂಪ್ನಿಂದ ಔಷಧಿ ಸಿಂಪಡಿಸಲು ಐದಾರು ಗಂಟೆ ಬೇಕಾಗುತ್ತಿತ್ತು. ಈಗ ಡ್ರೋನ್ನಿಂದ ಕೇವಲ 8-10 ನಿಮಿಷದಲ್ಲಿ ಔಷಧಿ ಸಿಂಪಡಿಸಬಹುದು. ಇದರಿಂದ ರೈತರಿಗೆ ಹಣದ ಜೊತೆಗೆ ಸಮಯದ ಉಳಿತಾಯವೂ ಆಗಲಿದೆ” ಎಂದು ವಿವರಿಸಿದರು.
ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…
ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…