ಸಾಧನೆ ಎಂದರೇನು ? | ಮಾನಸಿಕವಾಗಿ ನಾವು ಏರುವ ಎತ್ತರಕ್ಕೆ ಯಾವುದೇ ಮಿತಿ ಇಲ್ಲ…| ವಿವೇಕಾನಂದ ಎಚ್‌ ಕೆ ಬರೆಯುತ್ತಾರೆ…..|

November 10, 2021
10:53 AM

ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ……… ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ………… ನಾವು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಏರಿದಾಗ ನಮ್ಮ ಸುತ್ತಮುತ್ತಲಿನ ಜನ ನಮಗಿಂತ ಕೆಳಗಿರುವಂತೆ ಭಾಸವಾಗುತ್ತದೆ………

Advertisement

ನಮ್ಮನ್ನು ಪ್ರೀತಿಸುವ, ನಮ್ಮ ಯಶಸ್ಸಿಗೆ ಸಂತೋಷಿಸುವ, ನಮಗೆ ಮಾರ್ಗದರ್ಶನ ಮಾಡುವ ಜನರ ನಡುವೆ ನಾವು ಎಲ್ಲೇ ಇದ್ದರೂ ನೆಮ್ಮದಿಯಿಂದ ಇರುತ್ತೇವೆ……….ಆದರೆ,  ನಾನಾ ಕಾರಣಗಳಿಂದ ನಮ್ಮನ್ನು ದ್ವೇಷಿಸುವ, ಅಸೂಯೆ ಪಡುವ, ನಮ್ಮ ಕಾಲೆಳೆಯುವ, ನಮಗೆ ತೊಂದರೆ ಕೊಡುವ ಜನರ ನಡುವೆ ನಾವು ವಾಸಿಸುವುದು ಕಷ್ಟವಾದಾಗ ನಾವು ಸಾಧನೆಯ ಬೆಟ್ಟವನ್ನು ‌ಏರಲು ಪ್ರಯತ್ನಿಸಬೇಕು……….. ಇಲ್ಲದಿದ್ದರೆ ಈ ಜನರ ನಡುವೆ ನಮ್ಮ ಬದುಕು ಅಸಹನೆಯಿಂದಲೇ ಮುಗಿದು ಹೋಗುತ್ತದೆ…….

ಹಾಗಾದರೆ ಸಾಧನೆ ಎಂದರೇನು ?

ನಮ್ಮ ‌ಸಾಮಾನ್ಯ ಜನರ ಭಾವನೆಯಲ್ಲಿ ಹೆಚ್ಚು ಹೆಚ್ಚು ಹಣ ಮಾಡುವುದು, ಉನ್ನತ ಅಧಿಕಾರಕ್ಕೆ ಏರುವುದು, ಅಪಾರ ‌ಆಸ್ತಿ ಮಾಡುವುದು, ಪ್ರಶಸ್ತಿಗಳನ್ನು ಪಡೆಯುವುದು, ಜನಪ್ರಿಯತೆ ಗಳಿಸುವುದು, ಒಟ್ಟಿನಲ್ಲಿ ನಮ್ಮ ಸಮಕಾಲೀನ ಇತರರಿಗಿಂತ ನೋಡುಗರ ದೃಷ್ಟಿಯಲ್ಲಿ ಹೆಚ್ಚು ಹೆಸರು ಮಾಡುವುದು ಎಂದಾಗಿದೆ.‌……

ಈ ರೀತಿಯ ಸಾಧನೆ ಮಾಡುವ ಅವಕಾಶವಿದ್ದು ಒಂದು ವೇಳೆ ನಾವು ಅದರಲ್ಲಿ ಯಶಸ್ವಿಯಾದರೆ, ನಾವು ಯಾವುದೇ ಸ್ಥಳದಲ್ಲಿ ಇದ್ದರೂ ಗೌರವ ಘನತೆಗೇನು ಕುಂದು ಬರುವುದಿಲ್ಲ……..

