ಕೃಷಿ ಪದವೀಧರ ಪಂಡಿತರಿಗೇಕೆ ಸಾಮಾನ್ಯ ರೈತರು ಮತ್ತು ಗೋ ಆಧಾರಿತ ಕೃಷಿಯ ಬಗ್ಗೆ ಅಸಡ್ಡೆ…?

January 30, 2025
10:04 PM
ಕೃಷಿ ವಿಜ್ಞಾನ ಪದವೀಧರರ ಹೊರತುಪಡಿಸಿ ಸಾಮಾನ್ಯ ಕೃಷಿಕರ ಕೃಷಿ ಮತ್ತು ಕೃಷಿ ಜ್ಞಾನ ದ ಬಗ್ಗೆ ಕೃಷಿ ವಿಜ್ಞಾನ ಕಲಿತ ಪಂಡಿತರನೇಕರಿಗೆ ಒಂದು ಬಗೆಯ ತಾತ್ಸಾರವನ್ನ ನಾನು ಗಮನಿಸಿದ್ದೇನೆ. ಇಂತಹ ತಾತ್ಸಾರ ಏಕೆ..?

ಕೃಷಿ ಸಂಬಂಧಿಸಿದ ಪತ್ರಿಕೆಯೊಂದರ ಸಂಪಾದಕೀಯವೊಂದರಲ್ಲಿ ಈ ಕಾಲದ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಾಪ್ ಮತ್ತು ಯೂಟ್ಯೂಬ್ ಗಳಲ್ಲಿ ಸತ್ಯಕ್ಕೆ ದೂರವಾದ ಮಾಹಿತಿ ಹೊರಬರುತ್ತಿದೆ, ಅತಿರಂಜಿತ ವರದಿಗಳು ಬರುತ್ತಿದೆ ಮತ್ತು ವಾಟ್ಸಾಪ್ ನಲ್ಲಿ ಕೃಷಿಕರನೇಕರು ಅಪ್ರಬುದ್ದವಾದ ವ್ಯರ್ಥಾಲಾಪ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ದಾಖಲಿಸಿದ್ದಾರೆ. ಇದರಲ್ಲಿ ಒಂದಷ್ಟು ಸತ್ಯ ಖಂಡಿತವಾಗಿಯೂ ಇದೆ…
ನಾವು ಒಪ್ಪಿಕೊಳ್ತೇವೆ…

ಆದರೆ ಕೃಷಿ ವಿಜ್ಞಾನ ಪದವೀಧರರ ಹೊರತುಪಡಿಸಿ ಸಾಮಾನ್ಯ ಕೃಷಿಕರ ಕೃಷಿ ಮತ್ತು ಕೃಷಿ ಜ್ಞಾನ ದ ಬಗ್ಗೆ ಕೃಷಿ ವಿಜ್ಞಾನ ಕಲಿತ ಪಂಡಿತರನೇಕರಿಗೆ ಒಂದು ಬಗೆಯ ತಾತ್ಸಾರವನ್ನ ನಾನು ಗಮನಿಸಿದ್ದೇನೆ. ಆ ಬಗ್ಗೆ ಒಂದು ಚಿಂತನೆ.. ‌

Advertisement

ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆ ನಾನು ಪದವಿ ಮುಗಿಸಿಕೊಂಡು ಬಂದ ಹೊಸತರಲ್ಲಿ ಏನಾದರೂ ಹೊಸ ಕೃಷಿ ಮಾಡಬೇಕು ಎಂಬ ಉಮೇದಿತ್ತು. ಆ ಸಮಯದಲ್ಲಿ ಯೂಟ್ಯೂಬ್ ಫೇಸ್ ವಾಟ್ಸಾಪ್ ಯಾವ ವೇದಿಕೆಯೂ ಇರಲಿಲ್ಲ. ಕೃಷಿಕರಿಗೆ ಅಡಿಕೆ ಪತ್ರಿಕೆ, ಸುಜಾತ ಮತ್ತು ಪ್ರಜಾವಾಣಿ ಯ ಕೃಷಿ ಪುರವಣಿಗಳು ಮಾಹಿತಿಕಣಜ ಗಳಾಗಿದ್ದವು. ಪತ್ರಿಕೆಯಲ್ಲಿ ಬಂದ ಕೃಷಿ ವರದಿಯನ್ನು ನೋಡಿ ಕೃಷಿಕರನ್ನ ಹುಡುಕಿಕೊಂಡು ಹೋಗುವಾಗ ಆ ಕೃಷಿಕರು ” ಆ ಕೃಷಿ” ಯನ್ನು ಮಾಡುವುದು ಬಿಟ್ಟಾಗಿತ್ತು…!.

ಆ ಕಾಲದ ಮಾಧ್ಯಮದಲ್ಲೂ ಈಗಿನ ಯೂಟ್ಯೂಬ್ ನಲ್ಲಿನ ವರದಿಯಂತೆ ಅತಿರಂಜಿತ ವರದಿ ಪ್ರಕಟವಾಗುತ್ತಿತ್ತು. ಪತ್ರಿಕೆಯ ವರ್ಣನೆ ನೋಡಿ ನಾವು ಕ್ಷೇತ್ರ ಸಂದರ್ಶನಕ್ಕೆ ಹೋದಾಗ ಅಲ್ಲಿ ಮಣ್ಣಂಗಟ್ಟಿಯೂ ಇರುತ್ತಿರಲಿಲ್ಲ…!. ಪತ್ರಿಕೆಲಿ ಬಂದರೆ ಮಾತ್ರ ಸತ್ಯ ಯೂಟ್ಯೂಬ್ ನಲ್ಲಿ ಬಂದರೆ ಅಥವಾ ಈ ಕಾಲದ “ಇ ಪತ್ರಿಕೆ” ಲಿ ಬಂದರೆ ಸುಳ್ಳು ಅತಿಯಾದ ವರ್ಣನೆ ಅಂತಿಲ್ಲ. ಸುಳ್ಳು ಅತಿರಂಜಿತ ವರದಿ ಎಲ್ಲಾ ಕಡೆಯಲ್ಲೂ ನುಸುಳುತ್ತದೆ. ನಮಗೆ ವಿವೇಚನೆ ಇರಬೇಕು.

Advertisement

ವಿಜ್ಞಾನ ಆಧಾರಿತ ಕೃಷಿ ವರ್ಸಸ್ ಸಾಂಪ್ರದಾಯಿಕ ಕೃಷಿ : ಖಂಡಿತವಾಗಿಯೂ ಕೆಲವು ವೈಜ್ಞಾನಿಕ ಕ್ರಮವನ್ನು, ವೈಜ್ಞಾನಿಕ ಒಳಸುರಿಗಳ ಬಳಕೆಯನ್ನು ಕೃಷಿಯಲ್ಲಿ ಬಳಸಿಕೊಳ್ಳಬೇಕು. ಆದರೆ ಕೆಲವು ಸಲ ವಿಜ್ಞಾನವೇ ಅಂತಿಮವಲ್ಲ.ಅಥವಾ ಸಾಂಪ್ರದಾಯಿಕ ಸಾವಯವ ಕೃಷಿ ಕನಿಷ್ಠ ಇಲ್ಲವೇ ಎಲ್ಲಕ್ಕಿಂತ ದೊಡ್ಡದು ನಿಸರ್ಗ. ನಿಸರ್ಗದ ತೀರ್ಮಾನವೇ ಅಂತಿಮ…!. “ಸಾವಯವ ಸಾಂಪ್ರದಾಯಿಕ ಕೃಷಿ ಮಾಡ್ತಾನಿವ…” ಎನ್ನುವ ಕುಹಕ ಅಭಿಪ್ರಾಯ ಇರುವ ವಿ”ಜ್ಞಾನಿಗಳು” ವೈಜ್ಞಾನಿಕ ಕೃಷಿ ಅಥವಾ ಕೃಷಿ ವಿಜ್ಞಾನ.  ವೈಜ್ಞಾನಿಕ ಸಂಶೋಧನೆಗಳಿಂದ ಲಾಗಾಯ್ತಿನಿಂದ ಇರುವ ಹಳದಿಎಲೆ ,ದುಂಡಾಣು , ಸೊರಗು ರೋಗ, ಕಾಂಡಕೊರಕ ಇತರೆ ಅನೇಕ ರೋಗಗಳಿಗೆ ದಶಕಗಳಿಂದ ಪರಿಹಾರ ಕಂಡುಹಿಡಿದು ಕೊಟ್ಟಿಲ್ಲ…. ಎಲೆಚುಕ್ಕಿ ಶಿಲೀಂಧ್ರ ರೋಗ ಒಂದು ಪ್ರಶ್ನೆ ಯಾಗೇ ಉಳಿದಿದೆ ಅಥವಾ ಉಳಿಯುತ್ತದೆ…!.

ವಿಜ್ಞಾನ ಒಂದು ಮಾಧ್ಯಮ ಮಾತ್ರ. ಪ್ರೊಟಾನು ನ್ಯೂಟ್ರಾನು ಎಲೆಕ್ಟ್ರಾನು ಎಲ್ಲದರಲ್ಲೂ ಇರುತ್ತದೆ. ಆದರೆ ಅದನ್ನು ತಿಳಿದುಕೊಂಡರೆ ಮಾತ್ರ ಜ್ಞಾನ..!! ತಿಳಿದುಕೊಳ್ಳದಿದ್ದರೆ ಅಜ್ಞಾನವಲ್ಲ…!

Advertisement

ನನಗೆ ಇದೆಲ್ಲಾ ಹೊಸ ವಿಚಾರ ಎನಿಸಲಿಲ್ಲ. ಗೊಬ್ಬರ ಔಷಧದ ವಿಚಾರ ಮಾಮೂಲಿ.  ಆದರೆ ಈ ರಾಸಾಯನಿಕ ಕೃಷಿ ಆಧಾರಿತ ಕೃಷಿ ಪ್ರವರ್ತಕರು ಗೋ ಆಧಾರಿತ ಸಾವಯವ ಕೃಷಿ ಯನ್ನು ನೋಡುವ ಬಗೆ ಯ ಬಗ್ಗೆ ನನಗೆ ಅತ್ಯಂತ ಬೇಸರವಿದೆ. ಈ ದೇಶದಲ್ಲಿ ಹಸಿರು ಕ್ರಾಂತಿಯಾಗಿ ದೇಶದ ಜನರ ಹೊಟ್ಟೆ ತುಂಬಿಸಿತು. ಈ ಹಸಿರು ಕ್ರಾಂತಿ “ಕ್ರಾಂತಿ” ಮಾಡಲು ಭೂಮಿ ಮತ್ತು ಕೃಷಿ ಗೆ ಬಳಸಿದ್ದು ವಿಷ ವಿಷ ವಿಷ…!. ಈಗ ಕೃಷಿ ಭೂಮಿ ನಿಸ್ಸಾರ. ಕೃಷಿ ಉತ್ಪನ್ನವೂ ವಿಷ…

ಕೃಷಿಕರ ವಾಟ್ಸಾಪ್ – ಫೇಸ್ ಬುಕ್ ನ ಬಗ್ಗೆ : ನಮ್ಮ (ಕೃಷಿಕರ) ಜ್ಞಾನವೋ ಅನುಭವವೋ ಅಜ್ಞಾನವೋ ಅಸಾಹಾಯಕತೆಯೋ ದಡ್ಡತನವೋ ವ್ಯಕ್ತ ಪಡಿಸುವ ವೇದಿಕೆ ಯಾವುದು..‌? ನಮಗೆ ಎಣಿಸಿದ ತಕ್ಷಣ ಮಾಹಿತಿ ಕೋರುವುದು ಹಂಚಿಕೊಳ್ಳಲು ಇರುವ ವೇದಿಕೆಯೆಂದರೆ ಈ ಕಾಲದ ಸಾಮಾಜಿಕ ಮಾದ್ಯಮಗಳು. ಅಲ್ಲಿ ಮಹಾನ್ ಬುದ್ದಿವಂತ ಸಂಪಾದಕರ ಚಕ್ರವ್ಯೂಹ ಇರೋಲ್ಲ. ಕೃಷಿಕರು ಮುಕ್ತ ಮುಕ್ತ…

Advertisement

ಮೊದಲು ರೈತರು ಊರಿನ ಮದುವೆ ಹಬ್ಬ ಹರಿದಿನ ನೆಂಟರೂಟದಲ್ಲಿ ಕೃಷಿ ಬಗ್ಗೆ ಚೆರ್ಚೆ ಮಾಡುತ್ತಿದ್ದರು. ಅದೀಗ ಮುಂದು ವರಿದು ವಾಟ್ಸಾಪ್ ನಲ್ಲಿ ಒಂದಷ್ಟು ಚೆರ್ಚೆ ಮಾಡ್ತಿದ್ದಾರೆ…!! ಒಂದೈನೂರು ಜನ ರೈತರು ಇರೋ ವೇದಿಕೆಯಲ್ಲಿ ಒಂದೈದತ್ತು ಜನ ಸಂವಹನ ಮಾಡ್ತಾರಷ್ಟೇ. ಇನ್ನುಳಿದವರು ಅಲ್ಲೂ ತಮಗೆ ಎಲ್ಲಾ ಜ್ಞಾನ ಅನುಭವ ಇದ್ದರೂ ನಾಚಿಕೆಯೋ ಅಥವಾ ಇನ್ಯಾವುದೋ ಕಾರಣಕ್ಕೆ ಅಭಿಪ್ರಾಯಿಸುವುದಿಲ್ಲ.
“ಹೀಗಿನ ವಿ ಜ್ಞಾನಿ ” ಗಳಾರೋ ಟೀಕೆ ಮಾಡ್ತಾರೆಂಬ ಎನ್ನುವ ” ಭಯ ” ಇರಬಹುದೇನೋ…!??

ಉಳಿದಂತೆ “ಮಲೆನಾಡು ಗಿಡ್ಡ ತಳಿ'” ಯಾನೆ ಗೋ ಆಧಾರಿತ ಸಾವಯವ ಕೃಷಿ.ಮಲೆನಾಡು ಗಿಡ್ಡ ತಳಿ ಹಾಲು ಕಡಿಮೆ, ಒದಿತದೆ… ಸರಿ.. ಎಲ್ಲಾ ಮಲೆನಾಡು ಗಿಡ್ಡ ತಳಿ ಯೂ ಒದೆಯೋಲ್ಲ ಮತ್ತು ತುಡುಗಲು ಅಲ್ಲ. ಒಂದು ವಿಷಯವನ್ನು ಸದಾ ವೈಜ್ಞಾನಿಕ ಆಧಾರಿತ ಅಥವಾ ರಾಸಾಯನಿಕ ಒಳಸುರಿ ಬಳಸಿ ಎನ್ನುವ ಕೃಷಿ ವಿಜ್ಞಾನ ಪಂಡಿತರು ಜ್ಞಾಪಕ ಮಾಡಕೋಬೇಕು.

Advertisement

ಇವತ್ತು ಐವತ್ತು ವರ್ಷ ವಯಸ್ಸಾಗಿರುವ ಪ್ರೌಢರಾಗಿರುವ ಮಲೆನಾಡು ಕರಾವಳಿಯ ಬಹುತೇಕ ತೊಂಬತ್ತು ಪ್ರತಿಶತ ಕೃಷಿಕರ ಮನೆಯಿಂದ ಹೊರ ಬಂದಿರುವ ಜ್ಞಾನಿಗಳು, ಡಾಕ್ಟರು, ಇಂಜಿನಿಯರ್ ಗಳು, ಬ್ಯುಸಿನೆಸ್ ಮಂದಿಗಳು , ಕಾರ್ಪೊರೇಟ್ ಜಗತ್ತಿನ ಕುಳಗಳನ್ನೂ ಸೇರಿದಂತೆ ಎಲ್ರನ್ನೂ ಇದೇ ಮಲೆನಾಡು ಗಿಡ್ಡ ಒದಕಲು ದನಗಳ ಹಾಲನ್ನು ಅವರ ತಾಯಿಂದಿರು ಕರೆದು , ಕುಡಿಸಿ ದೊಡ್ಡ ಮಾಡಿರುವುದು.

ಇವರೆಲ್ಲರ ಜಮೀನ್ದಾರ ತಂದೆ ತಮ್ಮ ತೋಟಕ್ಕೆ ಇದೇ ತುಡುಗಲು ಮಲೆನಾಡು ಗಿಡ್ಡ ಹಸುಗಳ ಸಗಣಿ ಗೊಬ್ಬರನೇ ಹಾಕಿ ಬೇಸಾಯ ಮಾಡಿಯೇ ಅದರಿಂದ ಉತ್ಪತ್ತಿ ತೆಗೆದು ಇವರುಗಳ ಅನ್ನ ಬಟ್ಟೆ ಬರೆ ವಿಧ್ಯಾಭ್ಯಾಸ ದ ಖರ್ಚಿಗೆ ಹಣ ಒದಗಿಸಿದ್ದು‌ . ಇವರಲ್ಲಿ ಯಾರಾರು ನಮ್ಮ ಅಪ್ಪ ತೋಟಕ್ಕೆ ಮಲೆನಾಡು ಗಿಡ್ಡ ತಳಿ ಹಸುಗಳ ಸಗಣಿ ಗೊಬ್ಬರ ಹಾಕಿ ಬೇಸಾಯ ಮಾಡ್ತಿರಲಿಲ್ಲ ಅದರ ಬದಲಿಗೆ ತೋಟಕ್ಕೆ ಸಿಟಿ ಕಾಂಪೋಸ್ಟೋ ಅಥವಾ ಪ್ರೆಸ್ ಮಡ್ ಗೊಬ್ಬರ ಹಾಕಿ ಬೇಸಾಯ ಮಾಡಿ ಅದರಿಂದ ಉತ್ಪತ್ತಿ ತೆಗಿತಿದ್ದರು ಅಂತ ಹೇಳ್ತಾರ…?.

Advertisement

ದಯವಿಟ್ಟು ಯಾರಾದರೂ ಜ್ಞಾನಿಗಳು ಕೃಷಿ ವಿಜ್ಞಾನ ಓದಿದ ಬುದ್ದಿವಂತರು ಎಷ್ಟು ಸಾವಿರ ವರ್ಷಗಳಿಂದ ಭಾರತದಲ್ಲಿ ರಾಸಾಯನಿಕ ಗೊಬ್ಬರ ರಾಸಾಯನಿಕ ಔಷಧ ಹಾಕಿ ಕೃಷಿ ಮಾಡ್ತಿದ್ದರು ಎನ್ನುವ ತಿಳುವಳಿಕೆ ನಮಗೆ ಕೊಡಬಹುದಾ..? ಈ ರಾಸಾಯನಿಕ ಗೊಬ್ಬರ ಔಷಧ ಬಳಸುವ ಮೊದಲು ಭಾರತೀಯರು ಕೃಷಿ ಮಾಡಿ ಜೀವಿಸಿದ್ದಾದರೂ ಹೇಗೆ…!?

ಇಂಥವರೆಲ್ಲರಿಗೂ ನೇರವಾಗಿ ಉತ್ಪತ್ತಿ ಬರಬೇಕು. ಮಲೆನಾಡು ಗಿಡ್ಡ ಹಾಲು ಕಡಿಮೆ ಈ ಕಾಲದಲ್ಲಿ ಹೆಚ್ಚು expensive ಎನಿಸುತ್ತದೆ. ಆದರೆ ನಮ್ಮ ದೇಸಿ ಹಸುಗಳ ಹಾಲು ತುಪ್ಪ ಸಗಣಿ ಗೊಬ್ಬರದ ಇತರ ತಳಿಗಳಿಗಿಂತ ಹೆಚ್ಚು ಮೌಲ್ಯಯುತ ವಲ್ವಾ…?  ಮಲೆನಾಡು ಗಿಡ್ಡ ತಳಿ ಹಸುಗಳ ಹಾಲು ಬರೀ ಹಾಲಲ್ಲ ಅದು ಔಷಧೀಯ. ಬಹಳಷ್ಟು ಜನ ರೈತರಿಗೆ ಈ ಕಾಲದಲ್ಲಿ ಕಾಲಾಡಿ ಮೇಯುವ ಈ ದೇಸಿ ಹಸುಗಳನ್ನು ಸಾಕಲು ಕಷ್ಟ. ಸರಿ ಒಪ್ಪೋಣ…
ಈ ಕಾಲದಲ್ಲೂ ಮಲೆನಾಡು ಗಿಡ್ಡ ಯಾನೇ ದೇಸಿ ಹಸುಗಳನ್ನು ಖರ್ಚು ವೆಚ್ಚ ಲೆಕ್ಕಿಸದೇ ಪ್ರೀತಿಯಿಂದ ಸಾಕಿ ಸಲಹುವರು ಬೇಕಾದಷ್ಟು ಜನ ಗೋಪಾಲಕರು ಇದ್ದಾರೆ.

Advertisement

ಸಾಕಲಾಗದ ಅನಾನುಕೂಲ ಇರುವವರು ಸಾಕದಿರಲಿ… ಸಾಕಲಾಗದವರು ಹೀಗೆ ಹಗುರವಾಗಿ ದೇಸಿ ತಳಿ ಗೋಪಾಲನೆ ಮತ್ತು ಗೋ ಆಧಾರಿತ ಕೃಷಿಯ ಬಗ್ಗೆ ಮಾತನಾಡುತ್ತಾ ದೇಸಿ ಹಸು ಸಾಕುವವರನ್ನ ಒಂದು ಬಗೆಯಲ್ಲಿ ಮೂರ್ಖರೆಂಬಂತೆ ಮಾತನಾಡುವುದಕ್ಕೆ ಗೋಪ್ರೇಮಿಗಳ ಕಡೆಯಿಂದ ಖಂಡನೆ ಯಿದೆ.
ಜೆರ್ಸಿ ಹೆಚ್ ಎಫ್ ಹಸುಗಳು ಬಂದು ದೇಸಿ ಹಸುಗಳು ಆಹಾರವಾಗಿ ಹೋದವು. ಆದರೆ ಒಂದು ವಿಶೇಷ ವೇನೆಂದರೆ ಈಗ ಮಲೆನಾಡು ಕರಾವಳಿಯ ಕೃಷಿಕ ಗೋಪಾಲಕರ ಮನೆಯಲ್ಲಿ ಹೆಚ್ ಎಫ್ ಜೆರ್ಸಿ ಹಸುಗಳೂ ಇಲ್ಲ ಅಥವಾ ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಯಾಗಿದೆ. ಆದರೆ ಹಾಲು ಮಾತ್ರ ಯಥೇಚ್ಛವಾಗಿ ಸಿಗುತ್ತಿದೆ. ಎಲ್ಲಿಂದ ಬರುತ್ತಿದೆ ಈ ಹಾಲು…? ,  ವಿಜ್ಞಾನ ಸಂಶೋಧನೆಗಳ ಫಲವ ಅಥವಾ ದುಷ್ಫಲವಾ ಇದು…?, ಒಟ್ಟಿನಲ್ಲಿ ವಿಜ್ಞಾನ ಈಗೀಗ ಅಮೃತಕ್ಕಿಂತ ವಿಷವೇ ಹೆಚ್ಚು ಉಣಿಸುತ್ತಿದೆ. ಆದರೂ ಎಲ್ಲವನ್ನೂ ವೈಜ್ಞಾನಿಕ ದೃಷ್ಟಿಯಿಂದಲೇ ನೋಡಬೇಕು….

ಇರಲಿ, ಕೃಷಿ ವಿಜ್ಞಾನ ಕಲಿಯದ ಕೃಷಿಕರು ಏಕಲವ್ಯರಾಗಿ ಇಂತಹ ಕೃಷಿ ಪತ್ರಿಕೆ ಓದುತ್ತಾ ಮಾಹಿತಿ ಮಾರ್ಗದರ್ಶನ ಪಡೆಯುತ್ತಾ ಕೃಷಿ ಮಾಡುವುದೊಳಿತು…?

Advertisement

ಮಾನ್ಯ ಕೃಷಿ ವಿಜ್ಞಾನ ಪಂಡಿತರು ಕೃಷಿಕ ರ ಲಭ್ಯವಿರುವ ವೇದಿಕೆಯ ಬಗ್ಗೆ ಮತ್ತು ಮಲೆನಾಡು ಗಿಡ್ಡ ದೇಸಿ ತಳಿ ಹಸು ಅಥವಾ ಸಾವಯವ ಕೃಷಿಯ ಬಗ್ಗೆ ಹಗುರವಾದ ಮಾತನಾಡದಿರಲಿ ಎಂದು ವಿನಂತಿಸಿಕೊಳ್ತೀನಿ.

ಬರಹ :
ಪ್ರಬಂಧ ಅಂಬುತೀರ್ಥ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಮಾತು ವ್ಯಕ್ತಿತ್ವವನ್ನು ತೋರಿಸುತ್ತದೆ, ಮೌನ ಅದನ್ನು ಎತ್ತುತ್ತದೆ..!
June 21, 2026
3:51 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹಲಸಿನ ಕಾಯಿ ತಂಬುಳಿ – ಊಟಕ್ಕೆ ತಂಪು ನೀಡುವ ಸಾಂಪ್ರದಾಯಿಕ ಸವಿರುಚಿ
June 20, 2026
10:01 AM
by: ದಿವ್ಯ ಮಹೇಶ್
ಎಳೆಅಡಿಕೆ ಮಾತ್ರವಲ್ಲ, ಬಲಿತ ಅಡಿಕೆಯೂ ಒಡೆದು ಬೀಳುತ್ತಿದೆ…! ಕಾರಣ ಏನು?
June 13, 2026
1:49 PM
by: ಮಹೇಶ್ ಪುಚ್ಚಪ್ಪಾಡಿ
ಸುಲಭವಾಗಿ ಮಾಡಿ ರುಚಿಕರ ಹಲಸಿನ ಕಾಯಿ ಚಟ್ನಿ – ಬಿಸಿ ಅನ್ನಕ್ಕೆ ಸೂಪರ್ ಕಾಂಬಿನೇಷನ್!
June 11, 2026
6:47 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror