Advertisement
Exclusive - Mirror Hunt

ಪರಿಸರಕ್ಕೆ ಕೊಡುಗೆಯಾಗಬಹುದು ಅಡಿಕೆ ಮರ | ಅಡಿಕೆ ಮರಕ್ಕೆ ಮೌಲ್ಯ ತರಲು ಒಂದು ದಾರಿ | ಒಂದು ಮರಕ್ಕೆ ಕನಿಷ್ಟ 700 ರೂಪಾಯಿ ಪಡೆಯಬಹುದು ಹೇಗೆ ?

Share

ಅಡಿಕೆ ಧಾರಣೆ, ಅಡಿಕೆ ಭವಿಷ್ಯ ಇತ್ಯಾದಿಗಳ ಚರ್ಚೆಯ ನಡುವೆ, ಈಗ ಅಡಿಕೆ ಮರಕ್ಕೆ ಒಂದು ಬೆಲೆ ತರುವ ಪ್ರಯತ್ನ ನಡೆಯಬೇಕಾಗಿದೆ. ತೋಟದಲ್ಲಿ ಬಿದ್ದು ಮಣ್ಣಾಗುವ ಅಡಿಕೆ ಮರವನ್ನು ಸುಂದರವಾದ ಹೂಕುಂಡವಾಗಿ ಮಾಡುವ ಮೂಲಕ ಒಂದು ಮರದಿಂದ ಉತ್ತಮ ಆದಾಯವನ್ನೂ ರೈತರಿಗೆ ಪಡೆಯಬಹುದಾಗಿದೆ. ಅದೇ ವೇಳೆ ಪರಿಸರ ಪ್ರೇಮಿಗಳಿಗೆ ಉತ್ತಮವಾದ ಹೂಕುಂಡವೂ ಲಭ್ಯವಾಗಲಿದೆ.…..ಮುಂದೆ ಓದಿ….

ಸಾಮಾನ್ಯವಾಗಿ ಗಾಳಿ-ಮಳೆಗೆ ಅಡಿಕೆ ಮರ ಉರುಳಿ ಬೀಳುತ್ತದೆ, ವಿವಿಧ ಕಾರಣಗಳಿಂದ ಸಾಯುತ್ತದೆ. ಹೀಗೇ ವರ್ಷದಲ್ಲಿ ಒಬ್ಬ ಕೃಷಿಕನ ಮನೆಯಲ್ಲಿ ಏನಿಲ್ಲವೆಂದರೂ 25-30 ಅಡಿಕೆ ಸಾಯುತ್ತದೆ. ಇಂತಹ ಅಡಿಕೆ ಮರಗಳೆಲ್ಲಾ ಒಂದೋ ಉರುವಲಾಗಿ ಬಳಕೆಯಾಗುತ್ತದೆ ಅಥವಾ ಗೆದ್ದಲು ಹಿಡಿದು ತೋಟದಲ್ಲಿ ಮಣ್ಣಾಗುತ್ತದೆ. ಇನ್ನೂ ಕೆಲವು ಸಲ ತೋಟದಲ್ಲಿ ಸಮಸ್ಯೆಯಾಗುತ್ತದೆ ಎಂದಾಗ ಅತ್ಯಂತ ಕನಿಷ್ಟ ದರದಲ್ಲಿ ಮಾರಾಟವಾಗುತ್ತದೆ. ಸರ್ಕಾರಿ ಲೆಕ್ಕದ ಪ್ರಕಾರ ಒಂದು ಮರಕ್ಕೆ ಅಬ್ಬಬ್ಬಾ ಎಂದರೆ 20 ರೂಪಾಯಿ ಪರಿಹಾರ…!. ಹೀಗಾಗಿ ಬಹುತೇಕ ಕೃಷಿಕರ ತೋಟದಲ್ಲಿ ಸತ್ತಿರುವ ಅಡಿಕೆ ಮರದ ವಿಲೇವಾರಿಯೇ ಸಮಸ್ಯೆ. ಇಂತಹ ಸಮಯದಲ್ಲಿ ಇದಕ್ಕೊಂದು ಮೌಲ್ಯವರ್ಧನೆಯ ರೂಪ ಸಿಕ್ಕಿದರೆ, ಅದಕ್ಕೊಂದು ಮಾನ ಬಂದರೆ ಅಡಿಕೆ ಬೆಳೆಗಾರರಿಗೂ ಉಪ ಆದಾಯ. ಆದರೆ ಇಲ್ಲಿ ಪ್ರಯತ್ನ ಹಾಗೂ ಪರಿಶ್ರಮ ಅಗತ್ಯ ಇದೆ. ಇಂದು ಇಡೀ ದೇಶದಲ್ಲಿ ಪ್ಲಾಸ್ಟಿಕ್‌ ಪರ್ಯಾಯದ ಬಗ್ಗೆ ಚಿಂತನೆ ನಡೆಯುತ್ತಿದೆ. ಆದರೂ ಇದೊಂದು ಸವಾಲಿನ ಕೆಲಸ. ಗ್ರಾಮೀಣ ಭಾಗದಲ್ಲಿ ಸಣ್ಣ ಹಳ್ಳಿಯಲ್ಲಿ ಪ್ಲಾಸ್ಟಿಕ್‌ ದೊಡ್ಡ ಸಮಸ್ಯೆಯಲ್ಲ ಎನ್ನುವ ಭಾವನೆ ಇದೆ.

