ಸುಬ್ರಹ್ಮಣ್ಯ – ಮಂಜೇಶ್ವರ ರಾಜ್ಯ ಹೆದ್ದಾರಿಯ ನಿಂತಿಕಲ್ ಸಮೀಪದ ಕಲ್ಲೇರಿ ಅಪಘಾತ ವಲಯದಲ್ಲಿ ರೂ. 1.25 ಕೋಟಿ ಅನುದಾನದಲ್ಲಿ ನೂತನವಾಗಿ ನಿರ್ಮಾಣವಾದ ಸೇತುವೆಯನ್ನು ಭಾನುವಾರ ಸಚಿವ ಎಸ್ ಅಂಗಾರ ಉದ್ಘಾಟಿಸಿದರು.
ಅಪಘಾತ ವಲಯವಾಗಿ ಹಲವು ಸಮಯಗಳಿಂದ ಗಮನ ಸೆಳೆದಿದ್ದ ಈ ಪ್ರದೇಶದಲ್ಲಿ ನೂತನವಾಗಿ ಸೇತುವೆ ಹಾಗೂ ಸಂಪರ್ಕ ರಸ್ತೆ ನಿರ್ಮಾಣವಾಗಿ ಸಾರ್ವಜನಿಕ ಉಪಯೋಗಕ್ಕೆ ತೆರೆದುಕೊಂಡಿದೆ. ಕಾಮಗಾರಿ ಮುಗಿದರೂ ವಾಹನ ಸಂಚಾರಕ್ಕೆ ಮುಕ್ತವಾಗಿರಲಿಲ್ಲ. ಈಚೆಗೆ ರಸ್ತೆ ತಡೆಗೆ ಇರಿಸಿದ್ದ ಮರಳಿನ ಚೀಲದಿಂದಲೇ ಅಪಾಯ ಉಂಟಾದ ವೇಳೆ ಸ್ಥಳೀಯರು ಇಲಾಖೆಯನ್ನು ಎಚ್ಚರಿಸಿದ್ದರು. ಇದೀಗ ಸೇತುವೆ ಹಾಗೂ ರಸ್ತೆ ಉದ್ಘಾಟನೆಗೊಂಡಿದೆ. ಉದ್ಘಾಟನೆ ವೇಳೆ ಸ್ಥಳೀಯ ಮುಖಂಡರು, ಇಲಾಖಾ ಅಧಿಕಾರಿಗಳು ಇದ್ದರು.

ಸುಬ್ರಹ್ಮಣ್ಯ – ಮಂಜೇಶ್ವರ ಹೆದ್ದಾರಿಯಲ್ಲಿ ಪುತ್ತೂರು ವಿಭಾಗದ ಲೋಕೋಪಯೋಗಿ ಇಲಾಖೆಯ ವತಿಯಿಂದ ಈಗಾಗಲೇ ರಸ್ತೆ ಚರಂಡಿ ದುರಸ್ತಿ ಹಾಗೂ ರಸ್ತೆಯಲ್ಲಿ ನೀರು ಹೋಗುವುದರ ತಡೆಗೆ ಕೆಲಸಗಳನ್ನು ಮಾಡಲಾಗುತ್ತಿದೆ. ರಸ್ತೆಯ ಅಲ್ಲಲ್ಲಿ ಎಚ್ಚರಿಕಾ ಫಲಕ, ಹಂಪ್ ನಿರ್ಮಾಣ ಸೇರಿದಂತೆ ರಸ್ತೆಯ ಬದಿಗೆ ಎಚ್ಚರಿಕೆಯ ಗುರುತುಗಳನ್ನು ಅಳವಡಿಸಲಾಗಿದೆ. ಆದರೆ ಸುಳ್ಯ ವಿಭಾಗದಲ್ಲಿ ಅಂತಹ ಯಾವುದೇ ದುರಸ್ತಿ, ಎಚ್ಚರಿಕಾ ಫಲಕಗಳು ಕಾಣಿಸುತ್ತಿಲ್ಲ. ಮಳೆಗಾಲ ಜೋರಾಗಿ ಆರಂಭವಾಗುವ ಮೊದಲು ರಸ್ತೆ ಚರಂಡಿ ವ್ಯವಸ್ಥೆ ಸರಿ ಮಾಡಬೇಕು ಎಂದು ಸಾರ್ವಜನಿಕರು ಇದೇ ವೇಳೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.




