ಪ್ರದೀಪ್ ಈಶ್ವರ್ ಎಂಬ ಹೊಸ ತಲೆಮಾರಿನ ಶಾಸಕ…… | ವಿವೇಕಾನಂದ ಎಚ್.ಕೆ. ಬರೆಯುತ್ತಾರೆ… |

June 10, 2023
10:24 AM

ಪ್ರದೀಪ್ ಈಶ್ವರ್ ಎಂಬ ಹೊಸ ತಲೆಮಾರಿನ ಶಾಸಕರು ಮತ್ತು ಶಾಸಕ ಸ್ಥಾನದ ಅತ್ಯುತ್ತಮ ಮಾದರಿ ಶಾಂತವೇರಿ ಗೋಪಾಲಗೌಡರು ಹಾಗು ಮಾಧ್ಯಮ -ಸಾಮಾಜಿಕ ಜಾಲತಾಣಗಳ ಅರಿವಿನ‌ ಮಟ್ಟ………..

ಇತ್ತೀಚಿನ ಕರ್ನಾಟಕ ವಿಧಾನಸಭಾ ಚುನಾವಣೆಯ ಅತ್ಯಂತ ಅನಿರೀಕ್ಷಿತ ಫಲಿತಾಂಶಗಳಲ್ಲಿ ಒಂದು ಚಿಕ್ಕಬಳ್ಳಾಪುರ ಕ್ಷೇತ್ರದ ಫಲಿತಾಂಶ. ರಾಜಕೀಯದಲ್ಲಿ ಅಪರಿಚಿತವಾಗಿದ್ದ ಸಾಮಾನ್ಯ ವ್ಯಕ್ತಿಯೊಬ್ಬರು ಹಿಂದಿನ ಸರ್ಕಾರದ ಅತ್ಯಂತ ಪ್ರಬಲ ಸಚಿವರನ್ನು ಸೋಲಿಸಿ ಶಾಸಕರಾಗಿದ್ದಾರೆ. ಹಾಗೆಯೇ ಬಹುತೇಕ ಸುದ್ದಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ  ಇವರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಕೇವಲ ಪ್ರದೀಪ್ ಈಶ್ವರ್ ಎಂಬ ಹೊಸ ತಲೆಮಾರಿನ ಶಾಸಕರು ಮಾತ್ರವಲ್ಲ ಹೊಸ ತಲೆಮಾರಿನ ಪತ್ರಕರ್ತರು ಮತ್ತು ಮತದಾರರು ಸಹ ಮುಖ್ಯವಾಹಿನಿಯಲ್ಲಿ ಚಟುವಟಿಕೆಯಿಂದ ಇದ್ದಾರೆ. ಆದ್ದರಿಂದ ‌ಶಾಸಕರ ನಿಜ ಕರ್ತವ್ಯದ ಬಗ್ಗೆ ಮಾತನಾಡುವುದು ಅವಶ್ಯಕವಾಗಿದೆ.

ಶಾಸಕರೆಂದರೆ, ಶಾಸನಗಳ ರಚನೆಯಲ್ಲಿ ಭಾಗವಹಿಸುವುದು, ಪ್ರತಿನಿತ್ಯ ಸಾಮಾನ್ಯ ಜನರೊಡನೆ ಸಂಪರ್ಕದಲ್ಲಿ ಇರುವುದು, ಅವರ ಮೂಲಭೂತ ಅವಶ್ಯಕತೆಗಳನ್ನು ಆಲಿಸಿ ಪರಿಹರಿಸುವುದು, ಕ್ಷೇತ್ರದ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವುದು, ಕಾರ್ಯಾಂಗದ ಅಧಿಕಾರಿಗಳನ್ನು ಮೇಲ್ವಿಚಾರಣೆ ಮಾಡುವುದು  ಮುಂತಾದ ಪ್ರಮುಖ ಕೆಲಸಗಳನ್ನು ಪಟ್ಟಿ ಮಾಡಲಾಗುತ್ತದೆ.

ಒಬ್ಬ ಶಾಸಕರ ಸಂಪೂರ್ಣ ಅವಧಿ 1825 ದಿನಗಳ ವರೆಗೆ ಇರುತ್ತದೆ. ಆ ಕ್ಷೇತ್ರದಲ್ಲಿ ಸುಮಾರು 2 ಲಕ್ಷ ಮತದಾರರು, ಸುಮಾರು 50 ಸಾವಿರ ಕುಟುಂಬಗಳು, ನೂರಾರು ಗ್ರಾಮಗಳು ಮತ್ತು ಗ್ರಾಮ ಪಂಚಾಯತಿಗಳು ಇರುತ್ತವೆ. ದಿನಕ್ಕೆ ಇರುವುದು 24 ಗಂಟೆಗಳು. ವೈಜ್ಞಾನಿಕವಾಗಿ ಸುಮಾರು ‌8 ಗಂಟೆಗಳು ವಿಶ್ರಾಂತ ಸಮಯ ಎಂದು ಪರಿಗಣಿಸಿದರೆ ಉಳಿಯುವುದು 16 ಗಂಟೆಗಳು. ಅಂದರೆ 1/3 ಭಾಗ ಮಾತ್ರ.

ಇಷ್ಟು ಕಡಿಮೆ ಅವಧಿಯಲ್ಲಿ ಒಬ್ಬ ಮನುಷ್ಯ ಇಡೀ ಕ್ಷೇತ್ರದ ಎಲ್ಲಾ ಕೆಲಸವನ್ನು ಮಾಡುವುದು ಸಾಧ್ಯವಿಲ್ಲ. ವೈಯಕ್ತಿಕವಾಗಿ ಭೇಟಿ ಮಾಡಿ ಸಮಸ್ಯೆ ಆಲಿಸುವುದು ಕಷ್ಟ. ವಿಧಾನ ಮಂಡಲದ ಅಧಿವೇಶನ, ಪಕ್ಷದ ಕಾರ್ಯಕ್ರಮಗಳು ಮುಂತಾದ ಕೆಲಸಗಳಿಗೂ ಸಮಯ ಹೊಂದಿಸಿಕೊಳ್ಳಬೇಕು. ಹಾಗು ಬಹುತೇಕ ಜನ ಸಾಮಾನ್ಯರು ಸಾರ್ವಜನಿಕ ಕೆಲಸಗಳಿಗಿಂತ ತಮ್ಮ ವೈಯಕ್ತಿಕ ಬೇಡಿಕೆಗಳಿಗೇ ಹೆಚ್ಚಿನ ಮಹತ್ವ ನೀಡುತ್ತಾರೆ.

ಅದರಿಂದಾಗಿಯೇ ಸಾರ್ವಜನಿಕ ಗ್ರಂಥಾಲಯಗಳು, ಕ್ರೀಡಾಂಗಣಗಳು ಮಾಯವಾಗಿ, ಬಾರುಗಳು, ಡಾಬಾಗಳು ಹೆಚ್ಚು ಹೆಚ್ಚು ಸ್ಥಾಪಿತವಾಗುತ್ತಿವೆ. ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳು ಬೆಲೆ ಕಳೆದುಕೊಂಡು ಖಾಸಗಿ ವಲಯ ಬೆಳೆಯುತ್ತಿದೆ. ಭ್ರಷ್ಟ ಸರ್ಕಾರಿ ವ್ಯವಸ್ಥೆಗೆ ಬದಲಾಗಿ ಉತ್ತಮ ಸೇವೆಯ ಹೆಸರಿನಲ್ಲಿ  ಕ್ರೂರ ವಾಣಿಜ್ಯೀಕರಣಗೊಂಡ ಖಾಸಗಿ ವಲಯ ನವ ಶೋಷಣೆಯ ವೇದಿಕೆಯಾಗಿದೆ.

ಶಾಸಕ ಸ್ಥಾನ ವ್ಯಕ್ತಿಗತವಾಗಿರದೆ ಅದೊಂದು ವ್ಯವಸ್ಥೆಯ ಭಾಗ. ಆ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುವಂತೆ ಮೇಲ್ವಿಚಾರಣೆ ಮಾಡುವ ಜವಾಬ್ದಾರಿ ಶಾಸಕರದು. ಏಕೆಂದರೆ ಒಬ್ಬ ವ್ಯಕ್ತಿಯಿಂದ ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲ. ಆ ವ್ಯಕ್ತಿ ಸ್ಥಳದಲ್ಲಿ ಇರುವಾಗ ಇರುವ ಶಕ್ತಿ ಆತನ ಅನುಪಸ್ಥಿತಿಯಲ್ಲಿ ಬೇರೆಯದೇ ರೀತಿಯಲ್ಲಿ ವರ್ತಿಸುತ್ತದೆ. ಜನರು ಪ್ರತಿ ಸಣ್ಣ ವಿಷಯಕ್ಕೂ ಶಾಸಕರನ್ನು ಭೇಟಿಯಾಗುವುದು ಸಾಧ್ಯವಿಲ್ಲ. ಅದನ್ನು ಅರಿತೇ ಅಧಿಕಾರಿಗಳು ಸಮಯಕ್ಕೆ ತಕ್ಕಂತೆ ನಾಟಕವಾಡುವುದೇ ಹೆಚ್ಚು.

ವ್ಯವಸ್ಥೆಯ ಸುಧಾರಣೆಗೆ ಹೆಚ್ಚು ಅಧ್ಯಯನ, ಚಿಂತನೆ ಮತ್ತು ಶ್ರಮಪಡುವುದು ಇಂದಿನ ಶಾಸಕರ ಬಹುಮುಖ್ಯ ಕರ್ತವ್ಯವಾಗಬೇಕು. ರಸ್ತೆ ವಿದ್ಯುತ್ ನೀರು ಬೀದಿ ದೀಪ ಉತ್ಸವಗಳು ಮಾತ್ರ ಶಾಸಕರ ಕೆಲಸವಲ್ಲ. ಅದಕ್ಕೆ ಸಂಬಳ ಪಡೆಯುವ ಪ್ರತ್ಯೇಕ ಇಲಾಖೆ ಮತ್ತು ಅಧಿಕಾರಿಗಳು ಇದ್ದಾರೆ. ಶಾಸಕರು ಅದಕ್ಕಿಂತ ಮುಖ್ಯವಾಗಿ ತಮ್ಮ ವ್ಯಾಪ್ತಿಯ ಎಲ್ಲಾ ಇಲಾಖೆಗಳನ್ನು ಭ್ರಷ್ಟಾಚಾರ ಮುಕ್ತ ಮಾಡುವ, ಕೆಲಸದ ದಕ್ಷತೆ ಹೆಚ್ಚಿಸುವ, ಜಾತಿ ರಹಿತ ಸಮ ಸಮಾಜ ನಿರ್ಮಿಸುವ, ಮೌಡ್ಯ ತೊಡೆದು ವೈಚಾರಿಕ ಪ್ರಜ್ಞೆ ಬೆಳೆಸುವ, ಪರಿಸರ ಉಳಿಸುವ, ಮಾನವೀಯ ಮೌಲ್ಯ ಎತ್ತಿಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.

ವ್ಯಕ್ತಿಗತವಾಗಿ ಸಮಸ್ಯೆಗಳನ್ನು ಬಗೆಹರಿಸುವುದಕ್ಕಿಂತ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಆಗಬೇಕು. ಅದು ದೀರ್ಘಕಾಲ ಉಳಿಯುತ್ತದೆ.

ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿರುವ ಎಲ್ಲಾ ಹೊಸ ಶಾಸಕರು ಕಡ್ಡಾಯವಾಗಿ ಶಾಂತವೇರಿ ಗೋಪಾಲಗೌಡರ ಚಿಂತನೆಗಳು ಮತ್ತು ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ವಿಧಾನ ಮಂಡಲದ ಕಾರ್ಯಕಲಾಪಗಳ ಕಡತಗಳನ್ನು ಮತ್ತು ಅವರ ಬಗ್ಗೆ ಪ್ರಕಟವಾಗಿರುವ ಪುಸ್ತಕಗಳನ್ನು ಬಿಡುವು ಮಾಡಿಕೊಂಡು ಓದಬೇಕು. ಆಗ ಒಬ್ಬ ಶಾಸಕನ ನಿಜ ಮತ್ತು ಪ್ರಾಮಾಣಿಕ ಕರ್ತವ್ಯಗಳ ಬಗ್ಗೆ ಸರಿಯಾದ ತಿಳಿವಳಿಕೆ ಮೂಡುತ್ತದೆ.

ಕೇವಲ ಶಾಸಕರು ಮಾತ್ರವಲ್ಲ ಬಹುತೇಕ ಪತ್ರಕರ್ತರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸುವಲ್ಲಿ ಚಟುವಟಿಕೆಯಿಂದ ಇರುವ ಎಲ್ಲರೂ ಶಾಂತವೇರಿ ಗೋಪಾಲಗೌಡರ ಬಗ್ಗೆ ತಿಳಿದುಕೊಂಡರೆ ಉತ್ತಮ. ಇದು ಕರ್ನಾಟಕದ ರಾಜಕೀಯ ಪ್ರಜ್ಞೆ ಮತ್ತಷ್ಟು ಬೆಳೆಯಲು ಕಾರಣವಾಗುತ್ತದೆ.

ಇಲ್ಲದಿದ್ದರೆ ಪ್ರದೀಪ್ ಈಶ್ವರ್ ತರಹದ ಶಾಸಕರು ಕೇವಲ ಸಿನಿಮೀಯ ರೀತಿಯ ಕಾರ್ಯನಿರ್ವಾಹಣೆಗೆ ಸೀಮಿತವಾಗಿ ತಾತ್ಕಾಲಿಕ ಯಶಸ್ಸು ಮಾತ್ರ ಸಾಧ್ಯವಾಗಿ ಯಾವುದೇ ಕ್ರಾಂತಿಕಾರಿ ಬದಲಾವಣೆ ಸಾಧ್ಯವಾಗುವುದಿಲ್ಲ. ಅವರನ್ನು ಸಂದರ್ಶನ ಮಾಡುವ ಬಹುತೇಕ ಪತ್ರಕರ್ತರು ಕೇಳುವ ಪ್ರಶ್ನೆಗಳು ಕೇವಲ ರಾಜಕೀಯ ಸೇಡಿನ ಸಿನಿಕತನದ ಅತ್ಯಂತ ಬಾಲಿಶ ಪ್ರಶ್ನೆಗಳೇ ಆಗಿ ಅದಕ್ಕೆ ಅವರ ಉತ್ತರವೂ ಅದೇ ರೀತಿಯ ತೆಲುಗು ಸಿನಿಮಾ ನಾಯಕ ನಟನ ರೀತಿಯಲ್ಲಿ ಇರುವುದು ಕಂಡುಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಹ ಇದೇ ರೀತಿಯ ಪ್ರತಿಕ್ರಿಯೆ ಇರುತ್ತದೆ.

ಒಬ್ಬ ಉತ್ಸಾಹಿ ಯುವಕ ಶಾಸಕನಾಗಿ ಆಯ್ಕೆಯಾಗಿರುವಾಗ ಆತ ದಾರಿ ತಪ್ಪದೆ ಇಡೀ ರಾಜ್ಯಕ್ಕೆ ಮಾದರಿಯಾಗಬೇಕಾದರೆ ಎಲ್ಲಾ ಕ್ಷೇತ್ರದ ಜವಾಬ್ದಾರಿ ನಾಗರಿಕರು ಹೆಚ್ಚು ಎಚ್ಚರಿಕೆಯಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಅಭಿಪ್ರಾಯ ವ್ಯಕ್ತಪಡಿಸಬೇಕು. ಇಲ್ಲದಿದ್ದರೆ ವ್ಯವಸ್ಥೆಯ ಬಗ್ಗೆ ಜನ ಮತ್ತಷ್ಟು ಹತಾಶರಾಗಿ ನಂಬಿಕೆ ಕಳೆದುಕೊಳ್ಳುತ್ತಾರೆ.

ಹಾಗಾಗದಿರಲಿ ಮತ್ತು ಪ್ರದೀಪ್ ಈಶ್ವರ್ ಅವರು ಹೊಸ ತಲೆಮಾರಿನ ಶಾಸಕರುಗಳಿಗೆ ಒಂದು ಮಾದರಿಯಾಗಲಿ. ತಾಳ್ಮೆ ಅಧ್ಯಯನ ಪ್ರಾಮಾಣಿಕತೆ ಕೇವಲ ಮಾತಿನ‌‌ ಸರಕಾಗದೆ ನಡವಳಿಕೆಯಾಗಲಿ ಎಂದು ಹಾರೈಸುತ್ತಾ…….

ಏಕೆಂದರೆ ಈಗಿನ ಸಮಾಜದಲ್ಲಿ ಪ್ರಾಮಾಣಿಕವಾಗಿ ಮತ್ತು ಒಳ್ಳೆಯವರಾಗಿ ದೀರ್ಘಕಾಲ ಬದುಕು ರೂಪಿಸಿಕೊಳ್ಳುವುದು ಬಹುದೊಡ್ಡ ಸವಾಲು. ಶತ್ರುಗಳು ನಮ್ಮ ನಡುವೆಯೇ ನಮ್ಮ ನಾಶಕ್ಕೆ ಕಾಯುತ್ತಿರುತ್ತಾರೆ. ಅವರಿಗೆ ನೆರವಾಗಲು ಇದೇ ಪತ್ರಕರ್ತರು ಸಹಾಯ ಮಾಡುತ್ತಾರೆ ಎಂಬುದನ್ನು ಮರೆಯಬಾರದು……..

ಬರಹ :
ವಿವೇಕಾನಂದ ಎಚ್‌ ಕೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಹೊಸರುಚಿ | ಮನೆಲ್ಲೇ ಸುಲಭವಾಗಿ ಮಾಡುವ “ಉಪ್ಪು ಸೊಳೆ ಬೋಳು ಬೆಂದಿ”
March 7, 2026
10:14 PM
by: ದಿವ್ಯ ಮಹೇಶ್
ಅಂಕಗಳಾಚೆಗೆ ಶಿಕ್ಷಣದ ಉದ್ದೇಶ
March 6, 2026
6:56 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಬಯಕೆ, ಕಾಮ, ಆಕರ್ಷಣೆ, ಪ್ರೀತಿ ಮತ್ತು ಪ್ರೇಮ – ಜೀವನದ ಅಂತರಂಗದ ಹಂತಗಳು
February 28, 2026
7:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಮನೆಯಲ್ಲೇ ಸುಲಭವಾಗಿ ಮಾಡುವ ಎಳೆಯ ಹಲಸಿನ ಕಾಯಿ ಸುಕ್ಕ
February 28, 2026
7:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror