ಉಳ್ಳವರು, ಅಧಿಕಾರವಂತರು, ರಾಜಕೀಯ ಪಕ್ಷದ ನಾಯಕರು ಏನು ಮಾಡಿದರೂ ಕಾನೂನೇ ಮೌನವಾಗಿರುತ್ತದೆ. ಆಡಳಿತವೂ ಮೌನವಾಗಿರುತ್ತದೆ. ಬಡವನೊಬ್ಬ ಪುಟ್ಟ ಅಂಗಡಿ ತೆರೆದರೂ ಅದು ಕಾನೂನು ಬಾಹಿರ, ಅದು ಅನಧಿಕೃತ ಎಂದು ತೆಗೆದು ನಾಶ ಮಾಡುತ್ತಾರೆ. ಹಾಗಿದ್ದರೆ ಕಾನೂನು, ನ್ಯಾಯ ಯಾರಿಗೆ ? ಇಂತಹದ್ದೊಂದು ಘಟನೆ ಸುಳ್ಯದಲ್ಲಿ ಕೇಳಿದೆ..!. ರಸ್ತೆ ಬದಿ ಇದ್ದ ಸಾರ್ವಜನಿಕ ಕೊಳವೆಬಾವಿಯನ್ನು ಮುಚ್ಚಲಾಗಿದೆ. ಹೀಗಿದ್ದರೂ ಆಡಳಿತ ಮೌನವಹಿಸಿದೆ. ಕಾರಣ ಉಳ್ಳವರು, ಅಧಿಕಾರವಂತರು…!
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದೀಗ ಒಂದು ಆಡಿಯೋ ಹಾಗೂ ಬರಹವೊಂದು ವೈರಲ್ ಆಗುತ್ತಿದೆ. ಗ್ರಾಮ ಪಂಚಾಯತ್ ಸದಸ್ಯ, ಬಿಜೆಪಿ ಮುಖಂಡರೊಬ್ಬರು ಕಟ್ಟಡ ನಿರ್ಮಾಣದ ಹಂತದಲ್ಲಿ ಈ ಕೊಳವೆಬಾವಿ ಮುಚ್ಚಿದ್ದಾರೆ ಎನ್ನುವುದು ಆರೋಪ. ಹಾಗಿದ್ದರೆ ಕಟ್ಟಡ ಕಟ್ಟುವ ಮುನ್ನ ಅಥವಾ ಪಂಚಾಯತ್ ಅನುಮತಿ ನೀಡುವ ವೇಳೆ ಇದನ್ನು ಗಮನಿಸಲಿಲ್ಲವೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಏಕೆಂದರೆ ಇದೇ ಪ್ರಶ್ನೆ ಬಡವನೊಬ್ಬ ಅಂಗಡಿ ಹಾಕಿದರೆ, ಸಾಮಾನ್ಯ ವ್ಯಕ್ತಿಯೊಬ್ಬ ಮನೆ ಕಟ್ಟುವ ವೇಳೆ, ಸಾಮಾನ್ಯ ವ್ಯಕ್ತಿಯೊಬ್ಬ ಕಟ್ಟಡ ಕಟ್ಟುವ ವೇಳೆ ಅಧಿಕಾರಿಗಳು ಹತ್ತಾರು ಪ್ರಶ್ನೆಗಳನ್ನು ಕೇಳುತ್ತಾರೆ. ಆಗಾಗ ಪರಿಶೀಲನೆಯನ್ನೂ ಮಾಡುತ್ತಾರೆ. ಹಾಗಿದ್ದರೆ ಕಾನೂನುಗಳು ಬೇಕಾದಂತೆ ಬದಲಾಗುತ್ತದೆಯೇ ಎನ್ನುವುದು ಸಾಮಾನ್ಯ ಜನರ ಪ್ರಶ್ನೆ.
ಲೋಕೋಪಯೋಗಿ ಇಲಾಖೆ, ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾಪಂಚಾಯತ್ , ಕಂದಾಯ ಇಲಾಖೆ ಹೀಗೇ ಹತ್ತಾರು ಇಲಾಖೆಗಳು ಸಾಮಾನ್ಯ ವ್ಯಕ್ತಿಯೊಬ್ಬ ಒಂದು ಅನುಮತಿಗೆ ಹೋದರೆ ಹತ್ತಾರು ಬಾರಿ ಅಲೆದಾಟ ನಡೆಸಬೇಕು. ಸಾರ್ವಜನಿಕ ಆಸ್ತಿಯನ್ನು ಮುಟ್ಟುವುದು ಬಿಡಿ, ಅದರ ಪಕ್ಕ ಹೋಗುವುದನ್ನೂ ತಡೆಯುತ್ತವೆ. ಹಾಗಿದ್ದರೆ ಈಗ ಇಲ್ಲಿ ಕೊಳವೆಬಾವಿ ಮುಚ್ಚಿದರೂ ಇಲಾಖೆಗಳು ಏಕೆ ಮೌನ ವಹಿಸಿವೆ ಎಂದರೆ ಉಳ್ಳವರು, ಅಧಿಕಾರವಂತರು ಎನ್ನುವ ಕಾರಣಕ್ಕೆ ಎನ್ನುವುದು ಪ್ರಶ್ನೆ.
ಈ ಕಾರಣದಿಂದಲೇ ಅದೇ ಗ್ರಾಮದ ಯುವಕರೊಬ್ಬರು ಪತ್ರಿಕೆಯೊಂದರಲ್ಲಿ ಬಂದಿರುವ ವರದಿಯನ್ನು ಹಂಚಿಕೊಳ್ಳುತ್ತಾರೆ. ಇದು ಈಗ ವಿವಾದಕ್ಕೆ, ಬೆದರಿಕೆಗೆ ಕಾರಣವಾಗಿದೆ. ಈ ಬಗ್ಗೆ ಆಡಿಯೋ ಕೂಡಾ ವೈರಲ್ ಆಗಿದೆ. ಈ ಸಂಬಂಧ ಪಂಚಾಯತ್ ಪಿಡಿಒ ಅವರಿಗೆ ಕರೆ ಮಾಡಿ ಮಾತನಾಡಿರುವ ಆಡಿಯೋ ಕೂಡಾ ಅದರಲ್ಲಿದೆ. ಆದರೆ ಪಿಡಿಒ ಅವರೂ ಅಸಹಾಯಕರು..! ಏಕೆಂದರೆ ತಮ್ಮದೇ ಗ್ರಾಪಂ ಸದಸ್ಯ, ಅದರಲ್ಲೂ ಪ್ರಭಾವಿ ಸದಸ್ಯರೊಬ್ಬರ ಪರವಾಗಿ ಮಾತನಾಡಲೂ ಅಲ್ಲದೆ, ಕ್ರಮ ಕೈಗೊಳ್ಳಲೂ ಆಗದ ಸ್ಥಿತಿಯಲ್ಲಿದ್ದಾರೆ…!.
ವೈರಲ್ ಆಗಿರುವ ಬರಹದಲ್ಲಿ, ಗ್ರಾಮದ ಒಬ್ಬ ನಾಗರಿಕನಾಗಿ ನನ್ನ ಗ್ರಾಮದ ವಿಚಾರ ಗಮನಕ್ಕೆ ಬಂದಾಗ ಅದನ್ನು ಹಂಚಿಕೊಳ್ಳುವುದು ಕರ್ತವ್ಯ ಮತ್ತು ಹಕ್ಕು ಕೂಡ. ಹಾಗಿರುವಾಗ ನಾನು ಹಾಕಿದ ಆ ವಿಚಾರ ಈ ಗ್ರೂಪ್ ನ ಹಲವರಿಗೆ ಮನದಟ್ಟಾಗಿದೆ ಎಂದು ಅಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಓರ್ವ ಗ್ರಾಮಸ್ಥನಾಗಿ ಗುತ್ತಿಗಾರು ಗ್ರಾ.ಪಂ ನ ಮಾನ್ಯ ಪಿಡಿಒರನ್ನು ಸಂಪರ್ಕಿಸಿದ್ದು, ಕಾರ್ಯಾಂಗದ ಅಡಿಯಲ್ಲಿ ನಿಜ ವಿಚಾರ ತಿಳಿಸಿದ್ದಾರೆ ಎಂದು ಬರಹದಲ್ಲಿ ತಿಳಿಸಿದ್ದಾರೆ. ಅದರಲ್ಲಿ ಪ್ರಶ್ನೆ ಮಾಡಿರುವ ವಿಚಾರ ಹೀಗಿದೆ, ” ಓರ್ವ ಪಂಚಾಯತ್ ಸದಸ್ಯ ತನಗೆ ಬೇಕಾದಂತೆ ಸಾರ್ವಜನಿಕ ಸೊತ್ತುಗಳನ್ನು ನಾಶ ಮಾಡಬಹುದೇ? ಒಂದು ವೇಳೆ ಮಾಡಿದರೆ ಅದನ್ನು ಗ್ರಾಮಸ್ಥರು ಪ್ರಶ್ನಿಸಬಾರದೇ? ಪಂಚಾಯತ್ ನ ಪ್ರಥಮ ಪ್ರಜೆಗೆ ಗೊತ್ತಿಲ್ಲದೆ ವೈಯಕ್ತಿಕ ಹಿತಾಸಕ್ತಿಗೆ ತಾನು ಏನು ಬೇಕಾದರೂ ಮಾಡುತ್ತೇನೆ, ಕೇಳಲು ನೀನ್ಯಾರು ಎಂಬ ವರ್ತನೆ ಇರುವ ಇಂತವರಿಂದ ಜನ ಸಾಮಾನ್ಯ, ಬಡವರ್ಗ ಯಾವ ನ್ಯಾಯ ನಿರೀಕ್ಷೆ ಮಾಡಬಹುದು? ಎಂದು ಪ್ರಶ್ನಿಸಿದ್ದಾರೆ.
ಚೌಕೀದಾರನಾಗಿ ಸಾರ್ವಜನಿಕ ಆಸ್ತಿಯನ್ನು, ತಪ್ಪನ್ನು ಪ್ರಶ್ನಿಸಿದರನ್ನು ಬದಿಗೆ ಸರಿಸುವುದು ಕಂಡಿದ್ದೇವೆ. ಈಗ ಅದೇ ಮಾದರಿಯಲ್ಲಿ ಇಲ್ಲಿ ಪ್ರಶ್ನೆ ಮಾಡಿದ ವ್ಯಕ್ತಿಯ ನೈಜ ಕಾಳಜಿ, ನ್ಯಾಯಯುತ ಪ್ರಶ್ನೆಗೆ ಅಧಿಕಾರಿಗಳು, ಸಮಾಜವು ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.
ದೇಶದಲ್ಲಿ ಉತ್ಪಾದನೆಯಾಗುವ ಗೇರುಹಣ್ಣಿನ ಕೇವಲ 1% ಮಾತ್ರ ಮೌಲ್ಯವರ್ಧನೆಗೆ ಬಳಸಲಾಗುತ್ತಿರುವ ಹಿನ್ನೆಲೆ ಪುತ್ತೂರಿನಲ್ಲಿ…
ದಕ್ಷಿಣ ಕನ್ನಡದಲ್ಲಿ ಶೇ.48ಕ್ಕೂ ಹೆಚ್ಚು ಕರಾವಳಿ ಕಡಲ್ಕೊರೆತಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದ ಲೋಕಸಭೆಯಲ್ಲಿ…
ಅಡಿಕೆ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುತ್ತಿರುವ ಕೊಕ್ಕೋಗೆ ಬೆಲೆ ಕುಸಿತ ದೊಡ್ಡ ಸವಾಲಾಗಿದೆ. ಮೌಲ್ಯವರ್ಧನೆ…
ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ತಾಪ ಮುಂದುವರಿದರೂ ಮಾರ್ಚ್ 14 ಅಥವಾ 15ರಿಂದ ಹಲವೆಡೆ…
ದೇಶದ ಹಲವು ನಗರಗಳಲ್ಲಿ ವಾಣಿಜ್ಯ LPG ಕೊರತೆಯಿಂದ ಹೋಟೆಲ್ ಮತ್ತು ಆಹಾರ ವಿತರಣೆ…
ದೇಶೀಯ ಗ್ರಾಹಕರಿಗೆ ಸಿಎನ್ಜಿ, ಪಿಎನ್ಜಿ ಹಾಗೂ ಎಲ್ಪಿಜಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆ…