ಕಲ್ಮಡ್ಕ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ, ತಿಪ್ಪನಕಜೆ ಶಂಕರನಾರಾಯಣ ಭಟ್ ಮಂಗಳವಾರ ಮುಂಜಾನೆ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಪತ್ನಿ ಮಹಾಲಕ್ಷ್ಮಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಮತ್ತು ಅಪಾರ ಸ್ನೇಹಿತ ವರ್ಗ, ಬಂಧು ಬಳಗವನ್ನು ಅವರು ಅಗಲಿದ್ದಾರೆ. ಅವರ ಪುತ್ರ ಪ್ರಶಾಂತ ಮುಂಬಯಿಯ ಇಂಡಿಯ ಟುಡೆ ಗ್ರೂಪ್ ನ ಆಜ್ ತಕ್ ವಾಹಿನಿಯಲ್ಲಿ ಸೀನಿಯರ್ ಕೆಮೆರಾ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಲ್ಮಡ್ಕ ಗ್ರಾಮಕ್ಕೇ ತಿಪ್ಪನಕಜೆ ಪುಟ್ಟಣ ಎಂದೇ ಆತ್ಮೀಯರಾಗಿದ್ದ ಶಂಕರನಾರಾಯಣ ಭಟ್ ಉತ್ತಮ ಸಹಕಾರಿ ಮತ್ತು ಕೃಷಿಕರಾಗಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದ ಅವರು ಸಾಹಿತ್ಯ ಪ್ರೇಮಿಯೂ ಆಗಿದ್ದರು. ಅವರಲ್ಲಿ ಅಪಾರ ಕನ್ನಡ ಸಾಹಿತ್ಯ ಓದು ಇತ್ತು. ಕಲ್ಮಡ್ಕ ವ್ಯವಸಾಯ ಸೇವಾ ಸಹಕಾರ ಸಂಘ, ಕಲ್ಮಡ್ಕ ಹಾಲು ಉತ್ಪಾದಕರ ಸಹಕಾರ ಸಂಘ, ಸಂಗಮ ಕಲಾ ಸಂಘ, ಯುವಕ ಮಂಡಲದಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕಲ್ಮಡ್ಕ ಶ್ರೀರಾಮ ಭಜನಾ ಮಂದಿರದ ಸ್ಥಾಪಕ ಖಜಾಂಜಿ , ಹವ್ಯಕ ಪಂಜ ವಲಯದ ಕಾರ್ಯದರ್ಶಿಯೂ ಆಗಿದ್ದರು.ನನಗೆ ಬಾಲ್ಯದಲ್ಲೇ ಪತ್ರಿಕೆ ಓದಲು ಪ್ರೋತ್ಸಾಹಿಸಿದವರು ಪುಟ್ಟಣ್ಣ ಎಂದು ನೆನಪಿಸಿಕೊಂಡಿದ್ದಾರೆ ಎಂದು ತಿಪ್ಪನ ಕಜೆ ಶಂಕರನಾರಾಯಣ ಭಟ್ ಅವರ ಸಹೋದರ ( ದೊಡ್ಡಪ್ಪನ ಮಗ) ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಅವರು. ನಾನು 6 ನೇ ತರಗತಿಯಲ್ಲಿ ಇದ್ದಾಗ ಮೊದಲ ಬಾರಿಗೆ ಪತ್ರಿಕೆ (ಕನ್ನಡಪ್ರಭ) ಓದಲು ಪ್ರೋತ್ಸಾಹಿಸಿದವರು. ಮುಂದೆ ಅದೇ ಪತ್ರಿಕೆಗೆ ನಾನು ಸಂಪಾದಕನಾದಾಗ ತುಂಬಾ ಖುಷಿಪಟ್ಟಿದ್ದರು.ಮುಂಗಾರು ಪತ್ರಿಕೆ, ಕನ್ನಡಪ್ರಭ ಪತ್ರಿಕೆಯಲ್ಲಿ ನನ್ನ ಬರಹಗಳನ್ನು ತಪ್ಪದೆ ಓದುತ್ತಿದ್ದರು. ಊರಿಗೆ ಬಂದಾಗ ಅದನ್ನು ನನಗೆ ಹೇಳುವುದರಲ್ಲಿ ಅವರು ಯಾವತ್ತೂ ಮರೆಯುತ್ತಿರಲಿಲ್ಲ. ಎಸ್.ಎಲ್. ಭೈರಪ್ಪ ನವರ ಕಾದಂಬರಿ ಓದು ಎಂದು ನಾನು ಹೈಸ್ಕೂಲಿನಲ್ಲಿ ಇದ್ದಾಗಲೇ ಹೇಳುತ್ತಿದ್ದರು.
ಅವರು ಆರ್ ಎಸ್ ಎಸ್ ಸ್ವಯಂ ಸೇವಕರು. ಅವರಲ್ಲಿ ಅಪಾರ ದೇಶಭಕ್ತಿ ಮತ್ತು ಸಾಹಿತ್ಯ ಓದು ಇತ್ತು. ಕಿರಿಯರ ಜತೆ ಸದಾ ಪ್ರೀತಿಯಿಂದ ಮಾತನಾಡಿಸುವ ಅಪರೂಪದ ವ್ಯಕ್ತಿತ್ವ ಅವರದ್ದಾಗಿತ್ತು. ಕಲ್ಮಡ್ಕ ಒಬ್ಬ ಹಿರಿಯ, ಸಜ್ಜನ ವ್ಯಕ್ತಿಯನ್ನು ಕಳೆದುಕೊಂಡಿದೆ. ಅವರ ನೆನಪು ಸದಾ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದೂ ಶಿವಸುಬ್ರಹ್ಮಣ್ಯ ಪ್ರಾರ್ಥಿಸಿದ್ದಾರೆ.

