ನಿರುದ್ಯೋಗ ಎಂಬ ಬದುಕಿನ ಅನಿವಾರ್ಯತೆಯ ಸಂದರ್ಭದ ಬಗ್ಗೆ ಏನು ಮಾಡಬೇಕು ? | ಮನಸಿನ ಕನ್ನಡಿಯಲ್ಲಿ ವಿವೇಕಾನಂದ ಎಚ್‌ ಕೆ ಬರೆಯುತ್ತಾರೆ |

November 6, 2021
10:59 AM

ನನ್ನ ಪ್ರೀತಿಯ ಯುವ ಸಮುದಾಯವೇ…… , ನಿರುದ್ಯೋಗ ಎಂಬ ಬದುಕಿನ ಅನಿವಾರ್ಯತೆಯ ಸಂದರ್ಭದಲ್ಲಿ………. , ಒಂದು ವೇಳೆ ನೀವು ಉದ್ಯೋಗಿಯಾಗಿದ್ದು ಕಾರಣಾಂತರಗಳಿಂದ ನಿರುದ್ಯೋಗಗಳಾದರೆ ಅಥವಾ ನಿರುದ್ಯೋಗಿಯಾಗಿದ್ದರೆ…….., ಅದನ್ನು ಎದುರಿಸುವುದು ಹೇಗೆ… ?

Advertisement

ಅದು ಕೇವಲ ನಿರುದ್ಯೋಗವಾಗಿರದೆ ನಿಮ್ಮ ಬದುಕಿನ ಅಂತಃಸತ್ವವನ್ನೇ ಅಡಗಿಸಿಬಿಡಬಹುದು. ಶ್ರೀಮಂತರು ಮತ್ತು ಕಡು ಬಡವರಿಗಿಂತ ಈ ವಿಷಯದಲ್ಲಿ ಹೆಚ್ಚು ಮಧ್ಯಮ ವರ್ಗದ ಜನರು ತೀರಾ ಒತ್ತಡಕ್ಕೆ ಸಿಲುಕುವುದು ನಿಶ್ಚಿತ…….

ಹೌದು, ದಿಡೀರನೇ ನಿಮ್ಮನ್ನು ಕೆಲಸದಿಂದ ತೆಗೆಯಬಹುದು. ನಿಮ್ಮ ಮನೆಯ ಬಾಡಿಗೆ, ವಾಹನ ಸಾಲದ ಕಂತುಗಳ, ಕೈಸಾಲದ ಬಡ್ಡಿ, ಮಕ್ಕಳ ಶಾಲಾ ಫೀಜು, ಪೋಷಕರ ಆರೋಗ್ಯ ಸಮಸ್ಯೆ, ಅಕ್ಕ ತಂಗಿಯರ ಮದುವೆ, ಮದುವೆಯಾಗಿರದಿದ್ದರೆ ಸ್ವತಃ ನಿಮ್ಮ ಮದುವೆ ಮುಂತಾದ ಅನೇಕ ಮತ್ತು ಕೆಲವು ಊಹಿಸಲಾಗದ ಸಮಸ್ಯೆಗಳು ನಿಮ್ಮ ಮುಂದೆ ನಿಲ್ಲುತ್ತವೆ.

ಏನು ಮಾಡುವುದು ಮತ್ತು ಹೇಗೆ ಎದುರಿಸುವುದು ಈ ಪರಿಸ್ಥಿತಿಯನ್ನು..

ಮೊದಲಿಗೆ ಅರ್ಥಮಾಡಿಕೊಳ್ಳಿ, ಇದು ನಿಮ್ಮೊಬ್ಬರ ವೈಯಕ್ತಿಕ ಸಮಸ್ಯೆಯಲ್ಲ. ಇಡೀ ವ್ಯವಸ್ಥೆಯ ಸಮಸ್ಯೆ ಮತ್ತು ಒಂದು ರೀತಿಯ ಪ್ರಾಕೃತಿಕ ವಿಕೋಪ ಎಂದು ಮನಸ್ಸಿನಲ್ಲಿ ಒಪ್ಪಿಕೊಳ್ಳಿ.

ಮುಖ್ಯವಾಗಿ ಹಣದ ವಿಷಯಗಳಲ್ಲಿ ಮನೆಯವರಿಂದ, ಸಂಬಂಧಿಕರಿಂದ, ಹೊರಗಿನ ಸಾಲಗಾರರಿಂದ ಸಾಕಷ್ಟು ಅವಮಾನವಾಗುವ ಸಾಧ್ಯತೆ ‌ಇದ್ದೇ ಇದೆ. ಅದನ್ನು ಸಹಿಸಿಕೊಳ್ಳಲು ಮನಸ್ಸನ್ನು ಗಟ್ಟಿ ಮಾಡಿಕೊಳ್ಳಿ.

ಸಂಪಾದನೆ ಮಾಡುವಾಗ ಸಂಬಂಧಗಳಲ್ಲಿ ಇದ್ದ ಆತ್ಮೀಯತೆ, ಪ್ರೀತಿ, ಗೌರವ ನಿಧಾನವಾಗಿ ಕಡಿಮೆಯಾಗುತ್ತದೆ. ನಿಮ್ಮ ವಿರುದ್ಧ ಸಿಡುಕು ಪ್ರಾರಂಭವಾಗುತ್ತದೆ. ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.

ಇಲ್ಲಿಯವರೆಗೆ ಯಾವುದನ್ನು ನಿಮ್ಮ ‌ಸಾಮರ್ಥ್ಯ ಎಂದು ಹೊಗಳಲಾಗುತ್ತಿತ್ತೋ , ಅದು ನಿರುದ್ಯೋಗದ ಸಮಯದಲ್ಲಿ ವೀಕ್ ನೆಸ್ ಅಥವಾ ಸೋಮಾರಿತನ ಎಂದು ಹೇಳುತ್ತಾರೆ. ಅದನ್ನು ಸ್ವೀಕರಿಸಿ.

ಊಟ ತಿಂಡಿ ನಿದ್ದೆಗಳಲ್ಲಿ ಒಂದಷ್ಟು ವ್ಯತ್ಯಾಸವಾಗುತ್ತದೆ. ಅದನ್ನು ನಿರ್ಲಕ್ಷಿಸಿ.

ಬದುಕಿನ ಬಗ್ಗೆ ಆಗಾಗ ಬೇಸರ , ಜಿಗುಪ್ಸೆ ಉಂಟಾಗುತ್ತದೆ. ಆಗ ಯಾವುದೇ ಕೆಟ್ಟ ಆಲೋಚನೆ ಸುಳಿಯದಂತೆ ನೋಡಿಕೊಳ್ಳಿ. ಒಂದು ವೇಳೆ ಸುಳಿದರೂ ಇದೊಂದು ತಾತ್ಕಾಲಿಕ ಸಮಸ್ಯೆ ,ಒಳ್ಳೆಯ ದಿನಗಳು ಮುಂದಿವೆ ಎಂದು ನಿಮಗೆ ನೀವೆ ಸಮಾಧಾನ ಮಾಡಿಕೊಳ್ಳಿ.

ಎಷ್ಟೇ ಅವಮಾನವಾದರೂ ಬದುಕುವ ಛಲ ಬಿಡದೆ ಹೋರಾಡುವ ಧೈರ್ಯ ಮೈಗೂಡಿಸಿಕೊಳ್ಳಿ. ಮಾನಕ್ಕಿಂತ ಪ್ರಾಣ ಮುಖ್ಯ ಎಂದು ಒಳ ಮನಸ್ಸಿಗೆ ಹೇಳಿಕೊಳ್ಳಿ.

ನಿಮಗೆ ಬರಬೇಕಾದ ಬೇರೆ ಮೂಲದ ಹಣ ಸಹ ಬರದೇ ಹೋಗಬಹುದು ಅಥವಾ ನಿಧಾನವಾಗಬಹುದು. ಕಾರಣ ಅವರೂ ಆರ್ಥಿಕ ಸಮಸ್ಯೆ ಎದುರಿಸುತ್ತಿರುತ್ತಾರೆ. ಅದನ್ನು ತಾಳ್ಮೆಯಿಂದ ನಿಭಾಯಿಸಿ.

ನೀವು ಈಗ ಮಾಡುತ್ತಿರುವ ಉದ್ಯೋಗದಲ್ಲಿಯೇ ಅದರ ಮಾಲೀಕರು ಕಡಿಮೆ ಸಂಬಳದ ಆಫರ್ ಕೊಡಬಹುದು.
ಅದನ್ನು ದಯವಿಟ್ಟು ನಿರಾಕರಿಸಬೇಡಿ. ಇದು ಗಂಭೀರವಾದ ಸಮಯ.

ನಿಮಗೆ ಬೇರೆ ಕಡೆ ಉದ್ಯೋಗ ದೊರಕಿದರು ಅದು‌ ಮೊದಲಿನ ದರ್ಜೆಗಿಂತ ಕಡಿಮೆ ದರ್ಜೆಯದಾಗಿರಬಹುದು. ಅದನ್ನು ಮಾಡಲು ಮನಸ್ಸು ಒಪ್ಪದಿದ್ದರೂ ಅನಿವಾರ್ಯವಾಗಿ ಒಪ್ಪಿಕೊಳ್ಳಿ.

ಕೆಲಸವೇ ಸಿಗದೆ ಸಾಕಷ್ಟು ತಿಂಗಳು ಅದಕ್ಕಾಗಿ ಅಲೆದಾಡಬೇಕಾಗಬಹುದು. ಆಗಲೂ ನಿರಾಶರಾಗದೆ ಮರಳಿ ಪ್ರಯತ್ನವ ಮಾಡುತ್ತಲೇ ಇರಿ.

ಮಾನಸಿಕ ಒತ್ತಡದ ಸಂದರ್ಭದಲ್ಲಿ ಬಹಳಷ್ಟು ಬಾರಿ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಅದನ್ನು ‌ಸಹಜವೆಂಬಂತೆ ಸ್ವೀಕರಿಸಿ.

ತೀರಾ ಆತ್ಮೀಯ ಸಂಬಂಧಗಳಿಂದ ನಿಮ್ಮ ಸ್ವಾಭಿಮಾನಕ್ಕೆ ಬಲವಾದ ಪೆಟ್ಟು ಬೀಳಬಹುದು. ತುಂಬಾ ನೋವು ಮಾಡಿಕೊಳ್ಳಬೇಡಿ. ಇದು ಬದುಕಿನ ಪಾಠ ಎಂದು ಸಕಾರಾತ್ಮಕವಾಗಿ ಸ್ವೀಕರಿಸಿ.

ದುಡಿಯಲೇ ಬೇಕು ಎಂಬ ಒತ್ತಡದಲ್ಲಿ ನಿಮಗೆ ಅನುಭವವಿರದ ಸಣ್ಣ ಪುಟ್ಟ ವ್ಯವಹಾರಗಳಲ್ಲಿ ಹಣತೊಡಗಿಸಬೇಡಿ.
ಇರುವ ಹಣ ಸಹ ಕಳೆದುಕೊಳ್ಳಬಹುದು.

ಒಂದು ವೇಳೆ ಯಾವುದೇ ಹೊಸ ಸ್ವಂತ ವ್ಯವಹಾರ ಮಾಡಬೇಕಾದರೂ ತುಂಬಾ ಯೋಚಿಸಿ ಪ್ರಾರಂಭದ ಉತ್ಸಾಹ ನಿರಂತರವಾಗಿ ಇರುವಂತೆ ನೋಡಿಕೊಂಡು ತಕ್ಷಣದ ಲಾಭ ನಷ್ಟಗಳನ್ನು ಸಮಚಿತ್ತದಿಂದ ಸ್ವೀಕರಿಸಿ.
ಗಾಬರಿಯಾಗಬೇಡಿ.

ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವುದರಲ್ಲಿ ಒಳ್ಳೆಯದು ಮತ್ತು ಮೋಸ ಎರಡೂ ಇರುತ್ತದೆ. ಅದನ್ನು ನಿರೀಕ್ಷಿಸಿ ಮುಂದುವರಿಯಿರಿ.

ಮುಂದಿನ ದಿನಗಳಲ್ಲಿ ಕೆಲವರು ಕೆಳಮಟ್ಟದಿಂದ ಮೇಲ್ಮಟ್ಟಕ್ಕೂ ಹಲವರು ಮೇಲ್ಮಟ್ಟದಿಂದ ಕೆಳಮಟ್ಟಕ್ಕೂ ಜಾರಬಹುದು. ಅದರಲ್ಲಿ ನೀವು ಒಬ್ಬರಾಗಿರಬಹುದು. ದಯವಿಟ್ಟು ಇತರರೊಂದಿಗೆ ಹೋಲಿಕೆ ಮಾಡಿಕೊಂಡು ಕೊರಗಬೇಡಿ.

ಇದು ಈ ಕ್ಷಣದಲ್ಲಿ ನೆನಪಾದ ಕೆಲವು ಸಲಹೆಗಳು. ಇದನ್ನು ಮೀರಿ ಸಹ ನಿಮ್ಮ ಸ್ವಂತ ಅನುಭವದಲ್ಲಿ ಹಲವಾರು ಪಾಠಗಳು ಇರುತ್ತವೆ. ಒಬ್ಬೊಬ್ಬರ ಪರಿಸ್ಥಿತಿ ಒಂದೊಂದು ತರಹ ಇರುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯಿರಿ. ಆದರೆ ಯಾವುದೇ ಕಾರಣಕ್ಕೂ ಬದುಕನ್ನು ಕೊನೆಗಾಣಿಸಿಕೊಳ್ಳುವ ಯೋಚನೆ ಮಾಡಬೇಡಿ. ಮುಂದಿನ ದಿನಗಳಲ್ಲಿ ಕಷ್ಟಗಳು ಕರಗಿ ಸುಖದ ದಿನಗಳು ಖಂಡಿತ ಬರುತ್ತದೆ. ಅದನ್ನು ಎಂಜಾಯ್ ಮಾಡಲು ಬದುಕುಳಿಯೋಣ…..

# ವಿವೇಕಾನಂದ ಎಚ್‌ ಕೆ

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಹೊಸರುಚಿ | ಗುಜ್ಜೆ ಮಂಚೂರಿ – ಕರಾವಳಿಯ ಸಾಂಪ್ರದಾಯಿಕ ರುಚಿಗೆ ಚೈನೀಸ್ ಟ್ವಿಸ್ಟ್
April 20, 2026
9:40 PM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಮೌಲ್ಯಗಳು ಮತ್ತು ನಗರ ಜೀವನ – ಸಮತೋಲನವೇ ನಿಜವಾದ ಮಾರ್ಗ!
April 18, 2026
7:28 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ – ಎಳೆಯ ಹಲಸಿನ ಕಾಯಿ ಬಾಲ್ : ಕರಕರಾ, ರುಚಿಕರ ಮತ್ತು ಆರೋಗ್ಯಕರ ಸ್ನ್ಯಾಕ್
April 11, 2026
6:16 PM
by: ದಿವ್ಯ ಮಹೇಶ್
ಕುಟುಂಬದಲ್ಲೇ ಆರೋಗ್ಯದ ಬೀಜ – ಕುಟುಂಬದಲ್ಲಿ ಆರೋಗ್ಯಕರ ಅಭ್ಯಾಸಗಳ ಬೆಳವಣಿಗೆ
April 10, 2026
6:11 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror