ಗುರುವನ್ನು ದೇವನಿಗೆ ಸಮೀಕರಿಸಿ ಆರಾಧಿಸುವ ಪರಂಪರೆ ನಮ್ಮದು. ಗುರುವು ತನ್ನ ಗುರುತ್ವದಿಂದ ದೇವತ್ವಕ್ಕೆ ಏರಿದವನೆಂಬ ನಂಬಿಕೆ ನಮ್ಮದು. ಆದರೆ, ಗೀತಾಚಾರ್ಯನು ದೇವನಾಗಿದ್ದರೂ ಆಚಾರ್ಯನಾಗಿ ಮನುಷ್ಯನು! ಶಂಕರರೂ ಶಂಕರನ ಅವತಾರವೇ ಆದರೂ ಆಚಾರ್ಯರಾಗಿ ಮನುಷ್ಯರು! ದೇವರು ಎಷ್ಟೇ ಅವತಾರ ತಾಳಿ ಬಂದರೂ ಮನುಷ್ಯಾವತಾರವೇ ಮನುಷ್ಯರಿಗೆ ಹತ್ತಿರ! ಬಲುಪ್ರಿಯ! ದೇವನು ಮನುಷ್ಯನಾಗಿ ಬಂದು ಗುರುವಾಗಿ , ಉಪದೇಶಕನಾಗಿ ಗೋಚರಿಸುವ ಸ್ಥಿತಿ ಅನ್ಯಾದೃಶ. ಖ್ಯಾತ ತತ್ತ್ವಜ್ಞಾನಿಯಾದ ಮೈಸೂರು ಹಿರಿಯಣ್ಣನವರ ಶ್ರೇಷ್ಠೋಕ್ತಿಯೊಂದು ಉಲ್ಲೇಖನೀಯವಾಗಿದೆ.
ಅದು ಹೀಗಿದೆ:
ಇದರ ಭಾವಾರ್ಥ ಹೀಗಿದೆ..
ಗುರುವು ದೇವರಂತೆ ನಮಗೆ ಒದಗುವುದು ನಮ್ಮ ಯೋಗ. ದೇವರು ಗುರುವಾಗಿ ಬರುವುದು ನಮ್ಮ ಭಾಗ್ಯ. ಏಕೆಂದರೆ, ಗುರೂಪದೇಶ ನಮಗರ್ಥವಾಗಬೇಕಾದರೆ ನಮಗೆ ಗುರುವಿನ ಸಾಮೀಪ್ಯ, ಸಹವಾಸ ಬೇಕು. ಹಾಗೆ ಆಗಬೇಕಾದರೆ, ಗುರುವು ಮನುಷ್ಯನಾಗಿದ್ದರೆ ಮಾತ್ರ ಸಾಧ್ಯ. ದೇವರ ಸಾಮೀಪ್ಯ , ಸಹವಾಸ ಮನುಷ್ಯಮಾತ್ರನಿಗೆ ಬಲು ಕಷ್ಟ. ಕೋಟಿಸೂರ್ಯಸಮಪ್ರಭನಾದ ದೇವನ ಬಳಿ ನಾವು ಉಳಿದೇವೇ? ಅದು ದೇವನಿಗೆ ಗೊತ್ತು. ಆದ ಕಾರಣ ದೇವರು ಮರ್ತ್ಯಕ್ಕವತರಿಸುವಾಗ ಹೆಚ್ಚಾಗಿ ಮನುಷ್ಯನೇ ಆಗುವುದು. ಮನುಷ್ಯರಿಗೆ ಉಪದೇಶಿಸಬೇಕಾದರೆ ಅವರಿಗೆ ಹತ್ತಿರವಾಗಬೇಕು; ‘ಮನಸ್ಸು’ ಉಳ್ಳವ ಮನುಷ್ಯ. ಆತನಿಗೆ ಉಪದೇಶಿಸಬೇಕಾದರೆ ಆತನ ಮನಸ್ಸು ಅರ್ಥವಾಗಬೇಕು. ಒಬ್ಬ ಮನುಷ್ಯನ ಮನಸ್ಸು ಮತ್ತೊಬ್ಬ ಮನುಷ್ಯನಿಗಷ್ಟೇ ಅರ್ಥವಾದೀತು! ಅದಕ್ಕೆ ತಾನು ಮನುಷ್ಯನೇ ಆದ ದೇವ! ಮನುಷ್ಯನಂತೆ ಅವತಾರವೆತ್ತಿ ಬಂದ ದೇವರನ್ನು ನಾವು ಒಂದು ವೇಳೆ ಮನುಷ್ಯನೆಂದು ಭಾವಿಸದೆ ದೇವರೆಂದೇ ಭಾವಿಸಿದರೆ ಭಾವ-ಭಕ್ತ್ಯಾವೇಶದಿಂದ ನಮ್ಮನ್ನು ಮರೆತುಬಿಡುವೆವು. ಭಾವಪರವಶತೆಯಿಂದ ನಮ್ಮನ್ನೇ ನಾವು ಕಳೆದುಕೊಳ್ಳುವೆವು. ಆಗ ಆತನ ಉಪದೇಶವನ್ನು ಆಲಿಸಲಾರೆವು. ಉಪದೇಶವನ್ನಾಲಿಸದೆ ನಮ್ಮ ಭವ-ಬಂಧನ ಕಳಚುವುದೆಂತು? ಆದ ಕಾರಣ ಮನುಷ್ಯನಂತೆ ಅವತಾರ ತಾಳಿ ಬರುವ ದೇವರನ್ನು ನಾವು ಮನುಷ್ಯನೆಂದೇ ಭಾವಿಸಿದರೆ ಆತನ ಸಾಮೀಪ್ಯ ಪಡೆಯಬಲ್ಲೆವು. ಉಪದೇಶ ಸ್ವೀಕರಿಸಬಲ್ಲೆವು. ಅದಕ್ಕೆ ಸ್ಥಿತಪ್ರಜ್ಞ ಸ್ಥಿತಿ ಬೇಕು. ಮನುಷ್ಯನಾಗಿ,ಸ್ಥಿತಪ್ರಜ್ಞನಾದವನಿಗೆ ಮಾತ್ರ ಉಪದೇಶ ಅರ್ಥವಾದೀತು. ಸ್ಥಿತಪ್ರಜ್ಞನ ಲಕ್ಷಣವನ್ನು ಗೀತಾಚಾರ್ಯ ಗೀತೆಯಲ್ಲಿಯೇ ಹೇಳಿದ್ದಾನೆ.
ನಮ್ಮನ್ನು ಭಾವ – ಬಂಧನದಿಂದ ಬಿಡುಗಡೆಗೊಳಿಸಿ ಭವಬಂಧನದಿಂದಲೂ ಮುಕ್ತಗೊಳಿಸಲೋಸುಗ ನಮ್ಮಲ್ಲೇ ಒಬ್ಬನಾಗಿ ಬಂದವನು ಭಗವಂತ. ಹಾಗೆ ಬಂದರೂ ತನ್ನ ಲೀಲೆಗಳ ಮೂಲಕ ತಾನು ದೇವನೆಂಬುದನ್ನು ಮರ್ತ್ಯದಲ್ಲಿದ್ದುಕೊಂಡೇ ಆಗಾಗ್ಗೆ ತೋರಿಸಿಕೊಟ್ಟ. ಇಲ್ಲವಾದಲ್ಲಿ ಅಲ್ಪಮತಿಗಳಾದ ಮನುಷ್ಯರು ಆತನನ್ನು ತುಚ್ಛೀಕರಿಸಿಬಿಡುತ್ತಿದ್ದರು. ದೇವನೇನು ಮಹಾ? ಅವನೂ ನಮ್ಮಂತೆಯೇ ಎಂದು ಭಾವಿಸಿಕೊಂಡು ಪ್ರದರ್ಶನಕ್ಕಿಳಿದವರು ಆತನ ಲೀಲೆಗೆ ಬಲಿಯಾದರು. ಆದ ಕಾರಣ ದೇವನು ಮಾನವನಾಗಿ ಬಂದರೂ ಆತನನ್ನು ಕಡಿಮೆ ಅಂದಾಜಿಸಲಾಗದು ಅರ್ಥಾತ್ Underestimate ಮಾಡಲಾಗದು. ಹಾಗೆ ಮಾಡಿದವನ ಸ್ಥಿತಿ ಧೂಳೀಪಟವಾಗುವುದು ಖಚಿತ. ಆದ ಕಾರಣ ರೂಢಿಯಲ್ಲಿ ಬಂದ ಮಾತು: ನ ದೇವಚರಿತಂ ಚರೇತ್II “ದೇವತಾಪುರುಷನು ನಡೆದ ನಡವಳಿಕೆಯನ್ನು ಇತರ ಜನರು ಅನುಸರಿಸತಕ್ಕದ್ದಲ್ಲ.” (ನೋಡಿ: ಡಿ.ವಿ.ಜಿ.,’ಶ್ರಿಕೃಷ್ಣ ಪರೀಕ್ಷಣಂ’, ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ.)
ಮನುಷ್ಯ(Man)ನಂತೆ ಬಂದು ಮನುಷ್ಯರ ಗುರು(Human Teacher)ವಿನಂತೆ ಉಪದೇಶಿಸುವುದರ ಜೊತೆಗೆ ತಾನು ಲೋಕಕ್ಕೇ ಗುರು, ಲೋಕಾಚಾರ್ಯನೆಂಬುದನ್ನೂ ( Teacher of universe/ Universal Teacher)ತೋರಿಸಿಕೊಟ್ಟ ಭಗವಂತನ ಲೀಲೆಗೆ ಸಾಟಿಯೆಲ್ಲಿ? ವಿಶ್ವರೂಪದರ್ಶನದ ಭಾಗ್ಯ-ದಿವ್ಯಚಕ್ಷು ಎಲ್ಲರಿಗೂ ದೊರಕದು. ಅಂತೆಯೇ ಉಪದೇಶಶ್ರವಣದ ಯೋಗವೂ. ಅದಕ್ಕೆ ಭಗವಂತನ ಕೃಪೆಯೇ ಬೇಕು. ಅದು ಸಾಧನೆಯಿಂದಷ್ಟೇ ಸಿದ್ಧಿಯಾಗುವುದು. ಅದಕ್ಕೆ ನಾನಾ ದಾರಿಗಳು. ನಮ್ಮ ದಾರಿಯನ್ನು ಮಾತ್ರ ನಾವೇ ಕಂಡುಕೊಳ್ಳಬೇಕು.
II ಶ್ರೀಕೃಷ್ಣಾರ್ಪಣಮಸ್ತು II
ಬರಹ : ಜಯಪ್ರಕಾಶ್ ಎ ನಾಕೂರು


