ಈಗಲೂ ಭಾರಿ ಮಳೆ ಕಂಡು ಕೃಷಿಕ ಸುರೇಶ್ಚಂದ್ರ ಹೇಳುತ್ತಾರೆ….. | ನಾಳೆ ರವಿ ಮೂಡಲಿ….. ! | ಕೃಷಿಕರ ಸಂಕಷ್ಟ ಹೀಗಿದೆ…. |

November 6, 2021
5:15 PM

ಇಳಿದು ಬಾ ತಾಯೀ ಇಳಿದು ಬಾ…
ಹರನ ಜಡೆಯಿಂದ,ಹರಿಯ ಅಡಿಯಿಂದ ಋಷಿಯ ತೊಡೆಯಿಂದ ನುಸುಳಿ ಬಾ..
ದೇವದೇವನನು ತಣಿಸಿ ಬಾ..
ದಿಗ್ ದಿಗಂತದಲಿ ಹನಿಸಿ ಬಾ… ಚರಾಚರಗಳಿಗೆ ಉಣಿಸಿ ಬಾ…ತಾಯೆ ಇಳಿದು ಬಾ….

…. ಎಂದು ಕರೆದು ಸ್ವಾಗತಿಸಿದ ವರುಣ ಮಳೆ ನಕ್ಷತ್ರಗಳ ಆದಿಯಾಗಿ ಸುರಿ ಸುರಿದು ಕೊನೆಯ ದಿನಗಳಿಗೆ ತಲುಪಿ, ತನ್ನ ಓಘದ ಓಟದ ಸ್ವಾತಿಯಿಂದ ರಿಲೇ ಕೋಲನ್ನು ಸೆಳೆದ ವಿಶಾಖ ತಾನೇನೂ ಕಡಿಮೆಯಲ್ಲವೆಂದೂ, ಮಳೆದಿನಗಳ ಬಾಲಂಗೋಚಿಯೆಂದು ಅಣಕಿಸಬೇಕಿಲ್ಲವೆಂದು ತನ್ನ ಮೊದಲ ದಿನವೇ ಪ್ರಚಂಡ ಪ್ರದರ್ಶನ ನೀಡಿ ಅಡಿಕೆ,ಭತ್ತ ಮುಂತಾದ ಬೆಳೆಗಾರರನ್ನು ಕಂಗಾಲು ಮಾಡಿದ. ಭಾರೀ ಮಳೆಯ ವಿಡಿಯೋ ಇಲ್ಲಿದೆ….

ಹೌದು, ಮಧ್ಯಾಹ್ನ ಹನ್ನೆರಡು ವರೆಗೇ ರವಿಯನ್ನು ಮರೆಮಾಚುವ ಮುಗಿಲೋಟವಿತ್ತು, ಆದರೆ.. ಮಳೆ ಸುರಿಯುವಂತಹ ಗಟ್ಟಿತನ ಇರಲಿಲ್ಲ…. ಆದರೂ ಎರಡು ಗಂಟೆಯ ಹೊತ್ತಿಗೆ ಬಾನೇ ತೂತಾದಂತೆ ವರುಣಾಘಾತವಾಯಿತು. ಕೃಷಿಕ ಏನು ತಾನೇ ಮಾಡಲು ಸಾಧ್ಯ. ಮಳೆಗಾಲದ ಕೊಳೆರೋಗದಿಂದ ಹೇಗೋ ಏನೋ ಸಾಹಸಮಾಡಿ ಉಳಿಸಿ,ಇದ್ದ ಬಿದ್ದ ಬೆಳೆಯನ್ನು ರೂಢಿ ಮಾಡಿಕೊಳ್ಳುವ ದಿನವಿದು .ಹಣ್ಣಾದ ಅಡಿಕೆ ಮರದಿಂದ ಬಿದ್ದು ನೀರುಪಾಲಾಗುವುದು ಒಂದು ಕಡೆಯಾದರೆ, ಹೆಕ್ಕಿ ತಂದು ಒಣಗಿಸಲು ಅಂಗಳದಲ್ಲಿ ಹರಗಿದರೆ ಕೊಳೆತು ಕಪ್ಪಾಗುವುದು ಇನ್ನೊಂದು ಕಡೆ. ಈ ವರ್ಷ ಪ್ಲಾಸ್ಟಿಕ್ ಅಂಗಡಿಯವರ ಶುಕ್ರದೆಸೆಯಿರಬಹುದು….ಅಡಿಕೆ ಒಣಗಿಸಲೋಸುಗ ವೀಡ್ ಮ್ಯಾಟ್, ಟರ್ಪಾಲ್ ಮುಂತಾಗಿ ಏನೇನೋ ಒದ್ದಾಡುತ್ತಿರುವ ಕೃಷಿಕ ಪ್ರತಿದಿನವೂ ಪೇಟೆ ಕಡೆ ಒಡೋಡಿ ಪ್ಲಾಸ್ಟಿಕ್ ತರುತ್ತಿರುವುದು ಸಾಮಾನ್ಯವಾಗಿದೆ. ಅಂಗಳವನ್ನು ಎತ್ತರಿಸುವುದು, ದೊಡ್ಡ ಪ್ರಮಾಣದ ಡ್ರಯರ್ ಗಳನ್ನು ಮಾಡುವುದು ಮುಂತಾಗಿ ಲಕ್ಷಗಟ್ಟಲೆ ಹಣ ಖರ್ಚಾಗುತ್ತಿದೆ.

ಅದಲ್ಲದೆ, ಈ ದಿನಗಳು,ಅಡಿಕೆ ಮರಗಳಲ್ಲಿ ಮುಂದಿನ ವರ್ಷದ ಫಸಲಿನ ನಿರ್ಣಾಯಕ ಕಾಲಘಟ್ಟವೂ ಹೌದು. ಸರಿಯಾದ ಸಮಯದಲ್ಲಿ ಸರಿಯಾದ ಗೊಬ್ಬರ ಕೊಟ್ಟು ಇನ್ನೇನು ತೆರೆದುಕೊಳ್ಳಲಿರುವ ಹಿಂಗಾರಕ್ಕೆ ಶಕ್ತಿ ನೀಡಬೇಕಾದ ಸಮಯ.ಆದರೆ ಹಾಕಿದ ಗೊಬ್ಬರವೆಲ್ಲಾ ನೀರುಪಾಲಾಗುವುದನ್ನು ತಡೆಯಲಾರದ ಹತಾಶ ಪರಿಸ್ಥಿತಿ ಕೃಷಿಕನದ್ದು. ಅಂತೂ ಕೃಷಿಕನ ಬದುಕು ಪ್ರತಿದಿನದ ಹೋರಾಟ ಎಂಬಂತಾಗಿದೆ.

ಆದರೂ ಕೃಷಿಕನ ಆಶಾಭಾವನೆ ಏನೆಂದರೆ, ಈ ಮುಗಿಲು ಕಳೆದು ನಾಳೆ ರವಿ ಮೂಡಲೇ ಬೇಕು, ಆಗ ತನ್ನ ಕೃಷಿ ಬದುಕು ಹಳಿಗೆ ಬಂದೀತೆಂಬ ಆಶಯ.

# ಸುರೇಶ್ಚಂದ್ರ ಟಿ ಆರ್‌, ಕಲ್ಮಡ್ಕ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?
August 14, 2026
7:14 AM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ
ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ
August 13, 2026
6:59 AM
by: ದ ರೂರಲ್ ಮಿರರ್.ಕಾಂ
ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?
August 13, 2026
6:50 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror