ಅಜ್ಜಿಯ ಕೈ ರುಚಿ ಯಾಕೆ ನನ್ನ ಕೈ ಸೇರಲಿಲ್ಲ.? ಅಜ್ಜಿಯ ಸೀರೆ ನನ್ನ ಕೈ ಸೇರಿದಂತೆ , ಅಡುಗೆಯ ಒಳಗುಟ್ಟು ನನಗರಿಯದೇ ಹೋಯಿತಲ್ಲ ಎಂಬ ಬೇಸರ ಯಾವಾಗಲೂ ನನ್ನೊಂದಿಗೆ ಇರುತ್ತದೆ ಎಂಬುದು ಅಕ್ಷರಶಃ ಸತ್ಯ….
ಒಬ್ಬೊಬ್ಬರ ಕೈರುಚಿ ಒಂದೊಂದು ರೀತಿ. ಅಮ್ಮ ಮಾಡಿದ ಅಡುಗೆಯ ರೀತಿ ಮಗಳದಿರದು. ಅಜ್ಜಿ ಮಾಡಿದಂತಹ ಕಾಯಿ ಚಟ್ನಿಯ ಪರಿಮಳ ಅಮ್ಮ ತಯಾರಿಸಿದರೆ ಬರದು. ಸಾರಿನ ಘಮ್ಮ ಎನ್ನುವ ಪರಿಯ ಗುಟ್ಟು ಕನ್ನಡಿಯೊಳಗಿನ ಗಂಟು. ಅದೇನು ರೆಸಿಪಿಯೋ ದೇವರೇ ಬಲ್ಲ. ಅಡುಗೆ ಮನೆಯೊಳಗೆ ಹೊಕ್ಕು ಎಷ್ಟು ಹುಡುಕಿದರೂ ರುಚಿಯ ಗುಟ್ಟು ನಮ್ಮ ಕೈ ಸೇರದು. ಮದುವೆ , ಪೂಜೆ ,ಉಪನಯನಗಳಿಗೆ ಹೋಗಿ ಬಂದ ಮರುದಿನ ನಾನು ತಪ್ಪದೆ ಕೇಳುವ ವಾಕ್ಯವೆಂದರೆ ನಿನ್ನೆ ಸಾರು ರುಚಿ ಇತ್ತು. ಸಾಂಬಾರು ಅಂತೂ ಸೂಪರ್. ಊಟ ಮಾಡಿದ ಕೈ ಎಷ್ಟೋ ಹೊತ್ತು ಅದೇ ಪರಿಮಳ ಸೂಸುತ್ತಿತ್ತು. ಆ ದಿನವಿಡೀ ತೇಗುವಾಗ ಸಾರಿನ ಪರಿಮಳವೇ ಬಂದರೆ ಏನೋ ಒಂದು ತರ ಅನಿಸದೇ ಇರದು. ಊಟ ಮಾಡಿದ ಮೇಲೆ ಪದೇ ಪದೇ ತೇಗು ಬಂದರೆ ಏನೋ ವಿಚಿತ್ರ ಅನ್ನಿಸದೇ ಇರದು. ಯಾಕಾದರೂ ಊಟ ಮಾಡಿದೆನೋ ಅಂತ ಅನಿಸಿ ಬಿಡುವುದು ಸುಳ್ಳಲ್ಲ.
ಮನೆಯಲ್ಲಿ ಮಾಡಿದರೆ ಯಾಕೆ ಆ ರುಚಿ , ಪರಿಮಳ ಬರುದಿಲ್ಲ,ಎಂದು ನನ್ನ ಮುಖ ನೋಡಿದರೆ ಸುಮ್ಮನೆ ನಗುವುದಷ್ಟೇ ನನ್ನ ಉತ್ತರ. ಮನೆಯಲ್ಲಿ ಮಾಡಿದ ಅಡುಗೆ ಉಂಡರೆ ಹೊಟ್ಟೆ ಉಬ್ಬರಿಸದು, ಉಂಡು ಎರಡು ಮೂರು ಗಂಟೆಗಳಲ್ಲಿ ಮತ್ತೆ ಹಸಿವಾಗುತ್ತದೆ . ಆದರೆ ಕೆಲವು ಕಾರ್ಯಕ್ರಮಗಳಲ್ಲಿ, ಹೋಟೆಲ್ಲುಗಳಲ್ಲಿ ಊಟ ಮಾಡಿದರೆ ಹಸಿವೇ ಆಗುದಿಲ್ಲ, ಜೊತೆಗೆ ತಿಂದ ಯಾವುದೋ ಪದಾರ್ಥದ್ದೇ ಪರಿಮಳಯುಕ್ತ ತೇಗು ಉಚಿತ. ಹೊಟ್ಟೆ ಸರಿಯಾಗಲು ಎರಡು ದಿನ ಬೇಕೇ ಬೇಕು. ಸರಣಿ ಕಾರ್ಯಕ್ರಮಗಳಿದ್ದರೆ ಕಷ್ಟವೋ ಕಷ್ಟ. ಇತ್ತೀಚೆಗಂತೂ ಸರಳವಾದ ಆತಿಥ್ಯ ದುರ್ಲಭವೇ ಸರಿ. ತಾನು ಮೇಲು , ತನ್ನ ಆತಿಥ್ಯವೇ ಶ್ರೇಷ್ಠ ,ಯಾರಿಗೂ ನನ್ನ ನ್ನು ಮೀರಿಸಲು ಆಗಬಾರದು ಎಂಬ ಭಾವ. ನಮ್ಮ ಮನೆಯೂಟ ಒಂದು ಹೊತ್ತಿಗಾದರೂ ಹಾಗಾದದ್ದು ಉಂಟಾ?
ಮನೆಯಲ್ಲಿ ಮಾಡಿದ ಮಸಾಲೆ ಸಾಂಬಾರಾದರೂ. ಊಟ ಮಾಡುವಾಗ ಮಾತ್ರ ಪರಿಮಳ ಬರಬಹುದಷ್ಟೇ. ಉಂಡು ಎಷ್ಟೋ ಹೊತ್ತಾದ ಮೇಲೆ ತೇಗು ಬರುವಾಗ ಆಹಾರದ ಘಮಲು ಬರುವುದು ಬಹಳ ಅಪರೂಪ. ಗೇರು ಹಣ್ಣು, ಲಕ್ಷ್ಮಣ ಫಲ ಮೊದಲಾದ ಹಣ್ಣುಗಳನ್ನು ತಿಂದರೆ ನಮ್ಮ ಬೆವರು ಅದೇ ಪರಿಮಳ ಬರುತ್ತದೆ. ಕೆಲವೊಂದು ಆಹಾರಗಳು ನಮ್ಮನ್ನು ಸಾತ್ವಿಕರನ್ನಾಗಿಯೂ ಪರಿವರ್ತಿಸುತ್ತವೆ. ಹೀಗೆ ನಮ್ಮ ಆಚಾರ , ವಿಚಾರಗಳ ಮೇಲೆ ನಾವು ತೆಗೆದು ಕೊಳ್ಳುವ ಆಹಾರದ ಗಾಢ ಪ್ರಭಾವ ಇದ್ದೇ ಇರುತ್ತದೆ. ನಾವು ಹೇಗೆ ಬಾಳುತ್ತೇವೆ ಎಂಬುದು ನಿರ್ಧಾರಿತವಾಗುತ್ತದೆ. ನಮ್ಮ ಯೋಚನೆಗಳು, ಯೋಜನೆಗಳು , ನಿರ್ಧಾರಗಳೆಲ್ಲವೂ ಆಹಾರ, ನಮ್ಮ ಪರಿಸರದ ಪ್ರಭಾವದಿಂದ ತಪ್ಪಿಸಿ ಕೊಳ್ಳಲು ಸಾಧ್ಯವೇ ಇಲ್ಲ ವಿಷಯವೇ ಕುತೂಹಲಕರವಾದುದು ಅಲ್ಲವೇ!?