ಅನೇಕ ಕಾರಣಗಳಿಗಾಗಿ ನಾವು ಈ ರೀತಿಯ ಸ್ಥಾನ ಮಾನ ಪಡೆಯಲು ಸಾಧ್ಯವಾಗದಿದ್ದಾಗ, ನಮ್ಮ ನಡುವಿನ ಇತರರು ಈ ವ್ಯಾವಹಾರಿಕ ಜಗತ್ತಿನಲ್ಲಿ ನಮಗಿಂತ ಮುಂದೆ ಹೋಗಿ ನಮ್ಮನ್ನು ಕೀಳಾಗಿ ಕಂಡಾಗ ಅಥವಾ ನಮ್ಮ ಮನಸ್ಸು ಹಾಗೆ ಭಾವಿಸಿದಾಗ ನಾವು ಎತ್ತರದ ಪ್ರದೇಶಕ್ಕೆ ಹೋಗಲು ಪ್ರಯತ್ನಿಸಬೇಕು……

ಅದು ಹೇಗೆ ಸಾಧ್ಯ.?, ಈ ಯಾವುದೇ ಅನುಕೂಲಗಳು ನಮಗೆ ಇಲ್ಲದಿರುವಾಗ ಸಾಧನೆಯ ಮೆಟ್ಟಿಲು ಹತ್ತುವುದು ಹೇಗೆ ???????

ಖಂಡಿತ ‌ಸಾಧ್ಯವಿದೆ…..

ನಮ್ಮ ಇಡೀ ವ್ಯಕ್ತಿತ್ವವನ್ನು ಪುನರ್ ರೂಪಿಸಿಕೊಳ್ಳಬೇಕು ಮತ್ತು ಉನ್ನತೀಕರಿಸಿಕೊಳ್ಳಬೇಕು. ಹೇಗೆಂದರೆ………..

ಹೆಚ್ಚು ನಿರೀಕ್ಷೆಗಳನ್ನೇ ಇಟ್ಟುಕೊಳ್ಳದೆ ಸ್ಥಿತ ಪ್ರಜ್ಞತೆಯನ್ನು ಬೆಳೆಸಿಕೊಳ್ಳಬೇಕು…….

ಯಾವುದೇ ‌ಸಂದರ್ಭದಲ್ಲಿಯೂ ಯಾರ ಮೇಲೆಯೂ ಅವಲಂಬಿತವಾಗುವ ಅಥವಾ ಯಾವುದನ್ನಾದರೂ ಬೇಡುವ ಪರಿಸ್ಥಿತಿಯನ್ನು ತಿರಸ್ಕರಿಸಬೇಕು.

ಈ ಪರಿಸ್ಥಿತಿಯಲ್ಲಿಯೂ ಅನಿರೀಕ್ಷಿತವಾಗಿ ಕೆಲವು ಆಕರ್ಷಣೆಗಳು ಮತ್ತು ಅನುಕೂಲಕರ ಲಾಭಗಳು ನಮಗೆ ಒಲಿಯಬಹುದು. ಅವುಗಳನ್ನು ನಮ್ಮ ಘನತೆಗೆ ತಕ್ಕುದಾದ ಮತ್ತು ಭವಿಷ್ಯದ ನಮ್ಮ ಸ್ವಾಭಿಮಾನದ ಬದುಕಿಗೆ ತೊಂದರೆಯಾಗದೆ ಇದ್ದರೆ ಮಾತ್ರ ಸ್ವೀಕರಿಸಬೇಕು. ಇಲ್ಲದಿದ್ದರೆ ‌ನಮ್ಮ ಮನೋಬಲ ಉಪಯೋಗಿಸಿ ತಿರಸ್ಕರಿಸಬೇಕು.

ಈ ಹಂತದಲ್ಲಿ ಸಾಂಪ್ರದಾಯಿಕ ಶೈಲಿಯ ಜನರ ನಡುವೆ ಇರುವುದಕ್ಕಿಂತ ಏಕಾಂತದ ವಾತಾವರಣದಲ್ಲಿ ನಮ್ಮ ಸಮಯ ಕಳೆಯುವಂತೆ ನಮ್ಮ ಮನಸ್ಸಿನ ಅರಮನೆಗೆ ನಾವೇ ರಾಜರಾಗಬೇಕು…..