ಆದರೆ ಸಣ್ಣ ನಗರದಿಂದ  ದೊಡ್ಡ ನಗರದವರೆಗೆ ಪ್ಲಾಸ್ಟಿಕ್‌  ಭೂತವಾಗಿ ಕಾಡುತ್ತದೆ. ವಿಲೇವಾರಿಯೇ ಕಷ್ಟವಾಗಿದೆ. ಮಣ್ಣಿಗೂ ಸೇರದೆ, ಉರಿಸಲೂ ಆಗದೆ, ಮರುಬಳಕೆಗೂ ಆಗದೆ ಕಾಡುತ್ತದೆ. ಹೀಗಾಗಿ ಪ್ಲಾಸ್ಟಿಕ್‌ ಗೆ ಪರ್ಯಾಯದ ಬಗ್ಗೆ ಸಾಕಷ್ಟು ಚಿಂತೆ-ಚಿಂತನೆ ನಡೆಯುತ್ತಿದೆ. ಪ್ಲಾಸ್ಟಿಕ್‌ ಪರ್ಯಾಯ ಬಳಕೆಯ ಬಗ್ಗೆ ಅನೇಕರು ಒಪ್ಪಿಕೊಳ್ಳುತ್ತಾರೆ, ಆದರೆ ಮಾರುಕಟ್ಟೆಗೆ ಹೋದಾಗ ಪರ್ಯಾಯಗಳು ಕಣ್ಣ ಮುಂದೆಯೇ ಇಲ್ಲವಾಗುತ್ತದೆ. ಇಂತಹದ್ದರಲ್ಲಿ ಪರಿಸರ ಪ್ರೇಮಿಗಳಿಗೆ, ನಗರದಲ್ಲಿ ಹೂವು, ಸಣ್ಣ ಸಣ್ಣ ಗಿಡ ಬೆಳೆಸುವವರಿಗೆ ಹೂಕುಂಡವಾಗಿ ಅಡಿಕೆಯ ಪಾಟ್‌ ಅಥವಾ ಹೂಕುಂಡವಾಗಿ ಬಳಕೆ ಮಾಡಬಹುದಾಗಿದೆ. ಇದಕ್ಕೊಂದು ಪ್ರಯತ್ನ ನಡೆದಿದೆ. ಇಂತಹದೊಂದು ಪ್ರಯತ್ನವನ್ನು ಕುಮಟಾದ ಶಶಿಧರ್‌ ಭಟ್‌ ಅವರು ಮಾಡುತ್ತಿದ್ದಾರೆ. ಪರಿಸರ ಪ್ರೇಮಿಯೂ ಆಗಿರುವ ಅವರು ಈ ಬಗ್ಗೆ ಸತತ ಪ್ರಯತ್ನ ಮಾಡಿದ್ದಾರೆ. ಸದ್ಯ ದೆಹಲಿಯಲ್ಲಿರುವ ಶಶಿಧರ್‌ ಭಟ್‌ ಅವರ ಜೊತೆಗೆ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ…

ಶಶಿಧರ್‌ ಭಟ್
ಉದ್ಯೋಗ ನಿಮಿತ್ತ ದೆಹಲಿಯ ಕಡೆಗೆ ಹೋಗಿದ್ದರೂ ಗ್ರಾಮೀಣ ಭಾಗ, ಕೃಷಿಕರ ಕಡೆ, ಪರಿಸರದ ಕಡೆಗೆ ಮನಸ್ಸು ಸಳೆಯುತ್ತಿತ್ತು. ಹೀಗಾಗಿ ಅಡಿಕೆ ಬೆಳೆಗಾರರಿಗೂ ಏನಾದರೊಂದು ಉಪ ಆದಾಯವನ್ನು ಸೃಷ್ಟಿಸಬೇಕು ಎಂದು ಅಂದುಕೊಂಡಿದ್ದೆ. ಕೋವಿಡ್‌ ಸಮಯದಲ್ಲಿ ಗ್ರಾಮೀಣ ಭಾಗದ ಯುವಕರ ಕಡೆಗೆ ಗಮನಹರಿಸಲು ಸಾಧ್ಯವಾಯಿತು.ಇಲ್ಲಿನ ಉತ್ಪಾದಕತೆ ಹೆಚ್ಚಿಸುವ ಬಗ್ಗೆ ಯೋಚನೆ ಮಾಡಿದಾಗ ಅಡಿಕೆ ಮರದ ಮೌಲ್ಯವರ್ಧನೆಯು ಕಣ್ಣಮುಂದೆ ಬಂತು. ಅಡಿಕೆ ಮರದದ ಮೌಲ್ಯವರ್ಧನೆ ನಡೆಯುತ್ತಿಲ್ಲ. ಹೀಗಾಗಿ ಈ ಬಗ್ಗೆ  ಅಡಿಕೆ ಬೆಳೆಗಾರರ ನಡುವೆ ಚರ್ಚೆ ಮಾಡಿ, ಸಮಸ್ಯೆ ನಿವಾರಣೆಯ ಬಗ್ಗೆ ಯೋಚನೆ ಬಂತು. ಅಡಿಕೆ ಮರಕ್ಕೂ ಬೆಲೆ ಸಿಗುವ ಪ್ರಯತ್ನಕ್ಕೆ ದಾರಿ ಆಯಿತು.

ಅಡಿಕೆ ಮರದಿಂದ ಪಾಟ್‌ ಅಥವಾ ಹೂಕುಂಡ ತಯಾರಿಸುವ ಬಗ್ಗೆ ಹೆಜ್ಜೆ ಇರಿಸಿ, ಅಡಿಕೆ ಮರದ ತುಂಡುಗಳನ್ನು ತರಿಸಿಕೊಂಡು ಪ್ರಯತ್ನ ನಡೆಯಿತು. ಎಲ್ಲರ ಚಿಂತನೆಗಳು ಸೇರಿಕೊಂಡಾಗ ಅದಕ್ಕೊಂದು ರೂಪವೂ ಬಂತು. ಆ ಬಳಿಕ ಕೇಂದ್ರ ಸರ್ಕಾರದ ಕೃಷಿ ಸಚಿವಾಲಯದಲ್ಲೂ ಈ ಬಗ್ಗೆ ಮಾತುಕತೆ ನಡಸಿದಾಗ ಅದಕ್ಕೆ ಉತ್ತಮ ಪ್ರತಿಕ್ರಿಯೆಯೂ ಬಂದಿತು, ಇಲಾಖೆಯೂ ಅನುಮೋದನೆ ನೀಡಿದೆ. ಆರಂಭದಲ್ಲಿ ಸವಾಲುಗಳು ಇದ್ದವು, ಆದರೆ ಪ್ರಯತ್ನದಿಂದ ಸಾಗಿದ ಕಾರಣ ಸುಧಾರಣೆಯಾಗುತ್ತಾ ಬಂದಿದೆ.ಸಮಾನ ಮನಸ್ಕರು ಜೊತೆ ಸೇರಿಕೊಂಡು ಈಗಲೂ ಅಭಿವೃದ್ಧಿಯ ಬಗ್ಗೆ ಮಾತುಕತೆ ನಡೆಯುತ್ತಿದೆ.

ಎಲ್ಲಾ ಕೃಷಿಕರ ತೋಟದಲ್ಲಿ ಅಡಿಕೆ ಮರ ಹಾಳಾಗುತ್ತದೆ .ಅಡಿಕೆ ಮರ ಯಾರಿಗೂ ಬೇಡ. ನಾವು ಮಾಹಿತಿ ಕಲೆ ಹಾಕಿದಾಗ ಒಂದು ಎಕ್ರೆಯಲ್ಲಿ ಪ್ರತೀ ವರ್ಷ 25-30 ಮರ ಹಾನಿಯಾಗುತ್ತದೆ. ಸರ್ಕಾರಿ ಬೆಲೆ 6-10 ರೂಪಾಯಿ. ಕೆಲವು ಕಡೆಯಿಂದ ಬಂದು ಕಡಿಮೆ ಬೆಲೆ ನೀಡಿ ಅಡಿಕೆ ಮರ ಕೊಂಡೊಯ್ಯುತ್ತಾರೆ. ಹೀಗಾಗಿ ರೈತರಿಗೆ ಬೆಲೆಯೇ ಸಿಗುವುದಿಲ್ಲ. ಪ್ಲಾಸ್ಟಿಕ್‌ ಬದಲಾವಣೆಗೆ ಇಂದು ಪರ್ಯಾಯ ವಸ್ತುಗಳು ಅನಿವಾರ್ಯ. ಆ ನಿಟ್ಟಿನಲ್ಲಿ ಅಡಿಕೆ ಮರದ ಪಾಟ್‌ ಬಳಕೆ ಮಾಡಲು ಸಾಧ್ಯವಿದೆ. ಹೀಗೆ ಮಾಡಿದರೆ ಒಂದು ಅಡಿಕೆ ಮರಕ್ಕೆ 700-800 ರೂಪಾಯಿ ಗಳಿಸಲು ಸಾಧ್ಯವಿದೆ. ಹೀಗಾಗಿ ಈಗಲೂ ಈ ಬಗ್ಗೆ ಇನ್ನಷ್ಟು ಅಭಿವೃದ್ಧಿಗೆ ಚರ್ಚೆ ನಡೆಯುತ್ತಿದೆ. ಸಣ್ಣ ಸಣ್ಣ ಪ್ರಯೋಗ ನಡೆಯುತ್ತಿದೆ. ಅಡಿಕೆ ಪಾಟ್‌ ಪ್ಲಾಸ್ಟಿಕ್‌ ಹಾಗೂ ಸಿರಾಮಿಕ್‌ ಪಾಟ್‌ಗೆ ಪರ್ಯಾಯವಾಗಿ ಅಡಿಕೆ ಮರದ ಪಾಟ್‌ ಯಶಸ್ವಿಯಾಗಿ ಬಳಕೆ ಮಾಡಬಹುದು. ಗಿಡ ಪ್ರೇಮಿಗಳಿಗೆ ಬೇರೆ ಅವಕಾಶ, ಆಯ್ಕೆ ಇಲ್ಲ. ಅಡಿಕೆ ಮರದ ಹೂಕುಂಡ ಉತ್ತಮವಾದ ಅವಕಾಶ. ಈ ಪ್ರಯತ್ನ ಮಾಡಲೇಬೇಕು. ಪರಿಸರದ ದೃಷ್ಟಿಯಿಂದಲೂ, ಅಡಿಕೆ ಬೆಳೆಗಾರರ ದೃಷ್ಟಿಯಿಂದಲೂ ಇದು ಒಳ್ಳೆಯ ಅವಕಾಶ. ಸಣ್ಣ ಪಾಟ್‌ ಇದ್ದರೂ, ಅದಕ್ಕೆ ಹೊಂದುವ ಗಿಡಗಳು ಬೇಕಾದಷ್ಟು ಇದೆ. ನಗರದಲ್ಲಿ, ಪ್ಲಾಟ್‌ಗಳಲ್ಲಿ ಗಿಡಗಳನ್ನು ಯೋಗ್ಯ ರೀತಿಯಲ್ಲಿ ಬೆಳೆಸಬಹುದಾಗಿದೆ.ಈಗಾಗಲೇ ಗಾರ್ಡನಿಂದ ಕಮ್ಯುನಿಟಿ  ಜೊತೆ ಮಾತುಕತೆ ನಡೆಸಿದ್ದೇವೆ. ಉತ್ತಮ ಹಿಮ್ಮಾಹಿತಿ ನೀಡಿದ್ದಾರೆ, ಬೇಡಿಕೆ ಇದೆ.

ಅಡಿಕೆ ಬೆಳೆಗಾರರಿಗೆ ಉಪಉತ್ಪನ್ನ, ಉಪಬೆಳೆ ಇಂದು ಅಗತ್ಯ ಇದೆ. ಈ ಧಾರಣೆ ಎಷ್ಟು ದಿನ ಇರಬಹುದು? ಇಂತಹ ವೇಳೆ ಉಪಉತ್ಪನ್ನದ ದಾರಿಯ ಅಗತ್ಯ ಇದೆ. ಕಡಿಮೆ ಆದಾಯವಾದರೂ ಅಡಿಕೆ ಬೆಳೆಗಾರ ಕುಟುಂಬಸ್ಥರಿಗೆ ಇದು ನೆರವಾಗಬಹುದು. ಸಮಾನ ಮನಸ್ಕರು ಜೊತೆ ಸೇರಿಕೊಂಡಾಗ ಉತ್ತಮ ಕೆಲಸವಾಗಲು ಸಾಧ್ಯ ಇದೆ. ದಾರಿ ಸುಲಭ ಇಲ್ಲ- ಆದರೆ ಸಾಧ್ಯತೆ ಇದೆ. ಇಲ್ಲಿ ಪ್ರಯೋಗಗಳು ಇನ್ನಷ್ಟು ನಡೆಯಬೇಕು. ಬೇರೆ ಬೇರೆ ಕಡೆಯ ವಾತಾವರಣದ ಉಷ್ಣತೆ ಇಲ್ಲಿ ಪರಿಗಣನೆ ಅಗತ್ಯ. ಬಿಸಲಿಗೆ ಅಡಿಕೆ ಮರ ಒಡೆಯುತ್ತದೆ. ಇಂತಹ ಸಮಯದಲ್ಲಿ ಏನು ಮಾಡಬಹುದು ಎನ್ನುವ ಪ್ರಯೋಗ ಅಗತ್ಯ ಇದೆ. ಈ ಬಗ್ಗೆ ವಿಜ್ಞಾನಿಗಳ ನೆರವನ್ನೂ ಪಡೆಯಲಾಗಿದೆ. ಒಂದು ಊರಲ್ಲಿ ಕೆಲವು ಜನ ರೈತರು ಈ ಪ್ರಯತ್ನ ಮಾಡಿದರೆ ಸಾಧ್ಯತೆ ಇದೆ. ರೈತರಿಗೆ ಅಡಿಕೆ ಮರದಿಂದ ತಯಾರಿಸಬಹುದಾದ ಉತ್ಪನ್ನಗಳ ಬಗ್ಗೆ  ತರಬೇತಿ ಕಾರ್ಯಗಾರ ಕೂಡಾ ಮಾಡಲು ಸಾಧ್ಯ ಇದೆ.  ಈ ಅಭಿಯಾನ ಶುರು ಮಾಡಿದಾಗ ಕಂಪನಿಯೊಂದು ತನ್ನದೇ ಟೂಲ್ಸ್‌ ತಂದು ಡೆಮೋ ಕೂಡಾ ಮಾಡಿತ್ತು. ಹೀಗಾಗಿ ನೆರವು ಇದೆ, ಆದರೆ ಪ್ರಯತ್ನ ಬೇಕು.

ಸರ್ಕಾರವು ಪ್ಲಾಸ್ಟಿಕ್‌ ಪರ್ಯಾಯ ಬಳಕೆಯ ಕಡೆಗೆ ಆದ್ಯತೆ ನೀಡುತ್ತಿದೆ.ಹೀಗಾಗಿ ಪ್ಲಾಸ್ಟಿಕ್‌ ಪರ್ಯಾಯಗಳ ಬಗ್ಗೆ ಯೋಚನೆ ಅಗತ್ಯ. ಕೃಷಿ ಸಚಿವಾಲಯದಿಂದ ಕೂಡಾ ನೆರವು ಇದೆ. ರೈತರಿಗೆ ಇದು ಉಪ ಉತ್ಪನ್ನ ಎಂದು ತಿಳಿದು ನೆರವು ಮಾಡುತ್ತದೆ. ಒಂದು ಕಡೆ ಪ್ಲಾಸ್ಟಿಕ್‌ ಪರ್ಯಾಯ-ಇನ್ನೊಂದು ಕಡೆ ಆದಾಯ ಎಂದು ಭಾವಿಸಿಕೊಂಡು ಮುಂದುವರಿಯುವ ಅವಕಾಶ ಇದೆ. ಇದು ಒಬ್ಬರಿಂದ ಆಗುವ ಕೆಲಸ ಅಲ್ಲ, ಅಡಿಕೆ ಬೆಳೆಗಾರರು ಹಾಗೂ ತಯಾರಕರು, ಉತ್ಪಾದಕರು ಇವರೆಲ್ಲಾ ಒಂದಾಗಬೇಕು.

ನಗರದಲ್ಲಿ ಇರುವ ಕೃಷಿ ಪ್ರೇಮಿಗಳಿಗೆ, ಗಿಡ ಆಸಕ್ತರಿಗೆ ಇಂದು ಬೇರೆ ಆಯ್ಕೆ ಇಲ್ಲ ತುಂಬಾ ಸಲ ಪ್ಲಾಸಿಕ್‌ ಪರ್ಯಾಯದ ಬಗ್ಗೆ ಹೇಳಿದರೂ, ಮಾರುಕಟ್ಟೆಯಲ್ಲಿ ಪರ್ಯಾಯ ಇಲ್ಲ. ಇಂತಹ ಪರಿಸ್ಥಿತಿಲ್ಲಿ ಗ್ರಾಹಕರಿಗೆ ಆಯ್ಕೆಯನ್ನು, ಅವಕಾಶವನ್ನು ನೀಡಬೇಕಾಗಿದೆ. ಪರಿಸರ ಸ್ನೇಹಿಯಾದ ವಸ್ತುಗಳನ್ನು ನೀಡಬಹುದಾಗಿದೆ. ಪರಿಸರ ಕಾಳಜಿ ಇರಿಸಿಕೊಂಡು ಗಿಡ ನೆಡುವ ಯೋಚನೆ ಇರುವವರಿಗೆ ಇದು ಬಹಳ ಕೊಡುಗೆಯಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ರಾಜ್ಯದಲ್ಲಿ ಭಾರೀ ಮಳೆ ಆರ್ಭಟ – ಕೆಲವು ಜಿಲ್ಲೆಗಳಲ್ಲಿ ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ರಾಜ್ಯದ ಹಲವೆಡೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.…

2 hours ago

ಆಹಾರ-ನಿದ್ರೆ ಪರಸ್ಪರ ಪೂರಕ; ಉತ್ತಮ ನಿದ್ರೆಗೆ ಹಸಿವು ಅಗತ್ಯ: ರಾಘವೇಶ್ವರ ಶ್ರೀ

ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಎರಡೂ ಅವಿಭಾಜ್ಯ ಎಂದು ಶ್ರೀ…

11 hours ago

ಕೃಷಿಕರ ಮಿತ್ರ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ ಪ್ರಶಸ್ತಿ

ಮಳೆ ಮಾಹಿತಿ ಮೂಲಕ ಕೃಷಿಕರಿಗೆ ನೆರವಾಗುತ್ತಿರುವ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ…

11 hours ago

ಮಂಗಳೂರಿನಲ್ಲಿ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್‌ಗೆ ಚಾಲನೆ – 28 ರಾಜ್ಯ–ಕೇಂದ್ರಾಡಳಿತ ಪ್ರದೇಶಗಳಿಂದ 644 ಬಾಲಕಿ-ಬಾಲಕಿಯರು

ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್‌-11 ಚೆಸ್ ಚಾಂಪಿಯನ್ಶಿಪ್‌ಗೆ ಭವ್ಯ ಚಾಲನೆ ದೊರೆತಿದ್ದು, ದೇಶದ 28…

12 hours ago

ಹವಾಮಾನ ವರದಿ | 02-08-2026 | ಕರಾವಳಿಯಲ್ಲಿ ಮಳೆ ಇಳಿಮುಖ ..? ರಾಜ್ಯದಲ್ಲಿ ಮುಂಗಾರು ಸ್ಥಿತಿ ಏನು..?

ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ತೀವ್ರತೆ ಇಳಿಮುಖವಾಗಲಿದ್ದು, ಆಗಸ್ಟ್‌ 3ರಿಂದ ತೋಟದ…

14 hours ago

ಭಾರೀ ಮಳೆಯ ಎಚ್ಚರಿಕೆ : 24 ಗಂಟೆ ಸನ್ನದ್ಧವಾಗಿರಲು ಡಿಸಿ ಸೂಚನೆ, ಭೂಕುಸಿತ ಪ್ರದೇಶಗಳ ಮೇಲೆ ಕಟ್ಟೆಚ್ಚರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…

1 day ago