ಕುನ್ನಯ್ಯ “ಸ್ವಾಮಿ…” ಈಗ್ಗೆ ಎರಡು ವರ್ಷದ ಹಿಂದೆ ಕುನ್ನಯ್ಯನಿಗೆ ಸಹಜ ಬೇಸಾಯವೆಂದರೆ (Natural farming) ಏನೋ ತಾತ್ಸಾರ.. ಅಯ್ಯೋ.., ಈ ಪದ್ಧತಿ ಆಗೋದಲ್ಲ – ಹೋಗೋದಲ್ಲ…. ಬಿಡಿ… ಅಂತ.! ಬೆಕ್ಕಿಗೆ ಜ್ವರ ಬಾರೋ ಹಾಗಿದೆ ಇವರ ಮಾತುಗಳು…. ಎಂದು ಮನಸ್ಸಿನಲ್ಲೇ ಗೊಣಗಿಕೊಳ್ಳುತ್ತಿದ್ದೆ..! ಶುರುವಿನಲ್ಲಿ ಅಂದರೆ, ಎರಡು ವರ್ಷದ ಹಿಂದೆ, ಬರೀ ತೆಂಗಿನ ಮರಗಳಿದ್ದವು(Coconut tree)., ಅವು ಸುಸ್ತಾಗಿ, ಜಿಗುಪ್ಸೆ ಬಂದಂತೆ ನರಳುತ್ತಿದ್ದವು..
ನಿಧಾನವಾಗಿ ಆ ತೋಟದೊಳಗೆ ಬೆಣ್ಣೆಹಣ್ಣು, ಮಾವು, ಬೆಟ್ಟದ ನೆಲ್ಲಿ, ಸೀಬೆ, ಅರಿಶಿನ, ಶುಂಠಿ ಹೀಗೆ ಹತ್ತು ಹಲವು ಗಿಡಗಳನ್ನು ತುಂಬಿ, ಮಣ್ಣಿನಲ್ಲಿ ಸಾರಾಂಶ ಇಲ್ಲದ ಕಾರಣ ಉತ್ಕೃಷ್ಟವಾದ ಚೆನ್ನಾಗಿ ಕಳಿತ ಗೊಬ್ಬರವನ್ನು(Manure) ಪ್ರತೀ ಮೂರು ತಿಂಗಳಿಗೊಮ್ಮೆ ಕೊಡಲಾರಂಬಿಸಿದೆವು.. ತದನಂತರ ಬಾಳೆ, ಪರಂಗಿ, ನುಗ್ಗೆ ಎಲ್ಲವನ್ನೂ ಸೇರಿಸುತ್ತ ಹೋದೋ.. ಕುನ್ನಯ್ಯನಿಗೆ ಇಲ್ಲದ ಸಂಶಯ..!?! ಇವೆಲ್ಲ ಹೇಗೆ ಜೊತೆಯಲ್ಲಿ ಬಾಳುತ್ತವೆ.? ಸಾದ್ರೆ (ಕತ್ತಲು) ಹೆಚ್ಚಾಗಿ ಶೀತದಿಂದ ಗಿಡಗಳು ಬಾಡಿಹೋಗುವುದಿಲ್ಲವೋ??? ಮಣ್ಣಿನ ಅಂಶಗಳು ಕೊರತೆಯಾಗಿ ಕಿತ್ತಾಡಿಕೊಂಡು ಅವುಗಳೆಲ್ಲಾ ಸತ್ತೊದ್ರೆ???
ಹೀಗೆ., ಹತ್ತು ಹಲವು ಬಗೆಯ ಚಿಂತನೆ ಅವನ ತಲೆ ತಿನ್ನುತ್ತಿತ್ತು…
ಕಾಲ ಕಳೆದಹಾಗೆ, ತನ್ನ ತೆಂಗಿನ ಮರದ ಇಳುವರಿ ವೃದ್ಧಿಸುವುದನ್ನು ಆತ ಗಮನಿಸಿದ.. ಅರಿಶಿನ ಎದೆ ಮಟ್ಟ ಬೆಳೆಯುತ್ತಿರುವುದನ್ನು ನೋಡಿದ., ಶುಂಠಿಯ ಪರಿಮಳ ತಾನೇ ಸವಿಯತೊಡಗಿದ.. ಮಾವು, ಸೀಬೆ, ಬಾಳೆ ಹಣ್ಣುಗಳ ರುಚಿ ನೋಡತೊಡಗಿದ.. ಪರಂಗಿ ಇನ್ನಿಲ್ಲದಂತೆ ಬೆಳೆದು ಮೈತುಂಬ ಹಣ್ಣುಗಳನ್ನು ಬಿಟ್ಟಿದ್ದನ್ನೂ ಕಣ್ಣಾರೆ ಕಂಡ.. ಆನಂದಿಸಿದ..
ನಿಧಾನವಾಗಿ, ಸಹಜ ಕೃಷಿಯತ್ತ(Agriculture) ಮನಸ್ಸು ವಾಲಿತು.. ಆ ಪದ್ದತಿಯನ್ನು ರೂಡಿಸಿಕೊಳ್ಳತೊಡಗಿದ.. ತಾನೇ ಈ ಪದ್ದತಿಯೊಳಗೊಬ್ಬನಾದ.. ಕ್ರಮೇಣ ತಾನೇ ಪದ್ದತಿಯಾದ..
ಬಹಳಷ್ಟು ಮಂದಿ ಅವರ ತೋಟಕ್ಕೆ ಹೋಗುತ್ತಾರೆ., ಅಲ್ಲಿನ ಸೊಬಗನ್ನು ಕಂಡು ವಿಸ್ಮಯಗೊಳ್ಳುತ್ತಾರೆ… ಕೊನೆಗೆ ಕುನ್ನಯ್ಯನನ್ನು ಕಂಡು ಇದು ಹೇಗೆ ಸಾಧ್ಯವಾಗಿದೆ ಹೇಳಿ ಎಂದರೆ, ಆತನ ಬಾಯಲ್ಲಿ ಬರುವುದೊಂದೇ ಮಾತು – “ಎಲ್ಲಾ ಆ ಸ್ವಾಮಿಯಿಂದ”.. ಅವನ ದಯೆಯಿಂದ.. “ನಂದೇನು ಇಲ್ಲ”.. ಎಂದು ಮನದಾಳದಿಂದ ಉತ್ತರಿಸುತ್ತಾನೆ.. ನನ್ನ ಫೋನ್ ನಂಬರ್ ಕೊಟ್ಟು ಕಳುಹಿಸುತಿದ್ದ. ನನ್ನ ಬಳಿ ಬಂದ ಜನರು, ಆ ಕುನ್ನಯ್ಯನವರ ತೋಟ ಹಚ್ಚ ಹಸಿರಿನಿಂದ ಕಂಗೊಳಿಸುತ್ತಾ ರಮಣೀಯವಾಗಿದೆ.. ಇದರ ಗುಟ್ಟೇನು ಎಂದು ಅವರನ್ನು ಕೇಳಿದರೆ, ಆ ಸ್ವಾಮಿಯದ್ದು ಎನ್ನುತ್ತಾರೆ.. ಹಾಗೆಂದರೆ ಆ ಸ್ವಾಮಿ ಯಾರು ಸರ್ ಎಂದು ಕೇಳುತ್ತಾರೆ..?
ನನಗನಿಸುತ್ತಿರುವುದು ಹೀಗೆ… ಆ ತೋಟದ ಗಿಡ, ಮರ, ಬಳ್ಳಿ, ಎಲ್ಲವೂ ಕುನ್ನಯ್ಯನವರ ಕೈಯಿಂದ, ಅವರ ಮನೆ ಮಕ್ಕಳ ಸಹಾಯದಿಂದ, ಅವರು ಕೊಡುತ್ತಿರುವ ಉತ್ಕೃಷ್ಟ ಗೊಬ್ಬರದಿಂದ, ಸಮಯಕ್ಕೆ ಸರಿಯಾಗಿ ಅವರು ಸಿಂಪಡಿಸುತ್ತಿರುವ ಕಷಾಯ – ಮಜ್ಜಿಗೆ – ಕುನಾಪಜಲ – ಮೀನೂಟ ಇನ್ನಿತರೇ ಪದಾರ್ಥಗಳಿಂದ.. ಅಷ್ಟು ಮಾತ್ರವಲ್ಲದೆ, ಸಾವಿರಾರು ಪ್ರಾಣಿಪಕ್ಷಿಗಳ, ಮಣ್ಣಿನಲ್ಲಿರುವ ಜೀವಜಂತುಗಳ, ಕ್ರಿಮಿಕೀಟಗಳ ಪ್ರಕ್ರಿಯೆಗಳಿಂದ ಹಾಗು ಸ್ವಚ್ಚವಾದ ಗಾಳಿ, ಬೆಳಕು ಮತ್ತು ಶುಧ್ಧವಾದ ನೀರಿನಿಂದ ಆ ತೋಟ ಏರ್ಪಾಡಾಗಿದೆ.. ಈ ಸ್ವಚ್ಛ ಪ್ರೀತಿ, ಮಮತೆ ಹಾಗು ಜೀವ ಕಾರುಣ್ಯ ಕುನ್ನಯ್ಯನವರ ಸ್ವಾಮಿಯಾಗಿರಬಹುದು..
ಈ ಎಲ್ಲಾ ಅಂಶಗಳು ಒಟ್ಟೊಟ್ಟಿಗೆ ಕಾಯಕದಲ್ಲಿ ಪಾಲ್ಗೊಂಡಿರುತ್ತದೆ.. ಒಂದರ ನಂತರ ಮತ್ತೊಂದು.. ಒಂದನ್ನು ಬಿಟ್ಟು ಇನ್ನೊಂದಿಲ್ಲ.. ಯಾವುದೂ ಮೇಲಲ್ಲಾ, ಯಾವುದೂ ಕೀಳಲ್ಲಾ.. ಅಲ್ಲಿ ಯಾರೂ ಉತ್ತಮವಲ್ಲ. ಯಾರೂ ಆದಮರಲ್ಲ.. ಎಲ್ಲವೂ ಒಂದೇ..! ಬರೀ ಒಂದು ಅಂಶದಿಂದ ಆ ತೋಟ ಏರ್ಪಾಡಾಗಿಲ್ಲ.., ಹಾಗೆಂದೆನಾದರೂ ಅಂದುಕೊಂಡರೆ ಅದು ಮೂರ್ಖತನದ ಪರಮಾವಧಿಯೇ ಸರಿ… ಇಲ್ಲಿ ತೋಟದ ಮಾಲೀಕರಾದ ರಾಜೇಂದ್ರರವರು, ಕುನ್ನಯ್ಯನವರು ಹಾಗು ಅಲ್ಲಿ ಕಲಿಯುತ್ತಿರುವ ನನ್ನನ್ನೂ ಸೇರಿಸಿ ಹೇಳುವುದಾದರೆ ನಾವೆಲ್ಲ ಬರಿ ಪಾತ್ರದಾರಿಗಳಷ್ಟೇ… ಆ ತೋಟದ ಸುಂದರತೆಗೆ ಕಾಣದ ಕೈಗಳು ಬಹಳಷ್ಟಿದೆ.. ಆ ಕಾಣದ ಕೈಗಳಿಗೆ ಕುನ್ನಯ್ಯ “ಸ್ವಾಮಿ” ಎಂದು ಕರೆಯುತ್ತಿರಬಹುದು ಎಂಬುದು ನನ್ನ ಅನಿಸಿಕೆ..
ಪ್ರಬುದ್ಧತೆ ಕಲಿತವರಲ್ಲಿ ಮಾತ್ರ ಮನೆಮಾಡಿರುತ್ತದೆ ಎಂಬುದು ತಪ್ಪು ಗ್ರಹಿಕೆ.. ಅದು ಕುನ್ನಯ್ಯನಂತಹ ಅಹಿಂಸಾತ್ಮಕ ಕಾಯಕ ಜೀವಿಗಳಲ್ಲಿ ಭದ್ರ ಕೋಟೆಯಾಗಿ ನಿರ್ಮಿತವಾಗಿರುತ್ತದೆ.. ಕುನ್ನಯ್ಯನಂತಹ ಪ್ರಬುದ್ಧ ಮನಸುಗಳು ಈ ದೇಶದಲ್ಲಿ ಸಾಕಷ್ಟಿವೆ.. ಬೆಳಕಿಗೆ ಬರಬೇಕಿದೆಯಷ್ಟೆ.. ನಾನರಿತ ಈ ಸತ್ಯಾಂಶದ ಸಂಗತಿಗಳನ್ನು ಬಲು ಆಶ್ಚರ್ಯದಿಂದ ಆಲಿಸುತ್ತಾರೆ..
ಕೊನೆಯಲ್ಲಿ ಹೋಗುವಾಗ ಇಂತಹ ಕಾಯಕ ಜೀವಿಗೆ ಶರಣೆನ್ನುತ್ತಾರೆ… ಈ ತರದ ಕಾಯಕಕ್ಕೆ ತಾವುಗಳೂ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕೆಂದು ಆಶಿಸುತ್ತಾರೆ.. ಈ ಥರದ ಕಾಯಕಜೀವಿಗಳು ಎಲ್ಲಾ ಕಡೆ ವೃದ್ಧಿಸಲೆಂಬುದೇ ನನ್ನ ಆಶಯ ಕೂಡ..
ಹಲಸಿನ ಹಾಲು, ದಾಳಿಂಬೆ ಸಿಪ್ಪೆಯ ಸಾರ ಮತ್ತು ಸಿಮ್ವಾಸ್ಟಾಟಿನ್ ಬಳಸಿ ವಿಜ್ಞಾನಿಗಳು ವಸಡು…
ಅಡಿಕೆ ನಿಷೇಧಿಸುವ ಬದಲು ಕಲಬೆರಕೆ ಅಡಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ…
ರಂಬುಟಾನ್ ಬೆಲೆ ಕುಸಿದಾಗ ಹಣ್ಣನ್ನು ಫ್ರೀಜ್ ಮಾಡಿ ನಂತರ ಮಾರಾಟ ಮಾಡಿದರೆ ಉತ್ತಮ…
ಕಾಪುವಿನಲ್ಲಿ ನಡೆಯುತ್ತಿರುವ ಕರ್ನಾಟಕ ಸ್ಟೇಟ್ ಸ್ಕೂಲ್ ಚೆಸ್ ಚಾಂಪಿಯನ್ಶಿಪ್ನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು…
ಕಾಪುವಿನಲ್ಲಿ ಆರಂಭವಾದ ಕರ್ನಾಟಕ ರಾಜ್ಯಮಟ್ಟದ ಶಾಲಾ ಚೆಸ್ ಚಾಂಪಿಯನ್ಶಿಪ್ನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು…
ಅಸ್ಸಾಂನ ಇಬ್ಬರು ಅಡಿಕೆ ವ್ಯಾಪಾರಿಗಳಿಗೆ ಸೇರಿದ ₹1.12 ಕೋಟಿ ಮೌಲ್ಯದ 34 ಟನ್…