ಸಮಾಜದ ಸುತ್ತ ನಾವು ಸುತ್ತುವುದಕ್ಕಿಂತ ನಮ್ಮ ಸುತ್ತ ಸಮಾಜ ಸುತ್ತುವ ಸ್ವಯಂ ಅಹಂ ರೂಪಿಸಿಕೊಳ್ಳಬೇಕು. ನಮಗೆ ಆಸಕ್ತಿದಾಯಕ ಕ್ಷೇತ್ರವನ್ನು ಆರಿಸಿಕೊಂಡು ಅದರಲ್ಲಿ ತಪಸ್ಸಿನಂತೆ ನಿರಂತರವಾಗಿ ತೊಡಗಿಸಿಕೊಳ್ಳಬೇಕು. ಅದರಲ್ಲಿ ಸಾಧನೆ ಮಾಡುವ ಯಾವ ಅವಕಾಶವನ್ನೂ ಕಳೆದುಕೊಳ್ಳಬಾರದು.

ಎಲ್ಲಕ್ಕಿಂತ ಮುಖ್ಯವಾಗಿ ಸಾವಿನ ಭಯವನ್ನು ಕಡಿಮೆ ಮಾಡಿಕೊಂಡು ಅದನ್ನು ಸ್ವೀಕರಿಸಲು ಮಾನಸಿಕವಾಗಿ ಸಿದ್ದರಾಗಬೇಕು. ಸಾವಿನ ನಂತರದ ಅಂಶಗಳ ಬಗ್ಗೆ ಯೋಚಿಸಲೇಬಾರದು.

ಇದು ಎಲ್ಲವನ್ನೂ ತ್ಯಜಿಸಿ ಸನ್ಯಾಸಿಯಾಗುವ ಸ್ಥಿತಿಯಲ್ಲ. ಸಾಧನೆಗಾಗಿ ರೂಪಿಸಿಕೊಳ್ಳುವ ಸರಳ ಮಾನಸಿಕ ಜೀವನಶೈಲಿ……

ಆಗ ನಮ್ಮನ್ನು ಹಿಡಿಯಲು ಅಥವಾ ನಿಯಂತ್ರಿಸಲು ಯಾರಿಗೂ ಸಾಧ್ಯವಾಗುವುದಿಲ್ಲ.

ಏನೂ ಇಲ್ಲದ ಸಂದರ್ಭದಲ್ಲಿಯೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಕನಿಷ್ಠ ಮಟ್ಟದ ಸರಳ ಜೀವನಶೈಲಿ ನಮ್ಮದಾದರೆ ನಮ್ಮ ವ್ಯಕ್ತಿತ್ವ ತಾನೇ ತಾನಾಗಿ ಮೇಲಕ್ಕೇರುತ್ತದೆ. ನಮ್ಮ ಬಡತನದ, ಸೋಲಿನ, ಅಸಹಾಯಕತೆಯ ಜೀವನ ನೋಡಿ ಅಸೂಯೆ ಪಡುವ ವ್ಯಂಗ್ಯ ಮಾಡುವ ಜನ, ತಮ್ಮ ವ್ಯಾವಹಾರಿಕ ಮತ್ತು ಸಂಭಂದಗಳ ಏರಿಳಿತಗಳಿಂದ ಬಸವಳಿದಾಗ ನಮ್ಮ ನೆಮ್ಮದಿಯ ಜೀವನ ಅವರಿಗೆ ಸೋಜಿಗದಂತೆ ಕಾಣುತ್ತದೆ. ಅವರುಗಳು ನಮ್ಮ ವ್ಯಕ್ತಿತ್ವದ ಮುಂದೆ ಸಣ್ಣವರಾಗಿ ಕಾಣುತ್ತಾರೆ. ಅದೇ ನಮ್ಮ ಬಹುದೊಡ್ಡ ಆತ್ಮವಿಶ್ವಾಸ.

ಮಾನಸಿಕವಾಗಿ ನಾವು ಏರುವ ಎತ್ತರಕ್ಕೆ ಯಾವುದೇ ಮಿತಿಯೂ ಇಲ್ಲ……….

ಅದೇ KILLING INSTINCT……

ಗೆಲ್ಲುವ ಛಲ, ಪಡೆದೇ ತೀರುವೆನೆಂಬ ಹಠ, ಯಶಸ್ಸಿಗಾಗಿ ತಹತಹಿಸುವ ಕಿಚ್ಚು, ಸೋಲನ್ನು ಒಪ್ಪಿಕೊಳ್ಳದ ಮನಸ್ಥಿತಿ, ಏನಾದರೂ – ಹೇಗಾದರೂ ಮಾಡಿ ಅಂದು ಕೊಂಡಿದ್ದನ್ನು ಸಾಧಿಸಲೇ ಬೇಕೆಂಬ ಮನೋಭಾವ, ದಣಿವರಿಯದ ಹೋರಾಟ ಮುಂತಾದ ಎಲ್ಲಾ ಅರ್ಥಗಳನ್ನು ಆ ಇಂಗ್ಲೀಷ್ ಪದ ಒಳಗೊಂಡಿದೆ.

ಹೆಚ್ಚಾಗಿ ಕ್ರೀಡೆಯಲ್ಲಿ ಈ ಪದ ಬಳಸಲ್ಪಟ್ಟರೂ ಬದುಕಿನ ಎಲ್ಲಾ ಕ್ಷೇತ್ರಗಳಿಗೂ ಇದು ಅನ್ವಯಿಸುತ್ತದೆ. ಸಮಕಾಲೀನ ರಾಜಕೀಯ ಪರಿಸ್ಥಿತಿಗಳಿಗೆ ಇದನ್ನು ಸಮೀಕರಿಸಿ ಸಾಮಾನ್ಯರಾದ ನಾವು ಒಂದಷ್ಟು ಸ್ಪೂರ್ತಿದಾಯಕ ಅಂಶಗಳನ್ನು ಗುರುತಿಸಬಹುದು.

ದೇವೇಗೌಡ, ನರೇಂದ್ರ ಮೋದಿ, ಸಿದ್ದರಾಮಯ್ಯ, ಯಡಿಯೂರಪ್ಪ, ಮಮತಾ ಬ್ಯಾನರ್ಜಿ, ಮಾಯಾವತಿ, ಅಮಿತ್ ಷಾ, ದಿವಂಗತ ಇಂದಿರಾ ಗಾಂಧಿ – ಜಯಲಲಿತಾ, ಜಗನ್ ಮೋಹನ್ ರೆಡ್ಡಿ ಸೇರಿದಂತೆ ಕೆಲವರ ಪಟ್ಟಿ ಇದೆ.

ಇವರ ಸಾಮಾನ್ಯ ಅಂಶವೆಂದರೆ ಸೋಲನ್ನು ಒಪ್ಪಿಕೊಳ್ಳದ, ಗೆಲುವಿಗಾಗಿ ಹಲವು ವರ್ಷಗಳ ಕಾಯುವಿಕೆ ಮತ್ತು ನಿರಂತರ ಶ್ರಮದಾಯಕ ಹೋರಾಟವನ್ನು ಅವರಲ್ಲಿ ನೇರವಾಗಿ ಕಾಣಬಹುದು. ಎಂತಹ ಸೋಲು ಕೂಡ ಅವರನ್ನು ಕುಗ್ಗಿಸುವುದಿಲ್ಲ. ಸೋತ ಕ್ಷಣದಿಂದ ಗೆಲುವಿಗಾಗಿ ಹಪಹಪಿಸತೊಡಗುತ್ತಾರೆ. ಮಾನ ಅವಮಾನ ಅವರಿಗೆ ಲೆಕ್ಕವೇ ಇಲ್ಲ. ಭರವಸೆಗಳ ಮೇಲೆ ಭರವಸೆಗಳನ್ನು ಕೊಡುತ್ತಾ ಅವರ ಹಿಂಬಾಲಕರನ್ನು ಪ್ರೋತ್ಸಾಹಿಸುತ್ತಿರುತ್ತಾರೆ.

ಎಂತಹ ಹೀನಾಯ ಸೋಲೇ ಆಗಲಿ, ಕೊಲೆ ಅತ್ಯಾಚಾರ ಭ್ರಷ್ಟಾಚಾರದ ನಿಕೃಷ್ಟ ಆರೋಪ ಶಿಕ್ಷೆಗಳೇ ಆಗಲಿ, ಜೈಲುವಾಸವೇ ಆಗಿರಲಿ, ಅವರ ಮೇಲಿನ ಹಲ್ಲೆಗಳನ್ನು ಸಹ ಅವರು ನಿರ್ಲಕ್ಷಿಸಿ ಮತ್ತೆ ಮತ್ತೆ ಜನರ ಮಧ್ಯೆ ಬರುತ್ತಾರೆ. ಅದೇ ಉತ್ಸಾಹದಿಂದ ಭಾಷಣ ಮಾಡುತ್ತಾರೆ.

ಅವರುಗಳು ಮಾಡುವುದು ಸರಿ ಎಂದು ನಾನು ಖಂಡಿತ ಹೇಳುತ್ತಿಲ್ಲ. ಅವರ ವ್ಯಕ್ತಿತ್ವವನ್ನು ಮೆಚ್ಚುತ್ತಿಲ್ಲ. ಆದರೆ ಅವರಲ್ಲಿರುವ ಜೀವನೋತ್ಸಾಹ ಮಾತ್ರ ‌ಖಂಡಿತ ಪ್ರೇರಣಾದಾಯಕ.

ಸಾಮಾನ್ಯ ಜನರನ್ನು ಗಮನಿಸಿ. ಕೇವಲ ಪ್ರೀತಿಗಾಗಿ, ಕೌಟುಂಬಿಕ ಕಲಹಗಳಿಗಾಗಿ, ಸಾಲಕ್ಕಾಗಿ, ಸಣ್ಣ ಪುಟ್ಟ ಅವಮಾನಗಳಿಗಾಗಿ ಜನ ಜೀವನವೇ ಮುಗಿದು ಹೋದಂತೆ ಕುಸಿದು ಬೀಳುತ್ತಾರೆ ಮತ್ತು ಕೆಲವರು ಆತ್ಮಹತ್ಯೆಗೆ ಶರಣಾಗುತ್ತಾರೆ.

ಈ ವ್ಯತ್ಯಾಸ ಏಕೆ. ಎಲ್ಲರೂ ಮನುಷ್ಯರೇ ಅಲ್ಲವೇ. ಈ‌ ಪ್ರಕೃತಿ ಈ ಸಮಾಜ ಈ ಸರ್ಕಾರ ನ್ಯಾಯ ಅನ್ಯಾಯ ನೀತಿ ಅನೀತಿ ಮಾನ ಅವಮಾನ ಕಾನೂನು ಎಲ್ಲವೂ ಎಲ್ಲರಿಗೂ ಒಂದೇ ಅಲ್ಲವೇ.

ಸೋಲು ಸಂಕಷ್ಟಗಳನ್ನು ಎದುರಿಸುವುದು ಅವರಿಗೆ ಸಾಧ್ಯವಾಗುವುದಾದರೆ ನಮಗೆ ಏಕೆ ಆಗುವುದಿಲ್ಲ. ಇಲ್ಲಿಯೇ ಭಾರತದ ಸಾಮಾಜಿಕ ಮತ್ತು ಮಾನಸಿಕ ಅಸಮತೋಲನದ ತಾರತಮ್ಯ ಅಡಗಿರುವುದು.

ಭಂಡ ವ್ಯಕ್ತಿಗಳು, ಭಾವನೆಗಳನ್ನು ನಿಯಂತ್ರಿಸುವವರು, ಅಧಿಕಾರ ಹಣದ ಮೋಹಕ್ಕೆ ಒಳಗಾದವರು, ಜನರ ನಾಡಿ ಮಿಡಿತ ಅರ್ಥಮಾಡಿಕೊಂಡವರು, ಯಶಸ್ಸು ಮಾತ್ರವೇ ನಿಜವಾದ ಮಾನ ಮರ್ಯಾದೆ ಎಂದು ಭಾವಿಸಿರುವವರು ಜೀವನವನ್ನು ಹೆಚ್ಚು ಧೈರ್ಯದಿಂದ ಎದುರಿಸುತ್ತಾರೆ.

ಅದಕ್ಕೆ ವಿರುದ್ಧವಾಗಿ ಸೂಕ್ಷ್ಮ ಮನಸ್ಸಿನವರು, ಭಾವನಾ ಜೀವಿಗಳು, ಸಮಾಜದ ಮೌಲ್ಯಗಳನ್ನು ಗೌರವಿಸುವವರು ಮತ್ತು ಅದಕ್ಕೆ ಭಯಪಡುವವರು ಬದುಕು ಎದುರಿಸಲು ತುಂಬಾ ಶ್ರಮ ಪಡುತ್ತಾರೆ ಹಾಗು ಸದಾ ಕಾಲ ಅತೃಪ್ತರಾಗಿಯೇ ಇರುತ್ತಾರೆ. ವಿಫಲತೆಯ ಭಯದಿಂದ ನರಳುತ್ತಾರೆ.

ಜೊತೆಗೆ ಈ ರಾಜಕಾರಣಿಗಳಲ್ಲಿ ಬಹುತೇಕರು 65/75 ವಯಸ್ಸಿನ ನಡುವಿನವರು ಹಾಗು ಅದಕ್ಕಿಂತ ಹಿರಿಯರು. ಆದರೂ ಅವರ ಉತ್ಸಾಹ 25 ರ ಯುವಕರನ್ನು ನಾಚುವಂತಿರುತ್ತದೆ. ಚುನಾವಣಾ ಸಮಯದಲ್ಲಿ ಅವರ ಓಡಾಟ ಹಾರಾಟ ಯುದ್ಧದ ಸೈನಿಕರ ‌ದೈಹಿಕ ಶಕ್ತಿಯನ್ನು ನೆನಪಿಸಿತ್ತದೆ. ಆದರೆ ‌ಸಾಮಾನ್ಯ ಜನ 45/55 ಸಮೀಪಿಸುತ್ತಿದ್ದಂತೆ ಜೀವನವೇ ಮುಗಿದು ಹೋದಂತೆ ಭಾವಿಸುತ್ತಾರೆ. ತಮ್ಮ ಚಟುವಟಿಕೆ ನಿಯಂತ್ರಿಸಿಕೊಳ್ಳುತ್ತಾರೆ.

ಇರುವುದು ಒಂದೇ ಜೀವನ. ನಾವು ಯಾವುದೇ ಕ್ಷೇತ್ರದಲ್ಲಿ ಇರಲಿ ಅಥವಾ ‌ಸಾಮಾನ್ಯ ಸರಳ ಜೀವನವೇ ಸಾಗಿಸುತ್ತಿರಲಿ ಒಟ್ಟಿನಲ್ಲಿ ಬದುಕಿನ ಕೊನೆಯವರೆಗೂ ಜೀವನೋತ್ಸಾಹ ಉಳಿಸಿಕೊಳ್ಳೋಣ. ಎಂತಹ ಸೋಲು ಅಥವಾ ಕೆಟ್ಟ ಪರಿಸ್ಥಿತಿಯೇ ಬರಲಿ ಮತ್ತೆ ಮತ್ತೆ ಗೆಲುವಿನ ಭರವಸೆಯೊಂದಿಗೆ ಮುನ್ನಡೆಯೋಣ. ಪ್ರಕೃತಿಯಲ್ಲಿ ಒಂದು ದಿನ ಲೀನವಾಗುವವರೆಗೂ……….

# ವಿವೇಕಾನಂದ ಎಚ್‌ ಕೆ

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ
February 20, 2026
7:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹಿರಿಯರ ಪರಿಶ್ರಮದ ಫಲ ಮಕ್ಕಳಿಗೆ ಪರವಾನಗಿ ಆಗಬಾರದು
February 20, 2026
7:20 AM
by: ಡಾ.ಚಂದ್ರಶೇಖರ ದಾಮ್ಲೆ
ಹೊಸರುಚಿ | ಹಲಸಿನ ಕಾಯಿ ಬೋಂಡಾ ರೆಸಿಪಿ – ಇದು ರುಚಿಕರ ಗ್ರಾಮೀಣ ಸ್ನ್ಯಾಕ್
February 15, 2026
6:32 AM
by: ದಿವ್ಯ ಮಹೇಶ್
ಜೀವನಪ್ರೀತಿ
February 15, 2026
6:21 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror