ಅಡಿಕೆ, ತೆಂಗು ಅಥವಾ ಜಟ್ರೋಫಾ ಮರಗಳನ್ನು ಈಗ ಕೇವಲ ಒಂದು ಬೆಳೆಗೆ ಮಾತ್ರ ಬಳಸಬೇಕಿಲ್ಲ. ಅವುಗಳನ್ನೇ ಆಸರೆಯಾಗಿ ಬಳಸಿಕೊಂಡು ಮತ್ತೊಂದು ಹೆಚ್ಚಿನ ಮೌಲ್ಯದ ಬೆಳೆ ಬೆಳೆಸಬಹುದೇ? ಅಸ್ಸಾಂನ ಗುಹಾಟಿ ಹೊರವಲಯದ ಕುಲ್ಸಿ ನದಿಯ ತೀರದ 10 ಅರಣ್ಯ ಅಂಚಿನ ಗ್ರಾಮಗಳು ವೆನಿಲ್ಲಾ ಕೃಷಿಯತ್ತ ಹೆಜ್ಜೆ ಇಟ್ಟಿದ್ದು, ಪರಿಸರ ಸಂರಕ್ಷಣೆ ಜೊತೆಗೆ ಕುಟುಂಬದ ಆದಾಯ ಹೆಚ್ಚಿಸುವ ಹೊಸ ಮಾದರಿಯನ್ನು ರೂಪಿಸುತ್ತಿವೆ.
ಅಸ್ಸಾಂ ಅರಣ್ಯ ಇಲಾಖೆಯ ಸಿಲ್ವಿಕಲ್ಚರಿಸ್ಟ್ ಕಚೇರಿ ಹಾಗೂ ವನ್ಯಜೀವಿ ಪ್ರದೇಶಗಳ ಅಭಿವೃದ್ಧಿ ಸಹಯೋಗದಲ್ಲಿ ಆರಂಭಿಸಿರುವ ಈ ಯೋಜನೆಯಡಿ 10 ಗ್ರಾಮಗಳಿಗೆ 500 ವೆನಿಲ್ಲಾ ಕತ್ತರಿಸಿದ ಬಳ್ಳಿಗಳನ್ನು ಉಚಿತವಾಗಿ ವಿತರಿಸಲಾಗಿದೆ.
ವೆನಿಲ್ಲಾ ಒಂದು ಬಳ್ಳಿ ಬೆಳೆ. ಅದಕ್ಕೆ ಬೆಳೆಯಲು ನೇರವಾಗಿ ದೊಡ್ಡ ಪ್ರಮಾಣದ ಜಮೀನು ಬೇಕಾಗುವುದಿಲ್ಲ. ಈಗಾಗಲೇ ಇರುವ ಮರಗಳನ್ನು ಆಸರೆಯಾಗಿ ಬಳಸಿಕೊಂಡು ಬಳ್ಳಿಯನ್ನು ಬೆಳೆಸಬಹುದು. ಅಸ್ಸಾಂನ ಈ ಯೋಜನೆಯಲ್ಲಿ ಅಡಿಕೆ ಮರ ಹಾಗೂ ವೆನಿಲ್ಲಾ ಬಳ್ಳಿ, ತೆಂಗಿನ ಮರ ಹಾಗೂ ವೆನಿಲ್ಲಾ ಬಳ್ಳಿ ಅಥವಾ ಜಟ್ರೋಫಾ ಹಾಗೂ ವೆನಿಲ್ಲಾ ಬಳ್ಳಿ ಎಂಬ ರೀತಿಯಲ್ಲಿ ಮನೆಯ ಸುತ್ತಲಿನ ತೋಟದಲ್ಲೇ ವೆನಿಲ್ಲಾ ಬೆಳೆಸುವ ಮಾದರಿಯನ್ನು ಉತ್ತೇಜಿಸಲಾಗುತ್ತಿದೆ.
ಅಸ್ಸಾಂನ ಕಮರೂಪ್ ಪಶ್ಚಿಮ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಬರುವ 10 ಗ್ರಾಮಗಳಲ್ಲಿ ಈ ಯೋಜನೆ ಆರಂಭವಾಗಿದೆ. 500 ವೆನಿಲ್ಲಾ ಕತ್ತರಿಸಿದ ಬಳ್ಳಿಗಳನ್ನು ಉಚಿತವಾಗಿ ವಿತರಿಸಲಾಗಿದ್ದು, ರೈತರಿಗೆ ಬೆಳೆ ಬೆಳೆಯುವ ವಿಧಾನ, ವೆನಿಲ್ಲಾದ ವಾಸಸ್ಥಾನ, ಕೃಷಿ ತಂತ್ರಜ್ಞಾನ ಮತ್ತು ಮಾರುಕಟ್ಟೆ ಅವಕಾಶಗಳ ಕುರಿತು ತರಬೇತಿ ನೀಡಲಾಗಿದೆ. ಇದು ದೊಡ್ಡ ವಾಣಿಜ್ಯ ತೋಟದ ಬದಲು ಮನೆಯ ಸುತ್ತಲಿನ ತೋಟದಿಂದ ಆರಂಭಿಸುವ ಮಾದರಿಯಾಗಿದೆ.
ವೆನಿಲ್ಲಾ ಬೆಳೆ ಮಾತ್ರವಲ್ಲ, ಮಾರುಕಟ್ಟೆಯೂ ಇಲ್ಲಿ ಮುಖ್ಯವಾಗಿದೆ. ಹೀಗಾಗಿ ವೆನಿಲ್ಲಾ ಉತ್ತಮ ಗುಣಮಟ್ಟದಲ್ಲಿ ಕೊಯ್ಲು ಮಾಡಿ, ಸಂಸ್ಕರಿಸಿ, ಸರಿಯಾದ ಬೆಲೆಗೆ ಮಾರಾಟ ಮಾಡುವುದು ಮತ್ತೊಂದು ದೊಡ್ಡ ಹಂತ. ಅಸ್ಸಾಂನ ಅಧಿಕಾರಿಗಳು ರೈತರಿಗೆ ವ್ಯಾಪಾರಿಗಳು ಮತ್ತು ಸಂಸ್ಕರಣಾ ಘಟಕಗಳೊಂದಿಗೆ ನೇರ ಸಂಪರ್ಕ ಕಲ್ಪಿಸುವ ಪ್ರಯತ್ನ ನಡೆಸುವುದಾಗಿ ಹೇಳಿದ್ದಾರೆ. ಜೊತೆಗೆ ವೆನಿಲ್ಲಾ ಬೆಳೆಯುವ ಪ್ರದೇಶಗಳಲ್ಲಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಸಾಂಬಾರ ಮಂಡಳಿ ಸೇರಿದಂತೆ ಸಂಸ್ಥೆಗಳ ಸಂಪರ್ಕ ಪಡೆಯುವ ಪ್ರಯತ್ನವೂ ನಡೆಯುತ್ತಿದೆ.
ಅಸ್ಸಾಂನ ಗೋಲ್ಪಾರಾ ಜಿಲ್ಲೆಯ ದುದ್ನೋಯಿಯ ನಿಯಾಪೋಲಿ ಗ್ರಾಮಕ್ಕೆ 10 ಗ್ರಾಮಗಳ 40 ಮಂದಿ ಭಾಗವಹಿಸಿದ ರೈತರನ್ನು ಕರೆದೊಯ್ದು ಪ್ರಾಯೋಗಿಕ ತರಬೇತಿ ನೀಡಲಾಗಿದೆ. ಅಲ್ಲಿ ಮನೆಯ ತೋಟದಲ್ಲಿರುವ ಅಡಿಕೆ, ಜಟ್ರೋಫಾ ಮತ್ತು ತೆಂಗಿನ ಮರಗಳನ್ನು ಬಳಸಿಕೊಂಡು ವೆನಿಲ್ಲಾ ಬೆಳೆಸುವ ವಿಧಾನವನ್ನು ತೋರಿಸಲಾಗಿದೆ. ವೆನಿಲ್ಲಾ ಬಳ್ಳಿ ಮತ್ತು ವೆನಿಲ್ಲಾ ಕೋಡು ಎರಡೂ ಆದಾಯದ ಮೂಲವಾಗಬಹುದು ಎಂಬುದನ್ನೂ ರೈತರಿಗೆ ಪರಿಚಯಿಸಲಾಗಿದೆ.
ಕರ್ನಾಟಕದ ಅಡಿಕೆ ತೋಟಗಳಿಗೂ ಇಂತದ್ದು ಅನಿವಾರ್ಯ: ಕರ್ನಾಟಕದಲ್ಲಿ ಈಗಾಗಲೇ ಅಡಿಕೆ ಬೆಳೆ ಸಾಕಷ್ಟು ವಿಸ್ತರಣೆಯಾಗಿದೆ. ದೇಶದ ಹಲವು ಕಡೆಯಲ್ಲೂ ಅಡಿಕೆ ಬೆಳೆ ವಿಸ್ತರಣೆಯಾಗುತ್ತಿದೆ. ಅಡಿಕೆ ಮಾರುಕಟ್ಟೆಯಲ್ಲೂ ಏರಿಳಿತ ಕಾಣುತ್ತಿದೆ. ಇಂತಹ ಸಂದರ್ಭ ಅಡಿಕೆಯ ಜೊತೆಗೆ ಉಪಬೆಳೆಯಾಗಿ ಇನ್ನೊಂದು ಆದಾಯ ತರುವ ಬೆಳೆಯೂ ಅಗತ್ಯ ಇದೆ. ಈಗಾಗಲೇ ಕೊಕೋ, ಕಾಫಿ, ಕಾಳುಮೆಣಸು, ಬಾಳೆ ಬೆಳೆಯಲಾಗುತ್ತಿದೆ. ಈ ಹಿಂದೆ ವೆನಿಲ್ಲಾ ಬೆಳೆಯೂ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿತ್ತು.ಇದೀಗ ಮತ್ತೆ ವೆನಿಲ್ಲಾವನ್ನು ಅಡಿಕೆ ಮರವನ್ನು ಆಸರೆಯಾಗಿ ಬಳಸಿಕೊಂಡು ಮತ್ತೆ ಬೆಳೆಯಬಹುದೇ ? ಎಂಬುದರ ಕಡೆಗೆ ಗಮನಹರಿಸಬೇಕಿದೆ. ಮಣ್ಣು, ಮಳೆ, ತೇವಾಂಶ, ನೆರಳು, ತಾಪಮಾನ, ರೋಗ–ಕೀಟಗಳ ಒತ್ತಡ, ಬಳ್ಳಿಗೆ ಬೇಕಾದ ಆಸರೆ ಮತ್ತು ಮಾರುಕಟ್ಟೆ ಎಲ್ಲವನ್ನೂ ಸ್ಥಳೀಯ ಪರಿಸ್ಥಿತಿಯಲ್ಲಿ ಪರೀಕ್ಷಿಸಬೇಕು, ನಂತರವೇ ಮಲೆನಾಡಿನಲ್ಲಿ ಈ ಬೆಳೆಗೆ ಮತ್ತೆ ಇಳಿಯಬೇಕು.
ವೆನಿಲ್ಲಾ ವಿಶ್ವದ ಅತ್ಯಂತ ದುಬಾರಿ ಮಸಾಲೆಗಳಲ್ಲಿ ಒಂದಾಗಿದೆ. ಅಸ್ಸಾಂನಲ್ಲಿ ಈಗಾಗಲೇ ಗೋಲ್ಪಾರಾ, ಬಕ್ಸಾ, ಚಿರಾಂಗ್ ಮತ್ತು ಶಿವಸಾಗರ್ ಜಿಲ್ಲೆಗಳಲ್ಲಿ ವೆನಿಲ್ಲಾ ಬೆಳೆಯುವ ಪ್ರಯತ್ನಗಳು ನಡೆದಿವೆ. ವೆನಿಲ್ಲಾದಲ್ಲಿ ಪರಾಗಸ್ಪರ್ಶ, ಕೊಯ್ಲು, ಸಂಸ್ಕರಣೆ, ಗುಣಮಟ್ಟ ಮತ್ತು ಮಾರುಕಟ್ಟೆ ಬಹಳ ಮುಖ್ಯವಾಗಿದೆ. ಬೆಲೆ ವರ್ಷದಿಂದ ವರ್ಷಕ್ಕೆ ಬದಲಾಗಬಹುದು. ಇದಕ್ಕಾಗಿ ಈ ಬೆಳೆಯ ಜೊತೆಗೆ ಎಚ್ಚರಿಕೆಯೂ ಅಗತ್ಯವಿದೆ.
Ten forest-fringe villages along the Kulsi River near Guwahati are adopting vanilla cultivation as an alternative livelihood to reduce dependence on forest resources and unregulated sand mining. The Assam Forest Department and a partner organisation distributed 500 vanilla cuttings and are promoting household-level cultivation using existing arecanut, coconut and jatropha trees as supports. Officials are also working on market linkages with traders, processors and institutions such as the Spice Board of India.
ದೇಶದ ಪ್ರಸಕ್ತ ಮುಂಗಾರು ಬೆಳೆಗಳ ಬಿತ್ತನೆ ಪ್ರದೇಶ 1,086 ಲಕ್ಷ ಹೆಕ್ಟೇರ್ ದಾಟಿದ್ದರೂ…
ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಒದಗಿಸಲು ₹3.78 ಕೋಟಿ ವೆಚ್ಚದಲ್ಲಿ 12…
ಕರಾವಳಿಯಲ್ಲಿ ಮೋಡದ ವಾತಾವರಣ ಹೆಚ್ಚಾಗಿದ್ದು, ಮಧ್ಯಾಹ್ನದ ನಂತರ ತೀರ ಮತ್ತು ಘಟ್ಟದ ಕೆಳಭಾಗಗಳಲ್ಲಿ…
“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ…
ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…
ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…