2022 | ಹೊಸ ವರುಷದ ಒಂದು ಸಾಕ್ಷ್ಯಚಿತ್ರ……..| ಅಕ್ಷರಗಳಲ್ಲಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ ವಿವೇಕಾನಂದ ಎಚ್‌ ಕೆ |

January 1, 2022
10:56 AM

ಮುಂಬಯಿ ಕೊಲಾಬಾದ ಪ್ರತಿಷ್ಠಿತ ” ತಾಜ್ ಮಹಲ್ ಪ್ಯಾಲೇಸ್ ಹೋಟೆಲ್” ನ ತುತ್ತತುದಿಯ ಓಪನ್ ಗಾರ್ಡನ್ ರೆಸ್ಟೋರೆಂಟ್ ನಲ್ಲಿ, ಅರಬ್ಬೀ ಸಮುದ್ರದ ಅಲೆಗಳ ವಿಹಂಗಮ ನೋಟದ ಆನಂದದಲ್ಲಿ, ತಣ್ಣನೆ ಬೀಸುತ್ತಿದ್ದ ತಂಗಾಳಿಯ ಮೈಸ್ಪರ್ಶದ ಪುಳಕದಲ್ಲಿ, ಆಕಾಶದ ಚೆಂದಿರನ ಬೆಳಕಿನಲ್ಲಿ,….

ರೌಂಡ್ ಟೇಬಲ್ಲಿನ ಸುತ್ತ, ನಾಲ್ಕು ಹುಡುಗಿಯರು ಕುಳಿತು ಲೇಡಿ ಸಹಾಯಕರು ಕೇಳಿ ಬೆರೆಸುತ್ತಿದ್ದ ನೀರು ಸೋಡಾ ಹಣ್ಣಿನ ರಸದ ಜೊತೆ ಸ್ಕಾಟಿಷ್ ವಿಸ್ಕಿ ಹೀರುತ್ತಾ ಆ ಲಕ್ಸುರಿ ಸೋಫಾದ ಉದ್ದಕ್ಕೂ ಕಾಲುಚಾಚುತ್ತಾ ಮೋಹಕವಾಗಿ ನಗುತ್ತಾ ಹೊಸ ವರ್ಷವನ್ನು ಎಂಜಾಯ್ ಮಾಡುತ್ತಿದ್ದರು……..

ವಿಶ್ವವನ್ನೇ ಗೆದ್ದ ಸಂತಸ ಅವರ ಮುಖಗಳಲ್ಲಿ ಕಾಣುತ್ತಿತ್ತು. ಎಲ್ಲವನ್ನೂ ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಅವರು ತುಟಿಗೆ ತಾಗಿಸುತ್ತಿದ್ದ ವಿಸ್ಕಿಯ ಗ್ಲಾಸಿನ ಪ್ರತಿ ಗುಟುಕಿನಲ್ಲೂ ಇಡೀ ಬದುಕಿನ ಸ್ವಾದವನ್ನೇ ಹೀರುತ್ತಿರುವಂತೆ ಅನುಭವಿಸುತ್ತಿದ್ದರು……..

ಸುಮಾರು 23/25 ವಯಸ್ಸಿನ ಆ ಹುಡುಗಿಯರ ಹಿನ್ನೆಲೆ ಗೊತ್ತಿಲ್ಲ. ಆದರೆ ಅತ್ಯಂತ ಶ್ರೀಮಂತ ಮನೆತನದವರು ಎಂಬುದಕ್ಕೆ ಸಾಕ್ಷಿ ಬೇಕಿರಲಿಲ್ಲ……. ಜೋರಾಗಿ ಮಾತನಾಡುತ್ತಿದ್ದ ಅವರು…………..

ವಿಶ್ವದ ಅತ್ಯಂತ ಶ್ರೀಮಂತ ಸ್ಥಳಗಳು, ವಿಹಾರ ಧಾಮಗಳು, ಲೇಟೆಸ್ಟ್ ಫ್ಯಾಷನ್ ಡಿಸೈನರುಗಳು, ಮೇಕಪ್ ಮತ್ತು ಪರ್ ಪ್ಯೂಮ್ ಗಳ ಹೆಸರುಗಳು, ಆಗೊಮ್ಮೆ ಹೀಗೊಮ್ಮೆ ತಮ್ಮ ಪೋಷಕರ ಬಿಸಿನೆಸ್ ಮತ್ತು ಹೊಸ ಹೊಸ ಮಾರ್ಕೆಟಿಂಗ್ ತಂತ್ರಗಳ ಸುತ್ತಲೇ ತಿರುಗುತ್ತಿತ್ತು…….

Advertisement

KINGFISHER BEER……. : 
ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಪುರುಷರ ಹಾಸ್ಟೆಲ್…….

ರಾತ್ರಿ 9 ಗಂಟೆ, ಸುಮಾರು 13/15 ಜನ ಹುಡುಗರು ಹೊಸ ವರ್ಷದ ಸಂಭ್ರಮ ಆಚರಿಸಲು ಹಾಲ್ ನಲ್ಲಿ ಕುಳಿತಿದ್ದಾರೆ. ಸುತ್ತಲೂ ಕಿಂಗ್ ಫಿಶರ್ ಬಾಟಲುಗಳಿರುವ ಕ್ರೇಟುಗಳು ಇವೆ.

ಒಂದಿಬ್ಬರು ಹುಡುಗರು ಚಿಪ್ಸ್, ಮಸಾಲೆ ಕಡಲೆಬೀಜ, ಚಿಕನ್ ಕಬಾಬ್ ಅನ್ನು ಪೇಪರ್ ಪ್ಲೇಟುಗಳಲ್ಲಿ ಜೋಡಿಸುತ್ತಿದ್ದರೆ, ಇನ್ನೊಂದಿಬ್ಬರು ಗ್ಲಾಸುಗಳಿಗೆ ಬಿಯರ್ ಹಾಕುತ್ತಿದ್ದಾರೆ.

ಎಲ್ಲವೂ ಸೆಟ್ಲ್ ಆದ ಮೇಲೆ ಮಾತುಗಳು ಜೋರಾಗುತ್ತವೆ. ಅವರ ಸಹಪಾಠಿ ಹುಡುಗಿಯರ ವಿಷಯಗಳು, ಪ್ರೊಫೆಸರ್ ಗಳ ಜಾತಿ ರಾಜಕೀಯ, ಕ್ಯಾಂಪಸ್‌ನ ರೌಡಿಗಳ ಗುಣಗಾನ, ತಂದೆ ತಾಯಿಗಳ ಸಂಕಷ್ಟ, ಭವಿಷ್ಯದ ಕನಸುಗಳೇ ಅವರ ಮಾತಿನ ಮುಖ್ಯ ವಿಷಗಳಾಗಿದ್ದವು………

KHODAY’S XXX RUM…………:

Advertisement

ಊರಿನ ಪಾಳು ಬಿದ್ದ ಕಟ್ಟಡದಲ್ಲಿ ಒಂದಷ್ಟು ಜನ ಸೇರಿದ್ದಾರೆ. ಕಲ್ಲು ಮಣ್ಣುಗಳು ಜಾಗದ ಮಧ್ಯೆ ಒಂದು ಚಾಪೆ ಹಾಸಿ ಇಸ್ಪೀಟೆಲೆಗಳನ್ನು ಇಟ್ಟಿದ್ದಾರೆ. ಯಾರದೋ ಮನೆಯಿಂದ ದೊಡ್ಡ ತಪ್ಪಲೆಯಲ್ಲಿ ಮಸಾಲೆ ಹಾಕಿ ಬೇಯಿಸಿದ ಕೋಳಿ ಮಾಂಸದ ಅಡುಗೆ ಇಟ್ಟಿದ್ದಾರೆ. ಪಕ್ಕದಲ್ಲಿ ಒಂದು ರಾಶಿ ಬೇಯಿಸಿದ ಮೊಟ್ಟ ಇದೆ. ಒಂದಷ್ಟು ಈರುಳ್ಳಿ ಮತ್ತು ಸೌತೆಕಾಯಿ ಹೋಳುಗಳನ್ನು ಪೇಪರಿನಲ್ಲಿ ಸುತ್ತಿಟ್ಟಿದ್ದಾರೆ. ಕತ್ತಲೆಯನ್ನು ಹೋಗಲಾಡಿಸಲು ಎಲ್ಲರೂ ಮೊಬೈಲ್‌ ಟಾರ್ಚ್ ಆನ್ ಮಾಡಿದ್ದಾರೆ. ಆ ಬೆಳಕಿನಲ್ಲಿ ದಟ್ಟನೆಯ ಸಿಗರೇಟ್ ಹೊಗೆ ಸುತ್ತಲೂ ಆವರಿಸಿದೆ.

ಯಾರೋ ಒಬ್ಬ ಚಿಕ್ಕ ಹುಡುಗ ಎಲ್ಲರಿಗೂ ಪ್ಲಾಸ್ಟಿಕ್ ಲೋಟಗಳಲ್ಲಿ ಆ ರಮ್ ಅನ್ನು ಅಳತೆಯಲ್ಲಿ ಸುರಿದು ಸುರಿದು ಕೊಡುತ್ತಿದ್ದಾನೆ. ಕುಡಿಯುತ್ತಾ ತಿನ್ನುತ್ತಾ ಇಸ್ಪೀಟು ಆಟ ಶುರುವಾಗುತ್ತದೆ……

ಮೌನವೇ ಹೆಚ್ಚಾಗಿದ್ದರೂ ಆಗಾಗ ಸೋತವರು ಕೆಟ್ಟ ಕೊಳಕ ಭಾಷೆಯಲ್ಲಿ ಅವರ ಅದೃಷ್ಟವನ್ನು ಹಳಿಯುತ್ತಾರೆ. ಕಳೆದುಹೋದ ‌ವರ್ಷದ ಘಟನೆಗಳನ್ನು ನೆನಪಿಸಿಕೊಂಡು ಯಾರಿಗೋ ಶಾಪ ಹಾಕುತ್ತಾರೆ. ಒಬ್ಬ ಕುಡಿತ ಹೆಚ್ಚಾಗಿ ವಾಂತಿ ಮಾಡಿದರೆ ಇನ್ನೊಬ್ಬ ಅಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಾನೆ. ಉಳಿದವರು ತಮಗೆ ಇದು ಸಂಭಂದವೇ ಇಲ್ಲದಂತೆ ಆಟದಲ್ಲಿ ಮಗ್ನರಾಗಿದ್ದಾರೆ…….

CAKES AND JUICE…….:
ಒಂದು ಮನೆಯ ಮಹಡಿಯ ಮೇಲೆ ಸುತ್ತಮುತ್ತಲಿನ ಕೆಲವು ಕುಟುಂಬಗಳು ಮತ್ತು ಅವರ ಸಂಬಂಧಿಗಳು ಒಂದಷ್ಟು ಹಣವನ್ನು ಎಲ್ಲರೂ ಸಮನಾಗಿ ಒಟ್ಟುಗೂಡಿಸಿ ಕೇಕ್, ಮಿಕ್ಸ್ಚರ್, ಜ್ಯೂಸ್ ತಂದು, ಕೆಳಗೆ ಕುಳಿತು ಕೊಳ್ಳಲು ಚಾಪೆಗಳನ್ನು ಹಾಕಿ, ಯಾರದೋ ಮನೆಯಿಂದ ಆಡಿಯೋ ಸಿಸ್ಟಮ್ ತಂದು ಜೋರಾಗಿ ಸಿನಿಮಾ ಹಾಡುಗಳನ್ನು ಹಾಕಿ ಮನಸ್ಸಿಗೆ ಬಂದಂತೆ ಕುಣಿಯುತ್ತಿದ್ದಾರೆ. ಚಿಕ್ಕ ಮಕ್ಕಳಲ್ಲಿ ಕೆಲವರು ಜ್ಯೂಸ್ ಕುಡಿಯುತ್ತಾ ತಾವು ಕುಣಿಯುತ್ತಿದ್ದರೆ ಇನ್ನೊಂದಿಷ್ಟು ಮಕ್ಕಳು ಆ ಜೋರು ಗಲಾಟೆಯಲ್ಲೂ ನಿದ್ದಿಗೆ ಜಾರಿದ್ದಾರೆ. ಒಂದೆರಡು ಸಂಸಾರಗಳಲ್ಲಿ ಗಂಡ ಹೆಂಡತಿಯ ಮುನಿಸು ಕಾಣಿಸುತ್ತಿದೆ. ಅವರು ಸುಮ್ಮನೆ ಕಾಟಾಚಾರಕ್ಕೆ ಕುಳಿತಿದ್ದಾರೆ.

BAR AND RESORT…….:

Advertisement

ಮೇಲ್ಮಧ್ಯಮವರ್ಗದ – ಗೆಜಟೆಡ್ ಆಫೀಸರ್ ದರ್ಜೆಯ ಬಹುತೇಕ ಕುಟುಂಬ ಸಮೇತ ಒಂದು ಪ್ಯಾಕೇಜ್ ನಲ್ಲಿ ಬಂದು ಕುಡಿಯುತ್ತಾ, ಅಬ್ಬರದ ಸಂಗೀತ ಕೇಳುತ್ತಾ, ಸಾಕಷ್ಟು ಭಿನ್ನ ರುಚಿಯ ಊಟ ಸವಿಯುತ್ತಾ, ಪಾಶ್ಚಾತ್ಯ ಸಂಸ್ಕೃತಿಯ ಆಚರಣೆಗಳನ್ನು ಒಳಗೊಳಗೆ ತೆಗಳುತ್ತಾ, ತಾವು ಮಾತ್ರ ಅದರಲ್ಲಿ ಭಾಗವಹಿಸುತ್ತಾ, ಮುಖವಾಡಗಳ ಮರೆಯಲ್ಲಿ ಹೊಸ ವರ್ಷದ ದಿನ ಕಳೆಯುವರು……..

MANDIR MASJID CHURCH……..:

ಆಂತರ್ಯದ ಗುಣ ಸ್ವಭಾವಗಳು ಏನೇ ಇರಲಿ ಕನಿಷ್ಟ ಮೇಲ್ನೋಟಕ್ಕಾದರೂ ಅತ್ಯಂತ ಧಾರ್ಮಿಕ ನಂಬುಗೆಯ ಜನರು ತಮ್ಮ ದೇವರ ದರ್ಶನ ಪಡೆದು ತಮ್ಮ ಒಳಿತಿಗಾಗಿ ಆ ದೇವರಿಗೆ ಬೇಡಿಕೆ ಇಟ್ಟು ಕೈಮುಗಿದು ಒಂದಷ್ಟು ಕಾಣಿಕೆ ನೀಡಿ ಶ್ರದ್ಧಾ ಭಕ್ತಿಯಿಂದ ಹೊಸ ಆಯುರ್ ಆರೋಗ್ಯ ಧನಕನಕಗಳು ಉದ್ಯೋಗ ಮದುವೆ ಮನೆ ವಾಹನ ಇತ್ಯಾದಿ ಇತ್ಯಾದಿ ಕನಸಿನಲ್ಲಿ ಹೊಸ ವರ್ಷ ಆಚರಿಸುತ್ತಾರೆ…………

ROADS AND STREETS……….:

ಪಡ್ಡೆ ಹುಡುಗ ಹುಡುಗಿಯರು ಬಹುತೇಕ ಕೆಳ ಮಧ್ಯಮ ವರ್ಗಕ್ಕೆ ಸೇರಿದವರೇ ಹೆಚ್ಚಾಗಿ ತಮ್ಮಲ್ಲಿರುವ ಎರಡು ಚಕ್ರಗಳ ವಾಹನ ಏರಿ ತ್ರಿಬಲ್ ರೈಡಿಂಗ್ ಮಾಡುತ್ತಾ, ರಸ್ತೆಯಲ್ಲಿ ಹೋಗುವ ಹುಡುಗ ಹುಡುಗಿಯರನ್ನು ಚುಡಾಯಿಸುತ್ತಾ, ಯಾವುದೋ ರಸ್ತೆಯ ಒಂದು ಕಡೆ ಕ್ಯಾಂಡಲ್ ಹಚ್ಚಿ, ಕೇಕ್ ಕಟ್ ಮಾಡಿ, ಜೋರಾಗಿ ಕಿರುಚುತ್ತಾ ಹುಚ್ಚು ಹುಚ್ಚಾಗಿ ವರ್ತಿಸುತ್ತಾ ಹೀಗೆ ಮಾಡುವುದೇ ಯುವಕರ ಫ್ಯಾಷನ್ ಎಂದು ಭಾವಿಸಿ ಹೊಸ ವರ್ಷ ಆಚರಿಸುತ್ತಾರೆ……..

Advertisement

SENIOR CITIZENS…,……..:
ವಯಸ್ಸು ಮತ್ತು ಆರೋಗ್ಯ ಕಾರಣಕ್ಕಾಗಿ ಹಾಗು ಬದುಕಿನ ಏರಿಳಿತಗಳ ಅನುಭವದಿಂದಾಗಿ ಈ ಹೊಸ ವರ್ಷದ ಹುಚ್ಚಾಟಗಳು ಅವರಿಗೆ ರೇಜಿಗೆ ಬರುವಂತೆ ಮಾಡಿರುತ್ತದೆ. ಯಾರು ಏನೇ ಮಾಡಿಕೊಂಡರು ತಲೆ ಕೆಡಿಸಿಕೊಳ್ಳದೆ ಎಂದಿನಂತೆ ತಮ್ಮ ಪಾಡಿಗೆ ತಾವು ಊಟ ಮಾಡಿ ಟಿವಿ ಮುಂದೆ ಕುಳಿತು ಅಲ್ಲಿನ ಹುಚ್ಚಾಟಗಳನ್ನು ಶಪಿಸುತ್ತಾ ಬದಲಾದ ಸಮಾಜದ ನಡವಳಿಕೆಗಳನ್ನು ವಿನಾಶದ ಮುನ್ಸೂಚನೆ ಎನ್ನುತ್ತಾ ನಿದ್ರೆಗೆ ಜಾರುತ್ತಾರೆ…………

LOSERS……….
ಇತ್ತೀಚೆಗಷ್ಟೇ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರು, ತಮ್ಮ ಹಣ ಆಸ್ತಿ ಉದ್ಯೋಗ ವ್ಯವಹಾರಗಳಲ್ಲಿ ನಷ್ಟ ಅನುಭವಿಸಿದವರಿಗೆ ಹೊಸ ವರ್ಷ ಒಂದು ಕಹಿ ನೆನಪಾಗಿ ಕಾಡಿ ಅವರು ಸಾಮಾನ್ಯವಾಗಿ ಏಕಾಂತ ಬಯಸಿ ತಮ್ಮ ದುರಾದೃಷ್ಟವನ್ನು ಹಳಿಯುತ್ತಾ ಮಾನಸಿಕ ವೇದನೆಯಲ್ಲಿ ಮುಳುಗಿ, ಇತರೆ ತಮ್ಮ ಸಹವರ್ತಿಗಳ ಯಶಸ್ಸಿಗೆ ಒಳಗೊಳಗೆ ಅಸೂಯೆ ಪಡುತ್ತಾ ಬದಲಾಗುವ ದಿನ ರಾತ್ರಿಗಳ ಹೊಸ ವರ್ಷ ಮುಂದೆ ಬದಲಾಗುವ ಆಶಯದೊಂದಿಗೆ ದಿನ ದೂಡುತ್ತಾರೆ……..

POOR AND HAVENOTS………
ಅತ್ಯಂತ ಕೆಳ ವರ್ಗದವರು ಅನಾಥರು ಬೀದಿ ಬದಿಯಲ್ಲಿ ಜೀವನ ಸಾಗಿಸುವವರಿಗೆ ಲೋಕದ ಈ ಸಂಭ್ರಮ ವಿಚಿತ್ರ ಭಾವ ಉಂಟುಮಾಡುತ್ತದೆ. ವಿಧಿಯ ಹಳಹಳಿಕೆ, ತಮ್ಮ ಮನೋ ವೇದನೆ, ಆ ಕ್ಷಣದ ಕ್ರಿಯೆ ಪ್ರತಿಕ್ರಿಯೆ, ಚಳಿಯಲ್ಲಿ ನಲುಗುವಿಕೆ ಎಲ್ಲವೂ ಸೇರಿ ಇದೊಂದು ಹುಚ್ಚರ ಸಂತೆ ಎಂಬಂತೆ ಭಾಸವಾಗುತ್ತದೆ. ಇದರ ಘೋರ ಅನುಭವ ಪದಗಳಿಗೆ ನಿಲುಕುವುದಿಲ್ಲ. ಹೃದಯದಾಳದಲ್ಲಿ ಅಲೆ ಎಬ್ಬಿಸಿ ಭಾರ ಉಂಟುಮಾಡುತ್ತದೆ. ಅದು ಬೇರೆಯದೇ ಅಧ್ಯಾಯ……….

ಹೀಗೆ ಭಾರತದ ಕೆಲವು ವರ್ಗಗಳ ಹೊಸ ವರ್ಷದ ಸಂಭ್ರಮ ಸ್ವಾಗತ ನಡೆಯುತ್ತದೆ. ಇದಲ್ಲದೆ ಇನ್ನೂ ಹೇಗೇಗೋ……

ಅರ್ಥಪೂರ್ಣ ಆಚರಣೆಯೂ ಉಂಟು. ಸಹಜ ಸರಳ ಸ್ವಾಗತವೂ ಕೋರಲಾಗುತ್ತದೆ. ಹಾಗೇ ಕೆಲವರು ನಿರ್ಲಕ್ಷ್ಯವನ್ನು ತೋರುತ್ತಾರೆ……

Advertisement

ಕ್ಯಾಲೆಂಡರಿನ ಮೊದಲನೇ ದಿನಕ್ಕೆ ಏನೇನು ಅವತಾರಗಳೋ…….

# ವಿವೇಕಾನಂದ. ಎಚ್.ಕೆ.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಹೊಸರುಚಿ | ಬಿಳಿ ಎಳ್ಳು ಓಟ್ಸ್ ಚಿಕ್ಕಿ
January 10, 2026
9:38 PM
by: ದಿವ್ಯ ಮಹೇಶ್
ಕಾಲಪ್ರಜ್ಞೆ – ಸಮಯದ ಅರಿವು ಮತ್ತು ಕಾಲನಿಯಂತ್ರಣದ ತಾತ್ವಿಕತೆ
January 9, 2026
9:51 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಅಡಿಕೆ ತೋಟಗಳಿಗೆ ಸವಾಲಾಗಿರುವ ಎಲೆಚುಕ್ಕಿ ರೋಗ – ವಿಜ್ಞಾನ ಏನು ಹೇಳುತ್ತದೆ?
January 9, 2026
7:43 AM
by: ಮಹೇಶ್ ಪುಚ್ಚಪ್ಪಾಡಿ
ಕನ್ನಡದಲ್ಲಿ ಕಲಿತರೆ ಹಿನ್ನಡೆ ಇಲ್ಲ
January 7, 2026
7:42 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror