#Honeybee | ಅಡಿಕೆ ಕೃಷಿಯಲ್ಲಿ ಜೇನ್ನೊಣಗಳಿಂದ ಪರೋಕ್ಷ ಲಾಭ | ಅಡಿಕೆ ಹೂವಿನ ಜೇನುತುಪ್ಪ ಅತ್ಯಂತ ರುಚಿಕರ, ಆರೋಗ್ಯವರ್ಧಕ |

October 2, 2023
7:01 PM
ಅಡಿಕೆ ಕೃಷಿಕರು ತುಡುವೆ ಜೇನು ಕುಟುಂಬಗಳನ್ನು ಸಾಕುವುದರಿಂದ ಹೆಚ್ಚಿನ ಪರಾಗಸ್ಪರ್ಶ ಆಗಿ ಇಪ್ಪತ್ತೈದರಿಂದ ಮೂವತ್ತು ಶೇಕಡಾ ಇಳುವರಿ ಹೆಚ್ಚಾಗುತ್ತದೆ. ಪರಾಗವನ್ನು ತರುವಾಗ ಕಾಲಿನ ಮೂಲಕ ಪರಾಗಸ್ಪರ್ಶ ಕ್ರಿಯೆಯಲ್ಲಿ ನೆರವಾಗುವುದಲ್ಲದೆ ಪರಾಗ ಮತ್ತು ಪುಷ್ಪರಸವನ್ನು ತರಲು ಹೂವಿನ ಮೇಲೆ ಜೇನ್ನೊಣಗಳು ಹೊರಳಾಡುವಾಗ ಮೈಯಲ್ಲಿ ಇರುವ ಚಿಕ್ಕ ಚಿಕ್ಕ ರೋಮಗಳಲ್ಲೂ ಪರಾಗರೇಣುಗಳು ಅಂಟಿಕೊಂಡು ಕಾಯಿ ಆಗುವ ಹೂವಿನಲ್ಲಿ ಕುಳಿತಾಗ ಪರಾಗಸ್ಪರ್ಶ ಕ್ರಿಯೆ ಸ್ವಾಭಾವಿಕವಾಗಿ ಆಗುವುದು. ಅಲ್ಲದೇ ಅಡಿಕೆ ಹೂವಿನ ಜೇನುತುಪ್ಪ ಅತ್ಯಂತ ರುಚಿಕರ, ಆರೋಗ್ಯವರ್ಧಕ.

ಎರೆಹುಳದಂತೆ ಜೇನುನೋಣಗಳೂ ಕೂಡ ರೈತಮಿತ್ರ. ಜೇನ್ನೊಣಗಳಿಂದ ಜೇನುತುಪ್ಪ ಪ್ರತ್ಯಕ್ಷ ಲಾಭವಾದರೆ ಅದಕ್ಕಿಂತಲೂ ಹೆಚ್ಚಿನ ಲಾಭವನ್ನು ಪರಾಗಸ್ಪರ್ಶದ ಮೂಲಕ ನಮಗೆ ಅರಿವಿಲ್ಲದೆಯೇ ಪಡೆಯಬಹುದು. ಜೇನ್ನೊಣಗಳಲ್ಲಿ ಹಲವು ವಿಧಗಳಿದ್ದರೂ ರೈತರಿಗೆ ಸಾಕಲು ಅನುಕೂಲಕರ ಮೊಜಂಟಿ ಮತ್ತು ತುಡುವೆ ಜೇನು ಕುಟುಂಬ. ತುಡುವೆ ಜೇನುನೊಣಗಳು ಆಹಾರಕ್ಕಾಗಿ ಸುಮಾರು ಒಂದೆರಡು ಕಿಲೋಮೀಟರ್ ದೂರದ ತನಕ ಹೋಗಿ ಬರುತ್ತವೆ.

ವಿಜ್ಞಾನ ಎಷ್ಟೇ ಮುಂದುವರಿದರೂ ಜೇನುತುಪ್ಪವನ್ನುತಯಾರಿಸಲು ಇಂದಿಗೂ ಸಾಧ್ಯವಾಗಿಲ್ಲ. ಜೇನ್ನೊಣಗಳು ಪುಷ್ಪರಸವನ್ನು ಹೀರಿ ಗೂಡಿಗೆ ಮರಳುವ ಸಂದರ್ಭದಲ್ಲಿ ಕೆಲವು ಕಿಣ್ವಗಳು ಸೇರಿ ಅದು ಜೇನುತುಪ್ಪವಾಗಿ ಪರಿವರ್ತನೆ ಹೊಂದುತ್ತದೆ. ಜೇನ್ನೊಣಗಳು ಅದನ್ನು ಗೂಡಿನೊಳಗೆ ಇರುವ ಎರಿಗಳ ಕೋಶಗಳೊಳಗೆ ಉಗುಳುತ್ತವೆ. ಆದ್ದರಿಂದ ಇದನ್ನು”ಮಧೂಚ್ಛಿಷ್ಟ”ಎನ್ನುತ್ತಾರೆ. ದೇವತಾಕಾರ್ಯಗಳಿಗೆ ಈ ಜೇನುತುಪ್ಪ ಅಗತ್ಯ.

ಅಡಿಕೆ#Arrecanut ಕೃಷಿಕರು ತುಡುವೆ ಜೇನು ಕುಟುಂಬಗಳನ್ನು ಸಾಕುವುದರಿಂದ ಹೆಚ್ಚಿನ ಪರಾಗಸ್ಪರ್ಶ ಆಗಿ ಇಪ್ಪತ್ತೈದರಿಂದ ಮೂವತ್ತು ಶೇಕಡಾ ಇಳುವರಿ ಹೆಚ್ಚಾಗುತ್ತದೆ. ಬೇರೆ ಜಾತಿಯ ಜೇನ್ನೊಣಗಳಿಗಿಂತ ತುಡುವೆ ಜೇನ್ನೊಣಗಳಲ್ಲಿ ಪರಾಗಸ್ಪರ್ಶದ ಸಾಧ್ಯತೆ ಹೆಚ್ಚು. ಈ ಜಾತಿಯ ಜೇನ್ನೊಗಳಿಗೆ ಹೂವುಗಳ ಮೇಲೆ ನಿಷ್ಠೆ ಅಧಿಕ. ಒಂದು ಜಾತಿಯ ಹೂವುಗಳಲ್ಲಿ ಪರಾಗ ಮತ್ತು ಪುಷ್ಪರಸ ಮುಗಿಯುವ ತನಕ ಅದೇ ಜಾತಿಯ ಹೂವುಗಳ ಬಳಿಗೇ ಹೋಗುತ್ತವೆ. ತಮ್ಮ ಹಿಂಗಾಲುಗಳೆರಡರಲ್ಲೂ ಇರುವ ಒಂದೊಂದು ಪರಾಗ ಕುಕ್ಕೆಯಲ್ಲೂ ಮುಂಗಾಲುಗಳ ಸಹಾಯದಿಂದ ಒತ್ತೊತ್ತಾಗಿ ಪರಾಗಗಳನ್ನು ತುಂಬಿಕೊಂಡು ಗೂಡಿಗೆ ತಂದು ಎರಿಗಳ ಕೋಶಗಳಲ್ಲಿ ಹಾಕುತ್ತವೆ. ಗೂಡಿನೊಳಗೆ ಇರುವ ಜೇನ್ನೊಣಗಳು ಜೇನುತುಪ್ಪದೊಂದಿಗೆ ಈ ಪರಾಗವನ್ನು ಮರಿನೊಣಗಳಿಗೆ ಉಣಿಸುತ್ತವೆ.

ಪರಾಗವನ್ನು ತರುವಾಗ ಕಾಲಿನ ಮೂಲಕ ಪರಾಗಸ್ಪರ್ಶ ಕ್ರಿಯೆಯಲ್ಲಿ ನೆರವಾಗುವುದಲ್ಲದೆ ಪರಾಗ ಮತ್ತು ಪುಷ್ಪರಸವನ್ನು ತರಲು ಹೂವಿನ ಮೇಲೆ ಜೇನ್ನೊಣಗಳು ಹೊರಳಾಡುವಾಗ ಮೈಯಲ್ಲಿ ಇರುವ ಚಿಕ್ಕ ಚಿಕ್ಕ ರೋಮಗಳಲ್ಲೂ ಪರಾಗರೇಣುಗಳು ಅಂಟಿಕೊಂಡು ಕಾಯಿ ಆಗುವ ಹೂವಿನಲ್ಲಿ ಕುಳಿತಾಗ ಪರಾಗಸ್ಪರ್ಶ ಕ್ರಿಯೆ ಸ್ವಾಭಾವಿಕವಾಗಿ ಆಗುವುದು. ಅಲ್ಲದೇ ಅಡಿಕೆ ಹೂವಿನ ಜೇನುತುಪ್ಪ ಅತ್ಯಂತ ರುಚಿಕರ, ಆರೋಗ್ಯವರ್ಧಕ. ಅಡಿಕೆ ತೋಟದಲ್ಲಿ ಒಂದು ಎಕರೆಗೆ ಸುಮಾರು ಹತ್ತು ಹದಿನೈದು ಜೇನುಕುಟುಂಬಗಳನ್ನು ಇಟ್ಟು ಸಾಕಬಹುದು. ತೋಟದ ಬದಿಯಲ್ಲಿ ನೀರು ತಾಗದಂತೆ ನೆರಳಿನಲ್ಲಿ ಜೇನುಕುಟುಂಬಗಳನ್ನು ಇಡಬೇಕು. ಹತ್ತು ಫೀಟ್ ದೂರಕ್ಕೊಂದು ಕುಟುಂಬಗಳನ್ನು ಇಡಬಹುದಾದರೂ ತೋಟದ ಸುತ್ತಲೂ ದೂರ ದೂರದಲ್ಲಿ ಜೇನುಪೆಟ್ಟಿಗೆಗಳನ್ನು ಇಟ್ಟರೆ ಎಲ್ಲಾ ಅಡಿಕೆಮರಗಳ ಹೂವುಗಳಿಗೂ ಜೇನ್ನೊಣಗಳು ಭೇಟಿ ಕೊಡಲು ಅನುಕೂಲ.

ಜೇನುಕುಟುಂಬ ಸಾಕಲಾಗದ ಕೃಷಿಕರು ಜೇನ್ನೊಣಗಳಿಗೆ ವಾಸಿಸಲು ಅನುಕೂಲವಾಗುವಂತೆ ಸತ್ತ ಅಡಿಕೆ ಮರ, ಈಚಲು ಮರ ಅಥವಾ ಪೊಟರೆಗಳಿರುವ ಮರಗಳನ್ನು ಕಡಿಯದೆ ಇದ್ದರೆ ಅವುಗಳ ಪೊಟರೆಗಳಲ್ಲಿ ಜೇನುಕುಟುಂಬಗಳು ತಾವಾಗಿಯೇ ಬಂದು ನೆಲೆಸುತ್ತವೆ. ಮಡಕೆಗಳಿಗೆ ಜೇನುಮಯಣ ಸವರಿ ನೆರಳು ಇರುವ ಸ್ಥಳದಲ್ಲಿ ಇಟ್ಟರೆ ಕೆಲವೊಮ್ಮೆ ಅವುಗಳಲ್ಲೂ ಜೇನುಕುಟುಂಬಗಳು ಬಂದು ಸೇರಿಕೊಳ್ಳುತ್ತವೆ. ಮರದ ಪೊಟರೆ ,ಕಲ್ಲಿನ ಸಂದು, ಹುತ್ತ ಮೊದಲಾದವುಗಳಿಂದ ಜೇನುತುಪ್ಪವನ್ನು ತೆಗೆದು ಮೊದಲಿದ್ದಂತೆ ಮುಚ್ಚಿ ಇಟ್ಟರೆ ಮತ್ತೆ ಅದರಲ್ಲಿ ಜೇನುಕುಟುಂಬಗಳು ಬಂದು ಸೇರಿಕೊಳ್ಳುತ್ತವೆ. ಹೀಗೆ ಅಡಿಕೆ ಕೃಷಿಕರು ಜೇನ್ನೊಣಗಳಿಂದ ಜೇನುತುಪ್ಪವನ್ನು ಪಡೆಯುವುದಲ್ಲದೆ ಹೆಚ್ಚು ಹೆಚ್ಚು ಇಳುವರಿಯನ್ನು ಪಡೆಯಬಹುದು.

ಬರಹ :
ಶಿರಂಕಲ್ಲು ಕೃಷ್ಣ ಭಟ್

-(ಜೇನು ಬೆಳೆಸೋಣ ಗುಂಪಿನಿಂದ ಮಾಹಿತಿ )

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೀಟನಾಶಕಗಳ ಅತಿಯಾದ ಬಳಕೆ ನಿಯಂತ್ರಣಕ್ಕೆ ನೈಸರ್ಗಿಕ ಕೃಷಿಯೇ ಮದ್ದು
June 23, 2026
7:37 AM
by: ದ ರೂರಲ್ ಮಿರರ್.ಕಾಂ
ಭಾರೀ ಮಳೆ ಎಚ್ಚರಿಕೆ : 13 ರಾಜ್ಯಗಳಿಗೆ IMD ಅಲರ್ಟ್‌ | ಉಳಿದೆಡೆ ಉಷ್ಣ ಅಲೆ ಮುಂದುವರಿಕೆ
June 23, 2026
7:25 AM
by: ದ ರೂರಲ್ ಮಿರರ್.ಕಾಂ
ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಆಡಳಿತ ಮಂಡಳಿಗೆ ಇಬ್ಬರ ನಾಮನಿರ್ದೇಶನ
June 22, 2026
9:01 PM
by: ದ ರೂರಲ್ ಮಿರರ್.ಕಾಂ
ಅಕ್ರಮವಾಗಿ ಅಡಿಕೆ ಆಮದು ಪ್ರಕರಣಕ್ಕೆ ಮತ್ತೊಂದು ಹಿನ್ನಡೆ – ₹2.22 ಕೋಟಿ ಅಡಿಕೆ ಜಪ್ತಿ ಪ್ರಕರಣದಲ್ಲಿ ಕಸ್ಟಮ್ಸ್ ಕ್ರಮಕ್ಕೆ ಹೈಕೋರ್ಟ್ ಮನ್ನಣೆ
June 22, 2026
7:56 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror