ಭಾರತದ ಪರಂಪರೆ ಅನುಪಮವಾಗಿದ್ದು, ಪರಂಪರೆಯನ್ನು ಮೂಢನಂಬಿಕೆ ಎನ್ನಲಾಗದು, ದೇಗುಲಗಳು ನಮ್ಮ ಪರಂಪರೆಯ ಭಾಗವಾಗಿದೆ. ನಮ್ಮ ಆಚರಣೆಗಳು ವೈಜ್ಞಾನಿಕವಾಗಿದ್ದು, ತಿಳಿದಷ್ಟೂ ಬೆರಗು ಹುಟ್ಟಿಸುವ ಸಂಸ್ಕೃತಿ ನಮ್ಮದು ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅವರು ಬೆಂಗಳೂರಿನ ಗಿರಿನಗರದ ಮಹಾಗಣಪತಿ ದೇವಾಲಯದಲ್ಲಿ ಬುಧವಾರ ನಡೆದ ಅಷ್ಟಬಂಧ- ಪುನಃಪ್ರತಿಷ್ಠೆ- ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀವರ್ಚನ ನೀಡಿದರು. ಜೀವನದಲ್ಲಿ ಪರೀಕ್ಷೆಗಳು ಬೇಕು. ವಿಘ್ನಕರ್ತ ಮತ್ತು ವಿಘ್ನ ನಿವಾರಕನಾಗಿರುವ ಗಣಪತಿ ಪರೀಕ್ಷೆಗಳನ್ನು ಒಡ್ಡಿ ಜೀವನದಲ್ಲಿ ಉನ್ನತಿ ಸಾಧಿಸಲು ಪ್ರೇರಣೆಯಾಗುತ್ತಾನೆ. ಗುರು ದಾರಿ ತೋರಿಸಿದರೆ, ಗಣಪತಿ ವಿಘ್ನವನ್ನು ನಿವಾರಿಸುತ್ತಾನೆ. ಜೀವನದಲ್ಲಿ ಗುರಿಮುಟ್ಟಲು ಗುರು ಗಣಪತಿಯರ ಅನುಗ್ರಹ ಮುಖ್ಯ, ಗಿರಿನಗರದಲ್ಲಿ ಶ್ರೀ ಮಹಾಗಣಪತಿ ಸನ್ನಿಧಿ ಹಾಗೂ ಶ್ರೀ ರಾಘವೇಂದ್ರಭಾರತೀ ಸ್ವಾಮೀಜಿಯವರ ಸಮಾಧಿ ಎರಡೂ ಇವೆ. ಇವೆರಡೂ ಶ್ರದ್ಧಾಕೇಂದ್ರಗಳು ಎಂದರು.
ದೇವಾಲಯಗಳು ಇತ್ತೀಚೆಗೆ ಶಾಸ್ತ್ರದ ಬದಲು ಆಡಂಬರದ ಪ್ರದರ್ಶನಕ್ಕೆ ಮಾತ್ರ ಎಂಬಂಥ ವಿಕಟ ಸ್ಥಿತಿ ಇದೆ. ವಾಸ್ತು, ಜ್ಯೋತಿಷ್ಯ, ಆಗಮಗಳು ಸರಿಯಾಗಿದ್ದಾಗ ಮಾತ್ರ ದೇವಾಲಯಕ್ಕೆ ಶೋಭೆ. ಆದ್ದರಿಂದ ದೇವಾಲಯಗಳು ಶಾಸ್ತ್ರೋಕ್ತವಾಗಿ ನಿರ್ಮಾಣಗೊಳ್ಳಬೇಕು ಎಂದು ಹೇಳಿದರು.
ಬಸವನಗುಡಿ ಶಾಸಕ ಹಾಗೂ ಅಷ್ಟಬಂಧ ಸಮಿತಿಯ ಗೌರವಾಧ್ಯಕ್ಷ ಎಲ್.ಎ.ರವಿಸುಬ್ರಹ್ಮಣ್ಯ ಮಾತನಾಡಿ, ಶ್ರೀರಾಮಚಂದ್ರಾಪುರ ಮಠ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆ ಅಪಾರವಾಗಿದ್ದು, ಶ್ರೀಗಳ ಮಾರ್ಗದರ್ಶನದಿಂದ ಅಷ್ಟಬಂಧ ಕಾರ್ಯಕ್ರಮ ಸುಲಲಿತವಾಗಿ ಸಂಪನ್ನವಾಗಿದೆ. ಗಿರಿನಗರದ ನಿರ್ಮಾತೃಗಳಾದ ದಿವಂಗತ ಶ್ರೀ ಕೃಷ್ಣ ಭಟ್ಟರು ಈ ಬಡಾವಣೆ ನಿರ್ಮಿಸುವಾಗಲೆ ದೇವಾಲಯಗಳಿಗೆ ಜಾಗ ನೀಡಿ ಬಡಾವಣೆ ನಿರ್ಮಿಸಿದ್ದಾರೆ. ಗಿರಿನಗರದ ಮಹಾಗಣಪತಿ ದೇವರ ಅನುಗ್ರಹದಿಂದ ನಮ್ಮ ಕ್ಷೇತ್ರ ಪ್ರಶಾಂತವೂ, ಸುಭಿಕ್ಷವೂ ಆಗಿದೆ ಎಂದರು.
ಪ್ರಸಿದ್ದ ದೈವಜ್ಞರಾದ ವಿಷ್ಣು ಪುಚ್ಚಕ್ಕಾಡು, ಅಷ್ಟಬಂಧ ಸಮಿತಿಯ ಅಧ್ಯಕ್ಷರಾದ ಡಾ. ಬಿ.ಕೆ ವಿಶ್ವನಾಥ್ ಭಟ್, ಚಿತ್ತಾಪುರದ ಸವಿತಾ ಪೀಠ ಮಹಾಸಂಸ್ಥಾನದ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ, ಸಿಗಂದೂರು ಪ್ರಧಾನ ಅರ್ಚಕರಾದ ಶೇಷಗಿರಿ ಭಟ್, ಡಾ. ವಿದ್ಯಾಭಟ್, ಕಾರ್ಪೊರೇಟರ್ ನಂದಿನಿ ವಿಠಲ್ ಉಪಸ್ಥಿತರಿದ್ದರು.
ಬೆಳಗ್ಗೆ ಶ್ರೀಮಹಾಗಣಪತಿ, ಸುಬ್ರಹ್ಮಣ್ಯ ಹಾಗೂ ನಾಗದೇವರ ಪುನಃಪ್ರತಿಷ್ಠೆ ಅಷ್ಟಬಂಧ ಕಾರ್ಯಕ್ರಮಗಳು ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ನಡೆದವು. ಸುಬ್ರಹ್ಮಣ್ಯ ದೇವರಿಗೆ ನೂತನ ಶಿಲಾಮಯ ಗುಡಿ, ಸುವರ್ಣ ಕವಚಗಳ ಸಮರ್ಪಣೆ ನಡೆದವು. ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ.ಗಿರಿಧರ ಕಜೆ, ಹೈಕೋರ್ಟ್ ಸೀನಿಯರ್ ಅಡ್ವಕೇಟ್ ರಾಘವನ್ ಉಪಸ್ಥಿತರಿದ್ದರು. ಕೇರಳದ ಶ್ರೀ ಅನಂತಪದ್ಮನಾಭ ದೇವಾಲಯದ ಪ್ರಧಾನ ಅರ್ಚಕರಾದ ನಾರಾಯಣ ಪಟ್ಟೇರಿ, ಶಿವಪ್ರಸಾದ್ ಮುಂತಾದ ತಂತ್ರಿಗಳು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…
ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…
ರಬ್ಬರ್ ತೋಟಗಳು ಹಸಿರಾಗಿದ್ದರೂ ಅವು ನೈಸರ್ಗಿಕ ಮಳೆಕಾಡಿನ ಜೀವವೈವಿಧ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು…
ಭಾರತದ ಅಡುಗೆ ಎಣ್ಣೆ ಆಮದು ಎಂಟು ತಿಂಗಳಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಜೂನ್ನಲ್ಲಿ ಆಮದು…
ಕೇರಳದಲ್ಲಿ ಉತ್ಪಾದನೆಯಾಗುವ ಬಹುತೇಕ ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ ಸುಮಾರು ₹1,200 ಕೋಟಿ…
ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…