ಮೊದಲ ಮಳೆ | ಸುಳ್ಯದ ಮೂಲಭೂತ ಸಮಸ್ಯೆಗಳಿಗೆ ಜೀವ | ಮತದಾರರ ತಾಳ್ಮೆ ಪರೀಕ್ಷೆಗೆ ಮುಕ್ತಿ ಯಾವಾಗ ?

May 20, 2022
11:32 AM
ವಿಷಯ ಸಾರಾಂಶ
 ವಿಪರೀತ ಸುರಿದ ಮುಂಗಾರು ಪೂರ್ವ ಮಳೆ. ಸುಳ್ಯ ತಾಲೂಕಿನ ವಿವಿಧ ಗ್ರಾಮೀಣ ಭಾಗದ ರಸ್ತೆಗಳು ಕೆಸರುಮಯ. ಹೊಂಡಗುಂಡಿಗಳಿಗೆ ಸಿಗದ ಮುಕ್ತಿ. ಮುಂದುವರಿದ ಜನರ ಪರದಾಟ. ಮಳೆಗಾಲಕ್ಕೆ ಮುನ್ನವೇ ಹೀಗಾದರೆ .. ಮಳೆಗಾಲ ಆರಂಭದ ಬಳಿಕದ ಕತೆ ಹೇಗೆ ? ಪ್ರತೀ ವರ್ಷದ ಸಮಸ್ಯೆಗಳಿಗೆ ಮುಕ್ತಿ ಯಾವಾಗ ? 

ಪ್ರತೀ ಮಳೆಗಾಲದ ಸಮಸ್ಯೆ…!. ಸುಳ್ಯದ ಗ್ರಾಮೀಣ ಭಾಗದ ಜನರಿಗೆ ಅಪಾರವಾದ ಸಹಿಸಿಕೊಳ್ಳುವ ಶಕ್ತಿ. ತಾಳ್ಮೆಗೆ ಇನ್ನೊಂದು ಹೆಸರೇ ಸುಳ್ಯ…!. ಇದೆಲ್ಲಾ ಮಳೆಗಾಲದ ಹೊತ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ  ಚರ್ಚೆಯಾಗುವ ಸಂಗತಿ. ಕಾರಣ ಇಷ್ಟೇ, ಹಲವು ಕಡೆ ಗ್ರಾಮೀಣ ಭಾಗಗಳಲ್ಲಿ  ಮೂಲಭೂತ ಸಮಸ್ಯೆಗಳು ಗರಿಗರದರಿಕೊಳ್ಳುತ್ತವೆ. ಈ ಬಾರಿ ಕೊಡಿಯಾಲ ಬೈಲ್-ನೀರಬಿದರೆ ರಸ್ತೆ,  ಎಲಿಮಲೆ-ಅರಂತೋಡು ರಸ್ತೆಯ ಸೇವಾಜೆ ಸೇತುವೆ, ಆಲೆಟ್ಟಿ – ಬಡ್ಡಡ್ಕ ರಸ್ತೆ, ಮಡಪ್ಪಾಡಿ-ಕಡ್ಯ ರಸ್ತೆ ಹೀಗೇ ಹಲವಾರು ರಸ್ತೆಗಳು ಪ್ರಥಮ ಮಳೆಗೆ ಸಮಸ್ಯೆಯನ್ನು ತೆರೆದಿಟ್ಟಿದೆ. ಮುಂದೆ ಮಳೆಗಾಲಕ್ಕೆ…?

ಸುಳ್ಯದ ಗ್ರಾಮೀಣ ಭಾಗದ ರಸ್ತೆಗಳು ಇಂದಿಗೂ ಸುವ್ಯವಸ್ಥಿತವಾಗಿಲ್ಲ. ಹಲವು ವರ್ಷಗಳಿಂದ ಅಭಿವೃದ್ಧಿಯಾಗದೆ ನೆನೆಗುದಿದೆ ಬಿದ್ದಿದೆ. ಅನುದಾನಗಳು ಇದ್ದರೂ ಸರಿಯಾಗಿ ಬಳಕೆಯಾಗಿಲ್ಲ. ಈ ಬಾರಿ ಮಳೆಗಾಲ ಆರಂಭವಾಗಬೇಕಿದೆ, ಅದಕ್ಕೂ ಮೊದಲು ಸುರಿದ ಮಳೆಗೆ ಹಲವು ರಸ್ತೆಗಳ ಸಮಸ್ಯೆಗಳು ಸದ್ದು ಮಾಡಿದೆ. ಅದರಲ್ಲಿ ಕೊಡಿಯಾಲ ಬೈಲ್-ನೀರಬಿದರೆ ರಸ್ತೆ ಭಾರೀ ಸದ್ದು ಮಾಡಿದೆ. ರಸ್ತೆ ಇಡೀ ಕೆಸರುಮಯವಾಗಿದೆ. ಈ ರಸ್ತೆ ಅಭಿವೃದ್ಧಿಗೆ ಕಳೆದ ಅನೇಕ ವರ್ಷಗಳಿಂದ ಬೇಡಿಕೆ ಇದೆ. ಹಾಗಿದ್ದರೂ ದುರಸ್ತಿ ಆಗಿಲ್ಲ. ಈಗ ಮೊದಲ ಮಳೆಗೆ ಇಡೀ ರಸ್ತೆ ಕೆಸರುಮಯವಾಗಿದ್ದು ಓಡಾಟಕ್ಕೆ ಕಷ್ಟವಾಗಿದೆ. ಮೊದಲ ಮಳೆಗೇ ಹೀಗಾದರೆ ಮುಂದೆ ಮಳೆಗಾಲದ ಅವಸ್ಥೆ ಯೋಚಿಸಿ….!.

ಆಲೆಟ್ಟಿ ಬಡ್ಡಡ್ಕ ರಸ್ತೆ ಈಚೆಗೆ ಲೋಕೋಪಯೋಗಿ ಇಲಾಖೆಯಾಗಿ ಮೇಲ್ದರ್ಜೆಗೇರಿತ್ತು. ಅದಾದ ಬಳಿಕ ಸಾಕಷ್ಟು ಅನುದಾನವೂ ಇದೆ ಎಂದೇ ಭಾವಿಸಲಾಗಿತ್ತು. ಕೆಲವು ಕಡೆ ಕಾಮಗಾರಿಯೂ ನಡೆದಿದೆ. ಆದರೆ ಇದೀಗ ಮೊದಲ ಮಳೆಗೆ ರಸ್ತೆ ಕೆಸರುಮಯವಾಗಿದ್ದು ವಾಹನ ಓಡಾಟಕ್ಕೆ ಕಷ್ಟವಾಗಿದೆ. ಮುಂದೆ ಮಳೆಗಾಲದ ಸ್ಥಿತಿ…?

ಮಡಪ್ಪಾಡಿ – ಕಡ್ಯ ರಸ್ತೆ. ಈ ರಸ್ತೆ ಅನೇಕ ವರ್ಷಗಳಿಂದ ಹದಗೆಟ್ಟಿದೆ. ಇಲ್ಲಿನ ನಿವಾಸಿಗಳು ಮಳೆಗಾಲ ಭಯದಿಂದಲೇ ಸಂಚರಿಸಬೇಕಾದ ಸ್ಥಿತಿ ಇದೆ. ಕಾಡಾನೆಗಳ ಓಡಾಟವೂ ಇರುವ ಈ ಊರಲ್ಲಿ  ರಸ್ತೆ ಅವ್ಯವಸ್ಥೆಯಿಂದ ಇದೆ. ಮಳೆಗಾಲ ರಸ್ತೆ ಬದಿಯೇ ಕಾಡಾನೆಗಳು ಇರುತ್ತವೆ. ಈ ರಸ್ತೆ ಡಾಮಾರೀಕರಣ ಭಾಗ್ಯವೇ ಕಂಡಿಲ್ಲ..!. ಈಚೆಗೆ ಪತ್ರಕರ್ತರ ಸಂಘದ ಗ್ರಾಮವಾಸ್ತವ್ಯದ ಬಳಿಕವಾದರೂ ಇಲ್ಲಿನ ರಸ್ತೆಗಳು ಸರಿಯಾದೀತು ಎಂದು ಕಡ್ಯ ಭಾಗದ ಜನರು ಯೋಚಿಸಿದ್ದರು. ಪತ್ರಕರ್ತರ ಸಂಘದ ಗ್ರಾಮವಾಸ್ತವ್ಯದ ಬಳಿಕ ಕೊಂಚ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಸ್ಥಳೀಯರೊಬ್ಬರ ಪ್ರಯತ್ನದಿಂದ ಸೇತುವೆಯೊಂದು ಇಲ್ಲಿ ರಚನೆಯಾಗಿದೆ ಎಂದೂ ಸ್ಥಳೀಯರು ಹೇಳುತ್ತಾರೆ. ಆದರೆ ಇದುವರೆಗೂ ರಸ್ತೆ ಮಾತ್ರಾ ಅಭಿವೃದ್ಧಿಯಾಗದೆ ಈಗ ಮೊದಲ ಮಳೆಗೇ ಕಂಗಾಲಾಗಿದೆ ರಸ್ತೆ… ಮುಂದೆ ಮಳೆಗಾಲದ ವೇಳೆ…?

ಎಲಿಮಲೆ- ಅರಂತೋಡು ರಸ್ತೆ ನಡುವಿನ ಸೇವಾಜೆ ಸೇತುವೆ. ಕಳೆದ ವರ್ಷದ ಮಳೆಗಾಲದ ವೇಳೆಗೇ ಈ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ತಾತ್ಕಾಲಿಕ ರಸ್ತೆ ಮೂಲಕ ಓಡಾಟ ನಡೆಸಲಾಗುತ್ತಿತ್ತು. ಮಡಿಕೇರಿ-ಸುಬ್ರಹ್ಮಣ್ಯ ಪ್ರಯಾಣದ ಜನರಿಗೆ ಈ ರಸ್ತೆ ಅನುಕೂಲವಾಗಿತ್ತು. ಯಾತ್ರಿಕರಿಗೂ ಅನುಕೂಲವಾದ ರಸ್ತೆ . ಕಳೆದ ಒಂದು ವರ್ಷದಿಂದ ಸೇತುವೆ ಕಾಮಗಾರಿ ನಡೆಯುತ್ತಿದೆ. ಇಂದಿಗೂ ಸಂಪರ್ಕ ರಸ್ತೆಯಾಗದ ಕಾರಣ ಮೊದಲ ಮಳೆಗೇ ಸಂಚಾರ ಕಡಿತವಾಗಿದೆ. ಮಳೆ ಬಿಟ್ಟರೆ ಇನ್ನಿಂದು ವಾರದಲ್ಲಿ ವಾಹನ ಸಂಚಾರಕ್ಕೆ ಸಾಧ್ಯ ಎಂಬುದು ಅಧಿಕಾರಿಗಳ ಮಾಹಿತಿ. ಆದರೆ ಮಳೆಗಾಲ ವಾಹನ ಓಡಾಟ ಸಾಧ್ಯವೇ ? ಕಳೆದ ಒಂದು ವರ್ಷದಿಂದ ಸೇತುವೆ ಕಾಮಗಾರಿ, ಸಂಪರ್ಕ ರಸ್ತೆ ನಿರ್ಮಾಣ ಸಾಧ್ಯವಾಗದೇ ಇರುವುದು  ಕಾಮಗಾರಿ ವೇಗ ಹಾಗೂ ಫಾಲೋಅಪ್‌ ಪ್ರಶ್ನೆಯಾಗಿದೆ. ಇದೀಗ ಮಳೆಗಾಲ ಆರಂಭವಾಗುತ್ತಿದೆ.. ಮರ್ಕಂಜ, ಎಲಿಮಲೆ ಜನರಿಗೆ ಎರಡನೇ ವರ್ಷವೂ ಈ ಸೇತುವೆ ಸಂಚಾರಕ್ಕೆ ಇಲ್ಲವೇ…? ಚಿಂತೆಯಾಗಿದೆ ಅಲ್ಲಿನ ಜನರಿಗೆ…!.

ಅಭಿವೃದ್ಧಿ ಬಗ್ಗೆ ಮಾತಾಡೋಣ...

ಗ್ರಾಮೀಣ ಭಾಗದಲ್ಲಿ ಅನೇಕ ವರ್ಷಗಳಿಂದ ಹೀಗೆ ಹದಗೆಟ್ಟ ರಸ್ತೆಗಳು ಹಲವಾರು ಇವೆ. ಈ ಬಗ್ಗೆ ಫೋಟೊ ಹಾಗೂ ವಿವರವನ್ನು ತಾವು ನಮಗೆ ಕಳುಹಿಸಿ, ನಾವು ಜನಪ್ರತಿನಿಧಿಗಳ, ಅಧಿಕಾರಿಗಳ ಗಮನಕ್ಕೆ, ರಾಜಕೀಯ ಪಕ್ಷಗಳ ಸಮಾಜದ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ. ಕೆಲಸ ಆಗದೇ ಇರುವ ಬಗ್ಗೆ ಬೊಟ್ಟು ಮಾಡಿ ಹೇಳುವುದರಲ್ಲಿ  ತಪ್ಪಿಲ್ಲ. ಏಕೆಂದರೆ ಇದು ಪ್ರಜಾಪ್ರಭುತ್ವ. ಮತ ನೀಡಿದವರು ಪ್ರಶ್ನೆ ಮಾಡಲೇಬೇಕು. ಆ ಕೆಲಸ ನಾವು ಮಾಡೋಣ, ಅನುದಾನಗಳನ್ನು ತರಿಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾದರೆ ಅಧಿಕಾರಿಗಳು ಕೆಲಸ ಮಾಡಿಸಬೇಕಾದ್ದು ಕರ್ತವ್ಯ. ಮತದಾರರಾದ ನಾವು ಮೌನ ಇದ್ದರೆ ಇನ್ನೂ ಅಭಿವೃದ್ಧಿ ಮರೀಚಿಕೆಯೇ ಸರಿ. ಹೀಗಾಗಿ ಸಮಸ್ಯೆಯನ್ನು ಗಮನಿಸಿ ಗಮನಕ್ಕೆ ತರೋಣ. ನಮ್ಮ ವಾಟ್ಸಪ್‌ ಸಂಖ್ಯೆ 9449125447

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ
July 21, 2026
4:32 PM
by: ಸಾಯಿಶೇಖರ್ ಕರಿಕಳ
ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ
July 20, 2026
10:59 PM
by: ದ ರೂರಲ್ ಮಿರರ್.ಕಾಂ
ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್
July 20, 2026
10:18 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ
July 19, 2026
10:17 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror