ಪತ್ರಿಕೆಯಲ್ಲೊಂದು ಸುದ್ದಿ ಓದಿದೆ – ಉಡುಪಿಯ ಎರಡನೇ ಪಿಯು ವಿದ್ಯಾರ್ಥಿ ಇಶಿತಾ ಆಚಾರ್ಯ ಭಾರತೀಯ ಸೇನೆಗೆ ಮಾಸ್ಕ್ ತಯಾರಿಸಿ ಕಳುಹಿಸಿದ್ದಾರೆ. ಇವರ ಈ ದೇಶಪ್ರೀತಿಯ ಕಾರ್ಯಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅಭಿನಂದಿಸಿದ್ದಾರೆ.
ತಾನು ಕಲಿವ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಮಾಸ್ಕ್ ಬ್ಯಾಂಕಿಗೆ ಈ ಮಾಸ್ಕ್ ಗಳು ಸೇರಬೇಕಾಗಿತ್ತು. ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇದನ್ನು ಬಳಸುವ ಉದ್ದೇಶ. ಆದರೆ ಮುನ್ನೂರು ಮಾಸ್ಕ್ ತಯಾರಿಸುವ ಹೊತ್ತಿಗೆ ಎಸ್.ಎಸ್.ಎಲ್.ಸಿ.ಪರೀಕ್ಷೆ ಮುಗಿದಿತ್ತು! ಆಗಲೇ ಬ್ಯಾಂಕಿನಲ್ಲಿ ಮಾಸ್ಕ್ ನ ಠೇವಣಿ ಹೆಚ್ಚಾಗಿತ್ತು.
ಇಶಿತಾ ಯೋಚಿಸಿದರು. ಇದೂ ಕೂಡಾ ದೇಶಸೇವೆಯಲ್ಲವೆ? ಮಾಸ್ಕ್ ಗಳನ್ನು ಸೇನೆಗೆ ಯಾಕೆ ಕಳುಹಿಸಬಾರದು? ಯೋಚನೆ ಕಾರ್ಯರಂಗಕ್ಕಿಳಿಯಿತು. ಅಧಿಕಾರಿಗಳನ್ನು ಸಂಪರ್ಕಿಸಿ ವಿನಂತಿಸಿದರು. ಕೊನೆಗೆ ತಾನೇ ಸ್ವತಃ ಜುಲೈ ಮಧ್ಯ ಭಾಗದಲ್ಲಿ ರಕ್ಷಣಾ ಸಚಿವರಿಗೆ ಮಾಸ್ಕ್ ಗಳನ್ನು ಕೊರಿಯರ್ ಮೂಲಕ ಕಳುಹಿಸಿದರು. ಆಶ್ಚರ್ಯ, ಸೆಪ್ಟೆಂಬರಿನಲ್ಲಿ ರಕ್ಷಣಾ ಸಚಿವರಿಂದ ಅಭಿನಂದನಾ ಪತ್ರ.
ಇಶಿತಾ ಖುಷ್.
ಯೂಟ್ಯೂಬಿನಲ್ಲಿರುವ ಮಾಸ್ಕ್ ತಯಾರಿ ಮಾಹಿತಿಯನ್ನು ಕಲಿತ ಇಶಿತಾ ಮಾಸ್ಕ್ ಸಿದ್ಧಪಡಿಸಿದ್ದಾರೆ. ನಿಜಕ್ಕೂ ಖುಷಿ ಪಡುವ ವಿಚಾರ.
ಇಶಿತಾ ಅಂಬಲಪಾಡಿಯವರು. ತಂದೆ ಗಿರೀಶ್ ಆಚಾರ್, ತಾಯಿ ನಂದಿತಾ ಆಚಾರ್. ಎಪ್ರಿಲ್-ಮೇ ಲಾಕ್ಡೌನಿನಲ್ಲಿ ಸಿದ್ಧವಾದ ಮಾಸ್ಕ್ ತಯಾರಿ ಈಗ ದೇಶ ಮಟ್ಟದ ಸುದ್ದಿ. ವಿದ್ಯಾರ್ಥಿ ದಿಸೆಯ ಈ ಸಣ್ಣ ಕೆಲಸ ಇದೆಯಲ್ಲಾ, ಇದು ದೇಶಮಟ್ಟದಲ್ಲಿ ದೊಡ್ಡದೇ. ‘ನಮ್ಮನ್ನು ಕಾಯುವ ಯೋಧರಿಗಾಗಿ ನಾವು ಇಷ್ಟಾದರೂ ಮಾಡಬೇಡ್ವೇ’ ಎನ್ನುವ ವಿದ್ಯಾರ್ಥಿನಿಯ ಆಶಯದ ಹಿಂದೆ ನಿಜಾರ್ಥದ ದೇಶಭಕ್ತಿಯಿದೆ.
ದೇಶಭಕ್ತಿಯನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸುವ ಕಾಲಘಟ್ಟದಲ್ಲಿ ಇಶಿತಾಳ ಸಣ್ಣ ಕೆಲಸ ಸದ್ದಾಗದು. ರಂಗುರಂಗಿನ ಮಾಧ್ಯಮಗಳಿಗೆ ಇದೇನೂ ದೊಡ್ಡ ಸುದ್ದಿಯಲ್ಲ. ವಾಹಿನಿಗಳೆಲ್ಲಾ ಡ್ರಗ್ಸ್ ಮಾಫಿಯಾದ ಸತ್ಯಗಳನ್ನು (!) ಕೆದಕುವ ಕೆಲಸದಲ್ಲಿವೆ. ಅವುಗಳಿಗೆ ಇಶಿತಾಳ ಕೆಲಸ ಕಾಣದು.
ಮಾಧ್ಯಮ ಬೆಳಕಿಗಾಗಿ ಅವರು ಮಾಸ್ಕ್ ತಯಾರಿಸಿದ್ದೂ ಅಲ್ಲ. ಆದರೆ ದೇಶದ ಬಗ್ಗೆ ಕನಿಷ್ಠ ಒಲವು ಮತ್ತು ಪ್ರೀತಿಯಿರುವ ಎಲ್ಲರೂ ಶ್ಲಾಘಿಸಬೇಕಾದ ಕಾರ್ಯವನ್ನು ಇಶಿತಾ ಮಾಡಿದ್ದಾರೆ. ಕೋವಿಡ್ 19 ಯಾನದಲ್ಲಿ ಬದುಕು ಸಾಗುತ್ತಿದೆ. ವಿಷಾದಗಳ ಮಧ್ಯೆ ಇಂತಹ ಚಿಕ್ಕಪುಟ್ಟ ವಿಚಾರಗಳು ಪಾಸಿಟಿವ್ ಬೆಳಕಿಂಡಿಗಳಾಗಿ ಗೋಚರಿಸುತ್ತವೆ.
# ನಾ. ಕಾರಂತ ಪೆರಾಜೆ
ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ತಾಪ ಮುಂದುವರಿದರೂ ಮಾರ್ಚ್ 14 ಅಥವಾ 15ರಿಂದ ಹಲವೆಡೆ…
ದೇಶದ ಹಲವು ನಗರಗಳಲ್ಲಿ ವಾಣಿಜ್ಯ LPG ಕೊರತೆಯಿಂದ ಹೋಟೆಲ್ ಮತ್ತು ಆಹಾರ ವಿತರಣೆ…
ದೇಶೀಯ ಗ್ರಾಹಕರಿಗೆ ಸಿಎನ್ಜಿ, ಪಿಎನ್ಜಿ ಹಾಗೂ ಎಲ್ಪಿಜಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆ…
Bio Innovations APAC 2026 ಸಮಾವೇಶದಲ್ಲಿ ಗೋಡಾವರಿ ಬಯೋರೆಫೈನರೀಸ್ ತನ್ನ ಜೈವಿಕ ಉತ್ಪಾದನಾ…
ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತವಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಉತ್ತಮ ದರದ ಕಾರಣ…
ರಾಜ್ಯದಲ್ಲಿ ಗೃಹಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ಸಚಿವ…