ಮೇ 30 ರಂದು ಕೇಂದ್ರ ಸರ್ಕಾರ ಆಮದಾಗುವ ಅಡುಗೆ ಎಣ್ಣೆಯ ಕಚ್ಚಾ ಉತ್ಪನ್ನದ ಮೇಲಿನ ಸುಂಕವನ್ನು ಶೇಕಡಾ 20 ರಿಂದ 10 ಕೆ ಇಳಿಸಿ ಒಟ್ಟಾರೆ ಸುಂಕದ ಪ್ರಮಾಣ ಶೇಕಡಾ 27.5 ರಿಂದ 16.5 ರಷ್ಟು ಇಳಿಸಿತ್ತು.ಇದು ಮಾಧ್ಯಮಗಳಲ್ಲಿ ಬಂದು ಎರಡು ದಿನಗಳಾಗುವ ಹೊತ್ತಿಗೆ ತೆಂಗಿನ ಮಾರುಕಟ್ಟೆಯಲ್ಲಿ ಹರಿದಾಡಿದ ಸುದ್ದಿ “ಎಣ್ಣೆ ಆಮದಾಗುತ್ತಿದೆ,ಇನ್ನು ತೆಂಗಿನ ಕಾಯಿ, ಕೊಬ್ಬರಿ ಇತ್ಯಾದಿಗಳ ಬೆಲೆ ಇಳಿಕೆಯಾಗಲಿದೆ” ಎಂಬುದು. ಆದರೆ ವಾಸ್ತವ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಸರಕಾರದ ಹೇಳಿಕೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.ಅದರ ಮೊದಲೇ ಮಾರುಕಟ್ಟೆಯಲ್ಲಿ ಗೊಂದಲ ಸೃಷ್ಟಿ ಆಗಿದೆ.ಈ ನಿಟ್ಟಿನಲ್ಲಿ ಏನು ಆಗಬಹುದು ಎಂಬ ಚಿಂತನೆ ಇಲ್ಲಿ ಮಾಡಲಾಗಿದೆ.…… ಮುಂದೆ ಓದಿ……
ಆಮದಿನ ಮೇಲೆ ಯಾಕೆ ಸುಂಕ ಕಡಿತ ?: ಭಾರತ ಪಾಮ್,ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ವಿದೇಶದಿಂದ ಆಮದು ಮಾಡಿಕೊಳ್ಳುತ್ತದೆ.ಈ ಆಮದು ಇಂಡೋನೇಷಿಯಾ,ಮಲೇಶಿಯ,ರಷ್ಯಾ,ಉಕ್ರೇನ್ ಮತ್ತು ಅರ್ಜೆಂಟೀನಾ ಮತ್ತು ಥೈಲ್ಯಾಂಡ್ ರಾಷ್ಟ್ರಗಳಿಂದ ಆಗುತ್ತಿದೆ. ಇಲ್ಲೆಲ್ಲಾ ಒಂದಲ್ಲ ಒಂದು ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳಿದ್ದು ಸಂಸ್ಕರಿಸಿದ ಎಣ್ಣೆಯ ಬೆಲೆ ಜಾಸ್ತಿ.ಇನ್ನೊಂದು ಬದಿಯಲ್ಲಿ ಆಂತರಿಕ ಉತ್ಪಾದಕರ ರಕ್ಷಣೆಗಾಗಿ ಕಚ್ಚಾ ಉತ್ಪನ್ನದ ಆಮದು ಸರಕಾರಕ್ಕೆ ಅನಿವಾರ್ಯ ಆಗಿದೆ. ಇದರೊಂದಿಗೆ ಆಂತರಿಕವಾಗಿ ಅಡುಗೆ ಎಣ್ಣೆಯ ಬೆಲೆ ಏರಿಕೆ ಆಗಿ ಗೃಹಿಣಿಯರು ಸರಕಾರದ ವಿರುದ್ಧ ದ್ವನಿ ಎತ್ತುವ ಸ್ಥಿತಿ ಉತ್ತರ ಭಾರತದಲ್ಲಿ ನಿರ್ಮಾಣ ಆಗಿದೆ.ಈ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಇದಕ್ಕಾಗಿ ಇದರ ಬೆಲೆ ಇಳಿಕೆ ಮತ್ತು ಎಣ್ಣೆಯ ಉತ್ಪಾದಕರ ರಕ್ಷಣೆಗಾಗಿ ಈಗ ಸುಂಕ ಇಳಿಕೆಗೆ ದಾರಿ ಆಗಿದೆ. ಇನ್ನು ಮುಂದಿನ ವರ್ಷ ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪಾಂಡಿಚೇರಿ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು ಇದೂ ಸುಂಕದ ಇಳಿಕೆಗೆ ಕಾರಣ ಆಗಲು ಸಾಧ್ಯ.
ತೆಂಗಿಗೆ ಇದೆಯೇ ಪರಿಣಾಮ : ಭಾರತದಲ್ಲಿ ತೆಂಗಿನ ಉತ್ಪಾದನೆ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ,ಆಂಧ್ರ ಪ್ರದೇಶ,ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಲ್ಲಿ ಆಗುತ್ತಿದೆ.ಈ ಎಲ್ಲಾ ರಾಜ್ಯಗಳಲ್ಲಿ ಇದರ ಬಳಕೆ ಹೆಚ್ಚು.ಇದಿಲ್ಲದೆ ಅಡುಗೆ ಆಗಲಾರದು.ಇಲ್ಲೆಲ್ಲಾ ಅಡುಗೆಗೆ ತೆಂಗಿನ ಎಣ್ಣೆಯ ಬೇಕು.ಈ ರಾಜ್ಯಗಳಲ್ಲಿ ಪಾಮ್, ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಯ ಬಳಕೆ ತೀರಾ ಕಡಿಮೆ.ಆಮದಾಗುವ ಈ ಅಡುಗೆ ಎಣ್ಣೆ ಕಡಿಮೆ ಬೆಲೆಗೆ ದೊರಕುವುದಿದ್ದರೂ ಇದಕ್ಕೆ ಗ್ರಾಹಕರು ಮುಗಿ ಬೀಳಲಾರರು.ಆದ್ದರಿಂದ ಸುಂಕ ಕಡಿತ ತೆಂಗಿನ ಮೇಲೆ ಯಾವುದೇ ಪ್ರಭಾವ ಬೀರಲಾರದು.
ಮಾರುಕಟ್ಟೆಯಲ್ಲಿ ಈಗ ಸಾವಯವ ಮತ್ತು ಇತರ ಬ್ರಾಂಡಿನ ತೆಂಗಿನ ಎಣ್ಣೆಯ ಬೆಲೆ ಲೀಟರೊಂದರ ರೂಪಾಯಿ ಇನ್ನೂರರಿಂದ ಮುನ್ನೂರ ಮೇಲೆ ಇದ್ದು,ಇನ್ನೊಂದು ಬದಿಯಲ್ಲಿ ಪಾಮ್ ಮತ್ತಿತರ ಎಣ್ಣೆಗಳ ಬೆಲೆ ನೂರಮೂವತ್ತರಿಂದ ನೂರ ಎಪ್ಪತ್ತರ ಆಸು ಪಾಸು ಆಗಿದ್ದರೂ ತೆಂಗಿನ ಎಣ್ಣೆಗೆ ಬೇಡಿಕೆ ಕುಸಿದಿಲ್ಲ.ಆದ್ದರಿಂದ ಆಮದು ತೆಂಗಿಗೆ ಯಾವುದೇ ಹೊಡೆತ ಕೊಡಲಾರದು.ಇದರೊಂದಿಗೆ ಭಾರತ ಸೌದಿ ಅರೇಬಿಯಾ,ಸಂಯುಕ್ತ ಅರಬ್ ರಾಷ್ಟ್ರಗಳಿಗೆ ತೆಂಗಿನ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದು, ಇದೂ ಕೂಡಾ ತೆಂಗಿಗೆ ಇರುವ ಬೇಡಿಕೆಯನ್ನು ತಿಳಿಹೇಳುತ್ತಿವೆ.
ದೇಶದಲ್ಲಿ ಒಟ್ಟಾಗಿ ಸುಮಾರು 21,400 ಮಿಲಿಯ ತೆಂಗಿನ ಕಾಯಿ ಉತ್ಪಾದನೆ ಆಗುತ್ತಿದ್ದು,ಇದರಲ್ಲಿ ಕ್ರಮವಾಗಿ ಕರ್ನಾಟಕ,ತಮಿಳ್ನಾಡು ಮತ್ತು ಕೇರಳ ಮೊದಲ ಮೂರು ಸ್ಥಾನದಲ್ಲಿವೆ.ಒಟ್ಟಾಗಿ 13 ಕ್ಕಿಂತಲೂ ಹೆಚ್ಚು ರಾಜ್ಯಗಳಲ್ಲಿ ಇದರ ಉತ್ಪಾದನೆ ಆಗಿ ಬಳಕೆಯೂ ಆಗುತ್ತಿದ್ದು,ಇಲ್ಲಿ ಒಮ್ಮಿಂದೊಮ್ಮೆಲೆ ಬಳಕೆ ಪದ್ಧತಿ ಬದಲಾಗಲು ಅಸಾಧ್ಯ.ತೆಂಗಿನ ವಿವಿಧ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಮಾರಿಕೋ ,ದಾಬರ್ ಮುಂತಾದ ದಿಗ್ಗಜರಿದ್ದು ಇವುಗಳ ಉತ್ಪನ್ನಗಳಿಗೆ ನಗರ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ನಗರ ಮತ್ತು ಗ್ರಾಮೀಣ ಬಾಗಗಳಲ್ಲಿ ಸೌಂದರ್ಯದ ಬಗ್ಗೆ ಕಾಳಜಿ ಹೆಚ್ಚುತ್ತಿದ್ದು,ಇಲ್ಲಿ ತೆಂಗಿನ ಎಣ್ಣೆಗೆ ಪ್ರಾಶಸ್ತ್ಯ ಹೆಚ್ಚಾಗುತ್ತಿದೆ.
ಇದೇ ರೀತಿ ಆರೋಗ್ಯದ ಬಗ್ಗೆ ಜನರಲ್ಲಿ ಕಾಳಜಿ ಹೆಚ್ಚಾಗಿ ಅಡುಗೆ ಮತ್ತಿತರ ಬಳಕೆಯಲ್ಲಿ ತೆಂಗಿಗೆ ಮಹತ್ವ ಹೆಚ್ಚಾಗುತ್ತಿದೆ. ನಾನಾ ರೀತಿಯ ರೋಗಗಳು,ಕೀಟಬಾಧೆ, ಕಾರ್ಮಿಕರ ಅಭಾವ,ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ,ಇತ್ಯಾದಿ ಸಮಸ್ಯೆಗಳೊಂದಿಗೆ ಕೋತಿಗಳ ಕಾಟ,ಕಾಡುಪ್ರಾಣಿಗಳ ಹಾವಳಿ ಇತ್ಯಾದಿಗಳಿಂದ ಕಂಗೆಟ್ಟ ರೈತರಿಗೆ ಉತ್ಪಾದನಾ ಕುಸಿತದಿಂದ ಸ್ವಲ್ಪ ಮಟ್ಟಿನ ಚೇತರಿಕೆ ಕಂಡುಕೊಳ್ಳುವ ರೀತಿಯ ಬೆಲೆ ಏರಿಕೆ ಕಂಡು ಬರುತ್ತಿರುವ ಈ ಸಮಯದಲ್ಲಿ ಸುಂಕದ ಇಳಿಕೆ ಎಂಬ ಸುದ್ದಿ ಮಾರುಕಟ್ಟೆಯನ್ನು ಅಸ್ಥಿರಗೊಳಿಸಲು ಒಂದು ನೆಪವಾಗಿ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಒಟ್ಟಾರೆಯಾಗಿ ಆಮದಾಗುವ ಕಚ್ಚಾ ಉತ್ಪನ್ನದ ಪ್ರಭಾವ ತೆಂಗು ಮತ್ತು ಅದರ ಉತ್ಪನ್ನಗಳ ಮೇಲೆ ಇಲ್ಲದೇ ಇದ್ದರೂ ತೆಂಗಿನ ಮಾರುಕಟ್ಟೆಯಲ್ಲಿ ಇಂದು ಗೊಂದಲ ಮೂಡುವ ಲಕ್ಷಣಗಳು ಗೋಚರಿಸುತ್ತಿವೆ.ಆದರೆ ಇದು ಇನ್ನುಳಿದ ಕೃಷಿ ಉತ್ಪನ್ನಗಳ ಮಾರುಕಟ್ಟೆಗಳಲ್ಲಿ ಕಂಡು ಬರುವ ರೀತಿಯ ಪ್ರವೃತ್ತಿ ಆಗಿದ್ದು,ಇಲ್ಲೆಲ್ಲಾ ಮಾಹಿತಿಯ ಕೊರತೆ ಎದ್ದು ಕಾಣುತ್ತಿದೆ.ಈ ದೃಷ್ಟಿಯಿಂದ ವಾತಾವರಣ ತಿಳಿಯಾಗಿಸುವ ಪ್ರಯತ್ನಗಳು ಆಗಬೇಕು.ಈ ಬಾರಿ ತೆಂಗಿನ ಉತ್ಪಾದನೆ ಕಡಿಮೆ ಆದ್ದರಿಂದ ಇದರ ಬೆಲೆ ಏರುತ್ತಿದೆ ಮತ್ತು ಇದೇ ಪ್ರವೃತ್ತಿ ಮುಂದುವರಿಯುವ ಎಲ್ಲಾ ಲಕ್ಷಣಗಳಿವೆ. ಮಾರುಕಟ್ಟೆಯಲ್ಲಿ ಏರು ಪೇರು ಏನಿದ್ದರೂ ಅದರ ಸಹಜ ಲಕ್ಷಣ ಆಗಿದೆ.
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…
ಇಂಪೀರಿಯಲ್ ಕಾಲೇಜ್ ಲಂಡನ್ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…
ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…
ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…
2025-26ರಲ್ಲಿ ಕ್ಯಾಂಪ್ಕೊ ₹3,735 ಕೋಟಿ ವಹಿವಾಟು ಮತ್ತು ₹49.62 ಕೋಟಿ ಲಾಭ ದಾಖಲಿಸಿದ್ದು,…